ಕುಂಭಮೇಳ ‘ಮೊನಾಲಿಸಾ’ಳ ಮೊದಲ ಸಿನಿಮಾ ಬಂದ್, ನಿರ್ದೇಶಕನಿಂದ ಮೋಸ?
Monalisa Bhosle: ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಮೊನಲಿಸಾ ಬಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈಗ ಆ ಸಿನಿಮಾ ನಿಂತು ಹೋಗಿದೆ ಎನ್ನಲಾಗುತ್ತಿದ್ದೆ. ಮೊನಲಿಸಾಗೆ ಸಿನಿಮಾ ಆಫರ್ ನೀಡಿದ ನಿರ್ದೇಶಕ, ಆಕೆಯನ್ನು ಟ್ರ್ಯಾಪ್ ಮಾಡಿದ್ದಾನೆ ಎಂಬ ಆತಂಕಕಾರಿ ಹೇಳಿಕೆಯನ್ನು ಸಿನಿಮಾದ ನಿರ್ಮಾಪಕ ನೀಡಿದ್ದಾರೆ.

ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಯುವತಿಯ ಚಿತ್ರ ಕಳೆದ ತಿಂಗಳು ವೈರಲ್ ಆಗಿತ್ತು. ಯುವತಿಯ ನಗು, ಚೂಪಾದ ಕಣ್ಣಿನ ನೋಟಕ್ಕೆ ಜನ ಮಾರುಹೋದರು. ಫೋಟೊ ವೈರಲ್ ಆಗುತ್ತಿದ್ದಂತೆ ಆ ಯುವತಿಯ ಅದೃಷ್ಟವೇ ಬದಲಾಗಿ ಹೋಯ್ತು. ಯುವತಿ ಮೇಕೋವರ್ ಮಾಡಿ ಮಾಡೆಲಿಂಗ್ ಮಾಡಿಸಲಾಯ್ತು, ಕೆಲ ಜಾಹೀರಾತುಗಳಲ್ಲಿ ಯುವತಿ ನಟಿಸಿದರು. ಕೆಲ ಪ್ರೊಮೋಷನಲ್ ಇವೆಂಟ್ಗಳಲ್ಲಿ ಅದ್ಧೂರಿಯಾಗಿ ಯುವತಿ ಕಾಣಿಸಿಕೊಂಡರು. ಗ್ಲಾಮರಸ್ ಆದ ಫೋಟೊಶೂಟ್ ಮಾಡಿಸಿ ಚಿತ್ರಗಳನ್ನು ಹಂಚಿಕೊಳ್ಳಲಾಯ್ತು. ‘ದಿ ಡೈರಿ ಆಫ್ ಮಣಿಪುರ್’ ಸಿನಿಮಾದಲ್ಲಿ ಯುವತಿ ನಾಯಕಿಯಾಗಿ ನಟಿಸಲಿದ್ದಾಳೆ ಎಂಬ ಸುದ್ದಿ ಹೊರಬಿದ್ದಿತ್ತು. ಆದರೆ ಆಕೆಯ ಮೊದಲ ಸಿನಿಮಾ ಚಿತ್ರೀಕರಣ ಪ್ರಾರಂಭ ಆಗುವುದಕ್ಕೆ ಮುಂಚೆಯೇ ನಿಂತು ಹೋಗಿದೆ.
‘ದಿ ಡೈರಿ ಆಫ್ ಮಣಿಪುರ್’ ಸಿನಿಮಾದ ನಿರ್ಮಾಪಕ ಜಿತೇಂಧರ್ ನಾರಾಯಣ್ ಸಿಂಗ್ ಅಲಿಯಾಸ್ ವಸೀಮ್ ರಿಜ್ವಿ ‘ದಿ ಡೈರಿ ಆಫ್ ಮಣಿಪುರ್’ ಸಿನಿಮಾದ ನಿರ್ದೇಶಕ ಸನೋಜ್ ಮಿಶ್ರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ಸನೋಜ್ ಮಿಶ್ರಾ ಒಬ್ಬ ಸುಳ್ಳುಗಾರ, ಮೋಸಗಾರ, ಮಹಾನ್ ಕುಡುಕ, ಆತ ಸುಳ್ಳು ಹೇಳಿ ಹಲವರಿಗೆ ಮೋಸ ಮಾಡಿದ್ದಾನೆ. ಯುವತಿಯರಿಗೆ ಸಿನಿಮಾಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ. ಈಗ ಕುಂಭಮೇಳ ಮೊನಲಿಸಾಗೂ ಮೋಸ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.
