‘ಶ್ರೀ ರಾಮ ಭೂಮಿ’ಯಲ್ಲಿ ಅನುಪಮ್ ಖೇರ್, ಅಶೋಕ್ ಸಿಂಘಾಲ್ ಪಾತ್ರದಲ್ಲಿ ನಟನೆ

Anupam Kher movie: ಅನುಪಮ್ ಖೇರ್ ಅವರು ಬಿಜೆಪಿ ಪರವಾದ ಪ್ರಾಪಗಾಂಡಾ ಸಿನಿಮಾಗಳಲ್ಲಿ ನಟಿಸುತ್ತಾರೆ, ಅವುಗಳ ಪ್ರಚಾರ ಮಾಡುತ್ತಾರೆ ಎಂಬ ಆರೋಪವೂ ಇದೆ. ‘ದಿ ಕಶ್ಮೀರ್ ಫೈಲ್ಸ್’, ‘ದಿ ವ್ಯಾಕ್ಸಿನ್ ವಾರ್’, ‘ಎಮರ್ಜೆನ್ಸಿ’, ‘ಆಕ್ಸಿಡೆಂಟಲ್ ಪ್ರೈಮಿನಿಸ್ಟರ್’ ಅಂಥಹಾ ಸಿನಿಮಾಗಳಲ್ಲಿ ಅವರು ಈಗಾಗಲೇ ನಟಿಸಿದ್ದು, ಇದೀಗ ‘ಶ್ರೀ ರಾಮ ಭೂಮಿ’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

‘ಶ್ರೀ ರಾಮ ಭೂಮಿ’ಯಲ್ಲಿ ಅನುಪಮ್ ಖೇರ್, ಅಶೋಕ್ ಸಿಂಘಾಲ್ ಪಾತ್ರದಲ್ಲಿ ನಟನೆ
Anupam Kher

Updated on: Jul 14, 2026 | 1:46 PM

ಬಾಲಿವುಡ್​​ನ ಖ್ಯಾತ ನಟ ಅನುಪಮ್ ಖೇರ್ (Anupam Kher), ಹಲವು ಅದ್ಭುತ ಸಿನಿಮಾಗಳಲ್ಲಿ ಅದ್ಭುತ ಪಾತ್ರಗಳನ್ನು ಮಾಡಿದ್ದಾರೆ. ರಾಜಕೀಯವಾಗಿಯೂ ಸಕ್ರಿಯವಾಗಿರುವ ಅನುಪಮ್ ಖೇರ್, ಬಿಜೆಪಿ ಹಾಗೂ ನರೇಂದ್ರ ಮೋದಿ ಅವರ ಕಟ್ಟಾ ಬೆಂಬಲಿಗರಾಗಿದ್ದಾರೆ. ಅನುಪಮ್ ಖೇರ್ ಅವರು ಬಿಜೆಪಿ ಪರವಾದ ಪ್ರಾಪಗಾಂಡಾ ಸಿನಿಮಾಗಳಲ್ಲಿ ನಟಿಸುತ್ತಾರೆ, ಅವುಗಳ ಪ್ರಚಾರ ಮಾಡುತ್ತಾರೆ ಎಂಬ ಆರೋಪವೂ ಇದೆ. ‘ದಿ ಕಶ್ಮೀರ್ ಫೈಲ್ಸ್’, ‘ದಿ ವ್ಯಾಕ್ಸಿನ್ ವಾರ್’, ‘ಎಮರ್ಜೆನ್ಸಿ’, ‘ಆಕ್ಸಿಡೆಂಟಲ್ ಪ್ರೈಮಿನಿಸ್ಟರ್’ ಅಂಥಹಾ ಸಿನಿಮಾಗಳಲ್ಲಿ ಅವರು ಈಗಾಗಲೇ ನಟಿಸಿದ್ದು, ಇದೀಗ ‘ಶ್ರೀ ರಾಮ ಭೂಮಿ’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

‘ಶ್ರೀ ರಾಮ್ ಭೂಮಿ’ ಚಿತ್ರದಲ್ಲಿ ಅವರು ಅಶೋಕ್ ಸಿಂಘಾಲ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅನುಪಮ್ ಖೇರ್ ಅವರ ಲುಕ್​​ನ ಕೆಲ ಚಿತ್ರಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭವಾಗಿದೆ. ಇದರ ನಡುವೆ ಖುದ್ದು ಅನುಪಮ್ ಖೇರ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ತಾವು ಅಶೋಕ್ ಸಿಂಘ್ವಾಲ್ ಅವರ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಖಾತ್ರಿ ಪಟಿಸಿದ್ದಾರೆ.

ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದ ನಟ ‘ನಾನು ನಿರ್ವಹಿಸುತ್ತಿರುವ ಪಾತ್ರದ ಕೆಲವು ಚಿತ್ರಗಳು ಮಾಧ್ಯಮಗಳಲ್ಲಿ ಈಗಾಗಲೇ ಕಾಣಿಸಿಕೊಂಡಿರುವುದರಿಂದ, ನಾನು ಯಾವ ಪಾತ್ರವನ್ನು ಮಾಡುತ್ತಿದ್ದೇನೆ ಎಂದು ನೀವೇ ತಿಳಿಸುವುದು ಸೂಕ್ತ ಎಂದು ಭಾವಿಸಿದೆ. ‘ಶ್ರೀ ರಾಮ ಭೂಮಿ’ ಚಿತ್ರದಲ್ಲಿ ನಾನು ಅಶೋಕ್ ಸಿಂಘಾಲ್ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಸಂಪೂರ್ಣ ಸಮರ್ಪಣೆ, ದೃಢನಿಶ್ಚಯ ಮತ್ತು ಬದ್ಧತೆಯಿಂದ ಶ್ರೀ ರಾಮ್ ಜನ್ಮಭೂಮಿ ಚಳುವಳಿಗೆ ಮಾರ್ಗದರ್ಶನ ನೀಡಿದ ವ್ಯಕ್ತಿ ಅವರು’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ವಯಸ್ಸು 71 ಆಗಿದ್ರೂ ಅನುಪಮ್ ಖೇರ್ ಉತ್ಸಾಹ ನೋಡಿ

‘ಅವರು ಕೇವಲ ನಾಯಕರಾಗಿರಲಿಲ್ಲ, ಬದಲಾಗಿ ಭಗವಾನ್ ಶ್ರೀರಾಮನ ಪರಮ ಭಕ್ತರಾಗಿದ್ದರು. ಅವರ ನಂಬಿಕೆ, ಸೂಕ್ಷ್ಮತೆ ಮತ್ತು ಅಚಲವಾದ ನಂಬಿಕೆಯು ಚಳುವಳಿಗೆ ಹೊಸ ಶಕ್ತಿಯನ್ನು ನೀಡಿತು. ಇಂತಹ ಐತಿಹಾಸಿಕ ವ್ಯಕ್ತಿಯೊಬ್ಬರ ಜೀವನವನ್ನು ತೆರೆಯ ಮೇಲೆ ಪ್ರಾಮಾಣಿಕವಾಗಿ ಮತ್ತು ಸೂಕ್ಷ್ಮವಾಗಿ ತರುವುದು ನನಗೆ ದೊಡ್ಡ ಜವಾಬ್ದಾರಿಯಾಗಿದೆ. ನಾನು ನನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ಕೋರುತ್ತೇನೆ’ ಎಂದು ಅವರು ಹೇಳಿದ್ದಾರೆ. ಈ ಚಿತ್ರದ ಚಿತ್ರೀಕರಣ ಸದ್ಯ ಅಯೋಧ್ಯೆಯಲ್ಲಿ ನಡೆಯುತ್ತಿದೆ. ಶೂಟಿಂಗ್ ಆರಂಭಿಸುವ ಮುನ್ನ ಅನುಪಮ್ ಖೇರ್ ಅವರು ರಾಮ ಮಂದಿರ ಮತ್ತು ಹನುಮಾನ್ ಮಂದಿರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.

ಅಶೋಕ್ ಸಿಂಘ್ವಾಲ್ ಅವರು ‘ಅಯೋಧ್ಯೆ ರಾಮಜನ್ಮ ಭೂಮಿ’ ಚಳವಳಿಯ ನೇತೃತ್ವ ವಹಿಸಿದ್ದರು. ದಶಕಗಳ ಕಾಲ ಅವರು ರಾಮ ಮಂದಿರ ನಿರ್ಮಾಣಕ್ಕಾಗಿ ಆಗ್ರಹಿಸುತ್ತಲೇ ಬಂದಿದ್ದರು. ವಾಜಪೇಯಿ ಸಮಯದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಉಪವಾಸವನ್ನೂ ಸಹ ಮಾಡಿದ್ದರು. ರಾಮ ಮಂದಿರ ನಿರ್ಮಾಣದ ಹಿಂದೆ ಅವರ ಶ್ರಮ ಸಾಕಷ್ಟಿದೆ. ಇದೀಗ ಅನುಪಮ್ ಖೇರ್ ಅವರು ಅಶೋಕ್ ಅವರ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us