ಕಲಾ ನಿರ್ದೇಶಕನ ನಿಧನಕ್ಕೆ ಸಂತಾಪ ಸೂಚಿಸಲು ‘ಒಎಂಜಿ 2’ ಟ್ರೇಲರ್​ ಬಿಡುಗಡೆ ಮುಂದೂಡಿದ ಅಕ್ಷಯ್​ ಕುಮಾರ್​

|

Updated on: Aug 02, 2023 | 6:22 PM

OMG 2 Trailer: ಬುಧವಾರ (ಆಗಸ್ಟ್​ 2) ‘ಒಹ್​ ಮೈ ಗಾಡ್​ 2’ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಲು ಸಿದ್ಧತೆ ನಡೆದಿತ್ತು. ಆದರೆ ಕೊನೇ ಕ್ಷಣದಲ್ಲಿ ಅಕ್ಷಯ್​ ಕುಮಾರ್​ ಅವರು ನಿರ್ಧಾರ ಬದಲಿಸಿದ್ದಾರೆ.

ಕಲಾ ನಿರ್ದೇಶಕನ ನಿಧನಕ್ಕೆ ಸಂತಾಪ ಸೂಚಿಸಲು ‘ಒಎಂಜಿ 2’ ಟ್ರೇಲರ್​ ಬಿಡುಗಡೆ ಮುಂದೂಡಿದ ಅಕ್ಷಯ್​ ಕುಮಾರ್​
ಅಕ್ಷಯ್​ ಕುಮಾರ್​, ನಿತಿನ್​ ದೇಸಾಯಿ
Follow us on

ಹಿಂದಿ ಚಿತ್ರರಂಗಕ್ಕೆ ಇಂದು (ಆಗಸ್ಟ್​ 2) ಆಘಾತಕಾರಿ ಸುದ್ದಿಯೊಂದು ಕೇಳಿಬಂತು. ಖ್ಯಾತ ಕಲಾ ನಿರ್ದೇಶಕ ನಿತಿನ್​ ದೇಸಾಯಿ (Nitin Desai) ಅವರು ಆತ್ಮಹತ್ಯೆ ಮಾಡಿಕೊಂಡರು. ತಮ್ಮದೇ ಸ್ಟುಡಿಯೋದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆ ಆಯಿತು. ಅವರ ನಿಧನಕ್ಕೆ ಬಾಲಿವುಡ್​ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ನಿತಿನ್​ ದೇಸಾಯಿ ಅವರು ನೀಡಿದ್ದ ಕೊಡುಗೆ ಅಪಾರ. ಆ ಕಾರಣದಿಂದ ಅವರ ನಿಧನದಿಂದ ಚಿತ್ರರಂಗಕ್ಕೆ ದೊಡ್ಡ ನಷ್ಟ ಆಗಿದೆ. ನಟ ಅಕ್ಷಯ್​ ಕುಮಾರ್​ (Akshay Kumar) ಕೂಡ ನಿತಿನ್​ ದೇಸಾಯಿ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ‘ಒಎಂಜಿ 2’ ಸಿನಿಮಾದ ಟ್ರೇಲರ್​ (OMG 2 Trailer) ಬಿಡುಗಡೆಯನ್ನು ಮುಂದೂಡಲಾಗಿದೆ. ಸೋಶಿಯಲ್ ಮೀಡಿಯಾ ಮೂಲಕ ಅಕ್ಷಯ್​ ಕಮಾರ್​ ಅವರು ಈ ವಿಷಯವನ್ನು ತಿಳಿಸಿದ್ದಾರೆ.

