ಐಶ್ವರ್ಯಾ ರಜನಿಕಾಂತ್​ ಮನೆಯಲ್ಲಿ ಕಳ್ಳತನ ಮಾಡಿದ ಆರೋಪದಲ್ಲಿ ಇಬ್ಬರ ಬಂಧನ

ಕಳೆದ 18 ವರ್ಷದಿಂದ ಐಶ್ವರ್ಯಾ ರಜನಿಕಾಂತ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದವರೇ ಕಳ್ಳತನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

ಐಶ್ವರ್ಯಾ ರಜನಿಕಾಂತ್​ ಮನೆಯಲ್ಲಿ ಕಳ್ಳತನ ಮಾಡಿದ ಆರೋಪದಲ್ಲಿ ಇಬ್ಬರ ಬಂಧನ
ಐಶ್ವರ್ಯಾ ರಜನಿಕಾಂತ್

Updated on: Mar 22, 2023 | 4:33 PM

ನಟ ರಜನಿಕಾಂತ್​ (Rajinikanth) ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ಮನೆಯಲ್ಲಿ ಕಳ್ಳತನ ಆಗಿರುವ ಬಗ್ಗೆ ಕೆಲವೇ ದಿನಗಳ ಹಿಂದೆ ಸುದ್ದಿ ಆಗಿತ್ತು. ಅಪಾರ್ಟ್​ಮೆಂಟ್​ನಲ್ಲಿ ಇಟ್ಟಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಒಡವೆಗಳು ಕಾಣೆ​ ಆಗಿವೆ ಎಂದು ಐಶ್ವರ್ಯಾ ರಜನಿಕಾಂತ್ (Aishwarya Rajinikanth) ಅವರು ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಕೆಲವರ ಮೇಲೆ ಅನುಮಾನ ಇದೆ ಎಂದು ಅವರು ಹೇಳಿದ್ದರು. ಅವರ ದೂರಿನ ಅನ್ವಯ ಐಪಿಸಿ ಸೆಕ್ಷನ್​ 381ರ ಅಡಿಯಲ್ಲಿ ಪ್ರಕರಣ (Theft Case) ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ಈ ಕೇಸ್​ನಲ್ಲಿ ಈಗ ಇಬ್ಬರನ್ನು ಬಂಧಿಸಲಾಗಿದೆ. ಮನೆಕೆಲಸದ ಈಶ್ವರಿ ಮತ್ತು ಕಾರು ಚಾಲಕ ಕೆ. ವೆಂಕಟೇಶನ್​ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈಶ್ವರಿ ಅವರು ಕಳೆದ 18 ವರ್ಷದಿಂದ ಐಶ್ವರ್ಯಾ ರಜನಿಕಾಂತ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈಗ ಅವರಿಂದಲೇ ಕಳ್ಳತನ ಆಗಿದೆ ಎಂದು ಹೇಳಲಾಗುತ್ತಿದೆ.

ರಜನಿಕಾಂತ್​ ಮನೆಯಲ್ಲಿ ಕಳ್ಳತನ ಆಗಿರುವ ಆಭರಣಗಳ ಮೌಲ್ಯವನ್ನು 3.60 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಕೊನೇ ಬಾರಿ ಐಶ್ವರ್ಯಾ ರಜನಿಕಾಂತ್​ ಅವರು ಈ ಒಡವೆಗಳನ್ನು ಧರಿಸಿದ್ದು 2019ರಲ್ಲಿ. ಸಹೋದರಿ ಸೌಂದರ್ಯಾ ಅವರ ಮದುವೆಯಲ್ಲಿ ಈ ಆಭರಣಗಳನ್ನು ಧರಿಸಿದ ಬಳಿಕ ಅವುಗಳನ್ನು ಮನೆಯ ಲಾಕರ್​ನಲ್ಲಿ ಇರಿಸಲಾಗಿತ್ತು.

