ಉತ್ತರಾಖಂಡದಲ್ಲಿ ಫಲ ನೀಡಿದ ಕೊನೆಯ ನಾಲ್ಕು ದಿನಗಳ ಪ್ರಚಾರ: ಪ್ರಲ್ಹಾದ್ ಜೋಶಿ
ಬಿಜೆಪಿ ಸರ್ಕಾರವು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿತ್ತು. ಇದೇ ಕಾರಣಕ್ಕೆ ನಾವು ಹೆಚ್ಚಿನ ಮತಗಳನ್ನು ಗಳಿಸಿ, ಬಹುಮತ ಪಡೆದಿದ್ದೇವೆ. ಬಿಜೆಪಿಯು ಎಲ್ಲ ಚುನಾವಣೆಗಳನ್ನೂ ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂದರು
![ಉತ್ತರಾಖಂಡದಲ್ಲಿ ಫಲ ನೀಡಿದ ಕೊನೆಯ ನಾಲ್ಕು ದಿನಗಳ ಪ್ರಚಾರ: ಪ್ರಲ್ಹಾದ್ ಜೋಶಿ](https://images.tv9kannada.com/wp-content/uploads/2021/12/Prahlad-Joshi.jpg?w=1280)
ಹುಬ್ಬಳ್ಳಿ: ಉತ್ತರಾಖಂಡದಲ್ಲಿ ಕೊನೆಯ ನಾಲ್ಕು ದಿನಗಳ ಕಾಲ ಬಿಜೆಪಿ ವ್ಯಾಪಕವಾಗಿ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿತ್ತು. ಬಿಜೆಪಿಯ ಗೆಲುವಿಗೆ ಅತ್ಯಂತ ಪ್ರಮುಖ ಅಂಶವಾದ ಅಂಶ ಇದು. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಆರಂಭಿಸಿದ ನಂತರ ಅಲ್ಲಿನ ವಾತಾವರಣ ಬದಲಾಯಿತು. ಬಿಜೆಪಿಗೆ ಮತ ನೀಡಲು ಜನರು ನಿರ್ಧರಿಸಿದರು. ಅಧಿಕಾರಕ್ಕೆ ಬಂದು 8 ವರ್ಷ ಆದ ನಂತರವೂ ಒಬ್ಬ ಪ್ರಧಾನಿ ಆ ಮಟ್ಟಿಗಿನ ಜನಸ್ಪಂದನೆ ಇರಿಸಿಕೊಂಡಿರುವುದು ವಿಶೇಷ. ಉತ್ತರಾಖಂಡದಲ್ಲಿ ಬಿಜೆಪಿ ಗೆಲುವು ಕೇವಲ ನನ್ನೊಬ್ಬನಿಂದ ಅಗಿಲ್ಲ. ಮೋದಿ, ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಅವರ ಪರಿಶ್ರಮ ಕೆಲಸ ಮಾಡಿದೆ.
ಪಕ್ಷದ ವಿವಿಧ ಹಂತದ ನಾಯಕರೊಂದಿಗೆ ಹಲವಾರು ಸಭೆಗಳನ್ನು ನಡೆಸಲಾಗಿದೆ. 80 ಸಾವಿರ ಸಣ್ಣಸಣ್ಣ ಸಭೆಗಳನ್ನು ಮಾಡಿದ್ದೇವೆ. ಉತ್ತರಾಖಂಡ ಇತಿಹಾಸದಲ್ಲಿಯೇ ಈ ಗೆಲುವು ಒಂದು ಮಹತ್ವದ ಮೈಲಿಗಲ್ಲಾಗಿದೆ. ಅಲ್ಲಿ ಕಳೆದ ಐದು ವರ್ಷಗಳಿಂದ ಅಭಿವೃದ್ಧಿ ಚಟುವಟಿಕೆಗಳು ವೇಗ ಪಡೆದಿವೆ ಎಂದು ವಿವರಿಸಿದರು. ಅಲ್ಲಿದ್ದ ಬಿಜೆಪಿ ಸರ್ಕಾರವು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿತ್ತು. ಇದೇ ಕಾರಣಕ್ಕೆ ನಾವು ಹೆಚ್ಚಿನ ಮತಗಳನ್ನು ಗಳಿಸಿ, ಬಹುಮತ ಪಡೆದಿದ್ದೇವೆ. ಬಿಜೆಪಿಯು ಎಲ್ಲ ಚುನಾವಣೆಗಳನ್ನೂ ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಎಪ್ರಿಲ್ 8ರ ಬಳಿಕ ಮುಂಬರುವ ಕರ್ನಾಟಕದ ವಿಧಾನಸಭಾ ಚುನಾವಣೆ ಬಗ್ಗೆಯೂ ಗಂಭೀರ ಚರ್ಚೆ ಮಾಡುತ್ತೇವೆ. ಏಪ್ರಿಲ್ 8ರವರೆಗೆ ಸಂಪುಟ ಪುನಾರಚನೆ, ವಿಸ್ತರಣೆ ಬಗ್ಗೆ ಯಾವುದೇ ಚರ್ಚೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಚುನಾವಣೆ ಫಲಿತಾಂಶಕ್ಕೂ ಮೊದಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೋವಾ ಪ್ರವಾಸಕ್ಕೆ ಮುಂದಾದರು. ಇದು ಒಂದು ರೀತಿಯಲ್ಲಿ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದ್ರು ಎನ್ನುವ ಹಾಗಾಯಿತು. ಏನ್ರೀ ಡಿಕೆಶಿ ಗೋವಾಕ್ಕೆ ನಿಮ್ಮ ತೊಳ್ಬಲ ತೋರಿಸಿಲಿಕ್ಕೆ ಹೋಗಿದ್ರಾ? ಉತ್ತರಾಖಂಡಕ್ಕೂ ಕಾಂಗ್ರೆಸ್ 13 ಜನ ವಿಕ್ಷರನ್ನ ಕಳುಸಿತ್ತು. ಅವರೇನು ಕುಸ್ತಿ ಆಡೋಕೆ ಹೋಗಿದ್ರಾ ಅಥವಾ ಗುಂಡಾಗಿರಿ ಮಾಡೋಕೆ ಹೋಗಿದ್ರಾ ಎಂದು ಪ್ರಶ್ನಿಸಿದರು.
ಫಲಿತಾಂಶ ಬರುವ ತನಕ ಕಾಯುವಷ್ಟು ತಾಳ್ಮೆ ಕಾಂಗ್ರೆಸ್ಗೆ ಇಲ್ಲ. ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ವಿಸರ್ಜನೆ ಮಾಡಬೇಕು ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಅದನ್ನು ಈಗ ರಾಹುಲ್ ಗಾಂದಿ ಮಾಡ್ತಿದ್ದಾರೆ. ಅವರಿಗೆ ನಾನು ಶುಭಾಶಯ ಕೊರುತ್ತೆನೆ ಎಂದು ವ್ಯಂಗ್ಯವಾಡಿದರು. ಚುನಾವಣೆಯಲ್ಲಿ ಬಿಜೆಪಿ ಅದ್ಭುತ ಗೆಲುವು ಸಾಧಿಸಿದೆ. ಒಂದು ಕಡೆ ಸಮುದ್ರ ತಟದಲ್ಲಿ ಗೆಲುವು ಸಾಧಿಸಿದ್ದೇವೆ. ಮತ್ತೊಂದೆಡೆ ಗುಡ್ಡಗಾಡು ಪ್ರದೇಶದಲ್ಲಿ ಅಧಿಕಾರಕ್ಕೆ ಬಂದಿದ್ದೇವೆ. ಉತ್ತರಾಖಂಡದಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ಉತ್ತರಾಖಂಡದ ಬಿಜೆಪಿ ಉಸ್ತುವಾರಿಯಾಗಿದ್ದ ಪ್ರಲ್ಹಾದ ಜೋಶಿ ಅವರನ್ನು ಬಿಜೆಪಿ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಸ್ವಾಗತಿಸಿದರು.
ಇದನ್ನೂ ಓದಿ: ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ಬಿಜೆಪಿಯಲ್ಲಿ ಶುರುವಾದ ಒಳಜಗಳ; ಉತ್ತರಾಖಂಡ್ ಬಿಜೆಪಿ ಮುಖ್ಯಸ್ಥ ದೇಶದ್ರೋಹಿಯೆಂದ ಶಾಸಕ
Published On - 12:23 pm, Sun, 13 March 22