ಬಡತನ, ಫೇಕ್​ ಲವ್​ ಸ್ಟೋರಿಗಳೇ ರಿಯಾಲಿಟಿ ಶೋಗಳ ಬಂಡವಾಳ; ಇಂಡಿಯನ್​ ಐಡಲ್​ ವಿನ್ನರ್​ ಆರೋಪ

Indian Idol 12: ಫೇಕ್​ ಲವ್​ ಸ್ಟೋರಿಗಳನ್ನು ಸೃಷ್ಟಿಸಿ ಜನರನ್ನು ಸೆಳೆಯುವ ತಂತ್ರ ನಡೆಯುತ್ತಿದೆ. ನಿಜವಾದ ಟ್ಯಾಲೆಂಟ್​ಗೆ ಬೆಲೆ ನೀಡುವ ಬದಲು ಇಂಥ ಫೇಕ್​ ಲವ್​​ಸ್ಟೋರಿ ಮತ್ತು ಸ್ಪರ್ಧಿಗಳ ಬಡತನವನ್ನು ಮುಂದಿಟ್ಟುಕೊಂಡು ಶೋ ನಡೆಸುತ್ತಿರುವುದು ಸರಿಯಲ್ಲ ಎಂದು ಅಭಿಜೀತ್​ ಸಾವಂತ್ ಟೀಕೆ ಮಾಡಿದ್ದಾರೆ.

ಬಡತನ, ಫೇಕ್​ ಲವ್​ ಸ್ಟೋರಿಗಳೇ ರಿಯಾಲಿಟಿ ಶೋಗಳ ಬಂಡವಾಳ; ಇಂಡಿಯನ್​ ಐಡಲ್​ ವಿನ್ನರ್​ ಆರೋಪ
ಇಂಡಿಯನ್ ಐಡಲ್ 12
Edited By:

Updated on: May 21, 2021 | 3:32 PM

ಕಿರುತೆರೆ ಪ್ರೇಕ್ಷಕರನ್ನು ಸೆಳೆದುಕೊಳ್ಳಲು ಮನರಂಜನಾ ವಾಹಿನಿಗಳು ಎಲ್ಲಿಲ್ಲದ ಕಸರತ್ತು ನಡೆಸುತ್ತವೆ. ಅದರಲ್ಲೂ ರಿಯಾಲಿಟಿ ಶೋಗಳ ಮೂಲಕ ಜನರನ್ನು ಮೋಡಿ ಮಾಡಲು ಹಲವು ಪ್ರಯತ್ನಗಳನ್ನು ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ರಿಯಾಲಿಟಿ ಶೋಗಳ ಬಗ್ಗೆ ಪರ-ವಿರೋಧದ ಅನೇಕ ಚರ್ಚೆಗಳು ಸೋಶಿಯಲ್​ ಮೀಡಿಯಾದಲ್ಲಿ ನಡೆದಿದೆ. ಹಿಂದಿಯ ‘ಇಂಡಿಯನ್​ ಐಡಲ್​ 12’ ಸಿಂಗಿಂಗ್​ ರಿಯಾಲಿಟಿ ಶೋ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಪರ್ಧಿಗಳನ್ನು, ನಿರೂಪಕರನ್ನು ಹಾಗೂ ಜಡ್ಜ್​ಗಳನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡಲಾಗಿದೆ. ‘ಇಂಡಿಯನ್​ ಐಡಲ್​ 12’ ಬಗ್ಗೆ ಈಗ ಇಂಡಿಯನ್​ ಐಡಲ್​ ಮೊದಲ ಸೀಸನ್​ನ ವಿನ್ನರ್​ ಅಭಿಜೀತ್​ ಸಾವಂತ್​ ಮಾತನಾಡಿದ್ದಾರೆ.

