Dhurandhar 2: ರಣವೀರ್ ಸಿಂಗ್ ಮುಂದೆ ಬೇರೆ ಹೀರೋಗಳೆಲ್ಲ ಜೋಕರ್​ಗಳು; ಆರ್​ಜಿವಿ ಟೀಕೆ

ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾ ನೋಡಿದ ರಾಮ್ ಗೋಪಾಲ್ ವರ್ಮಾ ಅವರು ಪುಟ್ಟಗಟ್ಟಲೆ ವಿಮರ್ಶೆ ಹಂಚಿಕೊಂಡಿದ್ದಾರೆ. ಆರ್​ಜಿವಿ ಅವರಿಗೆ ಈ ಸಿನಿಮಾ ಬಹಳ ಇಷ್ಟ ಆಗಿದೆ. ಚಿತ್ರದ ಬಗ್ಗೆ ಅವರು ಮಾಡಿರುವ ಪೋಸ್ಟ್ ಇಲ್ಲಿದೆ..

Dhurandhar 2: ರಣವೀರ್ ಸಿಂಗ್ ಮುಂದೆ ಬೇರೆ ಹೀರೋಗಳೆಲ್ಲ ಜೋಕರ್​ಗಳು; ಆರ್​ಜಿವಿ ಟೀಕೆ
Ranveer Singh, Ram Gopal Varma

Updated on: Mar 20, 2026 | 6:00 PM

‘ಧುರಂಧರ್ 2 ಒಂದು ಹಾರರ್. ಬುದ್ಧಿಹೀನ ಮತ್ತು ಅತಿಯಾದ ಅಬ್ಬರದ ಸಿನಿಮಾಗಳ ಮೂಲಕ ತಮ್ಮ ವೃತ್ತಿಜೀವನ ಕಟ್ಟಿಕೊಂಡಿರುವ ಎಲ್ಲಾ ಫಿಲ್ಮ್ ಮೇಕರ್​ಗಳಿಗೆ ಇದೊಂದು ಭಯಾನಕ ಅನುಭವ. ಮೆದುಳನ್ನು ಮನೆಯಲ್ಲೇ ಬಿಟ್ಟು ಸಿನಿಮಾ ನೋಡಲು ಪ್ರೇರೇಪಿಸುತ್ತಿದ್ದಂತಹ ಸಿನಿಮಾಗಳ ಕಾಲ ಮುಗಿಯಿತು. ಅಬ್ಬರದ ಮತ್ತು ಮಸಾಲಾ ಸಿನಿಮಾಗಳು ಈಗ ವೆಂಟಿಲೇಟರ್ ಮೇಲೆ ಉಸಿರಾಡಲು ಒದ್ದಾಡುತ್ತಿವೆ. ದೇವರಂತೆ ಆರಾಧಿಸಲ್ಪಡುವ ಪ್ರತಿಯೊಬ್ಬ ಹೀರೋಗಳಿಗೂ ಧುರಂಧರ್ 2 (Dhurandhar 2) ಸಿನಿಮಾ ನಡುಕ ಹುಟ್ಟಿಸಲಿದೆ.’

‘ಈ ಸಿನಿಮಾ ಮೂಲಕ ರಣವೀರ್ ಸಿಂಗ್ ಅವರು ಎಂದಿಗೂ ಕಷ್ಟಪಡದ ಹೀರೋಗಳನ್ನು ಕೊಂದು ಹಾಕಿದ್ದಾರೆ. ಅಂತಹ ಹಳೇ ಮಾದರಿಯ ಹೀರೋಗಳ ಹೆಣದ ಮೇಲೆ, ಅವರು ಒಬ್ಬ ನೈಜ ಹೀರೋಗೆ ಜನ್ಮ ನೀಡಿದ್ದಾರೆ. ಈ ಹೊಸ ಹೀರೋನಲ್ಲೂ ದೋಷಗಳಿವೆ. ಆದರೆ ಅತ್ಯಂತ ಅಪಾಯಕಾರಿ ಮತ್ತು ಊಹಿಸಲಾಗದ ವ್ಯಕ್ತಿ ಈತ. ಇಲ್ಲಿ ಹೀರೋಯಿಸಂ ಎನ್ನುವುದು ಕಿವಿಗೆ ಹಾನಿಯಾಗುವಂತಹ ಹಿನ್ನೆಲೆ ಸಂಗೀತದ ಮೂಲಕ ಜನರ ತಲೆಗೆ ತುರುಕಿದ್ದಲ್ಲ. ಬದಲಿಗೆ ಆತನ ಕಾರ್ಯಗಳಿಂದ ಹೀರೋಯಿಸಂ ಮೂಡಿಬಂದಿದೆ.’

