Bomb Threat Call: ಅಮಿತಾಭ್​, ಅಂಬಾನಿ, ಧರ್ಮೇಂದ್ರ ಮನೆಯಲ್ಲಿ ಬಾಂಬ್​ ಇಟ್ಟಿರುವುದಾಗಿ ಬೆದರಿಕೆ ಕರೆ ಮಾಡಿದ ಕಿಡಿಗೇಡಿ

|

Updated on: Mar 01, 2023 | 12:06 PM

Amitabh Bachchan | Dharmendra: ಹುಸಿ ಬಾಂಬ್​ ಬೆದರಿಕೆ ಕರೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗ್​ಪುರದಲ್ಲಿ ಕೇಸ್​ ದಾಖಲಾಗಲಿದೆ. ಕಿಡಿಕೇಡಿಗಳನ್ನು ಆದಷ್ಟು ಬೇಗ ಪತ್ತೆ ಹಚ್ಚಲು ಪೊಲೀಸರು ಕಾರ್ಯನಿರತರಾಗಿದ್ದಾರೆ.

Bomb Threat Call: ಅಮಿತಾಭ್​, ಅಂಬಾನಿ, ಧರ್ಮೇಂದ್ರ ಮನೆಯಲ್ಲಿ ಬಾಂಬ್​ ಇಟ್ಟಿರುವುದಾಗಿ ಬೆದರಿಕೆ ಕರೆ ಮಾಡಿದ ಕಿಡಿಗೇಡಿ
ಅಮಿತಾಭ್​​ ಬಚ್ಚನ್​, ಮುಖೇಶ್​ ಅಂಬಾನಿ, ಧರ್ಮೇಂದ್ರ
Follow us on

ಖ್ಯಾತ ಬಾಲಿವುಡ್​ ನಟರಾದ ಅಮಿತಾಭ್​ ಬಚ್ಚನ್​ (Amitabh Bachchan), ಧರ್ಮೇಂದ್ರ ಮತ್ತು ಉದ್ಯಮಿ ಮುಖೇಶ್​ ಅಂಬಾನಿ ಅವರ ಮನೆಯಲ್ಲಿ ಬಾಂಬ್​ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿಗಳು ನಾಗ್​ಪುರ್​ ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ಮಾಹಿತಿ ಆಧರಿಸಿ ತನಿಖೆ ಆರಂಭಿಸಲಾಯಿತು. ನಾಗ್​ಪುರ್​ ಪೊಲೀಸರು ಮುಂಬೈ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಕಾರ್ಯಾಚರಣೆ ಆರಂಭಿಸಿದ ಮುಂಬೈ ಪೊಲೀಸರು ಅಮಿತಾಭ್​ ಬಚ್ಚನ್, ಮುಖೇಶ್​ ಅಂಬಾನಿ ಹಾಗೂ ಧರ್ಮೇಂದ್ರ (Dharmendra) ಅವರ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಯಾವುದೇ ಬಾಂಬ್​ ಪತ್ತೆ ಆಗಿಲ್ಲ. ಆದ್ದರಿಂದ ಇದು ಹುಸಿ ಬಾಂಬ್​ ಬೆದರಿಕೆ ಕರೆ (Hoax Call) ಎಂಬುದು ತಿಳಿದುಬಂದಿದೆ. ಈ ರೀತಿ ಪೊಲೀಸರನ್ನು ಯಾಮಾರಿಸಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಲಾಗುತ್ತಿದೆ.

ಕಿಡಿಗೇಡಿಗಳು ಹೇಳಿದ್ದೇನು?

ಸೆಲೆಬ್ರಿಟಿಗಳ ಮನೆಗೆ ಬಾಂಬ್​ ಇಟ್ಟಿರುವುದಾಗಿ ಆಗಾಗ ಕೆಲವು ಕಿಡಿಗೇಡಿಗಳು ಕರೆ ಮಾಡುತ್ತಾರೆ. ಆ ಮಾಹಿತಿಯನ್ನು ಪೊಲೀಸರು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ನಾಗ್​ಪುರ್​ ಪೊಲೀಸರಿಗೆ ಕರೆ ಮಾಡಿದ ಕಿಡಿಗೇಡಿಗಳು, ‘ಅಮಿತಾಭ್ ಬಚ್ಚನ್​, ಧರ್ಮೇಂದ್ರ ಹಾಗೂ ಮುಖೇಶ್​ ಅಂಬಾನಿ ಮನೆಯಲ್ಲಿ ಬಾಂಬ್​ ಇಡಲಾಗಿದೆ. ದಾದರ್​ನಲ್ಲಿ ಶಸ್ತ್ರ ಸಜ್ಜಿತವಾದ 25 ಜನರು ಭಯೋತ್ಪಾದಕ ದಾಳಿ ಮಾಡಲು ಸಿದ್ಧವಾಗಿದ್ದಾರೆ’ ಎಂದು ಹೇಳಿದ್ದಾರೆ. ಆದರೆ ತನಿಖೆ ಆರಂಭಿಸಿದ ಬಳಿಕ ಈ ಮಾಹಿತಿ ಸುಳ್ಳು ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ: ಪುಣೆ ಗೂಗಲ್ ಕಚೇರಿಗೆ ಬಾಂಬ್ ಬೆದರಿಕೆ, ಕರೆ ಮಾಡಿದ ವ್ಯಕ್ತಿಯನ್ನು ಬಂಧಿಸಿದ ಮುಂಬೈ ಪೊಲೀಸ್

