ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್​ ಬಾಸ್​ ಚೈತ್ರಾ ಕೋಟೂರ್​! ಉದ್ಯಮಿ ಜೊತೆ ಸಿಂಪಲ್​ ವಿವಾಹ

Chaithra Kotoor: ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಇರುವ ಗಣಪತಿ ದೇವಸ್ಥಾನದಲ್ಲಿ ತುಂಬ ಸರಳವಾಗಿ ಚೈತ್ರಾ ಮತ್ತು ನಾಗಾರ್ಜುನ್​ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಮದುವೆ ಫೋಟೋಗಳು ಹೊರಬಂದಿದ್ದು, ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್​ ಬಾಸ್​ ಚೈತ್ರಾ ಕೋಟೂರ್​! ಉದ್ಯಮಿ ಜೊತೆ ಸಿಂಪಲ್​ ವಿವಾಹ
ಚೈತ್ರಾ ಕೋಟೂರ್​ -ನಾಗಾರ್ಜುನ್

Updated on: Mar 28, 2021 | 1:43 PM

ಬಿಗ್​ ಬಾಸ್ ಮಾಜಿ​ ಸ್ಪರ್ಧಿ ಚೈತ್ರಾ ಕೋಟೂರ್​ ಅವರು ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಉದ್ಯಮಿ ನಾಗಾರ್ಜುನ್​ ಎಂಬುವವರ ಜೊತೆ ಭಾನುವಾರ (ಮಾ.28) ಬೆಳಗ್ಗೆ ಸಿಂಪಲ್ ಆಗಿ ವಿವಾಹ ನೆರವೇರಿದೆ. ಈ ಶುಭ ಸಂದರ್ಭಕ್ಕೆ ಕೆಲವೇ ಕೆಲವು ಆಪ್ತರು ಮಾತ್ರ ಸಾಕ್ಷಿಯಾದರು.

ಚೈತ್ರಾ ಕೈ ಹಿಡಿದಿರುವ ಹುಡುಗ ನಾಗಾರ್ಜುನ್​ ಅವರು ಮಂಡ್ಯ ಮೂಲದವರು. ಕನ್​ಸ್ಟ್ರಕ್ಷನ್ ಮತ್ತು ರಿಯಲ್​ ಎಸ್ಟೇಟ್​​ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದ, ಅಂದರೆ ಚೈತ್ರಾ ಬಿಗ್​ ಬಾಸ್​ ಕನ್ನಡ ಸೀಸನ್​ 7ರಲ್ಲಿ ಸ್ಪರ್ಧಿಸಿ ಹೊರಬಂದ ಬಳಿಕ ನಾಗಾರ್ಜುನ್​ ಪರಿಚಯ ಆಯಿತು. ನಂತರ ಅವರ ನಡುವೆ ಪ್ರೀತಿ ಚಿಗುರಿತ್ತು. ಈಗ ಆ ಪ್ರೀತಿಗೆ ಮದುವೆಯ ಮುದ್ರೆ ಬಿದ್ದಿದೆ.

ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಇರುವ ಗಣಪತಿ ದೇವಸ್ಥಾನದಲ್ಲಿ ತುಂಬ ಸರಳವಾಗಿ ಚೈತ್ರಾ ಮತ್ತು ನಾಗಾರ್ಜುನ್​ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ‘ಹೀಗೆ ಸಿಂಪಲ್​ ಆಗಿ ಮದುವೆ ಆಗಬೇಕು ಎಂಬುದೇ ನನ್ನ ಉದ್ದೇಶ ಆಗಿತ್ತು. ಅದ್ದೂರಿ ವಿವಾಹದ ಬಗ್ಗೆ ನನಗೆ ಮೊದಲಿನಿಂದಲೂ ಆಸಕ್ತಿ ಇರಲಿಲ್ಲ. ಹಾಗಾಗಿ ಈ ನಿರ್ಧಾರ ತೆಗೆದುಕೊಂಡೆವು. ನನ್ನ ವೃತ್ತಿಜೀವನಕ್ಕೆ ನಾಗಾರ್ಜುನ್ ಬೆಂಬಲವಾಗಿದ್ದಾರೆ’ ಎಂದು ಚೈತ್ರಾ ಕೋಟೂರ್​ ಅವರು ಟಿವಿ9 ಡಿಜಿಟಲ್​ಗೆ ಮಾಹಿತಿ ನೀಡಿದ್ದಾರೆ.

ಚೈತ್ರಾ ಮತ್ತು ನಾಗಾರ್ಜುನ್​ ಹಾರ ಬದಲಾಯಿಸಿಕೊಂಡಿರುವ ಫೋಟೋಗಳು ಹೊರಬಂದಿವೆ. ಅದನ್ನು ಕಂಡು ಎಲ್ಲರೂ ನವ ಜೋಡಿಗೆ ಶುಭಾಶಯ ಕೋರುತ್ತಿದ್ದಾರೆ. ರಂಗಭೂಮಿ ಕಲಾವಿದೆಯಾಗಿ, ಸಿನಿಮಾ ನಟಿಯಾಗಿ ಮಾತ್ರವಲ್ಲದೆ ಬರಹಗಾರ್ತಿಯಾಗಿಯೂ ಚೈತ್ರಾ ಗುರುತಿಸಿಕೊಂಡಿದ್ದಾರೆ. ‘ಸೂಜಿದಾರ’ ಸಿನಿಮಾದಲ್ಲಿ ಅವರೊಂದು ಗಮನಾರ್ಹ ಪಾತ್ರ ಮಾಡಿದ್ದರು.

ಬಿಗ್​ ಬಾಸ್​ ಕನ್ನಡ ಸೀಸನ್​ 7ರಲ್ಲಿ ಸ್ಪರ್ಧಿಸಿದ ಬಳಿಕ ಅವರ ಖ್ಯಾತಿ ಹೆಚ್ಚಿತು. ನಂತರ ಜಾಹೀರಾತು ನಿರ್ದೇಶನದಲ್ಲಿ ಅವರು ತೊಡಗಿಕೊಂಡರು. ಸಿನಿಮಾ ನಿರ್ದೇಶನಕ್ಕೂ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಒಂದು ಆಲ್ಬಂ ಹಾಡಿನಲ್ಲೂ ಚೈತ್ರಾ ನಟಿಸಿದ್ದು, ಅವರೇ ಸಾಹಿತ್ಯ ಬರೆದಿದ್ದಾರೆ. ಈ ನಡುವೆ ಅವರ ಮದುವೆ ಸುದ್ದಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: Hudugaru Tumba Ollevru ಹುಡುಗರು ತುಂಬಾ ಒಳ್ಳೆಯವ್ರು ಎಂದು ಹಾಡಿ ಹೊಗಳಿದ ಚೈತ್ರಾ ಕೋಟೂರು

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us