Nitish Veera Death: ‘ಅಸುರನ್’​ ಚಿತ್ರದ ನಟ ನಿತೀಶ್​ ವೀರಾ ಕೊರೊನಾ ವೈರಸ್​ಗೆ ಬಲಿ

Corona Death: ಮೂಲತಃ ಮಧುರೈನವರಾದ ನಿತೀಶ್​ ವೀರಾ ಅವರಿಗೆ 7 ಮತ್ತು 8 ವರ್ಷದ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಕೆಲವೇ ದಿನಗಳ ಹಿಂದೆ ಅವರು ಹೊಸ ಕಾರು ಖರೀದಿಸಿದ್ದರು. ತಮ್ಮ ಎಲ್ಲ ಸ್ನೇಹಿತರನ್ನೂ ಭೇಟಿಯಾಗಿ ಕಾರು ತೋರಿಸಿ ಬಂದಿದ್ದರು ಎನ್ನಲಾಗಿದೆ.

Nitish Veera Death: ‘ಅಸುರನ್’​ ಚಿತ್ರದ ನಟ ನಿತೀಶ್​ ವೀರಾ ಕೊರೊನಾ ವೈರಸ್​ಗೆ ಬಲಿ
ರಜನಿಕಾಂತ್​ ಜೊತೆ ನಿತೀಶ್​ ವೀರಾ

Updated on: May 17, 2021 | 12:24 PM

ಕೊರೊನಾ ವೈರಸ್​ನಿಂದಾಗಿ ಸೆಲೆಬ್ರಿಟಿಗಳ ಸಾವಿನ ಸರಣಿ ಮುಂದುವರಿದಿದೆ. ಅನೇಕ ಸಿನಿಮಾ ನಟ-ನಟಿಯರ ಮತ್ತು ತಂತ್ರಜ್ಞರ ನಿಧನಕ್ಕೆ ಕಾರಣವಾಗಿದ್ದ ಈ ಮಹಾಮಾರಿ ಈಗ ಕಾಲಿವುಡ್​ನ ಖ್ಯಾತ ನಟ ನಿತೀಶ್​ ವೀರಾ ಅವರನ್ನು ಬಲಿ ಪಡೆದುಕೊಂಡಿದೆ. ಕೆಲವೇ ದಿನಗಳ ಹಿಂದೆ​ ಅವರಿಗೆ ಪಾಸಿಟಿವ್​ ವರದಿ ಬಂದಿತ್ತು. ಬಳಿಕ ಚೆನ್ನೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಅಸುನೀಗಿದ್ದಾರೆ. ನಿತೀಶ್​ ಅಗಲಿಕೆಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ.

ರಜನಿಕಾಂತ್​ ನಟನೆಯ ಕಾಲ, ಧನುಷ್​​ ಅಭಿನಯದ ಅಸುರನ್​ ಸಿನಿಮಾಗಳಲ್ಲಿ ನಿತೀಶ್​ ಅವರು ಗಮನಾರ್ಹ ಪಾತ್ರಗಳನ್ನು ನಿಭಾಯಿಸಿದ್ದರು. ಪುಧುಪೆಟ್ಟೈ, ವೆನ್ನಿಲ ಕಬಡಿ ಕುಳು, ರಾಕ್ಷಸಿ, ನೇಟ್ರು ಇಂಡ್ರು, ಪಡೈವೀರನ್​ ಮಂತಾದ ಸಿನಿಮಾಗಳಲ್ಲಿ ನಟಿಸುವ ಮೂಲಕ ಅವರು ಜನಮನ ಗೆದ್ದಿದ್ದರು. ಅವರು ಕೊರೊನಾದಿಂದಾಗಿ ಮೃತರಾಗಿರುವುದು ಇಡೀ ತಮಿಳು ಚಿತ್ರರಂಗಕ್ಕೆ ಆಘಾತ ಉಂಟು ಮಾಡಿದೆ.

