ಅಲ್ಲು ಅರ್ಜುನ್-ತ್ರಿವಿಕ್ರಂ ಶ್ರೀನಿವಾಸ್ ಸಿನಿಮಾ ಬಗ್ಗೆ ಸಿಕ್ತು ದೊಡ್ಡ ಅಪ್ಡೇಟ್
ಅಲ್ಲು ಅರ್ಜುನ್ ಮತ್ತು ತ್ರಿವಿಕ್ರಂ ಶ್ರೀನಿವಾಸ್ ಅವರ ಮುಂಬರುವ ಚಿತ್ರ ‘AA22’ಪೌರಾಣಿಕ ಕಥಾವಸ್ತುವನ್ನು ಹೊಂದಿದೆ. ತ್ರಿವಿಕ್ರಂ ಅವರು ಪ್ರಮುಖ ಪಾತ್ರಗಳಿಗಾಗಿ ತೆಲುಗು ಮತ್ತು ಇತರ ಭಾಷೆಯ ಕಲಾವಿದರನ್ನು ಸಂಪರ್ಕಿಸುತ್ತಿದ್ದಾರೆ. ಈ ಜೋಡಿಯ ಹಿಂದಿನ ಯಶಸ್ಸುಗಳನ್ನು ಗಮನಿಸಿದರೆ, ಈ ಚಿತ್ರದ ಮೇಲೆ ಅಪಾರ ನಿರೀಕ್ಷೆ ಇದೆ.

ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಚಿತ್ರದ ಬಳಿಕ ಸೈಲೆಂಟ್ ಆಗಿದ್ದಾರೆ. ಈ ಚಿತ್ರದ ಪ್ರೀಮಿಯರ್ ಶೋ ವೇಳೆ ನಡೆದ ಕಾಲ್ತುಳಿತ ಅವರ ಬಾಳಲ್ಲಿ ಕಪ್ಪು ಚುಕ್ಕೆ ಆಗಿದೆ. ಈ ಘಟನೆಯಿಂದ ಅವರು ಜೈಲಿನಲ್ಲಿ ಇರಬೇಕಾದ ಪರಿಸ್ಥಿತಿ ಕೂಡ ಬಂತು. ಈಗ ಅಲ್ಲು ಅರ್ಜುನ್ ಅವರು ಈ ಘಟನೆ ಮರೆತು ಮುಂದಿನ ಚಿತ್ರಕ್ಕಾಗಿ ಸಿದ್ಧತೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಈಗ ಅವರ ಮುಂದಿನ ಸಿನಿಮಾ ಬಗ್ಗೆ ದೊಡ್ಡ ಅಪ್ಡೇಟ್ ಒಂದು ಹೊರ ಬಿದ್ದಿದೆ.
ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಂ ಶ್ರೀನಿವಾಸ್ ಸಿನಿಮಾ ಮಾಡೋದು ಗೊತ್ತೇ ಇದೆ. ಇದಕ್ಕೆ ತಾತ್ಕಾಲಿಕವಾಗಿ ‘AA22’ ಎನ್ನುವ ಶೀರ್ಷಿಕೆ ಇಡಲಾಗಿದೆ. ಇಬ್ಬರೂ ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಹೀಗಾಗಿ, ಈ ಕಾಂಬಿನೇಷನ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈ ಚಿತ್ರದ ಕಡೆಯಿಂದ ಯಾವುದೇ ಅಪ್ಡೇಟ್ ಬಂದಿರಲಿಲ್ಲ. ಈಗ ನಿರ್ದೇಶಕರು ಸಿನಿಮಾದ ಪ್ರಮುಖ ಕೆಲಸ ಒಂದನ್ನು ಆರಂಭಿಸಿದ್ದಾರೆ ಎನ್ನಲಾಗಿದೆ.
ತ್ರಿವಿಕ್ರಂ ಶ್ರೀನಿವಾಸ್ ಅವರು ಈ ಚಿತ್ರದ ಪಾತ್ರವರ್ಗ ಆಯ್ಕೆಯಲ್ಲಿ ತೊಡಗಿದ್ದಾರೆ. ಹೌದು, ತ್ರಿವಿಕ್ರಂ ಅವರು ಬೇರೆ ಭಾಷೆಯ ಹಾಗೂ ತೆಲುಗು ಭಾಷೆಯ ಕೆಲವು ಕಲಾವಿದರನ್ನು ಭೇಟಿ ಮಾಡಿ ಕಥೆ ಹೇಳಿದ್ದಾರೆ ಎನ್ನಲಾಗಿದೆ. ಈ ಪೈಕಿ ಕೆಲವರು ಸಿನಿಮಾಗೆ ಒಪ್ಪಿಗೆ ಸೂಚಿಸಿದ್ದಾರೆ.
ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಂ ಶ್ರೀನಿವಾಸ್ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಚಿತ್ರ ಪೌರಾಣಿಕ ಕಥಾ ಹಂದರವನ್ನು ಹೊಂದಿದೆ. ತ್ರಿವಿಕ್ರಂ ಶ್ರೀನಿವಾಸ್ ಅವರು ದೊಡ್ಡ ಕಲಾವಿದರನ್ನು ಆಯ್ಕೆ ಮಾಡುವುದರಲ್ಲಿ ಸದಾ ಮುಂದೆ ಇರುತ್ತಾರೆ. ಈ ಬಾರಿಯೂ ಅದೇ ಟ್ರೆಂಡ್ನ ಫಾಲೋ ಮಾಡೋ ಸಾಧ್ಯತೆ ಇದೆ.
ಇದನ್ನೂ ಓದಿ: ಅಲ್ಲು ಅರ್ಜುನ್ ಬಳಿಕ ರಾಮ್ ಚರಣ್ ಜೊತೆ ನಟಿಸಲಿರುವ ರಶ್ಮಿಕಾ ಮಂದಣ್ಣ
ತ್ರಿವಿಕ್ರಂ ಶ್ರೀನಿವಾಸ್ ಅವರು ಇತ್ತೀಚೆಗೆ ಲಯ ಕಳೆದುಕೊಂಡಿದ್ದಾರೆ. ಅವರ ನಿರ್ದೇಶನದ ‘ಗುಂಟೂರು ಖಾರಂ’ ಗೆಲುವು ಕಂಡಿಲ್ಲ. ಜುಲಾಯಿ, ಸನ್ ಆಫ್ ಸತ್ಯಮೂರ್ತಿ, ಅಲಾ ವೈಕುಂಠಪುರಮುಲೋ ಸಿನಿಮಾಗಳಲ್ಲಿ ತ್ರಿವಿಕ್ರಂ ಹಾಗೂ ಅಲ್ಲು ಅರ್ಜುನ್ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ಹಿಟ್ ಜೋಡಿ ಮತ್ತೆ ಒಂದಾಗುತ್ತಿದೆ ಎಂದಾಗ ನಿರೀಕ್ಷೆ ಬೆಳೆಯೋದು ಸಹಜ. ಆ ನಿರೀಕ್ಷೆಯನ್ನು ಸಿನಿಮಾ ತಲುಪುತ್ತದೆಯೇ ಎಂಬುದನ್ನು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:58 am, Mon, 24 February 25