
ಖ್ಯಾತ ನಟ ಅಭಿಮನ್ಯು ಸಿಂಗ್ ಹೆಸರು ಹೇಳಿದರೆ ತಕ್ಷಣ ನೆನಪಾಗದಿರಬಹುದು, ಆದರೆ ‘ಗಬ್ಬರ್ ಸಿಂಗ್’ ಸಿನಿಮಾದ ಖಳನಾಯಕ ಎಂದರೆ ಭಾರತೀಯ ಚಿತ್ರಪ್ರೇಕ್ಷಕರು ಸುಲಭವಾಗಿ ಗುರುತಿಸುತ್ತಾರೆ. ರಾಮ್ ಗೋಪಾಲ್ ವರ್ಮಾ ಅವರ ‘ರಕ್ತ ಚರಿತ್ರೆ’ ಮೂಲಕ ದಕ್ಷಿಣ ಭಾರತಕ್ಕೆ ಪರಿಚಯವಾದ ಇವರು, ಕನ್ನಡದಲ್ಲಿ ‘ಚಕ್ರವ್ಯೂಹ’ ಹಾಗೂ ‘ಹೋಮ್ ಮಿನಿಸ್ಟರ್ ಸಿನಿಮಾದಲ್ಲಿ ನಟಿಸಿದರು. ತೆಲುಗು, ಹಿಂದಿ, ತಮಿಳು ಹಾಗೂ ಕನ್ನಡದ ಸ್ಟಾರ್ ಹೀರೊಗಳ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಇವರು, ತಮಿಳುನಾಡು ಸಿಎಂ ದಳಪತಿ ವಿಜಯ್ (Vijay) ನಟನೆಯ ಸೂಪರ್ ಹಿಟ್ ‘ವೇಲಾಯುಧಂ’ ಚಿತ್ರದಲ್ಲೂ ಮುಖ್ಯ ಖಳನಾಯಕನಾಗಿ ನಟಿಸಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಈ ಸಿನಿಮಾದ ಶೂಟಿಂಗ್ ವೇಳೆ ನಡೆದಿದ್ದ ಒಂದು ರೋಮಾಂಚನಕಾರಿ ಘಟನೆಯನ್ನು ಹಂಚಿಕೊಂಡಿದ್ದಾರೆ.
‘ಅದು ನನ್ನ ಮೊದಲ ತಮಿಳು ಸಿನಿಮಾ. ಒಂದು ಪ್ರಮುಖ ಫೈಟಿಂಗ್ ದೃಶ್ಯದ ಚಿತ್ರೀಕರಣಕ್ಕಾಗಿ ನಾವು ಕೊಯಮತ್ತೂರಿನಿಂದ ಸುಮಾರು ಒಂದೂವರೆ ಗಂಟೆ ದೂರದಲ್ಲಿದ್ದ ಒಂದು ಸಣ್ಣ ರೈಲು ನಿಲ್ದಾಣಕ್ಕೆ ಹೋಗಿದ್ದೆವು. ಅಲ್ಲಿ ನಮಗಾಗಿ ಒಂದು ವಿಶೇಷ ರೈಲನ್ನು ಸಿದ್ಧಪಡಿಸಲಾಗಿತ್ತು. ಸುಮಾರು ಆರು ದಿನಗಳ ಕಾಲ ಅಲ್ಲಿ ಬೇರೆ ದೃಶ್ಯಗಳ ಚಿತ್ರೀಕರಣ ನಡೆಯಿತು. ಏಳನೇ ದಿನ, ವಿಜಯ್ ಮತ್ತು ನಾನು ಚಲಿಸುವ ರೈಲಿನ ಮೇಲೆ ನಿಂತು ಸಾಹಸ ದೃಶ್ಯವನ್ನು ಮಾಡಬೇಕಿತ್ತು. ಶೂಟಿಂಗ್ ಆರಂಭವಾಗುವ ಮುನ್ನ ನಾವಿಬ್ಬರೂ ರೈಲಿನ ಮೇಲೆ ನಿಂತು ಪೂರ್ವಾಭ್ಯಾಸ (ರಿಹರ್ಸಲ್) ಮಾಡಿದೆವು. ಕ್ಯಾಮೆರಾ ಆನ್ ಆಗುತ್ತಿದ್ದಂತೆ ರೈಲು ವೇಗವಾಗಿ ಚಲಿಸಲು ಪ್ರಾರಂಭಿಸುತ್ತದೆ ಎಂದು ಚಿತ್ರತಂಡ ಹೇಳಿದಾಗ ನನಗೆ ನಿಜಕ್ಕೂ ಭಯವಾಗಿತ್ತು’ ಎಂದು ಅಭಿಮನ್ಯು ಸಿಂಗ್ ನೆನಪಿಸಿಕೊಂಡಿದ್ದಾರೆ.