ಮೂಲತಃ ಮಧುರೈನವರಾದ ನಿತೀಶ್​ ವೀರಾ ಅವರಿಗೆ 7 ಮತ್ತು 8 ವರ್ಷದ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಕೆಲವೇ ದಿನಗಳ ಹಿಂದೆ ಅವರು ಹೊಸ ಕಾರು ಖರೀದಿಸಿದ್ದರು. ತಮ್ಮ ಎಲ್ಲ ಸ್ನೇಹಿತರನ್ನೂ ಭೇಟಿಯಾಗಿ ಕಾರು ತೋರಿಸಿ ಬಂದಿದ್ದರು ಎನ್ನಲಾಗಿದೆ. ಹೀಗೆ ಖುಷಿಯಾಗಿ ಕಾಲ ಕಾಳೆಯುತ್ತಿದ್ದ ನಿತೀಶ್​ ಅವರ ಜೀವಕ್ಕೆ ಕೊರೊನಾ ಕುತ್ತು ತಂದಿದೆ. ಅವರ ಅಗಲಿಕೆಗೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಅನೇಕ ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

ಇತ್ತೀಚೆಗಂತೂ ತಮಿಳು ಚಿತ್ರರಂಗಕ್ಕೆ ಮೇಲಿಂದ ಮೇಲೆ ಕಹಿ ಸುದ್ದಿ ಕೇಳಿಬರುತ್ತಲೇ ಇದೆ. ಮೇ 15ರಂದು ಹೃದಯಾಘಾತದಿಂದ ನಟ ಅಯ್ಯಪ್ಪನ್​ ಗೋಪಿ ಮತ್ತು ಸಹ ನಿರ್ದೇಶಕ ಪವನ್​ರಾಜ್​ ನಿಧನರಾದರು. ಅದಕ್ಕೂ ಮುನ್ನ ಕೊವಿಡ್​ನಿಂದಾಗಿ ಹಾಸ್ಯ ನಟ ಪಾಂಡು ಇಹಲೋಕ ತ್ಯಜಿಸಿದ್ದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಕೆ.ವಿ. ಆನಂದ್​ ಹಾಗೂ ಖ್ಯಾತ ನಟ ವಿವೇಕ್​ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಈಗ ಕೊವಿಡ್​ನಿಂದ ನಿತೀಶ್​ ವೀರಾ ಕೊನೆಯುಸಿರೆಳೆದಿರುವುದು ನೋವಿನ ಸಂಗತಿ.

ಕನ್ನಡದಲ್ಲೂ ಅನೇಕ ಸೆಲೆಬ್ರಿಟಿಗಳು ಕೊವಿಡ್​ನಿಂದಾಗಿ ಸಾವಿನ ಮನೆ ಸೇರಿದ್ದಾರೆ. ಖ್ಯಾತ ನಿರ್ಮಾಪಕ ಕೋಟಿ ರಾಮು, ಪುಟ್ಟಣ್ಣ ಕಣಗಾಲ್​ ಅವರ ಪುತ್ರ ರಾಮು, ಯುವ ನಟ-ನಿರ್ಮಾಪಕ ಡಿ.ಎಸ್​. ಮಂಜುನಾಥ್​, ಕಾರ್ಯಕಾರಿ ನಿರ್ಮಾಪಕ ರಾಜಶೇಖರ್​, ಹಿರಿಯ ನಟ ಶಂಖನಾದ ಅರವಿಂದ್​ ಮುಂತಾದವರು ಇಹಲೋಕ ತ್ಯಜಿಸಿರುವುದರಿಂದ ಸ್ಯಾಂಡಲ್​ವುಡ್​ನಲ್ಲೂ ಸೂತಕದ ವಾತಾವರಣ ಮನೆ ಮಾಡಿದೆ.

ಇದನ್ನೂ ಓದಿ:

ಹಾಸ್ಯ ನಟ ಅಯ್ಯಪ್ಪನ್​ ಗೋಪಿ ಹೃದಯಾಘಾತದಿಂದ ನಿಧನ; ಚಿತ್ರರಂಗಕ್ಕೆ ಮತ್ತೊಂದು ಆಘಾತ

ಆಕ್ಸಿಜನ್ ಸಹಿತ ಆ್ಯಂಬುಲೆನ್ಸ್​ ನೀಡಿ ಕೊವಿಡ್​ ಸೋಂಕಿತರಿಗೆ ನೆರವಾದ ಜೆಕೆ ನಟನೆಯ ಐರಾವನ್​ ಚಿತ್ರತಂಡ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us