‘ಅಜಯ್​ ದೇವಗನ್​ ಹೇಳಿದ್ರಲ್ಲಿ ತಪ್ಪಿಲ್ಲ, ಆದ್ರೆ ಸಂಸ್ಕೃತ ರಾಷ್ಟ್ರ ಭಾಷೆ ಆಗಲಿ’: ಕಂಗನಾ ಹೊಸ ಟ್ವಿಸ್ಟ್​

| Updated By: ಮದನ್​ ಕುಮಾರ್​

Updated on: Apr 30, 2022 | 8:12 AM

Kangana Ranaut: ಕಂಗನಾ ರಣಾವತ್​ ಅವರು ಬೇರೆ ಎಲ್ಲ ಭಾಷೆಯನ್ನೂ ಬಿಟ್ಟು ಸಂಸ್ಕೃತದ ಪರ ಬ್ಯಾಟ್​ ಬೀಸಿದ್ದಾರೆ. ಸಂಸ್ಕೃತ ನಮ್ಮ ರಾಷ್ಟ್ರ ಭಾಷೆ ಆಗಲಿ ಎಂದು ಅವರು ಹೇಳಿದ್ದಾರೆ.

‘ಅಜಯ್​ ದೇವಗನ್​ ಹೇಳಿದ್ರಲ್ಲಿ ತಪ್ಪಿಲ್ಲ, ಆದ್ರೆ ಸಂಸ್ಕೃತ ರಾಷ್ಟ್ರ ಭಾಷೆ ಆಗಲಿ’: ಕಂಗನಾ ಹೊಸ ಟ್ವಿಸ್ಟ್​
ಕಂಗನಾ ರಣಾವತ್
Follow us on

ಭಾರತೀಯ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ರಾಷ್ಟ್ರ ಭಾಷೆ (National Language) ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ನಟಿ ಕಂಗನಾ ರಣಾವತ್​ (Kangana Ranaut) ಸುಮ್ಮನೇ ಇರುತ್ತಾರಾ? ಖಂಡಿತಾ ಇಲ್ಲ. ಎಲ್ಲ ವಿಚಾರದಲ್ಲಿಯೂ ಮೂಗು ತೂರಿಸುವ ಅವರು ಈಗ ಅಜಯ್​ ದೇವಗನ್​ ವರ್ಸಸ್​ ಕಿಚ್ಚ ಸುದೀಪ್​ ವಿಷಯದಲ್ಲೂ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ‘ಹಿಂದಿ ರಾಷ್ಟ್ರ ಭಾಷೆ ಎಂದು ಅಜಯ್​ ದೇವಗನ್​ ಹೇಳಿದ್ದರಲ್ಲಿ ತಪ್ಪೇನೂ ಇಲ್ಲ’ ಎಂದು ಕಂಗನಾ ಹೇಳಿದ್ದಾರೆ. ಈ ಕುರಿತಾಗಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಕಂಗನಾ ರಣಾವತ್​ ಅವರು ನಟಿಸಿರುವ ‘ಧಾಕಡ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಟ್ರೇಲರ್​ ಲಾಂಚ್​ ಕಾರ್ಯಕ್ರಮ ಶುಕ್ರವಾರ (ಏ.29)​ ನಡೆಯಿತು. ಆಗ ಅವರು ರಾಷ್ಟ್ರ ಭಾಷೆ ಬಗ್ಗೆ ಮಾತನಾಡಿದರು. ಅವರ ಪ್ರಕಾರ ಸಂಸ್ಕೃತ (Sanskrit) ನಮ್ಮ ರಾಷ್ಟ್ರ ಭಾಷೆ ಆಗಬೇಕಂತೆ! ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ಪರಿಸ್ಥಿತಿ ಯಾವ ರೀತಿ ಇದೆ ಎಂಬ ಬಗ್ಗೆಯೂ ಕಂಗನಾ ರಣಾವತ್​ ಮಾತನಾಡಿದ್ದಾರೆ.

