ವಿದ್ಯಾರ್ಥಿಗಳ ಹೋರಾಟ ಬೆಂಬಲಿಸಿ ವಶಕ್ಕೆ ಒಳಗಾಗಿದ್ದ ನಟಿ ಆಯೆಷಾ ಖಾನ್ ಮೊದಲ ಪ್ರತಿಕ್ರಿಯೆ

ಮುಂಬೈನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ ನಟಿ ಆಯೆಷಾ ಖಾನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ವಿಷಯದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ‘ಬಾಲಿವುಡ್‌ನಲ್ಲಿ ಕೆಲಸ ಸಿಗುವುದಿಲ್ಲ’ ಎಂದು ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಾನೆ. ಅದಕ್ಕೆ ಆಯೆಷಾ ಖಾನ್ ಪ್ರತಿಕ್ರಿಯೆ ನೀಡಿದ್ದು, ಆ ಬಗ್ಗೆ ಇಲ್ಲಿದೆ ವಿವರ..

ವಿದ್ಯಾರ್ಥಿಗಳ ಹೋರಾಟ ಬೆಂಬಲಿಸಿ ವಶಕ್ಕೆ ಒಳಗಾಗಿದ್ದ ನಟಿ ಆಯೆಷಾ ಖಾನ್ ಮೊದಲ ಪ್ರತಿಕ್ರಿಯೆ
Ayesha Khan

Updated on: Jul 23, 2026 | 7:07 PM

ಎನ್‌ಇಇಟಿ (NEET) ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದಕ್ಕೆ ಮುಂಬೈ ಪೊಲೀಸರು ತಮ್ಮನ್ನು ವಶಕ್ಕೆ ಪಡೆದಿದ್ದರು ಎಂದು ‘ಧುರಂಧರ್’ ಚಿತ್ರದ ನಟಿ ಆಯೆಷಾ ಖಾನ್ (Ayesha Khan) ತಿಳಿಸಿದ್ದಾರೆ. ಇದರ ಬೆನ್ನಲ್ಲೇ, ‘ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕೆ ನಿಮಗಿನ್ನು ಬಾಲಿವುಡ್‌ನಲ್ಲಿ ಕೆಲಸವೇ ಸಿಗುವುದಿಲ್ಲ’ ಎಂದು ಹೇಳಿದ ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರಿಗೆ ನಟಿ ಖಡಕ್ ತಿರುಗೇಟು ನೀಡಿದ್ದಾರೆ.

ಆಯೆಷಾ ಖಾನ್ ಅವರು ಮುಂಬೈನ ದಾದರ್‌ನಲ್ಲಿ ನಡೆದ ಪ್ರತಿಭಟನಾ ಸ್ಥಳದಿಂದ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ತಾವು ತಮ್ಮ ಸಹೋದರ ಮತ್ತು ಸ್ನೇಹಿತರೊಂದಿಗೆ ವಿದ್ಯಾರ್ಥಿಗಳಿಗೆ ಬೆಂಬಲ ನೀಡಲು ತೆರಳಿದ್ದಾಗಿ ಅವರು ಹೇಳಿದ್ದಾರೆ. ಅಲ್ಲಿ ಪ್ರತಿಭಟನೆ ನಡೆಸಲು ಅವಕಾಶವಿಲ್ಲ ಎಂದು ಪೊಲೀಸರು ತಮ್ಮ ತಂಡಕ್ಕೆ ತಿಳಿಸಿದರು. ಆ ಬಳಿಕ ತಮ್ಮ ಸಹೋದರ ಮತ್ತು ಸ್ನೇಹಿತರನ್ನು ಪೊಲೀಸರು ಮೊದಲು ವಶಕ್ಕೆ ಪಡೆದರು. ಅವರನ್ನು ಹುಡುಕುತ್ತಾ ಸಮೀಪದಲ್ಲೇ ನಿಂತಿದ್ದ ತಮ್ಮ ಬಳಿ ಮಹಿಳಾ ಪೊಲೀಸರು ಸೇರಿದಂತೆ ಸುಮಾರು 15 ಪೊಲೀಸ್ ಸಿಬ್ಬಂದಿ ಬಂದು, ವ್ಯಾನ್ ಹತ್ತುವಂತೆ ಹೇಳಿದರು ಎಂದು ಆಯೆಷಾ ಆರೋಪಿಸಿದ್ದಾರೆ.

