‘ದಿ ಇಂಡಿಯಾ ಸ್ಟೋರಿ’ ಸಿನಿಮಾ ಟ್ರೇಲರ್ ಬಿಡುಗಡೆ: ಕೀಟನಾಶಕ ಕೃಷಿ ದಂಧೆಯ ವಿರುದ್ಧ ಸಮರ
ಭಾರಿ ಕುತೂಹಲ ಮೂಡಿಸಿರುವ ‘ದಿ ಇಂಡಿಯಾ ಸ್ಟೋರಿ’ ಚಿತ್ರವು ಜುಲೈ 24ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸಾರ್ವಜನಿಕರ ಆರೋಗ್ಯ ಮತ್ತು ಕೃಷಿ ಬಿಕ್ಕಟ್ಟಿನಂತಹ ಮಹತ್ವದ ವಿಷಯವನ್ನು ಹೊಂದಿರುವ ಈ ಸಿನಿಮಾದಲ್ಲಿ ಕಾಜಲ್ ಅಗರ್ವಾಲ್, ಶ್ರೇಯಸ್ ತಲ್ಪಾಡೆ ನಟಿಸಿದ್ದಾರೆ. ಟ್ರೇಲರ್ ಈಗ ಅನಾವರಣ ಆಗಿದೆ.

ಮುಖ್ಯಾಂಶಗಳು
- ಸಾಮಾಜಿಕ ಕಳಕಳಿಯ 'ದಿ ಇಂಡಿಯಾ ಸ್ಟೋರಿ' ಸಿನಿಮಾದ ಅಧಿಕೃತ ಟ್ರೇಲರ್ ಬಿಡುಗಡೆ.
- ಕೃಷಿಯಲ್ಲಿನ ಮಿತಿಮೀರಿದ ರಾಸಾಯನಿಕ ಕೀಟನಾಶಕಗಳ ಬಳಕೆ ಬಗ್ಗೆ ಮಾಡಲಾದ ಸಿನಿಮಾ.
- ಜುಲೈ 24ಕ್ಕೆ ರಿಲೀಸ್ ಆಗಲಿರುವ 'ದಿ ಇಂಡಿಯಾ ಸ್ಟೋರಿ' ಚಿತ್ರದಲ್ಲಿದೆ ಗಂಭೀರ ಕಥಾವಸ್ತು.
ಬಹುಭಾಷಾ ನಟಿ ಕಾಜಲ್ ಅಗರ್ವಾಲ್ (Kajal Aggarwal) ಮತ್ತು ಶ್ರೇಯಸ್ ತಲ್ಪಾಡೆ (Shreyas Talpade) ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ಸಾಮಾಜಿಕ ಕಳಕಳಿಯ ಚಿತ್ರ ‘ದಿ ಇಂಡಿಯಾ ಸ್ಟೋರಿ: ಸ್ಲೋ ಪಾಯ್ಸನ್ ಇನ್ ಪ್ರೋಗ್ರೆಸ್’ (The India Story: Slow Poison in Progress) ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಕೃಷಿಯಲ್ಲಿ ಮಿತಿಮೀರಿ ಬಳಸಲಾಗುವ ರಾಸಾಯನಿಕ ಕೀಟನಾಶಕಗಳು ಮತ್ತು ಅವು ಸಮಾಜದ ಮೇಲೆ ಬೀರುತ್ತಿರುವ ಭೀಕರ ಪರಿಣಾಮಗಳ ಸುತ್ತ ಈ ಚಿತ್ರದ ಕಥಾಹಂದರ ಮೂಡಿಬಂದಿದೆ.
ಈಗ ಬಿಡುಗಡೆಯಾಗಿರುವ ಟ್ರೇಲರ್ ಅತ್ಯಂತ ಪ್ರಭಾವಶಾಲಿಯಾಗಿದ್ದು, ಭಾವನಾತ್ಮಕ ಸನ್ನಿವೇಶಗಳಿಂದ ಕೂಡಿದೆ. ಕೀಟನಾಶಕ ಮುಕ್ತ ಕೃಷಿಗಾಗಿ ಸಾಮಾನ್ಯ ಮನುಷ್ಯನೊಬ್ಬ ನಡೆಸುವ ಹೋರಾಟ, ಕಾರ್ಪೊರೇಟ್ ದಂಧೆ ಮತ್ತು ಇದರ ಬಗ್ಗೆ ನ್ಯಾಯಾಲಯದಲ್ಲಿ ನಡೆಯುವ ವಾದ-ಪ್ರತಿವಾದಗಳು ಪ್ರೇಕ್ಷಕರಲ್ಲಿ ಜಾಗೃತಿ ಮೂಡಿಸುವಂತಿದೆ. ದೇಶದ ಕೋಟ್ಯಂತರ ಜನರ ಆರೋಗ್ಯದ ಮೇಲೆ ಆಟವಾಡುತ್ತಿರುವ ಈ ಗಂಭೀರ ಸಮಸ್ಯೆಯನ್ನು ಚಿತ್ರದಲ್ಲಿ ಅತ್ಯಂತ ಧೈರ್ಯವಾಗಿ ಬಿಂಬಿಸಲಾಗಿದೆ.
