ಮುಂದುವರಿದ ಕಂಗನಾ-ಅನ್ನು ಕಪೂರ್​ ಕಿರಿಕ್​; ಇಷ್ಟಕ್ಕೆಲ್ಲ ಕಾರಣ ಏನು?

ಕಂಗನಾ ರಣಾವತ್​ ಅವರು ಅನೇಕರ ಜೊತೆ ವಿವಾದ ಮಾಡಿಕೊಂಡಿದ್ದಾರೆ. ಅಂಥವರ ಪಟ್ಟಿಗೆ ಈಗ ಹಿರಿಯ ನಟ ಅನ್ನು ಕಪೂರ್​ ಕೂಡ ಸೇರ್ಪಡೆ ಆಗಿದ್ದಾರೆ. ಇಬ್ಬರ ನಡುವೆ ಕಿರಿಕ್​ ಶುರುವಾಗಿದೆ. ಕಂಗನಾಗೆ ಅನ್ನು ಕಪೂರ್​ ಒಂದು ಸಲಹೆ ನೀಡಿದ್ದಾರೆ. ‘ಈಗ ನಿಮಗೆ ದೊಡ್ಡ ಜವಾಬ್ದಾರಿ ಇದೆ. ಸಾಧ್ಯವಾದರೆ ನಿಮ್ಮ ತಾಯ್ನಾಡಿಗಾಗಿ ಉತ್ತಮ ಕೆಲಸಗಳನ್ನು ಮಾಡಿ. ಅನಗತ್ಯ ವಿಚಾರದ ಬಗ್ಗೆ ನೀವು ಗಮನ ಕೊಡಬೇಡಿ’ ಎಂದು ಅವರು ಕಂಗನಾಗೆ ಕಿವಿಮಾತು ಹೇಳಿದ್ದಾರೆ.

ಮುಂದುವರಿದ ಕಂಗನಾ-ಅನ್ನು ಕಪೂರ್​ ಕಿರಿಕ್​; ಇಷ್ಟಕ್ಕೆಲ್ಲ ಕಾರಣ ಏನು?
ಕಂಗನಾ ರಣಾವತ್​, ಅನ್ನು ಕಪೂರ್

Updated on: Jun 23, 2024 | 7:30 PM

ನಟಿ ಕಂಗನಾ ರಣಾವತ್​ ಬಗ್ಗೆ ಹಿರಿಯ ನಟ ಅನ್ನು ಕಪೂರ್​ (Annu Kapoor) ಅವರು ಇತ್ತೀಚಿಗೆ ನೀಡಿದ ಒಂದು ಹೇಳಿಕೆಯಿಂದ ಕಿರಿಕ್​ ಶುರುವಾಗಿದೆ. ಕಂಗನಾ ರಣಾವತ್​ (Kangana Ranaut) ಯಾವಾಗಲೂ ವಿವಾದದ ಮೂಲಕ ಸುದ್ದಿ ಆಗುತ್ತಾರೆ. ಬಾಲಿವುಡ್​ನಲ್ಲಿ ಹಲವರ ಜೊತೆ ಅವರು ಕಿರಿಕ್​ ಮಾಡಿಕೊಂಡಿದ್ದಾರೆ. ಕೆಲವೇ ದಿನಗಳ ಹಿಂದೆ ಅವರಿಗೆ ಚಂಡಿಗಢ ವಿಮಾನ ನಿಲ್ದಾಣದಲ್ಲಿ ಕಪಾಳಮೋಕ್ಷ ಮಾಡಲಾಗಿತ್ತು. ಆ ಘಟನೆಗೆ ಪ್ರತಿಕ್ರಿಯಿಸುವಾಗ ‘ಕಂಗನಾ ಎಂದರೆ ಯಾರು’ ಎಂದು ‘ಹಮಾರೆ ಬಾರಾಹ್​’ (Hamare Baarah) ಸಿನಿಮಾದ ನಟ ಅನ್ನು ಕಪೂರ್​ ವ್ಯಂಗ್ಯವಾಡಿದ್ದರು. ಈಗ ಆ ವಿವಾದ ಮತ್ತೆ ಮುಂದುವರಿದಿದೆ.

ಅನ್ನು ಕಪೂರ್​ ಹೇಳಿದ್ದೇನು?