ಇದನ್ನೂ ಓದಿ: Rajinikanth: ಕರ್ನಾಟಕದ ಧಾರ್ಮಿಕ ಕ್ಷೇತ್ರಗಳಿಗೆ ರಜನಿಕಾಂತ್​ ಭೇಟಿ; ‘ಜೈಲರ್​’ ಶೂಟಿಂಗ್​ ನಡುವೆ ‘ತಲೈವಾ’ ಸುತ್ತಾಟ

ಕಳೆದ ನಾಲ್ಕು ವರ್ಷಗಳಿಂದ ಈ ಲಾಕರ್​ ಅನ್ನು ಬೇರೆ ಬೇರೆ ಮನೆಗಳಿಗೆ ಶಿಫ್ಟ್​ ಮಾಡಲಾಗಿತ್ತು. ಐಶ್ವರ್ಯಾ ಅವರ ಮಾಜಿ ಪತಿ, ನಟ ಧನುಶ್​ ಅವರ ಮನೆಯಲ್ಲೂ ಕೆಲವು ದಿನಗಳ ಕಾಲ ಈ ಲಾಕರ್ ಇರಿಸಲಾಗಿತ್ತು. ಅಂತಿಮವಾಗಿ ಅದನ್ನು ರಜನಿಕಾಂತ್​ ಅವರ ನಿವಾಸಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಅವರ ಕೀ ಅನ್ನು ಐಶ್ವರ್ಯಾ ಅವರು ತಮ್ಮ ಅಪಾರ್ಟ್​ಮೆಂಟ್​ನಲ್ಲಿ ಇರಿಸಿಕೊಂಡಿದ್ದರು. ಮನೆಯ ಸಿಬ್ಬಂದಿಗೆ ಈ ಲಾಕರ್​ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು.

ಇದನ್ನೂ ಓದಿ: Rajinikanth: ‘ಕಾಂತಾರ 2’ ಚಿತ್ರದಲ್ಲಿ ರಜನಿಕಾಂತ್​ ನಟಿಸ್ತಾರಾ? ರಿಷಬ್​ ಶೆಟ್ಟಿ ಸಿನಿಮಾ ಬಗ್ಗೆ ಹೊಸ ಚರ್ಚೆ ಶುರು

ಡೈಮಂಡ್​ ಸೆಟ್​ಗಳು, ಪ್ರಾಚೀನ ಶೈಲಿಯ ಬಂಗಾರದ ಆಭರಣಗಳು, ನವರತ್ನದ ಸೆಟ್​ಗಳು, ಬಳೆಗಳು ಸೇರಿದಂತೆ ಅನೇಕ ಜ್ಯುವೆಲ್ಲರಿಗಳು ಕಳ್ಳತನ ಆಗಿವೆ. ಮನೆಕೆಲಸದಾಕೆ ಈಶ್ವರಿಯು ಕದ್ದ ಆಭರಣಗಳನ್ನು ಮಾರಿ, ಅದರಿಂದ ಬಂದ ಹಣದಲ್ಲಿ ಚೆನ್ನೈನಲ್ಲಿ ಒಂದು ಮನೆ ಖರೀದಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಐಶ್ವರ್ಯಾ ರಜನಿಕಾಂತ್ ಹಿನ್ನೆಲೆ:

ತಮಿಳು ಚಿತ್ರರಂಗದಲ್ಲಿ ನಿರ್ದೇಶಕಿಯಾಗಿ ಐಶ್ವರ್ಯಾ ರಜನಿಕಾಂತ್​ ಅವರು ಗುರುತಿಸಿಕೊಂಡಿದ್ದಾರೆ. ‘3’, ‘ವೈ ರಾಜ ವೈ’ ಮುಂತಾದ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದಾರೆ. ಕೆಲವು ಹಾಡುಗಳಿಗೆ ಅವರು ಧ್ವನಿ ನೀಡಿದ್ದಾರೆ. ಪ್ರಸ್ತುತ ತಮಿಳಿನ ‘ಲಾಲ್​ ಸಲಾಂ’ ಸಿನಿಮಾಗೆ ಐಶ್ವರ್ಯಾ ನಿರ್ದೇಶನ ಮಾಡುತ್ತಿದ್ದಾರೆ. ಬಹುವರ್ಷಗಳ ಬಳಿಕ ಅವರು ಡೈರೆಕ್ಷನ್​ ಮಾಡುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ರಜನಿಕಾಂತ್​ ಅವರ ಅತಿಥಿ ಪಾತ್ರ ಇರಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:33 pm, Wed, 22 March 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us