ಇದನ್ನೂ ಓದಿ
ಬಾಂಬ್​ ಸ್ಫೋಟಿಸುವುದಾಗಿ ಭಟ್ಕಳ ಶಹರ ಠಾಣೆಗೆ ಪತ್ರ ರವಾನಿಸಿದ್ದ ಆರೋಪಿ ಅರೆಸ್ಟ್
ಅಪರಿಚಿತನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್​ ಕರೆ: ಏರ್​ಪೋರ್ಟ್​​ನಲ್ಲಿ ಕೆಲಕಾಲ ಆತಂಕ
ಬೆಂಗಳೂರಿನ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ವಿಚಾರ; ಸಿರಿಯಾ, ಪಾಕಿಸ್ತಾನದಿಂದ ಬೆದರಿಕೆ ಶಂಕೆ
ಇನ್ನೂ ನಿಂತಿಲ್ಲದ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಪ್ರಕರಣ; ಬೆದರಿಕೆ ಬಂದ ಶಾಲೆಗಳ ಸಂಖ್ಯೆ 17ಕ್ಕೆ ಏರಿಕೆ

ಹುಸಿ ಬಾಂಬ್​ ಬೆದರಿಕೆ ಕರೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗ್​ಪುರದಲ್ಲಿ ಕೇಸ್​ ದಾಖಲಾಗಲಿದೆ. ಕಿಡಿಕೇಡಿಗಳನ್ನು ಆದಷ್ಟು ಬೇಗ ಪತ್ತೆ ಹಚ್ಚಲು ಪೊಲೀಸರು ಕಾರ್ಯನಿರತರಾಗಿದ್ದಾರೆ. ಅಮಿತಾಭ್​ ಬಚ್ಚನ್​ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಬಾಂಬ್​ ಕರೆ ಬಗ್ಗೆ ಮಾಹಿತಿ ಹರಡಿದಾಗ ಸಹಜವಾಗಿಯೇ ಆತಂಕ ಮನೆ ಮಾಡಿತ್ತು. ಆದರೆ ಅದು ಹುಸಿ ಕರೆ ಎಂದು ಗೊತ್ತಾದ ಬಳಿಕ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.

ಮುಂಬೈನ ಹಲವು ಕಡೆಗಳಲ್ಲಿ ಅಮಿತಾಭ್​ ಬಚ್ಚನ್​ ಅವರು ಬಂಗಲೆಗಳನ್ನು ಹೊಂದಿದ್ದಾರೆ. ಅವರು ಖಾಯಂ ಆಗಿ ವಾಸಿಸುವ ‘ಪ್ರತೀಕ್ಷಾ’ ಬಂಗಲೆ ಎದುರು ಪ್ರತಿ ಭಾನುವಾರ ಅಭಿಮಾನಿಗಳು ಜಮಾಯಿಸುತ್ತಾರೆ. ಅವರನ್ನು ಬಿಗ್​-ಬಿ ಭೇಟಿ ಮಾಡುತ್ತಾರೆ.

ಇದನ್ನೂ ಓದಿ: Hyderabad: ವಿಮಾನ ತಪ್ಪಿಹೋಗುತ್ತೆಂದು ಫ್ಲೈಟ್​ ಅಲ್ಲಿ ಬಾಂಬ್ ಇದೆ ಎಂದು ಕರೆ ಮಾಡಿದ ವ್ಯಕ್ತಿಯ ಬಂಧನ

ಆತಂಕ ಮೂಡಿಸಿದ್ದ ಕರೆ:

ಈ ರೀತಿ ಹುಸಿ ಬಾಂಬ್​ ಕರೆ ಬಂದಿರುವುದು ಹೊಸದೇನೂ ಅಲ್ಲ. ಕೆಲವೇ ದಿನಗಳ ಹಿಂದೆ, ಅಂದರೆ ಫೆಬ್ರವರಿ 25ರಂದು ಕೂಡ ಮುಂಬೈ ಪೊಲೀಸರಿಗೆ ಅಂತಹ ಒಂದು ಕರೆ ಬಂದಿತ್ತು. ‘90 ಕೆಜಿಯಷ್ಟು ಸ್ಫೋಟಕ ವಸ್ತುಗಳನ್ನು ಮುಂಬೈ ಬಂದರಿಗೆ ತರಲಾಗಿದೆ. ಅದರಿಂದ ಮೂರು ಪ್ರಮುಖ ಸ್ಥಳಗಳಲ್ಲಿ ಸ್ಫೋಟ ಮಾಡಲಾಗುವುದು’ ಎಂದು ತಿಳಿಸಲಾಗಿತ್ತು. ಹುಸಿ ಕರೆ ಮಾಡಿದ 9 ಗಂಟೆ ಒಳಗೆ ಕಿಡಿಗೇಡಿಯನ್ನು ಬಂಧಿಸಲಾಯಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.