Sandeep Singh: ಬೆದರಿಕೆಗೆ ಹೆದರಿ ಟಿಪ್ಪು ಸುಲ್ತಾನ್​ ಕುರಿತ ಸಿನಿಮಾ ನಿರ್ಮಾಣ ನಿಲ್ಲಿಸಿ ಕ್ಷಮೆ ಕೇಳಿದ ಸಂದೀಪ್​ ಸಿಂಗ್​

Tipu Sultan Movie: ‘ಎಲ್ಲರ ನಂಬಿಕೆಯನ್ನು ನಾನು ಗೌರವಿಸುತ್ತೇನೆ. ಭಾರತೀಯರಾದ ನಾವು ಒಂದಾಗಿ ಇರೋಣ ಮತ್ತು ಪರಸ್ಪರ ಗೌರವ ನೀಡೋಣ’ ಎಂದು ಸಂದೀಪ್​ ಸಿಂಗ್​ ಟ್ವೀಟ್​ ಮಾಡಿದ್ದಾರೆ.

Sandeep Singh: ಬೆದರಿಕೆಗೆ ಹೆದರಿ ಟಿಪ್ಪು ಸುಲ್ತಾನ್​ ಕುರಿತ ಸಿನಿಮಾ ನಿರ್ಮಾಣ ನಿಲ್ಲಿಸಿ ಕ್ಷಮೆ ಕೇಳಿದ ಸಂದೀಪ್​ ಸಿಂಗ್​
ಸಂದೀಪ್​ ಸಿಂಗ್ ಪೋಸ್ಟ್​

Updated on: Jul 24, 2023 | 9:31 PM

ಟಿಪ್ಪು ಸುಲ್ತಾನ್​ (Tipu Sultan) ಕುರಿತು ಸಿನಿಮಾ ನಿರ್ಮಾಣ ಮಾಡಲು ಹೊರಟಿದ್ದ ನಿರ್ಮಾಪಕ ಸಂದೀಪ್​ ಸಿಂಗ್​ ಅವರು ಹಿಂದೆ ಸರಿದಿದ್ದಾರೆ. ಈ ಸಿನಿಮಾವನ್ನು ಅವರು ಅರ್ಧಕ್ಕೆ ಕೈ ಬಿಟ್ಟಿದ್ದಾರೆ. ತಮಗೆ ಮತ್ತು ತಮ್ಮ ಕುಟುಂಬದವರಿಗೆ ಬೆದರಿಕೆ (Threat) ಬಂದ ಹಿನ್ನೆಲೆಯಲ್ಲಿ ಸಂದೀಪ್​ ಸಿಂಗ್ (Sandeep Singh)​ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಕುರಿತು ಅವರು ಸೋಶಿಯಲ್​ ಮೀಡಿಯಾದಲ್ಲಿ ಬಹಿರಂಗವಾಗಿ ಬರೆದುಕೊಂಡಿದ್ದಾರೆ. ಯಾವುದೇ ಧರ್ಮದವರ ಭಾವನೆಗೆ ನೋವು ಉಂಟುಮಾಡುವ ಉದ್ದೇಶ ತಮಗೆ ಇಲ್ಲ ಎಂದು ಅವರು ತಿಳಿಸಿದ್ದಾರೆ. ಸಂದೀಪ್​ ಸಿಂಗ್​ ಈ ನಿರ್ಧಾರ ತೆಗೆದುಕೊಳ್ಳಲು ಬೇರೆಯದೇ ಕಾರಣ ಇದೆ ಎಂದು ಕೆಲವರು ಊಹಿಸಿದ್ದಾರೆ. ಈ ಬಗ್ಗೆ ನೆಟ್ಟಿಗರು ತಮ್ಮ ಅನಿಸಿಕೆ ತಿಳಿಸಿದ್ದಾರೆ.

ಸಂದೀಪ್​ ಸಿಂಗ್​ ಟ್ವೀಟ್​ನಲ್ಲಿ ಏನಿದೆ?

