Bigg Boss Kannada: ದಿವ್ಯಾಗಾಗಿ ಕರುನಾಡ ಜನತೆಯ ನಂಬಿಕೆ ಕಳೆದುಕೊಂಡ ಮಂಜು; ಈಗ ಕ್ಷಮೆ ಕೇಳಿ ಏನು ಪ್ರಯೋಜನ?

Manju Pavagada | Divya Suresh: ತಮ್ಮ ಹುಳುಕು ಬುದ್ಧಿ ಬಯಲಾದ ಮೇಲೆ ಮಂಜು ಮತ್ತು ದಿವ್ಯಾ ಸುರೇಶ್​ ಎಲ್ಲರ ಕ್ಷಮೆ ಕೇಳುತ್ತಿದ್ದಾರೆ. ಅವರಿಗೆ ಇನ್ಮುಂದೆ ಪ್ರೇಕ್ಷಕರಿಂದ ಕಡಿಮೆ ವೋಟ್​ಗಳು ಬಂದರೂ ಅಚ್ಚರಿ ಏನಿಲ್ಲ.

Bigg Boss Kannada: ದಿವ್ಯಾಗಾಗಿ ಕರುನಾಡ ಜನತೆಯ ನಂಬಿಕೆ ಕಳೆದುಕೊಂಡ ಮಂಜು; ಈಗ ಕ್ಷಮೆ ಕೇಳಿ ಏನು ಪ್ರಯೋಜನ?
ಮಂಜು ಪಾವಗಡ - ದಿವ್ಯಾ ಸುರೇಶ್​

Updated on: Apr 20, 2021 | 4:08 PM

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಅತಿ ಹೆಚ್ಚು ಗಮನ ಸೆಳೆದ ಸ್ಪರ್ಧಿ ಎಂದರೆ ಅದು ಮಂಜು ಪಾವಗಡ. ಅವರು ಫೈನಲ್​ವರೆಗೂ ಆರಾಮಾಗಿ ಪೈಪೋಟಿ ನೀಡುವ ಸ್ಪರ್ಧಿ ಎಂಬುದು ಎಲ್ಲರ ಅಭಿಪ್ರಾಯ. ಅದಕ್ಕೆ ಕಾರಣ ಅವರ ವ್ಯಕ್ತಿತ್ವ. ಇಡೀ ಮನೆಯವರನ್ನು ನಗಿಸುತ್ತ, ಜನರಿಗೆ ಮನರಂಜನೆ ನೀಡುತ್ತಾರೆ ಈ ಕಾಮಿಡಿ ಕಲಾವಿದ. ಆದರೆ ಅವರು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ದಿವ್ಯಾ ಸುರೇಶ್​ ಸಹವಾಸದಿಂದ ಮಂಜು ಇಂಥ ಒಂದು ಕೆಲಸಕ್ಕೆ ಕೈ ಹಾಕಿದ್ದಾರೆ.

ಇತ್ತೀಚೆಗೆ ಬಿಗ್​ ಬಾಸ್​ ನೀಡಿದ ಒಂದು ಟಾಸ್ಕ್​ನಲ್ಲಿ ಹುಡುಗರು ಹುಡುಗಿಯರಿಗೆ ಗುಟ್ಟಾಗಿ ಲವ್​ ಲೆಟರ್ ಬರೆಯಬೇಕಿತ್ತು. ತಮಗೆ ಬಂದ ಲೆಟರ್​ಗಳನ್ನು ಹುಡುಗಿಯರು ಮುಚ್ಚಿಟ್ಟುಕೊಳ್ಳಬೇಕಿತ್ತು. ವಾರ್ಡನ್​ ಕೈಗೆ ಆ ಲೆಟರ್​ಗಳು ಸಿಗದಂತೆ ಎಚ್ಚರಿಕೆ ವಹಿಸಬೇಕಿತ್ತು. ಅತಿ ಹೆಚ್ಚು ಪ್ರೇಮಪತ್ರ ಬರೆಯುವ ಹುಡುಗ ಮತ್ತು ಅತಿ ಹೆಚ್ಚು ಪ್ರೇಮಪತ್ರಗಳನ್ನು ಪಡೆದು ಮುಚ್ಚಿಟ್ಟುಕೊಳ್ಳುವ ಹುಡುಗಿಗೆ ಈ ವಾರದ ಕ್ಯಾಪ್ಟೆನ್ಸಿ ಟಾಸ್ಕ್​ನಲ್ಲಿ ಸ್ಪರ್ಧಿಸುವ ಅವಕಾಶ ಸಿಗುತ್ತಿತ್ತು. ಲೆಟರ್​ ಪತ್ತೆ ಹಚ್ಚುವ ವಾರ್ಡನ್​ ಆಗಿ ನಿಧಿ ಸುಬ್ಬಯ್ಯ ನೇಮಕ ಆಗಿದ್ದರು. ಈ ಟಾಸ್ಕ್​ನಲ್ಲಿ ಮಂಜು ಮತ್ತು ದಿವ್ಯಾ ಇಡೀ ಮನೆಗೆ ದ್ರೋಹ ಮಾಡಿದ್ದಾರೆ.

