
ಬಾಲಿವುಡ್ನ ಖ್ಯಾತ ನಟ ರಣವೀರ್ ಸಿಂಗ್ ಮುಂಬೈನ ಪ್ರಸಿದ್ಧ ಲಾಲ್ಬಾಗ್ಚಾ ರಾಜ ಗಣಪತಿಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಳೆದ ವರ್ಷ ಅವರಿಗೆ ಸಿನಿಮಾವಷ್ಟೇ ಅಲ್ಲದೆ ವೈಯಕ್ತಿಕ ಜೀವನದಲ್ಲೂ ಹಲವು ಖುಷಿಯ ಘಟನೆಗಳು ನಡೆದಿವೆ. ಹೀಗಾಗಿ ಗಣೇಶನಿಗೆ ಕೃತಜ್ಞತೆ ಸಲ್ಲಿಸಲು ಅವರು ಆಗಮಿಸಿದ್ದರು. ಇದೇ ವೇಳೆಯಲ್ಲಿ ರಣವೀರ್ ಒಂದು ಮಹತ್ವದ ಮತ್ತು ಪ್ರಶಂಸನೀಯ ನಿರ್ಧಾರವನ್ನು ಕೈಗೊಂಡು ಎಲ್ಲರ ಗಮನ ಸೆಳೆದಿದ್ದಾರೆ.
ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಸಿನಿಮಾ ದೊಡ್ಡ ಯಶಸ್ಸು ಕಂಡಿದೆ. ಇದರ ಬೆನ್ನಲ್ಲೇ ಅವರು ಮತ್ತು ಪತ್ನಿ ದೀಪಿಕಾ ಪಡುಕೋಣೆ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗಣಪನ ಆಶೀರ್ವಾದದಿಂದ ತಮ್ಮ ಕುಟುಂಬದಲ್ಲಿ ಸಂತಸ ಮನೆಮಾಡಿದೆ ಎಂದು ನಟ ಹೇಳಿದ್ದಾರೆ. ಮುಂಬರುವ ಜೀವನದ ಹಾದಿಗೆ ಗಣಪತಿ ಬಪ್ಪನ ಕೃಪೆ ಹೀಗೆಯೇ ಇರಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ಲಾಲ್ಬಾಗ್ಚಾ ರಾಜನ ದರ್ಶನದ ವೇಳೆ ರಣವೀರ್ ಬಿಳಿ ಬಣ್ಣದ ಉಡುಪಿನಲ್ಲಿ ಮಿಂಚಿದರು. ತಮ್ಮ ಮುಂಬರುವ ‘ಪ್ರಳಯ್’ ಚಿತ್ರದ ಹೊಸ ಲುಕ್ನಲ್ಲಿ ಅವರು ಕಂಗೊಳಿಸುತ್ತಿದ್ದರು. ಮಂಟಪದ ಬಳಿ ಸೇರಿದ್ದ ಅಭಿಮಾನಿಗಳ ಜೊತೆ ಅವರು ಪ್ರೀತಿಯಿಂದ ಸಂಭಾಷಣೆ ನಡೆಸಿದರು. ಸೆಲ್ಫಿ ಹಾಗೂ ಫೋಟೋಗಳಿಗೆ ಪೋಸ್ ನೀಡುವ ಮೂಲಕ ಅಭಿಮಾನಿಗಳ ಮನ ಗೆದ್ದರು.
ಗಣೇಶ ಚತುರ್ಥಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ರಣವೀರ್ ದೊಡ್ಡ ನಿರ್ಧಾರ ಒಂದನ್ನು ಪ್ರಕಟಿಸಿದ್ದಾರೆ. ‘ಸೇವಾ ಸಂಕಲ್ಪ ಅಭಿಯಾನ’ದ ಭಾಗವಾಗಿ 1,000 ಹೆಣ್ಣುಮಕ್ಕಳ ಶಿಕ್ಷಣದ ಜವಾಬ್ದಾರಿ ಹೊರಲು ಅವರು ಸಂಕಲ್ಪ ಮಾಡಿದ್ದಾರೆ. ಈ ಸಾಮಾಜಿಕ ಕಾರ್ಯದಿಂದ ಬಪ್ಪನ ಅನುಗ್ರಹ ಸಿಗಲಿದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಗಳು ದುವಾ ಹುಟ್ಟುಹಬ್ಬದಂದೇ ವಿಶೇಷ ಫೋಟೋ ಹಂಚಿಕೊಂಡ ದೀಪಿಕಾ, ರಣವೀರ್ ಸಿಂಗ್
ರಣವೀರ್ ಮತ್ತು ದೀಪಿಕಾ ದಂಪತಿಗೆ ಈಗಾಗಲೇ ದುವಾ ಪಡುಕೋಣೆ ಸಿಂಗ್ ಎಂಬ ಮುದ್ದಾದ ಮಗಳಿದ್ದಾಳೆ. ಇತ್ತೀಚೆಗೆ ಮುಖೇಶ್ ಅಂಬಾನಿ ನಿವಾಸದಲ್ಲಿ ನಡೆದ ಗಣೇಶ ಪೂಜೆಯಲ್ಲೂ ರಣವೀರ್ ಒಂಟಿಯಾಗಿ ಭಾಗವಹಿಸಿದ್ದರು. ಸಾಲು ಸಾಲು ಹಿಟ್ ಸಿನಿಮಾಗಳು ಹಾಗೂ ಸಮಾಜಮುಖಿ ಕೆಲಸಗಳ ಮೂಲಕ ರಣವೀರ್ ಸಿಂಗ್ ಇದೀಗ ಎಲ್ಲೆಡೆ ಸಖತ್ ಸುದ್ದಿ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.