‘ನನಗೆ, ನನ್ನ ಕುಟುಂಬದವರಿಗೆ, ನನ್ನ ಸ್ನೇಹಿತರಿಗೆ ಬೆದರಿಕೆ ಹಾಕುವುದನ್ನು ಮತ್ತು ನಿಂದಿಸುವುದನ್ನು ನಿಲ್ಲಿಸಿ ಎಂದು ನನ್ನ ಸಹೋದರ, ಸಹೋದರಿಯರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಯಾರದ್ದಾದರೂ ಧಾರ್ಮಿಕ ಭಾವನೆಗೆ ನಾನು ಧಕ್ಕೆ ತಂದಿದ್ದರೆ ಕ್ಷಮೆ ಕೇಳುತ್ತೇನೆ. ಆ ಉದ್ದೇಶ ನನಗೆ ಇಲ್ಲ. ಎಲ್ಲರ ನಂಬಿಕೆಯನ್ನು ನಾನು ಗೌರವಿಸುತ್ತೇನೆ. ಭಾರತೀಯರಾದ ನಾವು ಒಂದಾಗಿ ಇರೋಣ ಮತ್ತು ಪರಸ್ಪರ ಗೌರವ ನೀಡೋಣ’ ಎಂದು ಸಂದೀಪ್​ ಸಿಂಗ್​ ಟ್ವೀಟ್​ ಮಾಡಿದ್ದಾರೆ.

ನೆಟ್ಟಿಗರು ಹೇಳೋದೇ ಬೇರೆ:

ಸಂದೀಪ್​ ಸಿಂಗ್​ ಅವರ ಈ ನಿರ್ಧಾರವನ್ನು ನೆಟ್ಟಿಗರೊಬ್ಬರು ಬೇರೆ ರೀತಿಯಲ್ಲಿ ಅರ್ಥೈಸಿದ್ದಾರೆ. ‘ಇದಕ್ಕೆ ನಿಜವಾದ ಕಾರಣ ಬೇರೆ ಇದೆ. ನನ್ನ ಅನಿಸಿಕೆ ಪ್ರಕಾರ, ‘72 ಹೂರೇ’ ಮತ್ತು ‘ಅಜ್ಮೇರ್​ 92’ ಸಿನಿಮಾಗಳು ಸೋತಿವೆ. ಹಾಗಾಗಿ ಇಂಥ ಸಿನಿಮಾಗಳಿಗೆ ಯಶಸ್ಸಿನ ಗ್ಯಾರಂಟಿ ಇಲ್ಲ. ಐತಿಹಾಸಿಕ ಸಿನಿಮಾಗೆ ಬಜೆಟ್​ ಜಾಸ್ತಿ ಆಗುತ್ತದೆ. ಹಾಗಾಗಿ ಈ ಸಿನಿಮಾದ ಮೇಲೆ ಹಣ ಹಾಕೋದು ರಿಸ್ಕಿ’ ಎಂಬ ಕಮೆಂಟ್​ ಬಂದಿದೆ.

ಇದನ್ನೂ ಓದಿ: Tipu Sultan: ಟಿಪ್ಪು ಸುಲ್ತಾನ್​ ಕುರಿತು ಪ್ಯಾನ್​ ಇಂಡಿಯಾ ಸಿನಿಮಾ; ಮೋಷನ್​ ಪೋಸ್ಟರ್​ನಲ್ಲೇ ಹಲವು ಆರೋಪ

ಈ ಸಿನಿಮಾವನ್ನು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಮಾಡಬೇಕು ಎಂಬುದು ನಿರ್ಮಾಪಕರ ಆಲೋಚನೆ ಆಗಿತ್ತು. ಹಿಂದಿ, ಮಲಯಾಳಂ, ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ಈ ಚಿತ್ರ ಮೂಡಿಬರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಮೇ 4ರಂದು ಈ ಎಲ್ಲ ಭಾಷೆಗಳಲ್ಲಿ ‘ಟಿಪ್ಪು’ ಸಿನಿಮಾದ ಪೋಸ್ಟರ್ ರಿಲೀಸ್​ ಮಾಡಲಾಗಿತ್ತು. ಮೋಷನ್​ ಪೋಸ್ಟರ್​ನಲ್ಲಿ ಚಿತ್ರದ ಬಗ್ಗೆ ಅನೇಕ ಆರೋಪಗಳನ್ನು ಮಾಡಲಾಗಿತ್ತು. ಆಗಲೇ ಈ ಸಿನಿಮಾದ ಬಗ್ಗೆ ವಿರೋಧ ಕೇಳಿಬಂದಿತ್ತು.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us