
‘ಹನುಮಾನ್ ಅಂಶ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ದಿನದಿಂದ ದಿನಕ್ಕೆ ಸಿನಿಮಾದ ಕಲೆಕ್ಷನ್ ಹೆಚ್ಚಾಗುತ್ತಲೆ ಇದೆ. ಕೇವಲ 1.8 ರಿಂದ 2 ಕೋಟಿ ಬಜೆಟ್ನಲ್ಲಿ ನಿರ್ಮಾಣ ಮಾಡಲಾಗಿರುವ ಈ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ಗಳಿಕೆಯ ಸಮೀಪದಲ್ಲಿದೆ. ಆ ಮೂಲಕ ಈ ವರ್ಷದ ಅತ್ಯಂತ ಲಾಭದಾಯಕ ಸಿನಿಮಾ ಎನಿಸಿಕೊಂಡಿದೆ ‘ಹನುಮಾನ್ ಅಂಶ್’. ಈ ಸಿನಿಮಾ ‘ಧುರಂಧರ್ 2’ ಸಿನಿಮಾದ ದಾಖಲೆಯನ್ನೂ ಸಹ ಮುರಿದು ಮುನ್ನುಗ್ಗುತ್ತಿದೆ. ಈ ಸಿನಿಮಾಕ್ಕೆ ದಕ್ಷಿಣದ ಹಲವು ಸ್ಟಾರ್ ನಟ-ನಟಿಯರು ಬೆಂಬಲ ನೀಡಿದ್ದಾರೆ. ವಿಶೇಷವಾಗಿ ರಿಷಬ್ ಶೆಟ್ಟಿ ಅವರು ತಮ್ಮ ಸಿನಿಮಾಕ್ಕೆ ಬೆಂಬಲ ನೀಡಿದ್ದರ ಬಗ್ಗೆ ‘ಹನುಮಾನ್ ಅಂಶ್’ ಸಿನಿಮಾದ ನಿರ್ದೇಶಕ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ‘ಹನುಮಾನ್ ಅಂಶ್’ ಸಿನಿಮಾದ ನಿರ್ದೇಶಕ ವಿಶಾಲ್ ಚತುರ್ವೇಧಿ, ‘ನಾನು ಯಾರನ್ನೂ ನಮ್ಮ ಸಿನಿಮಾಕ್ಕೆ ಬೆಂಬಲ ನೀಡಿ ಎಂದು ಕೇಳಿರಲಿಲ್ಲ ಆದರೆ ಕೆಲವು ಸ್ಟಾರ್ ನಟ-ನಟಿಯರು ನಮ್ಮ ಸಿನಿಮಾಕ್ಕೆ ಬೆಂಬಲ ನೀಡಿದ್ದು ನೋಡಿ ನನಗೆ ಬಹಳ ಖುಷಿ ಆಯ್ತು. ಅದನ್ನು ನಾನು ಹನುಮಂತನ ಕೃಪೆ ಎಂದೇ ನಂಬುವೆ. ವಿವೇಕ್ ಅಗ್ನಿಹೋತ್ರಿ, ರಿಷಬ್ ಶೆಟ್ಟಿ, ಅಡವಿಶೇಷ್, ಪ್ರಣಿತಾ ಸುಭಾಷ್ ಇನ್ನೂ ಹಲವಾರು ಮಂದಿ ನಮ್ಮ ಸಿನಿಮಾಕ್ಕೆ ಬೆಂಬಲ ನೀಡಿದರು’ ಎಂದಿದ್ದಾರೆ ವಿಶಾಲ್.
ಇದನ್ನೂ ಓದಿ:‘ಹನುಮಾನ್ ಅಂಶ್’ ಬಾಕ್ಸ್ ಆಫೀಸ್ ಗಳಿಕೆ: 100 ಕೋಟಿ ಕ್ಲಬ್ ಸೇರಲು ಕೆಲವೇ ಲಕ್ಷ ಬಾಕಿ
‘ವಿವೇಕ್ ಅಗ್ನಿಹೋತ್ರಿ ನಮ್ಮ ಕುಟುಂಬದವರೇ ಹಾಗಾಗಿ ಅವರು ಬೆಂಬಲಿಸಿದ್ದು ನನಗೆ ಆಶ್ಚರ್ಯ ತರಲಿಲ್ಲ ಆದರೆ ರಿಷಬ್ ಶೆಟ್ಟಿ ಅವರು ಬೆಂಬಲ ನೀಡಿದ್ದು ಅಪಾರ ಖುಷಿ ನೀಡಿತು. ರಿಷಬ್ ಶೆಟ್ಟಿ ಸಹ ‘ಜೈ ಹನುಮಾನ್’ ಸಿನಿಮಾ ಮಾಡುತ್ತಿದ್ದಾರೆ. ಅವರು ದೈವವನ್ನು ಅನುಭವಿಸಿದ್ದಾರೆ, ಹನುಮಂತನ ಪಾತ್ರ ಮಾಡುತ್ತಾ ಅದನ್ನು ಅನುಭವಿಸುತ್ತಿದ್ದಾರೆ. ಹಾಗಾಗಿ ಆ ಹನುಮಂತನೇ ಅವರ ಮೂಲಕ ನಮ್ಮ ಸಿನಿಮಾಕ್ಕೆ ಬೆಂಬಲ ಕೊಡಿಸಿದ್ದಾರೆ ಎಂದು ನಾನು ನಂಬುತ್ತೇನೆ’ ಎಂದಿದ್ದಾರೆ ವಿಶಾಲ್ ಚತುರ್ವೇದಿ.
ತೆಲುಗಿನ ನಟ ಅಡವಿಶೇಷ್ ಸಹ ‘ಹನುಮಾನ್ ಅಂಶ್’ ಸಿನಿಮಾಕ್ಕೆ ಬೆಂಬಲ ನೀಡಿದ್ದಾರೆ. ಆ ಬಗ್ಗೆಯೂ ಮಾತನಾಡಿದ ವಿಶಾಲ್, ‘ಅಡವಿಶೇಷ್ ಅವರಿಗೆ ಹಿಂದೆ ಒಮ್ಮೆ ಕತೆ ಹೇಳಿದ್ದೆ, ಅದರಲ್ಲಿ ಸಹ ಹನುಮಂತನ ಕತೆ ಇತ್ತು. ಈಗ ಅವರು ಸಹ ನಮ್ಮ ಸಿನಿಮಾಕ್ಕೆ ಬೆಂಬಲ ನೀಡಿರುವುದು ಖುಷಿ ತಂದಿದೆ. ಪ್ರಣಿತಾ ಸುಭಾಷ್ ಅವರು ನಮ್ಮ ಸಿನಿಮಾ ಬೆಂಬಲಿಸಿದ್ದಾರೆ. ದಕ್ಷಿಣದ ಹಲವು ಸ್ಟಾರ್ ನಟ-ನಟಿಯರು ನಮ್ಮ ಸಿನಿಮಾಕ್ಕೆ ಬೆಂಬಲ ನೀಡಿರುವುದು ಹನುಮಂತನ ಕೃಪೆ ಎಂದೇ ನಾನು ಭಾವಿಸುತ್ತೇನೆ’ ಎಂದಿದ್ದಾರೆ ವಿಶಾಲ್ ಚತುರ್ವೇಧಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