ಈ ರೀತಿಯ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಗಳ ನಡುವಿನ ಲವ್​ಸ್ಟೋರಿಯನ್ನು ತೋರಿಸಲಾಗುತ್ತದೆ. ಆದರೆ ಅದು ನಿಜವಾದ ಪ್ರೇಮಕಥೆ ಆಗಿರುವುದಿಲ್ಲ. ಫೇಕ್​ ಲವ್​ ಸ್ಟೋರಿಗಳನ್ನು ಸೃಷ್ಟಿಸಿ ಜನರನ್ನು ಸೆಳೆಯುವ ತಂತ್ರ ನಡೆಯುತ್ತಿದೆ. ನಿಜವಾದ ಟ್ಯಾಲೆಂಟ್​ಗೆ ಬೆಲೆ ನೀಡುವ ಬದಲು ಇಂಥ ಫೇಕ್​ ಲವ್​​ಸ್ಟೋರಿ ಮತ್ತು ಸ್ಪರ್ಧಿಗಳ ಬಡತನವನ್ನು ಮುಂದಿಟ್ಟುಕೊಂಡು ಶೋ ನಡೆಸುತ್ತಿರುವುದು ಸರಿಯಲ್ಲ ಎಂದು ಅಭಿಜೀತ್​ ಸಾವಂತ್ ಟೀಕೆ ಮಾಡಿದ್ದಾರೆ.

‘ಇಂಡಿಯನ್​ ಐಡಲ್​ 12’ರ ಸ್ಪರ್ಧಿಗಳಾದ ಪವನ್​ ದೀಪ್​ ರಾಜನ್​ ಅರುಣಿತಾ ನಡುವೆ ಪ್ರೀತಿ ಇದೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಅದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಇತ್ತೀಚೆಗೆ ಈ ಕಾರ್ಯಕ್ರಮದಲ್ಲಿ ಲೆಜೆಂಡರಿ ಗಾಯಕ ಕಿಶೋರ್​ ಕುಮಾರ್​ ಅವರಿಗೆ ನಮನ ಸಲ್ಲಿಸುವ ಸಲುವಾಗಿ ವಿಶೇಷ ಎಪಿಸೋಡ್​ ನಡೆಸಲಾಯಿತು. ಆ ಎಪಿಸೋಡ್​ ಸರಿಯಾಗಿ ಮೂಡಿಬಂದಿಲ್ಲ ಹಾಗೂ ಕಿಶೋರ್​ ಕುಮಾರ್​ಗೆ ಅಗೌರವ ಸೂಚಿಸಿದಂತಾಗಿದೆ ಎಂದು ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ.

ಈ ವಿಶೇಷ ಎಪಿಸೋಡ್​ಗಳಲ್ಲಿ ಮುಖ್ಯ ಅತಿಥಿಯಾಗಿ ಕಿಶೋರ್​ ಕುಮಾರ್​ ಅವರ ಮಗ ಅಮಿತ್​ ಕುಮಾರ್​ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿಸಿ ಬಂದ ಬಳಿಕ ಅವರು ಕೂಡ ‘ಇಂಡಿಯನ್​ ಐಡಲ್​ 12’ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ‘ನನಗೆ ಆ ಶೋ ಖಂಡಿತಾ ಇಷ್ಟ ಆಗಲಿಲ್ಲ. ಎಲ್ಲ ಸ್ಪರ್ಧಿಗಳನ್ನು ಹೊಗಳಬೇಕು ಎಂದು ಆಯೋಜಕರು ಹೇಳಿದ್ದರು. ಅದರಂತೆ ನಾನು ನಡೆದುಕೊಂಡೆ’ ಎಂದು ಮಾಧ್ಯಮವೊಂದಕ್ಕೆ ಅಮಿತ್​ ಕುಮಾರ್​ ಪ್ರತಿಕ್ರಿಯೆ ನೀಡಿದ್ದರು. ಹೀಗೆ ಎಲ್ಲ ಕಡೆಗಳಿಂದಲೂ ಇಂಡಿಯನ್​ ಐಡಲ್​ ಕಾರ್ಯಕ್ರಮದ ಬಗ್ಗೆ ಟೀಕೆ ಕೇಳಿಬರುತ್ತಿದೆ.

ಇದನ್ನೂ ಓದಿ:

IPL ಅಭಿಮಾನಿಗಳನ್ನು ಕೆಣಕಿದ ಇಂಡಿಯನ್​ ಐಡಲ್​ ನಿರೂಪಕ ಆದಿತ್ಯ ನಾರಾಯಣ್​; ಆರೋಪ ಒಪ್ಪಿಕೊಳ್ತಾರಾ ಪ್ರೇಕ್ಷಕರು?

Bigg Boss: ಕೊವಿಡ್​ ನಿಯಮ ಉಲ್ಲಂಘನೆ; ಬಿಗ್​ ಬಾಸ್​ ಮನೆ ಸೀಜ್​, 1 ಲಕ್ಷ ರೂಪಾಯಿ ದಂಡ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us