ಬೆಂಗಳೂರು, ಜೂನ್ 11: ಕೊಲೆ ಪ್ರಕರಣವೊಂದರಲ್ಲಿ ನಟ ದರ್ಶನ್ (Darshan) ಪೊಲೀಸರ ವಶವಾಗಿದ್ದಾರೆ. ದರ್ಶನ್ ಸುತ್ತ ಕೊಲೆ ಪ್ರಕರಣ ಹುತ್ತ ಬೆಳೆದುಕೊಳ್ಳುತ್ತಿದೆ. ರೇಣುಕಾಸ್ವಾಮಿ (Renukaswamy) ಎಂಬಾತನನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು, ಶೆಡ್ನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿ ಕೊಲೆ ಮಾಡಿರುವುದು ಬಯಲಾಗಿದೆ. ದರ್ಶನ್ ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಕ್ಕೆ ರೇಣುಕಾ ಸ್ವಾಮಿ ಎಂಬುವರ ಹತ್ಯೆ ಮಾಡಲಾಗಿದೆ ಎನ್ನಲಾಗುತ್ತಿದೆ. ರೇಣುಕಾಸ್ವಾಮಿಯನ್ನು ಶೆಡ್ನಲ್ಲಿ ಕೂಡಿಹಾಕಿ ಹಲ್ಲೆ ಮಾಡಿದಾಗ ದರ್ಶನ್ ಕೂಡಾ ಇದ್ದರು ಎಂದೂ ಹೇಳಲಾಗುತ್ತಿದೆ.
ಜೂನ್ 9 ಭಾನುವಾರ ಬೆಳಗ್ಗೆ ಬೆಂಗಳೂರಿನ ಸುಮ್ಮನಹಳ್ಳಿ ಸತ್ವ ಅನುಗ್ರಹ ಅಪಾರ್ಟ್ ಬಳಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿತ್ತು. ಶವವನ್ನು ನಾಯಿಗಳು ಕಚ್ಚಿ ಎಳೆದಾಡಿದ್ದವು. ಶವದ ಮತ್ತೊಂದು ಭಾಗ ಮೋರಿಯಲ್ಲಿ ಬಿದ್ದಿತ್ತು. ಇದನ್ನು ಕಂಡ ಅಪಾರ್ಟ್ ಮೆಂಟ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ರೋಚಕ ರಸಹ್ಯ ನಂತರ ಬಯಲಾಯಿತು.
ಜೂನ್ ರಂದು ರೇಣುಕಾಸ್ವಾಮಿಯನ್ನ ಕರೆತಂದು ಹಲ್ಲೆ ಮಾಡಲಾಗಿತ್ತು. ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನ ಚಿತ್ರದುರ್ಗದ ಫ್ಯಾನ್ಸ್ ಸಂಘದ ಅಧ್ಯಕ್ಷನ ಮೂಲಕ ಕರೆಸಿದ್ದರು. ಬೆಂಗಳೂರಿಗೆ ಕರೆಸಿಕೊಂಡು ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಲಾಗಿತ್ತು. ವಿನಯ್ ಎಂಬುವರಿಗೆ ಸೇರಿದ ಶೆಡ್ನಲ್ಲಿ ಕೂಡಿಹಾಕಿ ಹಲ್ಲೆ ಮಾಡಲಾಗಿತ್ತು. ಆಯುಧದಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ನಂತರ ಶವವನ್ನು ಕಾಮಾಕ್ಷಿಪಾಳ್ಯದ ಮೋರಿಗೆ ಎಸೆದಿದ್ದರು.
ಜೂನ್8ರಂದು ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದರು. ಸ್ವಾಮಿ ಮೇಲೆ ದರ್ಶನ್ ಸೇರಿ 4 ಜನ ಹಲ್ಲೆ ಮಾಡಿದ್ದಾರೆ ಎಂಬ ಆರೋಪವಿದೆ. ಜೂನ್ 9ರಂದು ರೇಣುಕಾಸ್ವಾಮಿ ಶವ ಮೋರಿಯಲ್ಲಿ ಪತ್ತೆಯಾಗಿತ್ತು. ಶವವನ್ನ ನಾಯಿಗಳು ಎಳೆಯುತ್ತಿದ್ದಾಗ ಮೃತದೇಹ ಪತ್ತೆಯಾಗಿತ್ತು. ಮೋರಿ ಮುಂದೆ 30-35 ವರ್ಷದ ವ್ಯಕ್ತಿಯ ಶವ ಪತ್ತೆಯಾಗಿತ್ತು. ಮುಖ, ತಲೆ ಹಾಗೂ ಕಿವಿಗೆ ಗಾಯವಾಗಿ ರಕ್ತ ಸೋರಿರುವುದು ಪತ್ತೆ ಆಗಿತ್ತು. ನಂತರ ಅಪಾರ್ಟ್ಮೆಂಟ್ ಸೆಕ್ಯೂರಿಟಿ ರಾಮ್ ದೋರ್ ಜೀ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರಿಗೆ ಮಹತ್ವದ ಮಾಹಿತಿ ದೊರೆತಿದೆ.
ಇದನ್ನೂ ಓದಿ: ದರ್ಶನ್ ಬಂಧನ ಬಗ್ಗೆ ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ಹೇಳಿದ್ದೇನು? ವಿಡಿಯೋ ನೋಡಿ
ಕೊಲೆ ಪ್ರಕರಣ ಸಂಬಂಧ ನಾಲ್ವರನ್ನ ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ಬಂಧಿತರು, ದರ್ಶನ್ ಸೂಚನೆ ಮೇಲೆ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದರು. ಘಟನೆ ವೇಳೆ ಸ್ಥಳದಲ್ಲಿ ದರ್ಶನ್ ಇದ್ದ ಕುರಿತು ಮಾಹಿತಿ ನೀಡಿದ್ದರು ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