ತಮ್ಮ ಲೆಟರ್​ಗಳನ್ನು ಕಾಪಾಡಿಕೊಳ್ಳುವ ಸಲುವಾಗಿ ವಾರ್ಡನ್​ (ನಿಧಿ) ಜೊತೆ ದಿವ್ಯಾ ಒಳಸಂಚು ರೂಪಿಸಿದ್ದಾರೆ. ಬೇರೆಯವರು ಎಲ್ಲಿ ಪತ್ರಗಳನ್ನು ಮುಚ್ಚಿಟ್ಟಿದ್ದಾರೆ ಎಂಬ ಮಾಹಿತಿಯನ್ನು ನಿಧಿಗೆ ದಿವ್ಯಾ ಸೋರಿಕೆ ಮಾಡಿದ್ದಾರೆ. ಮನೆಯ ಇತರೆ ಸದಸ್ಯರಿಗೆ ಈ ರೀತಿ ನಂಬಿಕೆ ದ್ರೋಹ ಮಾಡುವುದಕ್ಕಿಂತಲೂ ಮುಂಚೆ ಈ ಬಗ್ಗೆ ಮಂಜು ಪಾವಗಡ ಜೊತೆ ಅವರು ಚರ್ಚೆ ಮಾಡಿದ್ದರು. ಹಾಗಾಗಿ ಈ ತಪ್ಪಿನಲ್ಲಿ ಮಂಜು ಕೂಡ ಪಾಲುದಾರರಾಗಿದ್ದಾರೆ.

ವೀಕ್ಷಕರೊಬ್ಬರು ಅನಿರೀಕ್ಷಿತವಾಗಿ ಬಿಗ್​ ಬಾಸ್​ ಮನೆಗೆ ದೂರವಾಣಿ ಕರೆ​ ಮಾಡಿ ಮಾತನಾಡಿದಾಗಲೇ ಈ ನಂಬಿಕೆ ದ್ರೋಹದ ರಹಸ್ಯ ಬಯಲಾಯಿತು. ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಸೇರಿಕೊಂಡು ಮಾಡಿದ ಈ ಕೃತ್ಯಕ್ಕೆ ಎಲ್ಲರೂ ಛೀಮಾರಿ ಹಾಕಿದ್ದಾರೆ. ಮೋಸ ಮಾಡಿ ಆಟ ಆಡಿದ ಅವರಿಬ್ಬರ ಮೇಲೆ ಇನ್ನೆಂದೂ ತಮಗೆ ನಂಬಿಕೆ ಮೂಡುವುದಿಲ್ಲ ಎಂದು ಎಲ್ಲರೂ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ದಿವ್ಯಾ ಸುರೇಶ್​ ಮಾತು ಕೇಳಿಕೊಂಡು ಈ ಕುತಂತ್ರದಲ್ಲಿ ಮಂಜು ಕೂಡ ಎಲ್ಲರ ನಂಬಿಕೆ ಕಳೆದುಕೊಂಡಿದ್ದಾರೆ.

ಇದನ್ನೆಲ್ಲ ನೋಡುತ್ತಿರುವ ಪ್ರೇಕ್ಷಕರಿಗೆ ಮಂಜು ಮೇಲಿನ ನಂಬಿಕೆ ಹೊರಟುಹೋಗುವ ಸಾಧ್ಯತೆ ಇದೆ. ಹಾಗಾಗಿ ಅವರಿಗೆ ಇನ್ಮುಂದೆ ಪ್ರೇಕ್ಷಕರಿಂದ ಕಡಿಮೆ ವೋಟ್​ಗಳು ಬಂದರೂ ಅಚ್ಚರಿ ಏನಿಲ್ಲ. ತಮ್ಮ ಹುಳುಕು ಬುದ್ಧಿ ಬಯಲಾದ ಮೇಲೆ ಮಂಜು ಮತ್ತು ದಿವ್ಯಾ ಸುರೇಶ್​ ಎಲ್ಲರ ಕ್ಷಮೆ ಕೇಳುತ್ತಿದ್ದಾರೆ. ಆದರೆ ಬಿಗ್ ಬಾಸ್​ ನೋಡುತ್ತಿರುವ ಕನ್ನಡಿಗರು ಮತ್ತು ಬಿಗ್​ ಬಾಸ್ ಮನೆಯೊಳಗಿರುವ ಸ್ಪರ್ಧಿಗಳ ಎದುರಿನಲ್ಲಿ ನಂಬಿಕೆ ಕಳೆದುಕೊಂಡ ಬಳಿಕ ಕ್ಷಮೆ ಕೇಳಿ ಏನು ಉಪಯೋಗ?

ಇದನ್ನೂ ಓದಿ: Bigg Boss Elimination: ಈ ವಾರದ ಎಲಿಮಿನೇಷನ್​ಗೆ ಹೊಸ ಮಾರ್ಗ ಅನುಸರಿಸಿದ ಬಿಗ್​ ಬಾಸ್​!

ಮಂಜುಗೆ ನೇರವಾಗಿಯೇ ದ್ರೋಹ ಬಗೆದ ದಿವ್ಯಾ ಸುರೇಶ್​; ಈ ತಪ್ಪನ್ನು ಅವರು ಕ್ಷಮಿಸ್ತಾರಾ?

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us