ಗೋಧ್ರಾ ದುರಂತದ ಸತ್ಯ ಹೊರಬರ್ತಿದೆ: ‘ಸಾಬರಮತಿ ರಿಪೋರ್ಟ್’ ಸಿನಿಮಾ ಬಗ್ಗೆ ಮೋದಿ ಟ್ವೀಟ್

ನಟ ವಿಕ್ರಾಂತ್ ಮಾಸಿ ಅಭಿನಯದ ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿದೆ. ನವೆಂಬರ್​ 15ರಂದು ರಿಲೀಸ್ ಆಗಿರುವ ಈ ಸಿನಿಮಾ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ. ಗೋಧ್ರಾ ದುರಂತದ ಸತ್ಯ ಈಗ ಹೊರಗೆ ಬರುತ್ತಿದೆ ಎಂದು ಮೋದಿ ಪೋಸ್ಟ್ ಮಾಡಿದ್ದಾರೆ. ಅವರ ಈ ಟ್ವೀಟ್ ವೈರಲ್​ ಆಗಿದೆ.

ಗೋಧ್ರಾ ದುರಂತದ ಸತ್ಯ ಹೊರಬರ್ತಿದೆ: ‘ಸಾಬರಮತಿ ರಿಪೋರ್ಟ್’ ಸಿನಿಮಾ ಬಗ್ಗೆ ಮೋದಿ ಟ್ವೀಟ್
ನರೇಂದ್ರ ಮೋದಿ, ‘ದಿ ಸಾಬರಮತಿ ರಿಪೋರ್ಟ್’ ಪೋಸ್ಟರ್​

Updated on: Nov 17, 2024 | 9:57 PM

ಗೋಧ್ರಾ ರೈಲು ದುರಂತ ಇಂದಿಗೂ ವಿವಾದದ ವಿಷಯವಾಗಿಯೇ ಉಳಿದಿದೆ. 2002ರಲ್ಲಿ ನಡೆದ ಆ ಘಟನೆಯ ಬಳಿಕ ಗುಜರಾತ್ ಉದ್ವಿಗ್ನಗೊಂಡಿತ್ತು. ಆ ಕುರಿತು ಹಲವು ಸಾಕ್ಷ್ಯಚಿತ್ರಗಳು ಈಗಾಗಲೇ ಬಂದಿವೆ. ಈಗ ಬಾಲಿವುಡ್​ನಲ್ಲಿ ‘ದಿ ಸಾಬರಮತಿ ರಿಪೋರ್ಟ್​’ ಸಿನಿಮಾ ಬಿಡುಗಡೆ ಆಗಿದೆ. ಇದರಲ್ಲಿ ವಿಕ್ರಾಂತ್ ಮಾಸಿ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈ ಸಿನಿಮಾದ ಕುರಿತು ‘ಎಕ್ಸ್​’ನಲ್ಲಿ ಕೇಳಿಬಂದ ಅಭಿಪ್ರಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅವರ ಪೋಸ್ಟ್ ವೈರಲ್ ಆಗಿದ್ದು, ಸಿನಿಮಾ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

‘ಸಾಮಾನ್ಯ ಜನರು ನೋಡುವ ರೀತಿಯಲ್ಲಿ ಸತ್ಯ ಹೊರಗೆ ಬರುತ್ತಿರುವುದು ಒಳ್ಳೆಯ ವಿಷಯ. ಕ್ಷಣಿಕ ಕಾಲಕ್ಕೆ ಮಾತ್ರ ಸುಳ್ಳಿನ ನಿರೂಪಣೆ ಇರಬಹುದು. ಕೊನೆಗೂ ಸತ್ಯ ಹೊರಗೆ ಬರುತ್ತದೆ’ ಎಂದು ನರೇಂದ್ರ ಮೋದಿ ಅವರು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಮೋದಿ ಅವರು ಈ ಪೋಸ್ಟ್ ಮಾಡಿದ್ದರಿಂದ ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ಬಗ್ಗೆ ಜನರಿಗೆ ಇನ್ನಷ್ಟು ಮಾಹಿತಿ ಸಿಕ್ಕಂತೆ ಆಗಿದೆ.

ಗೋಧ್ರಾ ಹತ್ಯಾ ಕಾಂಡ ನಡೆದಾಗ ಅಂದಿನ ಮಾಧ್ಯಮಗಳು ಆ ಘಟನೆಯನ್ನು ಯಾವ ರೀತಿ ಬಿಂಬಿಸಿದ್ದವು ಎಂಬುದನ್ನೇ ಮುಖ್ಯ ಥೀಮ್ ಆಗಿ ಇಟ್ಟುಕೊಂಡು ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ಮೂಡಿಬಂದಿದೆ. ಈ ಸಿನಿಮಾ ಬಗ್ಗೆ ಮೋದಿ ಪೋಸ್ಟ್ ಮಾಡಿದ್ದನ್ನು ಕೆಲವರು ತೆಗಳಿದ್ದಾರೆ. ರಾಜಕೀಯದ ಎಲ್ಲ ಕೆಲಸಗಳನ್ನು ಬಿಟ್ಟು ಅವರು ಸಿನಿಮಾದ ಪ್ರಚಾರ ಮಾಡಿದ್ದಾರೆ ಎಂದು ಕೆಲವರು ಟೀಕೆ ಮಾಡಿದ್ದಾರೆ.

ಇದನ್ನೂ ಓದಿ: ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ನಟನಿಗೆ ಕೊಲೆ ಬೆದರಿಕೆ, ಮಗುವನ್ನೂ ಬಿಟ್ಟಿಲ್ಲ

ವಿಕ್ರಾಂತ್ ಮಾಸಿ, ರಾಶಿ ಖನ್ನಾ, ರಿದ್ದಿ ಡೋಗ್ರಾ, ಬರ್ಕಾ ಸಿಂಗ್ ಮುಂತಾದವರು ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾದಲ್ಲಿ ನಟಿಸಿದ್ದಾರೆ. ಧೀರಜ್ ಶರ್ಮಾ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಏಕ್ತಾ ಕಪೂರ್​ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಮೊದಲ ದಿನ (ನ.15) ಈ ಚಿತ್ರ 1.10 ಕೋಟಿ ರೂಪಾಯಿ ಗಳಿಸಿತು. 2ನೇ ದಿನ 1.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us