ಯೂಟ್ಯೂಬ್​ನಲ್ಲಿ ಸಲ್ಮಾನ್​ ಖಾನ್​ಗೆ ಕೊಲೆ ಬೆದರಿಕೆ ಹಾಕಿದ 25ರ ಯುವಕನ ಬಂಧನ

ರಾಜಸ್ಥಾನ ಮೂಲದ ಯುವಕನು ಸಲ್ಮಾನ್​ ಖಾನ್​ಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಯೂಟ್ಯೂಬ್​ ವಿಡಿಯೋದಲ್ಲಿ ಆತ ಬಿಷ್ಣೋಯ್​ ಗ್ಯಾಂಗ್​ನ ಬಗ್ಗೆಯೂ ಮಾತನಾಡಿದ್ದಾನೆ. ಆರೋಪಿಯ ವಿರುದ್ಧ ಮುಂಬೈ ಪೊಲೀಸರು ಕಾನೂನಿನ ಕ್ರಮಕ್ಕೆ ಮುಂದಾಗಿದ್ದಾರೆ. ಮುಂಬೈನಲ್ಲಿರುವ ಸಲ್ಮಾನ್​ ಖಾನ್​ ಅವರ ಮನೆ ಮೇಲೆ ಗುಂಡಿನ ದಾಳಿ ನಡೆದ ಬಳಿಕ ಭದ್ರತೆ ಹೆಚ್ಚಿಸಲಾಗಿದೆ.

ಯೂಟ್ಯೂಬ್​ನಲ್ಲಿ ಸಲ್ಮಾನ್​ ಖಾನ್​ಗೆ ಕೊಲೆ ಬೆದರಿಕೆ ಹಾಕಿದ 25ರ ಯುವಕನ ಬಂಧನ
ಸಲ್ಮಾನ್​ ಖಾನ್​

Updated on: Jun 16, 2024 | 6:10 PM

ಬಾಲಿವುಡ್​ನ ಸ್ಟಾರ್​ ನಟ ಸಲ್ಮಾನ್​ ಖಾನ್​ (Salman Khan) ಅವರಿಗೆ ಬೆದರಿಕೆ ಹಾಕಿದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಎಲ್ಲರಿಗೂ ಮಾತನಾಡುವ ಸ್ವಾತಂತ್ರ್ಯ ಇದೆ. ಆದರೆ ಇದನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಸಲ್ಮಾನ್​ ಖಾನ್​ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ, ಕೊಲೆ ಬೆದರಿಕೆ (Threat) ಹಾಕಿದ ಆರೋಪದ ಮೇಲೆ 25 ವರ್ಷ ವಯಸ್ಸಿನ ಯುವಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆ ಮೂಲಕ ಟ್ರೋಲ್​ ಮಾಡುವವರಿಗೆ, ಬೆದರಿಕೆ ಹಾಕುವವರಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.

ಸಲ್ಮಾನ್​ ಖಾನ್​ ಅವರನ್ನು ಲಾರೆನ್ಸ್​ ಬಿಷ್ಣೋಯ್​ ಗ್ಯಾಂಗ್​ನವರು ಟಾರ್ಗೆಟ್​ ಮಾಡಿರುವುದು ಗೊತ್ತೇ ಇದೆ. ಈಗಾಗಲೇ ಸಲ್ಮಾನ್​ ಖಾನ್​ ಹತ್ಯೆಗೆ ಈ ಖದೀಮರು ಅನೇಕ ಬಾರಿ ಪ್ರಯತ್ನಿಸಿದ್ದಾರೆ. ಕೆಲವೇ ತಿಂಗಳ ಹಿಂದೆ ಸಲ್ಮಾನ್​ ಖಾನ್​ ಅವರ ಗ್ಯಾಲಕ್ಸಿ ಅಪಾರ್ಟ್​ಮೆಂಟ್​ ಎದುರು ಗುಂಡಿನ ದಾಳಿ ಮಾಡಲಾಗಿತ್ತು. ಆ ಬಳಿಕ ಸಲ್ಮಾನ್​ ಖಾನ್​ ಅವರು ಭದ್ರತೆ ಹೆಚ್ಚಿಸಿಕೊಂಡಿದ್ದಾರೆ. ಈಗ ಯೂಟ್ಯೂಬ್​ ಮೂಲಕ ಸಲ್ಮಾನ್​ ಖಾನ್​ಗೆ ಕೊಲೆ ಬೆದರಿಕೆ ಹಾಕಿದ ವ್ಯಕ್ತಿ ಕೂಡ ತನ್ನ ವಿಡಿಯೋದಲ್ಲಿ ಬಿಷ್ಣೋಯ್​ ಗ್ಯಾಂಗ್​ ಬಗ್ಗೆ ಉಲ್ಲೇಖಿಸಿದ್ದಾನೆ ಎಂದು ವರದಿ ಆಗಿದೆ.

ಯೂಟ್ಯೂಬ್​ ಮೂಲಕ ಸಲ್ಮಾನ್​ ಖಾನ್​ಗೆ ಬೆದರಿಕೆ ಹಾಕಿದ ಯುವಕ ರಾಜಸ್ಥಾನ ಮೂಲದವನು. ಬನ್ವರ್​ಲಾಲ್​ ಲತುರ್ಲಾಲ್​ ಗುಜ್ಜರ್​ ಎಂದು ಆತನನ್ನು ಗುರುತಿಸಲಾಗಿದೆ. ಗ್ರಾಮೀಣ ಭಾಗದ ಯುವಕನಾದ ಆತ ತನ್ನ ಯೂಟ್ಯೂಬ್​ ಚಾನೆಲ್​ ಮೂಲಕ ಸ್ಟಾರ್​ ನಟನಿಗೆ ಬೆದರಿಕೆ ಹಾಕಿದ್ದಾನೆ. ಮುಂಬೈ ಸೈಬರ್​ ಪೊಲೀಸರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಜಸ್ಥಾನಕ್ಕೆ ತೆರಳಿ ಆತನನ್ನು ಅರೆಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಗುಂಡಿನ ದಾಳಿ ಪ್ರಕರಣದಲ್ಲಿ ಸಲ್ಮಾನ್​ ಖಾನ್​ ಹೇಳಿಕೆ ದಾಖಲಿಸಿಕೊಂಡ ಪೊಲೀಸರು

ಸಲ್ಲುಗೆ ಕೊಲೆ ಬೆದರಿಕೆ ಹಾಕಿರುವ ಬನ್ವರ್​ಲಾಲ್​ ಲತುರ್ಲಾಲ್​ ಗುಜ್ಜರ್​ ವಿರುದ್ಧ ಐಪಿಸಿ ಸೆಕ್ಷನ್​ನ ಹಲವು ವಿಭಾಗಗಳ ಅಡಿಯಲ್ಲಿ ಕೇಸ್​ ದಾಖಲು ಮಾಡಲಾಗಿದೆ. ಇದು ಗಂಭೀರ ಪ್ರಕರಣ ಆದ್ದರಿಂದ ಮುಂಬೈ ಪೊಲೀಸರ ತಂಡವು ರಾಜಸ್ಥಾನಕ್ಕೆ ಹೋಗಿ ಆರೋಪಿಯನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗಾಗಿ ಮುಂಬೈಗೆ ಕರೆತರುತ್ತಿದ್ದಾರೆ. ಕಿಡಿಗೇಡಿಗಳಿಂದ ಬೆದರಿಕೆ ಹೊಂದಿರುವ ಸಲ್ಮಾನ್​ ಖಾನ್​ ಅವರು ಅದರ ನಡುವೆಯೂ ‘ಸಿಕಂದರ್​’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us