ಸನೋಜ್ ಮಿಶ್ರಾ ನಿರ್ದೇಶನ ಮಾಡಿರುವ ಯಾವೊಂದು ಸಿನಿಮಾ ಸಹ ಈ ವರೆಗೆ ಬಿಡುಗಡೆ ಆಗಿಲ್ಲ. ಆತ ಮೊನಲಿಸಾಳಿಗೆ ತರಬೇತಿ ನೀಡುವ ನೆಪದಲ್ಲಿ ಆಕೆಯನ್ನು ಬೇರೆ ಬೇರೆ ಇವೆಂಟ್ಗಳಿಗೆ ಕಳಿಸಿ ತಾನು ಹಣ ಮಾಡಿಕೊಳ್ಳುತ್ತಿದ್ದಾನೆ. ಮೊನಲಿಸಾಳ ಕುಟುಂಬದವರು ಆ ವ್ಯಕ್ತಿಯ ಬಗ್ಗೆ ಜಾಗೃತೆಯಿಂದ ಇರಬೇಕು ಎಂದು ಎಚ್ಚರಿಕೆ ಹೇಳಿದ್ದಾರೆ ನಿರ್ಮಾಪಕ ಜಿತೇಂಧರ್ ನಾರಾಯಣ್ ಸಿಂಗ್. ಸನೋಜ್ ಮಿಶ್ರಾ, ಮೊನಲಿಸಾಗೆ ನಟನೆಯ ತರಬೇತಿ ನೀಡುತ್ತಿರುವ ಚಿತ್ರಗಳು, ವಿಡಿಯೋಗಳು ಇತ್ತೀಚೆಗೆ ವೈರಲ್ ಆಗಿದ್ದವು. ಈಗ ನೋಡಿದರೆ ಸಿನಿಮಾದ ನಿರ್ಮಾಪಕರೇ ನಿರ್ದೇಶಕರ ವಿರುದ್ಧ ಹೀಗೋಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ:Fact Check: ಗ್ಲಾಮರಸ್ ಲುಕ್ನಲ್ಲಿ ಮಹಾಕುಂಭದ ವೈರಲ್ ಹುಡುಗಿ ಮೊನಾಲಿಸಾ?
ಇನ್ನು ಮೊನಲಿಸಾ ಸಹ ಇತ್ತೀಚೆಗೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ತಾನು ಮಧ್ಯ ಪ್ರದೇಶದಲ್ಲಿ ನಟನಾ ತರಬೇತಿಯಲ್ಲಿ ನಿರತವಾಗಿದ್ದು, ಅದರ ಜೊತೆಗೆ ಕಲಿಕೆಯಲ್ಲೂ ತೊಡಗಿಕೊಂಡಿದ್ದೇನೆ ಎಂದಿದ್ದಾರೆ. ಅಲ್ಲದೆ ಸನೋಜ್ ಮಿಶ್ರಾ ತಮ್ಮನ್ನು ಮಗಳ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದು, ಯಾರೂ ಸಹ ನನ್ನ ಸುರಕ್ಷತೆ ಬಗ್ಗೆ ಆತಂಕಕ್ಕೆ ಒಳಗಾಗುವುದು ಬೇಡ ಎಂದಿದ್ದಾರೆ.
ಮೊನಲಿಸಾ ಭೋಸ್ಲೆ ಬಡ ಕುಟುಂಬದ ಯುವತಿ. ಕುಂಭಮೇಳದಲ್ಲಿ ರುದ್ರಾಕ್ಷಿ ಮಾರಾಟ ಮಾಡುತ್ತಿದ್ದಾಗ ಯಾರೋ ವ್ಯಕ್ತಿ ಆಕೆಯ ಚಿತ್ರ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ಚಿತ್ರ ಸಖತ್ ವೈರಲ್ ಆಯ್ತು. ಇದರಿಂದ ಬಂದ ಜನಪ್ರಿಯತೆಯನ್ನು ಮೊನಾಸಿಲಾ ಭೋಸ್ಲೆ ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಕೇರಳದ ಆಭರಣ ಮಳಿಗೆಯೊಂದರ ಉದ್ಘಾಟನೆಗೆ ತೆರಳಿದ್ದ ಈ ಚೆಲುವೆ ಅದಕ್ಕಾಗಿ ತೆಗೆದುಕೊಂಡಿದ್ದು ಬರೋಬ್ಬರಿ 14 ಲಕ್ಷ ರೂಪಾಯಿಗಳು. ಇದೀಗ ಸಿನಿಮಾದಲ್ಲಿಯೂ ನಟಿಸಲು ತಯಾರಿ ತೆಗೆದುಕೊಳ್ಳುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:26 pm, Thu, 20 February 25