‘ಇಂಥ ಅಸಹ್ಯ ಎಲ್ಲೂ ನೋಡಿಲ್ಲ’: ಜೆನ್ ಜಿ ಪ್ರತಿಭಟನೆ ವಿರುದ್ಧ ಕಂಗನಾ ರಣಾವತ್ ಗರಂ

ಪ್ರತಿಭಟನಾಕಾರರು ಜಂತರ್ ಮಂತರ್‌ನಲ್ಲಿ 60 ಮೆಟ್ರಿಕ್ ಟನ್‌ಗೂ ಹೆಚ್ಚು ಕಸವನ್ನು ಬಿಟ್ಟು ಹೋಗಿದ್ದಾರೆ ಎಂದು ಕಂಗನಾ ರಣಾವತ್ ಆರೋಪಿಸಿದ್ದಾರೆ. ಅಲ್ಲದೇ, ಜೆನ್ ಜಿ ವಿದ್ಯಾರ್ಥಿಗಳ ವರ್ತನೆ ಮತ್ತು ಭಾಷೆಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಬಳಿಕ ಅವರು ಜೆನ್ ಜಿ ಮಂದಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

‘ಇಂಥ ಅಸಹ್ಯ ಎಲ್ಲೂ ನೋಡಿಲ್ಲ’: ಜೆನ್ ಜಿ ಪ್ರತಿಭಟನೆ ವಿರುದ್ಧ ಕಂಗನಾ ರಣಾವತ್ ಗರಂ
Kangana Ranaut

Updated on: Jul 27, 2026 | 7:27 PM

ದೆಹಲಿಯ ಜಂತರ್ ಮಂತರ್‌ನಲ್ಲಿ ‘ಕಾಕ್ರೋಚ್‌ ಜನತಾ ಪಾರ್ಟಿ’ (CJP) ನೇತೃತ್ವದಲ್ಲಿ ನಡೆದ Gen Z ವಿದ್ಯಾರ್ಥಿಗಳ ಪ್ರತಿಭಟನೆಯ ವೀಡಿಯೋಗಳ ವಿರುದ್ಧ ಸಂಸದೆ ಹಾಗೂ ನಟಿ ಕಂಗನಾ ರಣಾವತ್ (Kangana Ranaut) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ ಸ್ಟೋರೀಸ್‌ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ಪ್ರತಿಭಟನಾಕಾರರ ನಡವಳಿಕೆಯನ್ನು ‘ಅಸಹ್ಯ, ಕಸ ಮತ್ತು ವಾಂತಿ ಬರುವಂತಹದ್ದು’ ಎಂದು ಜರಿದಿದ್ದಾರೆ. ಅವರ ಈ ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

‘ಇವರನ್ನು ಯಾರು ಹೆತ್ತು, ಹೇಗೆ ಬೆಳೆಸುತ್ತಿದ್ದಾರೋ?’

ಪ್ರತಿಭಟನೆಯ ವೀಡಿಯೋಗಳನ್ನು ಉದ್ದೇಶಿಸಿ ಬರೆದುಕೊಂಡಿರುವ ಕಂಗನಾ, ‘ನನ್ನ ಜೀವಮಾನದಲ್ಲೇ ಒಂದೇ ಕಡೆ ಇಷ್ಟೊಂದು ಅಸಹ್ಯವನ್ನು ನಾನು ಎಂದೂ ನೋಡಿರಲಿಲ್ಲ. Gen Z ಪ್ರತಿಭಟನೆಯ ಈ ರೀಲ್ಸ್‌ ವಾಂತಿ ಬರಿಸುವಂತಿವೆ. ಅವರು ಮಾತನಾಡುತ್ತಿರುವ ರೀತಿ ಹಾಗೂ ಬಳಸುತ್ತಿರುವ ಭಾಷೆ ತೀರ ಕೆಟ್ಟದಾಗಿದೆ. ಪ್ರತಿ ಫ್ರೇಮ್‌ನಲ್ಲೂ ಇಷ್ಟೊಂದು ಅಸಭ್ಯತೆ ಕಾಣಿಸುತ್ತಿದೆ. ಛೀ, ಇವರನ್ನು ಯಾರು ಹೆತ್ತು, ಹೇಗೆ ಬೆಳೆಸುತ್ತಿದ್ದಾರೋ’ ಎಂದು ಪ್ರಶ್ನಿಸಿದ್ದಾರೆ.

‘ನನಗೆ ತೀವ್ರ ಮುಜುಗರ ಆಗಿದೆ’

ಭಾರತವು ಸಾಂಸ್ಕೃತಿಕ ಕಲ್ಪನೆ ಮತ್ತು ಸೌಂದರ್ಯ ಹೊಂದಿರುವ ದೇಶ ಎಂದಿರುವ ಕಂಗನಾ, ‘ನೀವು ನಿಮ್ಮನ್ನು ಕಾಕ್ರೋಚ್‌ಗಳೆಂದು ಕರೆದುಕೊಳ್ಳುತ್ತೀರಿ ಹಾಗೂ ಅದೇ ರೀತಿ ವರ್ತಿಸುತ್ತಿದ್ದೀರಿ. ಜಗತ್ತಿಗೆ ನಿಮ್ಮ ಅಸಹ್ಯ ಮತ್ತು ಕಸವನ್ನು ತೋರಿಸುತ್ತಿದ್ದೀರಷ್ಟೇ. ಈ ರೀಲ್ಸ್‌ಗಳನ್ನು ನೋಡಿ ನನಗೆ ತೀವ್ರ ಮುಜುಗರವಾಗಿದೆ. ಇದರಿಂದ ಹೊರಬರಲು ನನಗೀಗ ಡಿಜಿಟಲ್ ಡಿಟಾಕ್ಸ್ ಅಗತ್ಯವಿದೆ’ ಎಂದಿದ್ದಾರೆ.

ಇದನ್ನೂ ಓದಿ: ಕೇವಲ 1 ಕೋಟಿ ರೂ. ಕಲೆಕ್ಷನ್; ಬಾಕ್ಸ್ ಆಫೀಸ್​​ನಲ್ಲಿ ಡಿಸಾಸ್ಟರ್ ಆದ ಕಂಗನಾ ಸಿನಿಮಾ

ಧರ್ಮೇಂದ್ರ ಪ್ರಧಾನ್ ರಾಜೀನಾಮೆ:

NEET-UG ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಜೂನ್ 20ರಿಂದ ಸಾವಿರಾರು ವಿದ್ಯಾರ್ಥಿಗಳು ‘ಕಾಕ್ರೋಚ್‌ ಜನತಾ ಪಾರ್ಟಿ’ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡು, ಸಂಸತ್ತಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಲಾಠಿಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗಿಸಿದ್ದರು. ಜುಲೈ 25ರಂದು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದರು. ಸದ್ಯ ಪ್ರಹ್ಲಾದ್ ಜೋಶಿ ಅವರಿಗೆ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಹೊಣೆ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us