ಯೋಗಿ ಆದಿತ್ಯನಾಥ್​ ಭೇಟಿ ಮಾಡಿ ಫಿಲ್ಮ್​ ಸಿಟಿ ನಿರ್ಮಾಣಕ್ಕೆ ಅನುಮತಿ ಪತ್ರ ಪಡೆದ ಬೋನಿ ಕಪೂರ್​

ನೋಯ್ಡಾದಲ್ಲಿ ಫಿಲ್ಮ್​ ಸಿಟಿ ನಿರ್ಮಾಣಕ್ಕೆ ಸಕಲ ಸಿದ್ಧತೆ ನಡೆದಿದೆ. ನಿರ್ಮಾಪಕ ಬೋನಿ ಕಪೂರ್​ ಅವರು ಟೆಂಡರ್​ ಪಡೆದಿದ್ದಾರೆ. ಫಿಲ್ಮ್​ ಸಿಟಿ ನಿರ್ಮಾಣದ ಪ್ಲ್ಯಾನ್​ ಸಿದ್ಧವಾಗಿದೆ. ನಿರ್ಮಾಣ ಕಾರ್ಯ ಆರಂಭಿಸಲು ಬೇಕಾದ ಎಲ್ಲ ಬಗೆಯ ಅನುಮತಿ ಪತ್ರಗಳನ್ನು ಬೋನಿ ಕಪೂರ್​ ಅವರಿಗೆ ಯೋಗಿ ಆದಿತ್ಯನಾಥ್​ ನೀಡಿದ್ದಾರೆ.

ಯೋಗಿ ಆದಿತ್ಯನಾಥ್​ ಭೇಟಿ ಮಾಡಿ ಫಿಲ್ಮ್​ ಸಿಟಿ ನಿರ್ಮಾಣಕ್ಕೆ ಅನುಮತಿ ಪತ್ರ ಪಡೆದ ಬೋನಿ ಕಪೂರ್​
ಬೋನಿ ಕಪೂರ್​, ಯೋಗಿ ಆದಿತ್ಯನಾಥ್​

Updated on: Mar 13, 2024 | 6:08 PM

ನಿರ್ಮಾಪಕ ಬೋನಿ ಕಪೂರ್​ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath)​ ಅವರನ್ನು ಭೇಟಿ ಮಾಡಿದ್ದಾರೆ. ಲಖನೌನಲ್ಲಿ ಈ ಭೇಟಿ ನಡೆದಿದೆ. ಭೇಟಿಯ ಸಂದರ್ಭದಲ್ಲಿ ಬೋನಿ ಕಪೂರ್​ ಅವರು ನೋಯ್ಡಾದಲ್ಲಿ ನಿರ್ಮಾಣ ಆಗಲಿರುವ ಫಿಲ್ಮ್​ ಸಿಟಿ (Noida Film City) ಬಗ್ಗೆ ಪ್ಲ್ಯಾನ್​ ನೀಡಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಬಜೆಟ್​ನಲ್ಲಿ ಫಿಲ್ಮ್​ ಸಿಟಿ ನಿರ್ಮಾಣ ಕಾರ್ಯ ನಡೆಯಲಿದೆ. ಅದರ ಉಸ್ತುವಾರಿಯನ್ನು ಬೋನಿ ಕಪೂರ್​ ಪಡೆದಿದ್ದಾರೆ. ಬೋನಿ ಕಪೂರ್​ (Boney Kapoor) ಒಡೆತನದ ‘ಬೇವ್ಯೂ ಪ್ರಾಜೆಕ್ಸ್ಟ್​’ ಮತ್ತು ಭೂತಾನಿ ಗ್ರೂಪ್​ ಸಹಯೋಗದಲ್ಲಿ ಫಿಲ್ಮ್​ ಸಿಟಿ ನಿರ್ಮಾಣ ಆಗಲಿದೆ.

ಮುಂಬರುವ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ಫಿಲ್ಮ್​ ಸಿಟಿ ನಿರ್ಮಾಣಕ್ಕೆ ಬೇಕಾದ ಎಲ್ಲ ಬಗೆಯ ಅನುಮತಿಗಳಿರುವ ಪತ್ರವನ್ನು ಯೋಗಿ ಆದಿತ್ಯನಾಥ್​ ಅವರು ಬೋನಿ ಕಪೂರ್​ಗೆ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಅತ್ಯಾಧುನಿಕ ಸೌಕರ್ಯಗಳು ಇರುವ ಫಿಲ್ಮ್​ ಸಿಟಿ ನಿರ್ಮಾಣ ಆಗಬೇಕು ಎಂಬುದು ಯೋಗಿ ಆದಿತ್ಯನಾಥ್​ ಅವರ ಕನಸು. ಅದನ್ನು ಸಾಕಾರಗೊಳಿಸುವ ಅವಕಾಶವನ್ನು ತಮಗೆ ನೀಡಿದ್ದಕ್ಕಾಗಿ ಬೋನಿ ಕಪೂರ್​ ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲದೇ ಬಹಳ ಬದ್ಧತೆಯಿಂದ ಈ ಕಾರ್ಯ ಮಾಡುವುದಾಗಿ ಅವರು ಹೇಳಿದ್ದಾರೆ.