ಪ್ರತಿ ಮನೆಯ ಕಥೆ ಇದು: ನಿರ್ದೇಶಕ ಚೇತನ್ ಡಿ.ಕೆ
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಚೇತನ್ ಡಿ.ಕೆ, ‘ದಿ ಇಂಡಿಯಾ ಸ್ಟೋರಿ ಕೇವಲ ಒಂದು ಸಿನಿಮಾವಲ್ಲ, ಇದು ಸಮಾಜದಲ್ಲಿ ನಾವೆಲ್ಲರೂ ಚರ್ಚಿಸಬೇಕಾದ ಗಂಭೀರ ವಿಷಯ. ಇಂದು ಕೀಟನಾಶಕಗಳು ಪ್ರತಿಯೊಂದು ಮನೆಯ ಮೇಲೂ ಸದ್ದಿಲ್ಲದೆ ಪರಿಣಾಮ ಬೀರುತ್ತಿವೆ. ಸತ್ಯ, ಧೈರ್ಯ ಮತ್ತು ಸ್ಥಿತಿಸ್ಥಾಪಕತ್ವದ ಈ ಹೋರಾಟವನ್ನು ಟ್ರೇಲರ್ನಲ್ಲಿ ತೋರಿಸಿದ್ದೇವೆ. ನಮ್ಮ ಸುತ್ತಲಿನ ನೈಜ ಪರಿಸ್ಥಿತಿಯನ್ನು ಪ್ರಶ್ನಿಸಲು ಮತ್ತು ಅರ್ಥಮಾಡಿಕೊಳ್ಳಲು ಈ ಸಿನಿಮಾ ಪ್ರೇಕ್ಷಕರಿಗೆ ಪ್ರೇರಣೆ ನೀಡುತ್ತದೆ ಎಂದು ಭಾವಿಸುತ್ತೇನೆ’ ಎಂದಿದ್ದಾರೆ.
ಕಾಜಲ್ ಅಗರ್ವಾಲ್ ಪಾಲಿಗೆ ಸ್ಪೆಷಲ್ ಪ್ರಾಜೆಕ್ಟ್:
ಚಿತ್ರದ ಅನುಭವ ಹಂಚಿಕೊಂಡ ನಟಿ ಕಾಜಲ್ ಅಗರ್ವಾಲ್, ‘ಈ ಪ್ರಾಜೆಕ್ಟ್ನಲ್ಲಿ ಭಾಗವಹಿಸಿದ್ದು ನನಗೆ ಅತ್ಯಂತ ಅರ್ಥಪೂರ್ಣ ಅನುಭವ ನೀಡಿದೆ. ಹತ್ತಾರು ಸವಾಲುಗಳು ಎದುರಾದರೂ ಸತ್ಯದ ಪರವಾಗಿ ನಿಲ್ಲುವ ಧೀಮಂತ ಪಾತ್ರ ನನ್ನದಾಗಿದೆ. ಆ ಅದಮ್ಯ ಚೇತನವೇ ಈ ಸಿನಿಮಾವನ್ನು ವಿಶೇಷವಾಗಿಸಿದೆ. ಪ್ರೇಕ್ಷಕರಿಗೆ ಟ್ರೇಲರ್ ಇಷ್ಟವಾಗಲಿದ್ದು, ಸಿನಿಮಾವನ್ನು ದೊಡ್ಡ ಪರದೆಯ ಮೇಲೆ ನೋಡಲು ಅವರು ಕಾಯಲಿದ್ದಾರೆ ಎಂಬ ನಂಬಿಕೆಯಿದೆ’ ಎಂದು ಆಶಿಸಿದ್ದಾರೆ.
ಇದನ್ನೂ ಓದಿ: ಆಹಾರ ಕಲಬೆರಕೆ ಕುರಿತ ‘ದಿ ಇಂಡಿಯಾ ಸ್ಟೋರಿ’ ಸಿನಿಮಾಗೆ ಲೀಗಲ್ ನೋಟಿಸ್; ಕಾರಣ ಏನು?
ಸಾಮಾನ್ಯ ಮನುಷ್ಯನ ಅಸಾಮಾನ್ಯ ಹೋರಾಟ:
ನಟ ಶ್ರೇಯಸ್ ತಲ್ಪಾಡೆ ಮಾತನಾಡಿ, ‘ಒಬ್ಬ ಸಾಮಾನ್ಯ ಮನುಷ್ಯ ತನ್ನ ಮುಂದಿರುವ ಅಸಾಮಾನ್ಯ ಸವಾಲಿನ ವಿರುದ್ಧ ಭರವಸೆ ಮತ್ತು ದೃಢಸಂಕಲ್ಪದಿಂದ ಹೇಗೆ ಹೋರಾಡುತ್ತಾನೆ ಎಂಬುದೇ ಸಿನಿಮಾದ ಜೀವಾಳ. ಚಿತ್ರದ ಅಸಲಿ ಭಾವನೆಯನ್ನು ಈ ಟ್ರೇಲರ್ ಹಿಡಿದಿಟ್ಟಿದೆ. ಪ್ರತಿಯೊಬ್ಬ ಪ್ರೇಕ್ಷಕನೂ ಚಿತ್ರದ ಸಂದೇಶಕ್ಕೆ ಕನೆಕ್ಟ್ ಆಗಲಿದ್ದು, ಜುಲೈ 24ರಂದು ಚಿತ್ರಮಂದಿರಗಳಲ್ಲಿ ಈ ಅದ್ಭುತ ಅನುಭವವನ್ನು ಪಡೆಯಲು ನಾನು ಉತ್ಸುಕನಾಗಿದ್ದೇನೆ’ ಎಂದು ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