‘ಚಲಿಸುವ ರೈಲಿನ ಮೇಲೆ ಫೈಟ್ ಮಾಡುವುದು ಹೇಗೆ ಎಂದು ನಾನು ವಿಜಯ್ ಅವರನ್ನು ಕೇಳಿದೆ. ಅದಕ್ಕೆ ಅವರು ಧೈರ್ಯ ತುಂಬುತ್ತಾ, ‘ನಾವು ಇಲ್ಲಿ ಜಗಳ ಆಡುತ್ತಿಲ್ಲ, ಬದಲಿಗೆ ಒಬ್ಬರನ್ನೊಬ್ಬರು ರಕ್ಷಿಸಿಕೊಳ್ಳುತ್ತಿದ್ದೇವೆ’ ಎಂದರು. ನೋಡನೋಡುತ್ತಿದ್ದಂತೆ ರೈಲು ಗಂಟೆಗೆ 70-80 ಕಿಲೋಮೀಟರ್ ವೇಗವನ್ನು ಪಡೆದುಕೊಂಡಿತು. ರೈಲಿನ ಮೇಲೆ ನಮ್ಮಿಬ್ಬರ ಜೊತೆ ಕ್ಯಾಮೆರಾಮನ್ ಮಾತ್ರ ಇದ್ದರು. ಅಷ್ಟರಲ್ಲಿ ನಮ್ಮ ಮುಂದೆ ಒಂದು ದೊಡ್ಡ ರೈಲ್ವೆ ಸೇತುವೆ ಕಾಣಿಸಿತು. ಅದನ್ನು ನೋಡಿ ನನ್ನ ಎದೆ ಝಲ್ಲೆಂದಿತು. ಒಂದು ವೇಳೆ ಆ ವೇಗದಲ್ಲಿ ಕಾಲು ಜಾರಿ ಬಿದ್ದರೆ, ನೇರವಾಗಿ 2500 ಅಡಿ ಆಳದ ಕಣಿವೆಗೆ ಬಿದ್ದು ಪ್ರಾಣವೇ ಹೋಗುತ್ತಿತ್ತು. ಅಲ್ಲಿ ವಿಜಯ್ ಅವರ ಜೀವವೂ ಅಪಾಯದಲ್ಲಿತ್ತು’ ಎಂದು ಆ ಆತಂಕದ ಕ್ಷಣವನ್ನು ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: ದಳಪತಿ ವಿಜಯ್ ರಾಜಕೀಯ ಯಶಸ್ಸಿನಿಂದ ಪವನ್ ಕಲ್ಯಾಣ್ಗೆ ಅಸೂಯೆ; ಸತ್ಯ ಒಪ್ಪಿಕೊಂಡ ಡಿಸಿಎಂ
‘ದೇವರ ಕೃಪೆಯಿಂದ ಅಂದು ಯಾವುದೇ ಅನಾಹುತ ಸಂಭವಿಸಲಿಲ್ಲ. ನಾವಿಬ್ಬರೂ ಆ ಸಾಹಸ ದೃಶ್ಯವನ್ನು ಯಶಸ್ವಿಯಾಗಿ ಮುಗಿಸಿದೆವು. ಆದರೆ, ಆ ಶೂಟಿಂಗ್ ಮುಗಿದ ನಂತರ ನನಗೆ ಒಂದು ವಾರದವರೆಗೆ ಸರಿಯಾಗಿ ನಿದ್ದೆಯೇ ಬರಲಿಲ್ಲ. ಒಂದು ವೇಳೆ ಏನಾದರೂ ಹೆಚ್ಚುಕಮ್ಮಿ ಆಗಿದ್ದರೆ ಏನಾಗುತ್ತಿತ್ತು ಎಂಬ ಆಲೋಚನೆ ನನ್ನ ಬೆನ್ನುಮೂಳೆಯಲ್ಲಿ ನಡುಕ ಹುಟ್ಟಿಸುತ್ತಿತ್ತು. ಅಂದು ನಾವಿಬ್ಬರೂ ಸಾವಿನ ಅಂಚಿನಿಂದ ಪಾರಾಗಿ ಬಂದಿದ್ದೆವು’ ಎಂದು ಅಭಿಮನ್ಯು ಸಿಂಗ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.