‘ಬೇರೆ ಬೇರೆ ದೇಶಗಳಿಗೆ ಹೋಗಿ ನೋಡಿ. ಜರ್ಮನಿ, ಫ್ರಾನ್ಸ್​, ಸ್ಪೇನ್​ ಮುಂತಾದ ಕಡೆಗಳಲ್ಲಿ ಅವರ ಭಾಷೆಯ ಬಗ್ಗೆ ಅವರಿಗೆ ಸಖತ್​ ಹೆಮ್ಮೆ ಇದೆ. ಬ್ರಿಟಿಷ್​ ಆಡಳಿತದ ಪ್ರಭಾವ ಎಷ್ಟು ಗಾಢವಾಗಿದೆ ಎಂಬುದು ಮುಖ್ಯವಲ್ಲ. ಅದೃಷ್ಟವೋ ದುರದೃಷ್ಟವೋ ಇಂಗ್ಲಿಷ್​ ಸಂಪರ್ಕ ಭಾಷೆ ಆಗಿದೆ. ದೇಶದ ಒಳಗೆ ಕೂಡ ನಾವು ಸಂವಹನಕ್ಕೆ ಇಂಗ್ಲಿಷ್​ ಬಳಸುತ್ತೇವೆ. ಅದೇ ನಮಗೆ ಸಂಪರ್ಕ​ ಭಾಷೆ ಆಗಬೇಕಾ? ಹಿಂದಿ, ತಮಿಳು ಅಥವಾ ಸಂಸ್ಕೃತ ಆಗಬಹುದಾ? ಈ ಬಗ್ಗೆ ನಾವು ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಕಂಗನಾ ರಣಾವತ್​ ಹೇಳಿದ್ದಾರೆ.

‘ನಮ್ಮ ಸಂವಿಧಾನದ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆ. ಅದನ್ನೇ ಅಜಯ್​ ದೇವಗನ್​ ಅವರು ಹೇಳಿದ್ದರಲ್ಲಿ ತಪ್ಪೇನೂ ಇಲ್ಲ. ಆದರೆ ಸಂಸ್ಕೃತ ನಮ್ಮ ರಾಷ್ಟ್ರ ಭಾಷೆ ಆಗಬೇಕು ಅಂತ ನಾನು ಹೇಳುತ್ತೇನೆ. ಹಿಂದಿ, ಜರ್ಮನಿ, ಇಂಗ್ಲಿಷ್​, ಫ್ರೆಂಚ್​ ಮುಂತಾದ ಭಾಷೆಗಳು ಬಂದಿರುವುದೇ ಸಂಸ್ಕೃತದಿಂದ. ಹಾಗಾಗಿ ನಾವೇಕೆ ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯಾಗಿ ಇಟ್ಟುಕೊಳ್ಳಬಾರದು? ಶಾಲೆಗಳಲ್ಲಿ ಇದನ್ನು ಯಾಕೆ ಕಡ್ಡಾಯವಾಗಿ ಮಾಡಬಾರದು? ನನಗೆ ಗೊತ್ತಿಲ್ಲ’ ಎಂದು ಕಂಗನಾ ರಣಾವತ್​ ಹೇಳಿದ್ದಾರೆ.

ಅಜಯ್​ ದೇಗವನ್​ ಹೇಳಿದ್ದೇನು?

‘ಹಿಂದಿ ರಾಷ್ಟ್ರ ಭಾಷೆ ಅಲ್ಲ’ ಎಂದು ಸುದ್ದಿಗೋಷ್ಠಿಯೊಂದರಲ್ಲಿ ಕಿಚ್ಚ ಸುದೀಪ್​ ಅವರು ಹೇಳಿದ್ದಕ್ಕೆ ಬಾಲಿವುಡ್​ ನಟ ಅಜಯ್​ ದೇವಗನ್​ ಅವರು ಟ್ವಿಟರ್​ ಮೂಲಕ ಇತ್ತೀಚೆಗೆ ಪ್ರತಿಕ್ರಿಯೆ ನೀಡಿದರು. ‘ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬುದಾದರೆ ನೀವು ನಿಮ್ಮ ಸಿನಿಮಾಗಳನ್ನು ಹಿಂದಿಗೆ ಡಬ್​ ಮಾಡಿ ಯಾಕೆ ರಿಲೀಸ್​ ಮಾಡುತ್ತೀರಿ? ಎಂದೆಂದಿಗೂ ಹಿಂದಿ ನಮ್ಮ ರಾಷ್ಟ್ರ ಭಾಷೆ ಆಗಿರಲಿದೆ. ಜನ ಗಣ ಮನ’ ಎಂದು ಅಜಯ್​ ದೇವಗನ್​ ಟ್ವೀಟ್​ ಮಾಡಿದರು. ಅವರ ಈ ಮಾತಿಗೆ ಕಿಚ್ಚ ಸುದೀಪ್​, ರಮ್ಯಾ, ಸಿದ್ದರಾಮಯ್ಯ ಸೇರಿದಂತೆ ಅನೇಕರು ಖಡಕ್​ ತಿರುಗೇಟು ನೀಡಿದ್ದಾರೆ. ‘ಹಿಂದಿ ರಾಷ್ಟ್ರ ಭಾಷೆ ಅಲ್ಲ’ ಎಂಬ ಕೂಗು ದಕ್ಷಿಣದ ರಾಜ್ಯಗಳಿಂದ ಜೋರಾಗಿ ಕೇಳಿಬರುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.