ಸಹಾಯಕ್ಕಾಗಿ ಅಂಗಲಾಚಿದ ಕೆಲವೇ ಗಂಟೆಗಳಲ್ಲಿ ಸ್ಟಾರ್​ ನಟಿ ಪಿಯಾ ಸಹೋದರ ಕೊರೊನಾದಿಂದ ನಿಧನ

ಬೆಡ್​ ಮತ್ತು ವೆಂಟಿಲೇಟರ್​ ಬೇಕು ಎಂದು ಟ್ವೀಟ್​ ಮಾಡಿದ ಕೇವಲ ಮೂರು ಗಂಟೆಗಳ ಬಳಿಕ ಪಿಯಾ ಸಹೋದರ ಇಹಲೋಕ ತ್ಯಜಿಸಿದರು. ‘ನನ್ನ ಸಹೋದರ ಇನ್ನಿಲ್ಲ’ ಎಂದು ಟ್ವೀಟ್​ ಮಾಡುವ ಮೂಲಕ ಅವರು ಶೋಕ ತೋಡಿಕೊಂಡಿದ್ದಾರೆ.

ಸಹಾಯಕ್ಕಾಗಿ ಅಂಗಲಾಚಿದ ಕೆಲವೇ ಗಂಟೆಗಳಲ್ಲಿ ಸ್ಟಾರ್​ ನಟಿ ಪಿಯಾ ಸಹೋದರ ಕೊರೊನಾದಿಂದ ನಿಧನ
ಪಿಯಾ ಬಾಜಪೇಯ್
Edited By:

Updated on: May 04, 2021 | 5:29 PM

ಎಲ್ಲೆಲ್ಲೂ ಕೊರೊನಾ ವೈರಸ್​ ರಣಕೇಕೆ ಹಾಕುತ್ತಿದೆ. ಈ ಮಹಾಮಾರಿಯಿಂದಾಗಿ ದೇಶಾದ್ಯಂತ ಸ್ಮಶಾನದ ವಾತಾವರಣ ನಿರ್ಮಾಣ ಆಗುತ್ತಿದೆ. ಜನಸಾಮಾನ್ಯರು ಮಾತ್ರವಲ್ಲದೇ ಸ್ಟಾರ್​ ನಟ-ನಟಿಯರಿಗೂ ಕೊವಿಡ್​ ಕಾಟ ತಪ್ಪುತ್ತಿಲ್ಲ. ಎಷ್ಟೇ ಹಣ, ಪ್ರಭಾವ ಇದ್ದರೂ ತಮ್ಮವರನ್ನು ಉಳಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಸೆಲೆಬ್ರಿಟಿಗಳು ಇದ್ದಾರೆ. ಹಿಂದಿ ಚಿತ್ರರಂಗದ ಖ್ಯಾತ ನಟಿ ಪಿಯಾ ಬಾಜಪೇಯ್​ ಅವರ ಸಹೋದರ ಕೂಡ ಈಗ ಕೊರೊನಾ ವೈರಸ್​ನಿಂದ ಮೃತಪಟ್ಟಿದ್ದಾರೆ. ಈ ವಿಷಯವನ್ನು ಸ್ವತಃ ಪಿಯಾ ಸೋಶಿಯಲ್​ ಮೀಡಿಯಾ ಮೂಲಕ ಖಚಿತ ಪಡಿಸಿದ್ದಾರೆ.

