‘ಡಾನ್ 3’ ವಿವಾದ, ರಣ್ವೀರ್ ಬಿಟ್ಟರು, ತಂದೆ ಬಿಡಲು ತಯಾರಿಲ್ಲ

Ranveer Singh: ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳ ಭರ್ಜರಿ ಯಶಸ್ಸಿನ ಬಳಿಕ ರಣ್ವೀರ್ ಸಿಂಗ್ ಅವರು ಹಠಾತ್ತನೆ ಫರ್ಹಾನ್ ಅಖ್ತರ್ ನಿರ್ದೇಶಿಸಿ, ನಿರ್ಮಾಣ ಮಾಡಲಿದ್ದ ‘ಡಾನ್ 3’ ಸಿನಿಮಾದಿಂದ ಹೊರ ಬಂದರು. ಇದರಿಂದ ಸಿಟ್ಟಾದ ಫರ್ಹಾನ್ ಅಖ್ತರ್ ಪ್ರಕರಣವನ್ನು ಸಿನಿಮಾ ಕಾರ್ಮಿಕರ ಸಂಘಕ್ಕೆ ತೆಗೆದುಕೊಂಡು ಹೋದರು. 45 ಕೋಟಿ ನಷ್ಟ ಪರಿಹಾರ ನೀಡಬೇಕೆಂದರು. ಇದೀಗ ರಣ್ವೀರ್ ಅವರ ತಂದೆ ಈ ವಿಷಯವಾಗಿ ಮಗನ ಪರವಾಗಿ ಹೋರಾಡುತ್ತಿದ್ದಾರೆ.

‘ಡಾನ್ 3’ ವಿವಾದ, ರಣ್ವೀರ್ ಬಿಟ್ಟರು, ತಂದೆ ಬಿಡಲು ತಯಾರಿಲ್ಲ
Ranveer Singh

Updated on: Aug 21, 2026 | 2:23 PM

ಮುಖ್ಯಾಂಶಗಳು

  • ರಣ್ವೀರ್ ಸಿಂಗ್ ಬಾಲಿವುಡ್​​ನ ಸೂಪರ್ ಸ್ಟಾರ್ ನಟ.
  • ಅವರು ಡಾನ್ 3 ಸಿನಿಮಾದಿಂದ ಹೊರನಡೆದಿದ್ದು ವಿವಾದವಾಗಿದೆ.
  • ಇದೀಗ ರಣ್ವೀರ್ ಪರವಾಗಿ ಅವರ ತಂದೆ ಕಾನೂನು ಹೋರಾಟಕ್ಕೆ ಇಳಿದಿದ್ದಾರೆ.

ನಟ ರಣವೀರ್ ಸಿಂಗ್ (Ranveer Singh) ‘ಡಾನ್ 3’ ಸಿನಿಮಾದಿಂದ ಹೊರಬಂದ ಬೆನ್ನಲ್ಲೆ ಸಿನಿಮಾದ ನಿರ್ಮಾಪಕ ಫರ್ಹಾನ್ ಅಖ್ತರ್ ಹಾಗೂ ಅವರ ಎಕ್ಸೆಲ್ ಎಂಟರ್ಟೈನ್ಮೆಂಟ್ ಸಂಸ್ಥೆಯು ರಣ್ವೀರ್ ಸಿಂಗ್ ವಿರುದ್ಧ ದಾವೆ ಹೂಡಿದ್ದಲ್ಲದೆ, ತಮಗೆ ಆಗಿರುವ 45 ಕೋಟಿ ರೂಪಾಯಿ ನಷ್ಟವನ್ನು ತುಂಬಿಕೊಡುವಂತೆ ಆಗ್ರಹಿಸಿತ್ತು. ರಣ್ವೀರ್ ಸಿಂಗ್ ವಿರುದ್ಧ ಹಿಂದಿ ಸಿನಿಮಾ ಒಕ್ಕೂಟ ಅಸಹಕಾರವನ್ನು ಸಹ ಘೋಷಿಸಿತ್ತು. ಈಗ ವಿವಾದ ತಣ್ಣಗಾಗಿದೆಯಾದರೂ ರಣ್ವೀರ್ ಸಿಂಗ್ ಅವರ ತಂದೆ, ಮಗನ ಪರವಾಗಿ ಹೋರಾಟಕ್ಕೆ ಇಳಿದಿದ್ದಾರೆ. ರಣ್ವೀರ್ ಸಿಂಗ್ ಅವರ ತಂದೆ ಜಗಜೀತ್ ಸಿಂಗ್ ಭವಾನಿ ಅವರು ಇದೀಗ ನಿರ್ಮಾಪಕರ ಸಂಘವನ್ನು ಭೇಟಿ ಮಾಡಿದ್ದು, ಮಗನ ಪರವಾಗಿ ದಾಖಲೆಗಳನ್ನು ಸಲ್ಲಿಸಿದ್ದಾರೆ.