ನೋಯ್ಡಾದಲ್ಲಿ ಫಿಲ್ಮ್​ ಸಿಟಿ ನಿರ್ಮಾಣ ಮಾಡುವ ಟೆಂಡರ್​ ತಮಗೆ ಸಿಕ್ಕಿರುವುದಕ್ಕೆ ಬೋನಿ ಕಪೂರ್​ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಉತ್ಕೃಷ್ಟ ಗುಣಮಟ್ಟದೊಂದಿಗೆ ಈ ಪ್ರಾಜೆಕ್ಟ್​ ಅನ್ನು ಯಶಸ್ವಿಗೊಳಿಸುವುದಾಗಿ ಅವರು ಪ್ರತಿಜ್ಞೆ ಮಾಡಿದ್ದಾರೆ. ಈ ಫಿಲ್ಮ್​ ಸಿಟಿ ನಿರ್ಮಾಣ ಆದ ಬಳಿಕ ಚಿತ್ರರಂಗಕ್ಕೆ ಬಹಳ ಅನುಕೂಲ ಆಗಲಿದೆ. ಎಲ್ಲ ಬಗೆಯ ಕಾರ್ಯಗಳು ಒಂದೇ ಕಡೆ ಆಗುವ ರೀತಿ ಆಗಲಿದೆ. ಜಗತ್ತಿನಾದ್ಯಂತ ಇರುವ ಫಿಲ್ಮ್​ ಮೇಕರ್​ಗಳು ತಮ್ಮ ಸ್ಕ್ರಿಪ್ಟ್​ ತೆಗೆದುಕೊಂಡು ಬಂದರೆ ಮುಂದಿನ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸುವಂತಹ ಸೌಲಭ್ಯಗಳು ಈ ಫಿಲ್ಮ್​ ಸಿಟಿಯಲ್ಲಿ ಸಿಗಲಿವೆ.

ಇದನ್ನೂ ಓದಿ: ಶ್ರೀದೇವಿ ಸಾವಿನ ಬಗ್ಗೆ ಬೋನಿ ಕಪೂರ್ ಮೇಲೆ ಮೂಡಿತ್ತು ಅನುಮಾನ; ಮೌನಕ್ಕೆ ಕಾರಣ ನೀಡಿದ್ದ ನಿರ್ಮಾಪಕ

ಚಿತ್ರರಂಗದಲ್ಲಿ ಬೋನಿ ಕಪೂರ್​ ಅವರು ಹಲವು ವರ್ಷಗಳಿಂದ ನಿರ್ಮಾಪಕನಾಗಿ ಸಕ್ರಿಯರಾಗಿದ್ದಾರೆ. ಅವರದ್ದು ಫಿಲ್ಮಿ ಕುಟುಂಬ. ಪತ್ನಿ ಶ್ರೀದೇವಿ ಅವರು ಭಾರತೀಯ ಚಿತ್ರರಂಗದಲ್ಲಿ ಲೆಜೆಂಡರಿ ನಟಿಯಾಗಿದ್ದರು. ಸಹೋದರ ಅನಿಲ್​ ಕಪೂರ್​ ಕೂಡ ಬಣ್ಣದ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಈಗ ಬೋನಿ ಕಪೂರ್​ ಹಾಗೂ ಶ್ರೀದೇವಿ ದಂಪತಿಯ ಮಕ್ಕಳಾದ ಜಾನ್ವಿ ಕಪೂರ್​, ಖುಷಿ ಕಪೂರ್​ ಕೂಡ ನಟಿಯಾಗಿ ಬ್ಯುಸಿ ಆಗಿದ್ದಾರೆ. ಬೋನಿ ಕಪೂರ್​ ಅವರ ಮೊದಲ ಪತ್ನಿಯ ಪುತ್ರ ಅರ್ಜುನ್​ ಕಪೂರ್​ ಸಹ ಬಾಲಿವುಡ್​ನಲ್ಲಿ ನಟನಾಗಿ ಗುರುತಿಸಿಕೊಂಡಿದ್ದಾರೆ. ಹಿಂದಿ ಮಾತ್ರವಲ್ಲದೇ ದಕ್ಷಿಣ ಭಾರತ ಹಲವು ಸಿನಿಮಾಗಳನ್ನು ಬೋನಿ ಕಪೂರ್​ ನಿರ್ಮಾಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us