‘ಈ ಹೊಸ ಮಾದರಿಯ ಹೀರೋಗೆ ಹೋಲಿಸಿದರೆ, ಹಳೆಯ ದೇವಮಾನವ ಹೀರೋಗಳು ಇದ್ದಕ್ಕಿದ್ದಂತೆ ಸರ್ಕಸ್‌ನ ಜೋಕರ್‌ಗಳಂತೆ ಹಾಸ್ಯಾಸ್ಪದವಾಗಿ ಕಾಣುತ್ತಾರೆ. ಧುರಂಧರ್ 2 ಚಿತ್ರದ ಕಲೆಕ್ಷನ್ ಕಂಡು ಅವರ ಕುರುಡು ಅಭಿಮಾನಿಗಳು ಅಸಹಾಯಕರಾಗಿ ಭಯಬೀಳುತ್ತಿದ್ದಾರೆ. ಫಿಸಿಕ್ಸ್ ಒಂದು ಹಾಸ್ಯ ಮತ್ತು ಗ್ರಾವಿಟಿಯೇ ಇಲ್ಲ ಎಂಬಂತೆ ಸಾಹಸ ದೃಶ್ಯಗಳನ್ನು ಸೃಷ್ಟಿಸಿ ಕೆರಿಯರ್ ಕಟ್ಟಿಕೊಂಡವರಿಗೆ ಈ ಸಿನಿಮಾ ಭೀತಿ ಹುಟ್ಟಿಸಿದೆ. ಮನುಷ್ಯರನ್ನು 50 ಅಡಿ ಎತ್ತರಕ್ಕೆ ಎಸೆಯುವ, ರಬ್ಬರ್ ಬಾಲ್ ತರಹ ನೆಲಕ್ಕೆ ಬಡಿಯುವ, ನಗರವನ್ನೇ ಭಸ್ಮ ಮಾಡುವ ಸ್ಫೋಟದಿಂದ ಬದುಕುಳಿದು ಧೂಳು ಕೊಡವಿಕೊಂಡು ಡೈಲಾಗ್ ಹೊಡೆಯುವ ದೃಶ್ಯಗಳನ್ನು ಹೊಸ ತಲೆಮಾರಿನ ಪ್ರೇಕ್ಷಕರು ಈಗ ಕೊಲ್ಲಲಿದ್ದಾರೆ.’

‘ನೈಜ ಆಕ್ಷನ್ ಸೀನ್‌ಗಳನ್ನು ನೋಡಿದ ಮೇಲೆ, ಗಾಳಿಯಲ್ಲಿ ಹಾರುವ ಖಳನಾಯಕ ಗುಂಪು ಈಗ ನಕಲಿಯಾಗಿ ಕಾಣುತ್ತಿದೆ. ವೈರ್ ಮತ್ತು ಕ್ರೇನ್‌ಗಳ ಮೂಲಕ ಹೀರೋಗಳನ್ನು ಮೇಲೆತ್ತಿ ತೋರಿಸುತ್ತಿದ್ದ ನಿರ್ದೇಶಕರು ಈಗ ಬೆವರುತ್ತಾ ಎಚ್ಚರಗೊಳ್ಳುವಂತಾಗಿದೆ. ಕೇವಲ ಹೇರ್ ಸ್ಟೈಲ್, ಕಾಸ್ಟ್ಯೂಮ್, ಫೋಟೋಶಾಪ್ ಮಾಡಿದ ಸಿಕ್ಸ್ ಪ್ಯಾಕ್ ಮತ್ತು ಡಿಸೈನರ್ ಬಟ್ಟೆಗಳಿಂದ ಪಾತ್ರಗಳು ಸೃಷ್ಟಿಯಾಗುತ್ತವೆ ಎಂದು ನಂಬಿರುವ ಪ್ಯಾನ್-ಇಂಡಿಯಾ ನಿರ್ದೇಶಕರು ಈಗ ತಮ್ಮ ಕುರ್ಚಿಯಲ್ಲಿ ನಡುಗುತ್ತಿದ್ದಾರೆ.’