ಅನ್ನು ಕಪೂರ್​ ಅವರು ಇತ್ತೀಚೆಗೆ ‘ಹಮಾರೆ ಬಾರಾಹ್​’ ಸಿನಿಮಾದ ಪ್ರಚಾರಕಾರ್ಯದಲ್ಲಿ ತೊಡಗಿಕೊಂಡಿದ್ದರು. ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರಿಗೆ ಕಂಗನಾ ಕುರಿತು ಪ್ರಶ್ನೆ ಕೇಳಲಾಯ್ತು. ಇದು ಅವರಿಗೆ ಸರಿ ಅನಿಸಿಲ್ಲ. ತಮ್ಮ ಸಿನಿಮಾದ ಪ್ರೆಸ್​ಮೀಟ್​ನಲ್ಲಿ ಬೇರೆ ವಿಷಯದ ಕುರಿತು ಮಾತನಾಡುವುದನ್ನು ತಪ್ಪಿಸಬೇಕು ಎಂಬ ಕಾರಣಕ್ಕೆ ಅನ್ನು ಕಪೂರ್​ ವ್ಯಂಗ್ಯವಾಗಿ ಉತ್ತರಿಸಿದ್ದರು. ‘ಈ ಕಂಗನಾ ಎಂದರೆ ಯಾರು? ನೀವೆಲ್ಲ ಕೇಳುತ್ತಿದ್ದೀರಿ ಅಂದ್ರೆ ಅವರು ತುಂಬಾ ದೊಡ್ಡ ಹೀರೋಯಿನ್​ ಇರಬಹುದು. ಅವರು ಸುಂದರವಾಗಿದ್ದಾರಾ?’ ಎಂದು ಕೇಳಿದ್ದರು ಅನ್ನು ಕಪೂರ್​. ‘ಈಗ ಕಂಗನಾ ಅವರು ಹಿಮಾಚಲ ಪ್ರದೇಶ ಮಂಡಿ ಲೋಕಸಭಾ ಕ್ಷೇತ್ರದ ಎಂಪಿ ಸಹ ಹೌದು’ ಎಂದು ಮಾಧ್ಯಮದ ಪ್ರತಿನಿಧಿಯೊಬ್ಬರು ಉತ್ತರಿಸಿದರು. ‘ಓಹೋ.. ಈಗ ಸಂಸದೆ ಕೂಡ ಆಗಬಿಟ್ರಾ? ಹಾಗಾದ್ರೆ ಅವರು ಈಗ ತುಂಬಾ ಶಕ್ತಿಶಾಲಿ ಆಗಿದ್ದಾರೆ’ ಎಂದಿದ್ದರು ಅನ್ನು ಕಪೂರ್​.

ಕಂಗನಾ ಪ್ರತಿಕ್ರಿಯೆ ಏನು?

ಅನ್ನು ಕಪೂರ್​ ಅವರಿಂದ ಇಂಥ ಹೇಳಿಕೆ ಬಂದಾಗ ಅದಕ್ಕೆ ಕಂಗನಾ ಅವರು ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ಪ್ರತಿಕ್ರಿಯಿಸಿದರು. ‘ಅನ್ನು ಕಪೂರ್​ ಅವರ ಮಾತನ್ನು ನೀವು ಒಪ್ಪುತ್ತೀರಾ? ಯಶಸ್ವಿ ಮಹಿಳೆಯರನ್ನು ನಾವು ದ್ವೇಷಿಸುತ್ತೇವೆ. ಆಕೆ ಸುಂದರವಾಗಿದ್ದರೆ ಹೆಚ್ಚು ದ್ವೇಷಿಸಿ. ಆಕೆ ಅಧಿಕಾರಯುತ ಸ್ಥಾನದಲ್ಲಿದ್ದ ಇನ್ನೂ ಹೆಚ್ಚಾಗಿ ದ್ವೇಷಿಸಿ. ಇದು ನಿಜವೇ?’ ಎಂದು ಕಂಗನಾ ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕಂಗನಾಗೆ ಹೊಡೆದಿದ್ದಕ್ಕೆ ಬಾಲಿವುಡ್ ಮಂದಿಗೆ ಖುಷಿ ಆಗಿದ್ಯಾ? ಪ್ರತಿಕ್ರಿಯಿಸಿದ ನಟಿ

ಕಂಗನಾ ಅವರ ಈ ಸ್ಟೋರಿ ಕುರಿತು ಅನ್ನು ಕಪೂರ್​ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಯಾರದ್ದೇ ಸೌಂದರ್ಯ ಮತ್ತು ಅಧಿಕಾರದ ಬಗ್ಗೆ ನನಗೆ ಆಸಕ್ತಿ ಇಲ್ಲ. ನಿಮಗೆ ಈಗ ದೊಡ್ಡ ಜವಾಬ್ದಾರಿ ಇದೆ. ಒಳ್ಳೆಯ ಕೆಲಸ ಮಾಡಿ. ಸಾಧ್ಯವಾದರೆ ನಿಮ್ಮ ತಾಯ್ನಾಡಿಗಾಗಿ ಕೆಲಸ ಮಾಡಿ. ಅನಗತ್ಯ ವಿಚಾರಗಳ ಬಗ್ಗೆ ನಿಮ್ಮ ಗಮನ ಕೊಡಬೇಡಿ’ ಎಂದು ಕಂಗನಾಗೆ ಅನ್ನು ಕಪೂರ್​ ಕಿವಿಮಾತು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us