Lomad Movie: ನರಿ ವೇಷ ಹಾಕಿಕೊಂಡು ಮುಂಬೈ ಬೀದಿ ಸುತ್ತುತ್ತಿರುವ ಬಾಲಿವುಡ್​ ನಿರ್ದೇಶಕ; ಕಾರಣ ಏನು?

Hemwant Tiwari: ‘ಲೋಮಡ್​’ ಎಂದರೆ ಹಿಂದಿಯಲ್ಲಿ ನರಿ ಎಂದರ್ಥ. ಹಾಗಾಗಿ ಹೇಮ್ವಂತ್​ ತಿವಾರಿ ಅವರು ನರಿ ವೇಷ ಹಾಕಿಕೊಂಡು ಬೀದಿಗೆ ಇಳಿದಿದ್ದಾರೆ.

Lomad Movie: ನರಿ ವೇಷ ಹಾಕಿಕೊಂಡು ಮುಂಬೈ ಬೀದಿ ಸುತ್ತುತ್ತಿರುವ ಬಾಲಿವುಡ್​ ನಿರ್ದೇಶಕ; ಕಾರಣ ಏನು?
ಹೇಮ್ವಂತ್​ ತಿವಾರಿ

Updated on: Jul 04, 2023 | 11:28 AM

ಮುಂಬೈನ ರಸ್ತೆಗಳಲ್ಲಿ ವ್ಯಕ್ತಿಯೊಬ್ಬರು ನರಿ (Fox) ವೇಷ ಹಾಕಿಕೊಂಡು ತಿರುಗಾಡುತ್ತಿದ್ದಾರೆ. ಕೈಯಲ್ಲಿ ಒಂದು ಬೋರ್ಡ್​ ಹಿಡಿದುಕೊಂಡು ಎಲ್ಲರ ಗಮನವನ್ನು ಸೆಳೆಯಲು ಅವರು ಪ್ರಯತ್ನಿಸುತ್ತಿದ್ದಾರೆ. ಅವರು ಈ ರೀತಿ ಮಾಡುತ್ತಿರುವುದು ತಮ್ಮ ಹೊಸ ಸಿನಿಮಾದ ಪ್ರಚಾರಕ್ಕಾಗಿ! ಹೌದು, ‘ಲೋಮಡ್​’ ಸಿನಿಮಾ (Lomad Movie) ಬಿಡುಗಡೆಗೆ ಸಜ್ಜಾಗಿದೆ. ಆಗಸ್ಟ್​ 4ರಂದು ಈ ಚಿತ್ರ ರಿಲೀಸ್​ ಆಗಲಿದೆ. ಹೊಸ ರೀತಿಯಲ್ಲಿ ಪ್ರಚಾರ ಮಾಡಬೇಕು ಎಂಬುದು ಈ ಚಿತ್ರತಂಡದ ಉದ್ದೇಶ. ಹಾಗಾಗಿ ನಿರ್ದೇಶಕ ಹೇಮ್ವಂತ್​ ತಿವಾರಿ (Hemwant Tiwari) ಅವರು ನರಿ ವೇಷ ಹಾಕಿಕೊಂಡು ಬೀದಿಗೆ ಇಳಿದಿದ್ದಾರೆ. ಅಷ್ಟಕ್ಕೂ ನರಿ ವೇಷ ಹಾಕಿದ್ದು ಯಾಕೆ? ಈ ಸಿನಿಮಾದ ವಿಶೇಷತೆ ಏನು ಎಂಬ ಬಗ್ಗೆ ಈ ಸ್ಟೋರಿಯಲ್ಲಿದೆ ಮಾಹಿತಿ..