ತಮ್ಮನ್ನು ಎಲ್ಲಿಗೆ ಕರೆದೊಯ್ಯಲಾಗುತ್ತಿದೆ ಎಂದು ಆಯೆಷಾ ಅವರು ಅಧಿಕಾರಿಗಳನ್ನು ಪ್ರಶ್ನಿಸುವುದು ವೀಡಿಯೋದಲ್ಲಿ ಕಂಡುಬಂದಿದೆ. ಮತ್ತೊಂದು ವೀಡಿಯೋದಲ್ಲಿ, ನಾಲ್ವರು ಮಹಿಳಾ ಪೊಲೀಸ್ ಸಿಬ್ಬಂದಿ ಅವರನ್ನು ವ್ಯಾನ್‌ ಒಳಗೆ ತಳ್ಳುತ್ತಿರುವ ದೃಶ್ಯ ಸೆರೆಯಾಗಿದೆ. ತಮ್ಮನ್ನು ಮತ್ತು ಇತರರನ್ನು ವರ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು ಎಂದು ನಂತರ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಸಮಂಜಸ ಬಂಧನವನ್ನು ಅವರು ಪ್ರಶ್ನಿಸಿದರೂ, ಠಾಣೆಯಲ್ಲಿದ್ದ ಅಧಿಕಾರಿಗಳು ತಮ್ಮೊಂದಿಗೆ ಮಾತಾಡಿದ ರೀತಿಯು ಆತ್ಮೀಯವಾಗಿತ್ತು ಎಂದು ಬಣ್ಣಿಸಿದ್ದಾರೆ.

ನಟಿ ಆಯೆಷಾ ಖಾನ್ ಹೇಳಿದ್ದೇನು?

‘ನನ್ನನ್ನು ಒಳಗೆ ಎಳೆಯಲು ನಾಲ್ಕೈದು ಮಹಿಳಾ ಪೊಲೀಸರು ಬೇಕಾಯಿತು. ಆದರೆ ನಾನು ಅದೇ ಪ್ರಶ್ನೆಯನ್ನು ಮತ್ತೆ ಕೇಳುತ್ತೇನೆ: ಯಾಕೆ? ನಾನು ಯಾವುದೇ ಶಬ್ದ ಮಾಡಿದ್ದೇನಾ? ಕನಿಷ್ಠ ಪಕ್ಷ ಯಾರೊಂದಿಗಾದರೂ ಮಾತುಕತೆ ಅಥವಾ ಚರ್ಚೆಯನ್ನಾದರೂ ಶುರು ಮಾಡಿದ್ದೇನಾ? ನನ್ನನ್ನು ಯಾವ ಕಾರಣಕ್ಕಾಗಿ ವಶಕ್ಕೆ ಪಡೆದಿದ್ದೀರಿ? ವಾಹನ ಸಂಚಾರ ತಡೆದಿದ್ದಕ್ಕೇ’ ಎಂದು ಅವರು ಪ್ರಶ್ನೆ ಕೇಳಿದ್ದಾರೆ.

ಇದನ್ನೂ ಓದಿ: ಸಿಜೆಪಿ ಪ್ರತಿಭಟನೆಗೆ ಬಂದ ‘ಧುರಂಧರ್’ ನಟಿ ಆಯಿಷಾ ಖಾನ್; ವಶಕ್ಕೆ ಪಡೆದ ಮುಂಬೈ ಪೋಲಿಸರು

‘ಧೈರ್ಯ ಕಳೆದುಕೊಳ್ಳುವುದಕ್ಕಿಂತ ಕೆರಿಯರ್ ಹೋದರೂ ಸರಿ’:

ಪ್ರತಿಭಟನೆಯ ಕುರಿತು ಪೋಸ್ಟ್ ಮಾಡಿದ ನಂತರ, ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು ಆಯೆಷಾ ಖಾನ್ ಅವರಿಗೆ ಸಂದೇಶ ಕಳುಹಿಸಿ ‘ನಿಮಗೆ ಇನ್ಮುಂದೆ ಬಾಲಿವುಡ್‌ನಲ್ಲಿ ಕೆಲಸ ಸಿಗುವುದಿಲ್ಲ’ ಎಂದು ಹೇಳಿದ್ದರು. ಇದಕ್ಕೆ ಬಹಿರಂಗವಾಗಿ ಪ್ರತ್ಯುತ್ತರ ನೀಡಿದ ಆಯಿಷಾ ಖಾನ್, ‘ಬೆನ್ನೆಲುಬನ್ನು ಕಳೆದುಕೊಳ್ಳುವುದಕ್ಕಿಂತ ನನ್ನ ವೃತ್ತಿಜೀವನವನ್ನು ಕಳೆದುಕೊಳ್ಳಲು ನಾನು ಇಷ್ಟಪಡುತ್ತೇನೆ. ಧನ್ಯವಾದಗಳು, ಬೇರೆಯವರನ್ನು ಹೆದರಿಸಿ… ಬೈ’ ಎಂದು ಸಡ್ಡು ಹೊಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us