ಮಂಗಳವಾರ (ಮೇ 4) ಮುಂಜಾನೆ 6 ಗಂಟೆಗೆ ಪಿಯಾ ಟ್ವೀಟ್​ ಮಾಡಿದ್ದರು. ಸಹೋದರನಿಗೆ ಕೊರೊನಾ ಪಾಸಿಟಿವ್​ ಆಗಿದ್ದು, ಅವರ ಪರಿಸ್ಥಿತಿ ಚಿಂತಾಜನಕ ಆಗಿದೆ ಎಂದು ಬರೆದುಕೊಂಡಿದ್ದರು. ಅಲ್ಲದೆ, ‘ತುರ್ತಾಗಿ ನನಗೆ ಸಹಾಯ ಬೇಕಿದೆ. ನನ್ನ ಸಹೋದರ ಸಾಯುತ್ತಿದ್ದಾನೆ. ಉತ್ತರ ಪ್ರದೇಶದ ಫಾರುಕಾಬಾದ್​ನಲ್ಲಿ ಒಂದು ಬೆಡ್​ ಮತ್ತು ವೆಂಟಿಲೇಟರ್​ ಬೇಕಾಗಿದೆ. ನಾವು ತುಂಬ ಕಷ್ಟದಲ್ಲಿದ್ದೇವೆ. ಯಾರಾದರೂ ಸಹಾಯ ಮಾಡಿ ಪ್ಲೀಸ್..’ ಎಂದು ರಿಯಾ ಟ್ವಿಟರ್​ನಲ್ಲಿ ಅಂಗಲಾಚಿದ್ದರು.ಲ

ಈ ಟ್ವೀಟ್​ ಮಾಡಿದ ಕೇವಲ ಮೂರು ಗಂಟೆಗಳ ಬಳಿಕ, ಅಂದರೆ 9 ಗಂಟೆ ಸುಮಾರಿಗೆ ಪಿಯಾ ಸಹೋದರ ಇಹಲೋಕ ತ್ಯಜಿಸಿದರು. ‘ನನ್ನ ಸಹೋದರ ಇನ್ನಿಲ್ಲ’ ಎಂದು ಟ್ವೀಟ್​ ಮಾಡುವ ಮೂಲಕ ಅವರು ಶೋಕ ತೋಡಿಕೊಂಡಿದ್ದಾರೆ. ಸಹಾಯಕ್ಕಾಗಿ ಅವರು ಬಿಜೆಪಿ ಮುಖಂಡ ತಜಿಂದರ್​ ಪಾಲ್​ ಸಿಂಗ್​ ಅವರನ್ನು ಕೂಡ ಬೇಡಿಕೊಂಡಿದ್ದರು. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಸಹೋದರನನ್ನು ಕಳೆದುಕೊಂಡಿರುವ ಪಿಯಾಗೆ ಈಗ ನೆಟ್ಟಿಗರು ಸಂತಾಪ ಸೂಚಿಸುತ್ತಿದ್ದಾರೆ.

ಇತ್ತೀಚೆಗೆ ಅನೇಕ ಸೆಲೆಬ್ರಿಟಿಗಳು ಕೋವಿಡ್​ನಿಂದ ಮೃತರಾದರು. ಹಲವು ಸಿನಿಮಾ, ಟಿವಿ ಶೋ ಹಾಗೂ ವೆಬ್​ ಸೀರಿಸ್​​ಗಳಲ್ಲಿ ಅಭಿನಯಿಸಿದ್ದ ನಟ ಮೇಜರ್​ ಬಿಕ್ರಮ್‌ಜೀತ್ ಕನ್ವರ್‌ಪಾಲ್ ಇತ್ತೀಚೆಗೆ ಕೊವಿಡ್​ಗೆ ಬಲಿಯಾದರು. ಕನ್ನಡದ ಖ್ಯಾತ ನಿರ್ಮಾಪಕ ಕೋಟಿ ರಾಮು, ಯುವ ನಿರ್ಮಾಪಕರಾದ ರಾಜಶೇಖರ್​, ಡಿ.ಎಸ್​. ಮಂಜುನಾಥ್​ ಮುಂತಾದವರು ಕೂಡ ಈ ಮಹಾಮಾರಿಗೆ ಬಲಿಯಾಗಿರುವುದು ನೋವಿನ ಸಂಗತಿ.

ಇದನ್ನೂ ಓದಿ:

ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಕಣಗಾಲ್ ಕೊವಿಡ್​ 19 ಸೋಂಕಿನಿಂದ ಸಾವು

ತಲೆ ಬಾಗಿ ಕ್ಷಮೆ ಕೋರುವೆ; ರಾಮು ನಿಧನದ ಬಗ್ಗೆ ಮಾಲಾಶ್ರೀಗೆ ಜಗ್ಗೇಶ್​ ಹೀಗೆ ಹೇಳಿದ್ದೇಕೆ?

Published On - 3:33 pm, Tue, 4 May 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us