‘ನಿತಿನ್​ ದೇಸಾಯಿ ಅವರ ನಿಧನವನ್ನು ನಂಬಲಾಗುತ್ತಿಲ್ಲ. ಪ್ರೊಡಕ್ಷನ್​ ಡಿಸೈನ್​ನಲ್ಲಿ ಅವರು ಪ್ರಮುಖ ವ್ಯಕ್ತಿ ಆಗಿದ್ದರು. ನಮ್ಮ ಚಿತ್ರರಂಗದ ದೊಡ್ಡ ಭಾಗವಾಗಿದ್ದರು. ನನ್ನ ಅನೇಕ ಸಿನಿಮಾಗಳಿಗೂ ಅವರು ಕೆಲಸ ಮಾಡಿದ್ದರು. ಅವರು ನಿಧನದಿಂದ ದೊಡ್ಡ ನಷ್ಟ ಉಂಟಾಗಿದೆ. ಅವರಿಗೆ ಗೌರವ ಸೂಚಿಸುವ ಸಲುವಾಗಿ ನಾವು ಇಂದು ಒಎಂಜಿ 2 ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡುತ್ತಿಲ್ಲ. ನಾಳೆ (ಆಗಸ್ಟ್​ 3) ಬೆಳಗ್ಗೆ 11 ಗಂಟೆಗೆ ಬಿಡುಗಡೆ ಮಾಡುತ್ತೇವೆ. ಓಂ ಶಾಂತಿ’ ಎಂದು ಅಕ್ಷಯ್​ ಕುಮಾರ್​ ಅವರು ಟ್ವೀಟ್​ ಮಾಡಿದ್ದಾರೆ.

‘ಒಎಂಜಿ 2’ ಅಲಿಯಾಸ್​ ‘ಓಹ್​ ಮೈ ಗಾಡ್​ 2’ ಸಿನಿಮಾಗೆ ಅಮಿತ್​ ರೈ ನಿರ್ದೇಶನ ಮಾಡಿದ್ದಾರೆ. ಅಕ್ಷಯ್​ ಕುಮಾರ್​, ಪಂಕಜ್​ ತ್ರಿಪಾಠಿ, ಯಾಮಿ ಗೌತಮ್​ ಮುಂತಾದವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಈ ಸಿನಿಮಾದಲ್ಲಿ ಸಲಿಂಗಕಾಮಕ್ಕೆ ಸಂಬಂಧಿಸಿದ ಕತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಆ ಕತೆಯನ್ನು ಹೇಳಲು ದೇವರ ಪಾತ್ರಗಳನ್ನು ಬಳಸಿಕೊಳ್ಳಲಾಗಿದೆ. ಹಾಗಾಗಿ ಸೆನ್ಸಾರ್​ ಮಂಡಳಿಯವರು ಈ ಚಿತ್ರಕ್ಕೆ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕಿದ್ದರು. ಈಗ ‘ಎ’ ಪ್ರಮಾಣಪತ್ರದೊಂದಿಗೆ ‘ಒಎಂಜಿ 2’ ಬಿಡುಗಡೆಗೆ ಸಜ್ಜಾಗಿದೆ.

ಇದನ್ನೂ ಓದಿ: 12 ವರ್ಷಗಳ ಬಳಿಕ ಅಕ್ಷಯ್​ ಕುಮಾರ್​ ಚಿತ್ರಕ್ಕೆ ಸಿಕ್ತು ‘ಎ’ ಪ್ರಮಾಣಪತ್ರ; ‘ಒಎಂಜಿ 2’ ಚಿತ್ರ ವಯಸ್ಕರಿಗೆ ಮಾತ್ರ

ಆಗಸ್ಟ್​ 11ರಂದು ‘ಒಎಂಜಿ 2’ ಸಿನಿಮಾ ರಿಲೀಸ್​ ಆಗಲಿದೆ. ಎಲ್ಲವೂ ಅಂದಕೊಂಡಂತೆ ಆಗಿದ್ದರೆ ಇಷ್ಟುಹೊತ್ತಿಗಾಗಲೇ ಈ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿರಬೇಕಿತ್ತು. ಆದರೆ ಸೆನ್ಸಾರ್​ ಸಮಸ್ಯೆ ಎದುರಾಗಿದ್ದರಿಂದ ಟ್ರೇಲರ್​ ರಿಲೀಸ್​ಗೆ ವಿಘ್ನ ಎದುರಾಗಿತ್ತು. ಈಗ ನಿತಿನ್​ ದೇಸಾಯಿ ಅವರ ಮರಣದಿಂದಾಗಿ ಟ್ರೇಲರ್​ ಬಿಡುಗಡೆಯನ್ನು ಮತ್ತೊಂದು ದಿನ ಮುಂದಕ್ಕೆ ಹಾಕಲಾಗಿದೆ. ಅಕ್ಷಯ್​ ಕುಮಾರ್​ ಅವರ ಈ ನಿರ್ಧಾರವನ್ನು ಅಭಿಮಾನಿಗಳು ಗೌರವಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.