ಜಗಜೀತ್ ಸಿಂಗ್ ಭವನಾನಿ, ಇಂಡಿಯನ್ ಮೋಷನ್ ಪಿಕ್ಚರ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ (IMPPA) ಅನ್ನು ಸಂಪರ್ಕ ಮಾಡಿದ್ದು, ರಣ್ವೀರ್ ಸಿಂಗ್ ಅವರ ಪರವಾಗಿ ಪ್ರಕರಣವನ್ನು ಮಂಡಿಸಲು ಅಗತ್ಯವಾದ ದಾಖಲೆಗಳು ಮತ್ತು ಇತರ ವಸ್ತುಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಕೆ ಮಾಡಿದ್ದಾರೆ. ಫರ್ಹಾನ್ ಅಖ್ತರ್ ಅವರ ಎಕ್ಸೆಲ್ ಎಂಟರ್ಟೈನ್​​​ಮೆಂಟ್ ಸಹ ತಮಗೆ ನಷ್ಟವಾಗಿರುವ ಕುರಿತಾದ ದಾಖಲೆಗಳನ್ನು ಸಲ್ಲಿಸಿದೆ. ಸಂಘದ ಕಾನೂನು ತಂಡವು ಈಗ ಮುಂದಿನ ಕ್ರಮಗಳನ್ನು ನಿರ್ಧರಿಸುವ ಮೊದಲು, ದಾಖಲೆಗಳನ್ನು ಪರಿಶೀಲಿಸಿ ಎರಡೂ ತಂಡಗಳ ನಡುವೆ ರಾಜಿ ಸಾಧ್ಯವೇ ಎಂದು ಪ್ರಯತ್ನಿಸಲಿದೆ.

ರಣ್ವೀರ್ ಸಿಂಗ್ ಅವರು ಫರ್ಹಾನ್ ಅಖ್ತರ್ ನಿರ್ದೇಶಿಸಿ ನಿರ್ಮಾಣ ಮಾಡಲಿದ್ದ ‘ಡಾನ್ 3’ ಸಿನಿಮಾನಲ್ಲಿ ನಟಿಸಬೇಕಿತ್ತು. ‘ಧುರಂಧರ್ 2’ ಸಿನಿಮಾದ ಬಳಿಕ ಆ ಸಿನಿಮಾ ಸೆಟ್ಟೇರಬೇಕಿತ್ತು. ಆದರೆ ಸಿನಿಮಾದಿಂದ ರಣ್ವೀರ್ ಸಿಂಗ ಹಠಾತ್ತನೆ ಹಿಂದೆ ಸರಿದರು. ಆಗಸ್ಟ್ 2023 ರಲ್ಲೇ ಅವರನ್ನು ‘ಡಾನ್ 3’ ಸಿನಿಮಾದ ನಾಯಕನಾಗಿ ಘೋಷಿಸಲಾಗಿತ್ತು. ಮೊದಲ ಎರಡು ಚಿತ್ರಗಳಲ್ಲಿ ಶಾರೂಖ್ ಖಾನ್ ನಿರ್ವಹಿಸಿದ್ದ ಪಾತ್ರಕ್ಕೆ ಅವರು ಆಯ್ಕೆಯಾಗಿದ್ದರು. ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳ ಭರ್ಜರಿ ಯಶಸ್ಸಿನ ಬಳಿಕ ರಣ್ವೀರ್ ಸಿಂಗ್ ಅವರು ಸಿನಿಮಾದಿಂದ ಹಿಂದೆ ಸರಿಯುವುದಾಗಿ ಘೋಷಿಸಿದರು.

ಇದನ್ನೂ ಓದಿ:‘ಡಾನ್ 3’ ವಿವಾದ: ರಣವೀರ್ ಸಿಂಗ್ ದೊಡ್ಡ ನಿರ್ಧಾರ; 18 ತಿಂಗಳು ಯಾರಿಗೂ ಸಿಗಲ್ಲ ನಟ

ಅವರ ನಿರ್ಗಮನದ ನಂತರ, ಎಕ್ಸೆಲ್ ಎಂಟರ್ಟೈನ್ಮೆಂಟ್ ಈ ವಿಷಯವನ್ನು ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE) ಗೆ ತೆಗೆದುಕೊಂಡು ಹೋಯಿತು. ನಿರ್ಮಾಪಕರು ತಮ್ಮ ಕಡೆಯ ವಾದವನ್ನು ಮಂಡಿಸಿದ ನಂತರ ರಣವೀರ್ ಅವರ ತಂಡಕ್ಕೆ ಉತ್ತರಿಸಲು ಕೇಳಲಾಯಿತು. ಮೇ ತಿಂಗಳಲ್ಲಿ FWICE ನಟನ ವಿರುದ್ಧ ಸಹಕಾರ ನೀಡದಿರುವ ನಿರ್ದೇಶನವನ್ನು ಹೊರಡಿಸಿದಾಗ ಪರಿಸ್ಥಿತಿ ಇನ್ನಷ್ಟು ಗಂಭೀರವಾಯಿತು. ಆ ಬಳಿಕ FWICE, ಐಎಂಪಿಪಿಎ, ದಿ ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ ಮತ್ತು ಸಿಂಟಾ (CINTAA) ನಡುವಿನ ಚರ್ಚೆಯ ನಂತರ ಎಂಟು ದಿನಗಳ ನಂತರ ಈ ನಿರ್ದೇಶನವನ್ನು ಹಿಂತೆಗೆದುಕೊಳ್ಳಲಾಯಿತು.

ರಣ್ವೀರ್ ಸಿಂಗ್ ಇದೀಗ ‘ಪಾರ್ಲೆ’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಒಂದು ರೀತಿ ಸೂಪರ್ ಹೀರೋ ಸಿನಿಮಾ ಆಗಿದೆ. ಸಿನಿಮಾನಲ್ಲಿ ಮಲಯಾಳಂ ನಟಿ ಕಲ್ಯಾಣಿ ಪ್ರಿಯದರ್ಶನ್ ನಾಯಕಿ. ಸಿನಿಮಾದ ಚಿತ್ರೀಕರಣ ಮುಂಬೈ ಸೇರಿದಂತೆ ವಿದೇಶಗಳಲ್ಲಿ ನಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us