‘ಧುರಂಧರ್’, ‘ಕೇರಳ ಸ್ಟೋರಿ’ ಸುಳ್ಳು ಎಂದವರ ವಿರುದ್ಧ ನರೇಂದ್ರ ಮೋದಿ ಗರಂ

ಕೇರಳದಲ್ಲಿ ಚುನಾವಣಾ ಭಾಷಣ ಮಾಡುವಾಗ ನರೇಂದ್ರ ಮೋದಿ ಅವರು ‘ಧುರಂಧರ್’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾದಲ್ಲಿ ತೋರಿಸಿರುವುದು ಸುಳ್ಳು ಎಂದವರನ್ನು ಮೋದಿ ಟೀಕಿಸಿದ್ದಾರೆ. ‘ದಿ ಕೇರಳ ಸ್ಟೋರಿ’, ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗಳ ಬಗ್ಗೆಯೂ ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

‘ಧುರಂಧರ್’, ‘ಕೇರಳ ಸ್ಟೋರಿ’ ಸುಳ್ಳು ಎಂದವರ ವಿರುದ್ಧ ನರೇಂದ್ರ ಮೋದಿ ಗರಂ
Narendra Modi

Updated on: Apr 05, 2026 | 11:01 AM

ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಮತ್ತು ‘ಧುರಂಧರ್ 2’ (Dhurandhar 2) ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಿವೆ. ಈ ಸಿನಿಮಾಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಪರ-ವಿರೋಧದ ಚರ್ಚೆ ಆಗಿದೆ. ಅನೇಕರು ಈ ಸಿನಿಮಾಗಳನ್ನು ‘ಪ್ರೊಪಗಾಂಡ’ ಎಂದು ಟೀಕಿಸಿದ್ದಾರೆ. ಈ ಸಿನಿಮಾಗಳ ಬಗ್ಗೆ ಈಗ ನರೇಂದ್ರ ಮೋದಿ (Narendra Modi) ಕೂಡ ಮಾತನಾಡಿದ್ದಾರೆ. ಕೇರಳದಲ್ಲಿ ಮಾತನಾಡುವಾಗ ‘ಧುರಂಧರ್’, ‘ದಿ ಕೇರಳ ಸ್ಟೋರಿ’, ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗಳನ್ನು ಅವರು ಪ್ರಸ್ತಾಪಿಸಿದ್ದಾರೆ.

‘ಕೇರಳ ಸ್ಟೋರಿ ಬಂತು. ಅದರಲ್ಲಿ ಇರುವುದು ಎಲ್ಲವೂ ಸುಳ್ಳು ಅಂತ ಕೇಳಲು ಶುರು ಮಾಡಿದರು. ಕಾಶ್ಮೀರ್ ಫೈಲ್ಸ್ ಬಂದಾಗಲೂ ಸುಳ್ಳು ಎಂದರು. ಧುರಂಧರ್ ಸಿನಿಮಾ ಬಂದಾಗಲೂ ಸುಳ್ಳು ಎಂದರು. ಎಫ್​ಸಿಆರ್​ಎ ಕಾಯ್ದೆ ಬಗ್ಗೆಯೂ ಇದೇ ರೀತಿ ಸುಳ್ಳು ಹಬ್ಬಿಸಿದರು. ಯುಸಿಸಿ ಬಗ್ಗೆ ಕೂಡ ಸುಳ್ಳು ಹಬ್ಬಿಸುತ್ತಿದ್ದಾರೆ’ ಎಂದು ನರೇಂದ್ರ ಮೋದಿ ಹೇಳಿದರು.

ನರೇಂದ್ರ ಮೋದಿ ಅವರು ಮಾತನಾಡಿರುವ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದರಿಂದಾಗಿ ‘ಧುರಂಧರ್’, ‘ದಿ ಕೇರಳ ಸ್ಟೋರಿ’, ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗಳ ಬಗ್ಗೆ ಮತ್ತೆ ಚರ್ಚೆ ಜಾಸ್ತಿ ಆಗಿದೆ. ಈ ವಿಡಿಯೋಗೆ ಕಮೆಂಟ್ ಮಾಡಿದ ಅನೇಕರು ತಮ್ಮ ಅನಿಸಿಕೆಗಳನ್ನು ನೇರವಾಗಿ ಹಂಚಿಕೊಂಡಿದ್ದಾರೆ.

‘ಹಾಗಾದ್ರೆ ಪ್ರಧಾನಿಯವರು ಈ ಸಿನಿಮಾಗಳಲ್ಲಿ ಇರುವುದು ಶೇಕಡ 100ರಷ್ಟು ಸತ್ಯ ಎಂದು ನಂಬುತ್ತಾರಾ? ಈ ಸಿನಿಮಾಗಳ ಜೊತೆ ಅವರು ಗುರುತಿಸಿಕೊಳ್ಳುತ್ತಾರಾ’ ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ. ‘ಇಷ್ಟು ದಿನ ಈ ಸಿನಿಮಾಗಳನ್ನು ವಿಮರ್ಶಕರು ಪ್ರೊಪಗಾಂಡ ಅಂತ ಯಾಕೆ ಟೀಕಿಸಿದರು ಎಂಬುದು ಈಗ ಅರ್ಥ ಆಯಿತು’ ಎಂಬ ಕಮೆಂಟ್ ಕೂಡ ಬಂದಿದೆ.

ಇದನ್ನೂ ಓದಿ: ಸಾಮಾನ್ಯ ಪ್ರೇಕ್ಷಕನಂತೆ ಥಿಯೇಟರ್‌ಗೆ ಬಂದು ‘ಧುರಂಧರ್ 2’ ನೋಡಿದ ಆರ್. ಮಾಧವನ್

‘ಮೋದಿ ಅವರು ತಮ್ಮ ಭಾಷಣದಲ್ಲಿ ನಿರುದ್ಯೋಗ ಮುಂತಾದ ದೇಶದ ಸಮಸ್ಯೆಗಳ ಬಗ್ಗೆ ಮಾತನಾಡಬೇಕಿತ್ತು. ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನರಲ್ಲಿ ಮತ ಕೇಳಬೇಕಿತ್ತು’ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಸಿನಿಮಾದಲ್ಲಿ ತೋರಿಸಿರುವುದು ಎಷ್ಟು ನಿಜ, ಎಷ್ಟು ಕಾಲ್ಪನಿಕ ಎಂಬುದರ ಬಗ್ಗೆ ಚರ್ಚೆ ಇನ್ನಷ್ಟು ಜಾಸ್ತಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us