‘ಧುರಂಧರ್ 2 ಚಿತ್ರದ ಹೀರೋನ ಶಕ್ತಿ ಆತನ ಬೈಸೆಪ್ಸ್‌ನಿಂದಲ್ಲ, ಬದಲಿಗೆ ಆತನ ಬುದ್ಧಿವಂತಿಕೆಯಿಂದ ಬರುತ್ತದೆ ಎಂದು ಪ್ರೇಕ್ಷಕರು ತಿಳಿದುಕೊಂಡ ಮೇಲೆ, ಈ ಹೇರ್ ಮತ್ತು ಕಾಸ್ಟ್ಯೂಮ್ ಶಾಲೆಯ ಸಿನಿಮಾಗಳು ಸಣ್ಣ ಮಕ್ಕಳ ಆಟದಂತೆ ಕಾಣುತ್ತಿವೆ. ಧುರಂಧರ್ 2 ಕೇವಲ ಒಂದು ಸಿನಿಮಾವಲ್ಲ. ಅದೊಂದು ಅಂತಿಮ ತೀರ್ಪು. ಪ್ರೇಕ್ಷಕರ ಬುದ್ಧಿವಂತಿಕೆಯನ್ನು ಅವಮಾನಿಸುವ ಮತ್ತು ಹೀರೋಗಳನ್ನು ದೇವರುಗಳನ್ನಾಗಿ ಮಾಡಿ ಪ್ರೇಕ್ಷಕರನ್ನು ಕುರಿಗಳನ್ನಾಗಿಸುವ ಸಿನಿಮಾಗಳನ್ನು ಆದಿತ್ಯ ಧಾರ್ ಅವರು ಕೊಂದಿದ್ದಾರೆ.’

ಇದನ್ನೂ ಓದಿ: ಕಂಗನಾ ಮಾಡಿದ ‘ಎಮರ್ಜೆನ್ಸಿ’ ಸಿನಿಮಾ 2 ದಿನ ಓಡಲಿಲ್ಲ: ಖಾರವಾಗಿ ಹೇಳಿದ ‘ಧುರಂಧರ್ 2’ ನಟ

‘ಈ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಆ ಹಳೆಯ ನಿರ್ಮಾಪಕರ ನಂಬಿಕೆಗಳನ್ನು ಎಷ್ಟು ಆಳವಾದ ಗುಂಡಿಯಲ್ಲಿ ಹೂತು ಹಾಕುತ್ತಿದೆ ಎಂದರೆ, ಅಲ್ಲಿಂದ ಅವರ ಪ್ರೇತಾತ್ಮಗಳೂ ಹೊರಬರಲು ಸಾಧ್ಯವಿಲ್ಲ. ಈಗ ನೀವು ಕೇಳುತ್ತಿರುವ ಬಾಕ್ಸ್ ಆಫೀಸ್ ಕಲೆಕ್ಷನ್‌ನ ಆರ್ಭಟವೇ ಆ ಹಳೇ ಮಾದರಿಯ ಸಿನಿಮಾಗಳ ಅಂತ್ಯದ ಕಿರುಚಾಟ. ಈಗಾಗಲೇ ಚಿತ್ರೀಕರಣ ಹಂತದಲ್ಲಿರುವ ಅಂತಹ ಸಿನಿಮಾಗಳ ನಿರ್ಮಾಪಕರು ಈ ಕೂಡಲೇ ಧುರಂಧರ್ 2 ಚಿತ್ರವನ್ನು ಹಲವು ಬಾರಿ ನೋಡಿ ತಮ್ಮನ್ನು ತಾವು ತಿದ್ದಿಕೊಳ್ಳದಿದ್ದರೆ, ಅವರನ್ನು ಆ ದೇವರೂ ಕೂಡ ಉಳಿಸಲು ಸಾಧ್ಯವಿಲ್ಲ. ಆದರೆ ಒಂದು ಸಮಸ್ಯೆ ಇದೆ. ಅವರ ಹತ್ತಿರ ಕೋಟಿಗಟ್ಟಲೆ ಹಣವಿರಬಹುದು, ಆದರೆ ಆದಿತ್ಯ ಧಾರ್ ಅವರಂತಹ ಮೆದುಳನ್ನು ಎಲ್ಲಿಂದ ತರುತ್ತಾರೆ?’

ರಾಮ್ ಗೋಪಾಲ್ ವರ್ಮಾ

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us