ಬಾಕ್ಸ್ ಆಫೀಸ್‌ನಲ್ಲಿ ಎಡವಿದ ‘ದಿ ಇಂಡಿಯಾ ಸ್ಟೋರಿ’: ಕಾಜಲ್ ಅಗರ್‌ವಾಲ್ ಸಿನಿಮಾಗೆ ನೀರಸ ಪ್ರತಿಕ್ರಿಯೆ

ಬಿಡುಗಡೆಗೂ ಮುನ್ನವೇ ‘ದಿ ಇಂಡಿಯಾ ಸ್ಟೋರಿ’ ಸಿನಿಮಾ ಸಾಕಷ್ಟು ವಿವಾದ ಮಾಡಿಕೊಂಡಿತ್ತು. ಆ ಮೂಲಕ ಜನರಿಗೆ ಈ ಚಿತ್ರದ ಬಗ್ಗೆ ಕುತೂಹಲ ಮೂಡುವಂತಾಗಿತ್ತು. ಆದರೆ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರ ಪರಿಣಾಮವಾಗಿ ಚಿತ್ರದ ಕಲೆಕ್ಷನ್ ಹೀನಾಯವಾಗಿದೆ.

ಬಾಕ್ಸ್ ಆಫೀಸ್‌ನಲ್ಲಿ ಎಡವಿದ ‘ದಿ ಇಂಡಿಯಾ ಸ್ಟೋರಿ’: ಕಾಜಲ್ ಅಗರ್‌ವಾಲ್ ಸಿನಿಮಾಗೆ ನೀರಸ ಪ್ರತಿಕ್ರಿಯೆ
The India Story Movie Poster

Updated on: Jul 26, 2026 | 1:02 PM

ಜನಪ್ರಿಯ ನಟಿ ಕಾಜಲ್ ಅಗರ್‌ವಾಲ್ (Kajal Aggarwal) ಹಾಗೂ ಶ್ರೇಯಸ್ ತಲ್ಪಾಡೆ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ದಿ ಇಂಡಿಯಾ ಸ್ಟೋರಿ: ಸ್ಲೋ ಪಾಯ್ಸನ್ ಇನ್ ಪ್ರೋಗ್ರೆಸ್’ (The India Story: Slow Poison in Progress) ಸಿನಿಮಾ ಜುಲೈ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ರೈತರು ಬಳಸುವ ಕ್ರಿಮಿನಾಶಕಗಳ (Pesticides) ದುಷ್ಪರಿಣಾಮ ಹಾಗೂ ಜನರ ಆರೋಗ್ಯದ ಮೇಲಾಗುವ ಕಠೋರ ಪರಿಣಾಮಗಳನ್ನು ಆಧರಿಸಿ ನಿರ್ಮಿಸಲಾದ ಈ ಸಾಮಾಜಿಕ ಕಥಾವಸ್ತುವಿನ ಸಿನಿಮಾ, ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಸೆಳೆಯಲು ತೀವ್ರ ಹೆಣಗಾಡುತ್ತಿದೆ.

ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ವೆಬ್‌ಸೈಟ್ ಸ್ಯಾಕ್‌ನಿಲ್ಕ್ ವರದಿಯ ಪ್ರಕಾರ, ‘ದಿ ಇಂಡಿಯಾ ಸ್ಟೋರಿ’ ಸಿನಿಮಾ ತನ್ನ ಬಿಡುಗಡೆಯ ಎರಡನೇ ದಿನವಾದ ಶನಿವಾರ (ಜುಲೈ 25) ಭಾರತದಲ್ಲಿ ಅಂದಾಜು 25 ಲಕ್ಷ ರೂಪಾಯಿ ನೆಟ್ ಗಳಿಕೆ ಮಾಡಿದೆ. ಇದರೊಂದಿಗೆ ಎರಡು ದಿನಗಳಲ್ಲಿ ಈ ಚಿತ್ರ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 41 ಲಕ್ಷ ರೂಪಾಯಿ ನೆಟ್ ಸಂಗ್ರಹಿಸಲಷ್ಟೇ ಶಕ್ತವಾಗಿದೆ. ಇನ್ನು ವಿಶ್ವಾದ್ಯಂತ ಒಟ್ಟು ಗ್ರೋಸ್ ಗಳಿಕೆ ಎರಡು ದಿನಗಳಲ್ಲಿ ಕೇವಲ 46 ಲಕ್ಷ ರೂಪಾಯಿ ತಲುಪಿದೆ.

ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನ ಗಳಿಕೆಯಲ್ಲಿ ಸಣ್ಣ ಪ್ರಮಾಣದ ಏರಿಕೆ ಕಂಡುಬಂದಿದ್ದರೂ, ವಾರಾಂತ್ಯದ ಲಾಭವನ್ನು ಪಡೆದುಕೊಳ್ಳಲು ಸಿನಿಮಾ ವಿಫಲವಾಗಿದೆ. ಸುಮಾರು 20ರಿಂದ 30 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಚೇತರಿಸಿಕೊಳ್ಳಲು ಶನಿವಾರ ಮತ್ತು ಭಾನುವಾರ ಭಾರಿ ಗಳಿಕೆ ಕಾಣಬೇಕಿತ್ತು. ಆದರೆ ಪ್ರೇಕ್ಷಕರ ನೀರಸ ಪ್ರತಿಕ್ರಿಯೆಯಿಂದಾಗಿ ಗಳಿಕೆಯ ನಿರೀಕ್ಷೆಗಳು ಹುಸಿಯಾಗಿವೆ.