‘ಲೋಮಡ್​’ ಎಂದರೆ ಹಿಂದಿಯಲ್ಲಿ ನರಿ ಎಂದರ್ಥ. ಹಾಗಾಗಿ ಸ್ವತಃ ನಿರ್ದೇಶಕರೇ ನರಿ ವೇಷ ಹಾಕಿಕೊಂಡು ಮುಂಬೈನ ಬೀದಿಯಲ್ಲಿ ಪ್ರಮೋಷನ್​ ಮಾಡುತ್ತಿದ್ದಾರೆ. ಬಾಲಿವುಡ್​ನಲ್ಲಿ ಸಿನಿಮಾ ಪ್ರಮೋಷನ್​ ಮಾಡಬೇಕು ಎಂದರೆ ಸಿಕ್ಕಾಪಟ್ಟೆ ಹಣ ಖರ್ಚಾಗುತ್ತದೆ. ಹೋಟೆಲ್​ಗಳಲ್ಲಿ ಸುದ್ದಿಗೋಷ್ಠಿ ಮಾಡಿದರೆ ಲಕ್ಷಾಂತರ ರೂಪಾಯಿ ಬೇಕಾಗುತ್ತದೆ. ಆದರೆ ಅಷ್ಟೆಲ್ಲ ಖರ್ಚು ಮಾಡಲು ‘ಲೋಮಡ್​’ ತಂಡದ ಬಳಿ ಬಜೆಟ್​ ಇಲ್ಲ. ಹಾಗಾಗಿ ಅವರು ರಸ್ತೆಗೆ ಇಳಿದು ಈ ಹೊಸ ರೀತಿಯಲ್ಲಿ ಪ್ರಮೋಷನ್​ ಮಾಡುತ್ತಿದ್ದಾರೆ.

‘ಲೋಮಡ್​’ ಸಿನಿಮಾದಲ್ಲಿ ಒಂದಷ್ಟು ವಿಶೇಷತೆಗಳಿಗೆ. ಈ ಚಿತ್ರ ಸಂಪೂರ್ಣವಾಗಿ ಮೂಡಿಬಂದಿರುವುದು ಕಪ್ಪು-ಬಿಳಿ ಬಣ್ಣದಲ್ಲಿ. ಅಲ್ಲದೇ ಇದು ಸಿಂಗಲ್​ ಟೇಕ್​ ಸಿನಿಮಾ. ಅಂದರೆ, ಸಿನಿಮಾದ ಮೊದಲ ದೃಶ್ಯದಿಂದ ಕೊನೇ ದೃಶ್ಯದವರೆಗಿನ ಎಲ್ಲ ದೃಶ್ಯಗಳನ್ನು ಒಂದೇ ಟೇಕ್​ನಲ್ಲಿ ಚಿತ್ರಿಸಲಾಗಿದೆ. ಕ್ಯಾಮೆರಾ ಎಲ್ಲಿಯೂ ಬಂದ್​ ಆಗುವುದಿಲ್ಲ. 97 ನಿಮಿಷಗಳ ಈ ಚಿತ್ರದಲ್ಲಿ ಕಲಾವಿದರು ನಿರಂತರವಾಗಿ ನಟಿಸಿದ್ದಾರೆ. ಈ ಪ್ರಯೋಗ ಹೇಗೆ ಮೂಡಿಬಂದಿದೆ ಎಂಬುದನ್ನು ತಿಳಿಯು ಆಗಸ್ಟ್​ 4ರಂದು ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡಬೇಕು.

ಇದನ್ನೂ ಓದಿ: Kajol: ಪ್ರಚಾರಕ್ಕಾಗಿ ಗಿಮಿಕ್​ ಮಾಡಿದ ಕಾಜೋಲ್​; ಇದು ಪ್ರೀತಿ, ಕಾನೂನು ಮತ್ತು ಮೋಸದ ಕಥೆ

‘ಒಂದು ವೇಳೆ ಎಲ್ಲಿಯಾದರೂ ಕ್ಯಾಮೆರಾ ಬಂದ್​ ಆಗಿದ್ದನ್ನು ಹುಡುಕಿ ತೋರಿಸಿದವರಿಗೆ ಟಿಕೆಟ್​ ಬೆಲೆಯ ಡಬಲ್​ ಹಣವನ್ನು ವಾಪಸ್​ ನೀಡುತ್ತೇವೆ’ ಎಂಬ ಬೋರ್ಡ್​ ಹಿಡಿದುಕೊಂಡು ನಿರ್ದೇಶಕ ಹೇಮ್ವಂತ್​ ತಿವಾರಿ ಅವರು ಪ್ರಚಾರ ಮಾಡುತ್ತಿದ್ದಾರೆ. ಅಲ್ಲದೇ ಸಿಂಗಲ್​ ಟೇಕ್​ ಸಿನಿಮಾ ಎಂದರೆ ಏನು ಎಂಬುದುನ್ನು ಕೂಡ ಅವರು ಬೀದಿಯಲ್ಲಿ ನಿಂತು ಜನರಿಗೆ ತಿಳಿಸಿಕೊಡುತ್ತಿದ್ದಾರೆ. ಈಗಾಗಲೇ ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ ಈ ಸಿನಿಮಾಗೆ ಒಂದಷ್ಟು ಪ್ರಶಸ್ತಿಗಳು ಕೂಡ ಸಿಕ್ಕಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us