‘ದಿ ಇಂಡಿಯಾ ಸ್ಟೋರಿ’ ಸಿನಿಮಾ ಬಗ್ಗೆ ವಿವರ:

ಚೇತನ್ ಡಿ.ಕೆ. ನಿರ್ದೇಶನ ಹಾಗೂ ಸಾಗರ್ ಬಿ. ಶಿಂಧೆ ನಿರ್ಮಾಣದ ಈ ಸಾಮಾಜಿಕ ಕಳಕಳಿಯ ಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಂಡಿದೆ. 2025ರ ಜನವರಿಯಲ್ಲಿ ಪುಣೆಯಲ್ಲಿ ಮುಹೂರ್ತ ಕಂಡಿದ್ದ ಈ ಚಿತ್ರದ ಚಿತ್ರೀಕರಣವನ್ನು ಕೊಲ್ಹಾಪುರ ಸೇರಿದಂತೆ ವಿವಿಧೆಡೆ ನಡೆಸಿ ಅಕ್ಟೋಬರ್ ವೇಳೆಗೆ ಪೂರ್ಣಗೊಳಿಸಲಾಗಿತ್ತು. ಚಿತ್ರದಲ್ಲಿ ಮುರಳಿ ಶರ್ಮಾ, ಮನೀಶ್ ವಾಧ್ವಾ, ತ್ರಿಶಾ ಶಾರದಾ, ಅತುಲ್ ತಿವಾರಿ, ಕಮಲೇಶ್ ಸಾವಂತ್ ಹಾಗೂ ಶಾಮ್ ಮಶಾಲ್ಕರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ‘ಮಗ ಹೆಮ್ಮೆಪಡುವ ಸಿನಿಮಾ ಮಾತ್ರ ಈಗ ಒಪ್ಪಿಕೊಳ್ಳುವೆ’: ನಟಿ ಕಾಜಲ್ ಅಗರ್ವಾಲ್ ಮನದ ಮಾತು

ಚಿತ್ರದ ಕಥಾಹಂದರ ಹಾಗೂ ವಿಮರ್ಶೆ:

ಆಹಾರದಲ್ಲಿ ಬಳಕೆಯಾಗುವ ಕ್ರಿಮಿನಾಶಕ ಹಾಗೂ ರಾಸಾಯನಿಕಗಳಿಂದ ಕಲುಷಿತಗೊಂಡ ಆಹಾರ ಸೇವಿಸಿ ಕ್ಯಾನ್ಸರ್‌ಗೆ ಬಲಿಯಾಗುವ ಪುಟ್ಟ ಮಗಳ ಸಾವಿಗೆ ನ್ಯಾಯ ಕೋರಿ ಹೋರಾಡುವ ತಂದೆಯ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಶ್ರೇಯಸ್ ತಲ್ಪಾಡೆ ಅವರು ನೊಂದ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಕಾಜಲ್ ಅಗರ್‌ವಾಲ್ ಧೈರ್ಯವಂತ ವಕೀಲೆಯಾಗಿ ಶಕ್ತಿಶಾಲಿ ಕ್ರಿಮಿನಾಶಕ ಕಂಪನಿಗಳ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡುವ ಪಾತ್ರವನ್ನು ಮಾಡಿದ್ದಾರೆ.

ಸಿನಿಮಾದ ಸೋಲಿಗೆ ಕಾರಣ ಏನು?

ಸಮಾಜಕ್ಕೆ ಅತ್ಯಂತ ಅಗತ್ಯವಾದ ಹಾಗೂ ಕಣ್ಣು ತೆರೆಸುವಂತಹ ಕಥಾವಸ್ತುವನ್ನು ಹೊಂದಿದ್ದರೂ, ಸಿನಿಮಾದ ನಿರೂಪಣೆ ಅತ್ಯಂತ ನಿಧಾನಗತಿಯಿಂದ ಸಾಗುವುದು ಪ್ರೇಕ್ಷಕರಿಗೆ ನೀರಸವೆನಿಸಿದೆ. ಕಾಜಲ್ ಅಗರ್‌ವಾಲ್, ಶ್ರೇಯಸ್ ತಲ್ಪಾಡೆ ಹಾಗೂ ಮುರಳಿ ಶರ್ಮಾ ಅವರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದರೂ, ಭಾವನಾತ್ಮಕವಾಗಿ ಪ್ರೇಕ್ಷಕರ ಮನ ಮುಟ್ಟುವಲ್ಲಿ ಸಿನಿಮಾ ವಿಫಲವಾಗಿದೆ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us