ಚೂರಿ ಇರಿತದ ಬಳಿಕ ಆಸ್ಪತ್ರೆಯಿಂದ ಸೈಫ್ ಅಲಿ ಖಾನ್ ಡಿಸ್ಚಾರ್ಜ್; ಫ್ಯಾನ್ಸ್ ನಿಟ್ಟುಸಿರು

ಚೂರಿ ಇರಿತದಲ್ಲಿ ಗಾಯಗೊಂಡಿದ್ದ ಸೈಫ್ ಅಲಿ ಖಾನ್ ಅವರು ಬಹುತೇಕ ಚೇತರಿಸಿಕೊಂಡಿದ್ದಾರೆ. ಹಾಗಾಗಿ ಅಭಿಮಾನಿಗಳು ಆತಂಕಪಡುವ ಅಗತ್ಯ ಇಲ್ಲ. ಆಸ್ಪತ್ರೆಯಿಂದ ಹೊರಬರುವಾಗ ಸೈಫ್ ಅಲಿ ಖಾನ್ ಅವರು ನಗುತ್ತಾ ಜನರ ಕಡೆಗೆ ಕೈ ಬೀಸಿದ್ದಾರೆ. ಅವರ ಮುಖದಲ್ಲಿ ನಗು ನೋಡಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.

ಚೂರಿ ಇರಿತದ ಬಳಿಕ ಆಸ್ಪತ್ರೆಯಿಂದ ಸೈಫ್ ಅಲಿ ಖಾನ್ ಡಿಸ್ಚಾರ್ಜ್; ಫ್ಯಾನ್ಸ್ ನಿಟ್ಟುಸಿರು
Saif Ali Khan

Updated on: Jan 21, 2025 | 6:05 PM

ಕೆಲವೇ ದಿನಗಳ ಹಿಂದೆ ಸೈಫ್ ಅಲಿ ಖಾನ್ ಅವರ ಅಭಿಮಾನಿಗಳಿಗೆ ಕಹಿ ಸುದ್ದಿ ಕೇಳಿಬಂದಿತ್ತು. ಜನವರಿ 16ರಂದು ಸೈಫ್ ಮನೆಗೆ ಕಳ್ಳರು ನುಗ್ಗಿದ್ದರು. ಆ ವೇಳೆ ಸೈಫ್ ಅಲಿ ಖಾನ್​ಗೆ ಚಾಕು ಹಾಕಲಾಗಿತ್ತು. ಆ ಘಟನೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು (ಜನವರಿ 21) ಸೈಫ್ ಅಲಿ ಖಾನ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅವರು ಮನೆಗೆ ಮರಳುತ್ತಿರುವ ವಿಡಿಯೋ ವೈರಲ್ ಆಗಿದೆ. ಸೈಫ್ ಅಲಿ ಖಾನ್ ಅವರ ಮನೆಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಸೈಫ್ ಅಲಿ ಖಾನ್ ಅವರಿಗೆ ಎರಡು ಮುಖ್ಯವಾದ ಸರ್ಜರಿ ಮಾಡಲಾಗಿದೆ. ಅವರ ಬೆನ್ನಿನಲ್ಲಿ ಇದ್ದ ಚಾಕು ಹೊರಗೆ ತೆಗೆಯಲಾಗಿದೆ. ಕುತ್ತಿಗೆ ಭಾಗದ ಗಾಯಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ ಎಂಬ ಮಾಹಿತಿ ಕೂಡ ಇದೆ. ಈ ಎಲ್ಲ ಚಿಕಿತ್ಸೆಗಳ ಸಲುವಾಗಿ ಸೈಫ್ ಅಲಿ ಖಾನ್ ಅವರು 5 ದಿನಗಳ ಕಾಲ ಆಸ್ಪತ್ರೆಯಲ್ಲಿ ಇದ್ದರು. ಈಗ ಅವರು ಬಹುತೇಕ ಚೇತರಿಸಿಕೊಂಡಿದ್ದು, ಮನೆಗೆ ಬಂದಿದ್ದಾರೆ.

ಚೂರಿ ಇರಿತದ ವಿವರಗಳನ್ನು ಕೇಳಿದ ಬಳಿಕ ಎಲ್ಲರಿಗೂ ಆತಂಕ ಆಗಿತ್ತು. ಸೈಫ್ ಅಲಿ ಖಾನ್ ಚೇತರಿಸಿಕೊಳ್ಳಲು ಇನ್ನೂ ಎಷ್ಟು ದಿನಗಳು ಬೇಕಾಗಬಹುದೋ ಎಂದು ಅಭಿಮಾನಿಗಳು ಚಿಂತಿಸಿದ್ದರು. ಅಲ್ಲದೇ, ಗಂಭೀರ ಸರ್ಜರಿ ಆಗಿರುವುದರಿಂದ ಅವರು ಮಾನಸಿಕವಾಗಿ ಕುಗ್ಗಿರಬಹುದು ಎಂದು ಕೂಡ ಊಹಿಸಲಾಗಿತ್ತು. ಆದರೆ ಸೈಫ್ ಅಲಿ ಖಾನ್ ಅವರು ನಗುಮುಖದೊಂದಿಗೆ ಆಸ್ಪತ್ರೆಯಿಂದ ಹೊರಗೆ ಬಂದಿದ್ದಾರೆ. ಪಾಪರಾಜಿಗಳ ಕಡೆಗೆ ಅವರು ಕೈ ಬೀಸಿದ್ದಾರೆ. ‘ಸೈಫ್ ಅವರು ಆಸ್ಪತ್ರೆಯಿಂದ ಅಲ್ಲ, ಶೂಟಿಂಗ್ ಮುಗಿಸಿ ಬಂದಂತೆ ಇದೆ’ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಸೈಫ್ ಆಸ್ಪತ್ರೆ ಸೇರಿಸಿದ ಆಟೋ ಚಾಲಕನಿ​ಗೆ ಸಿಕ್ತು ದೊಡ್ಡ ರಿವಾರ್ಡ್​

ಮುಂಬೈನ ಬಾಂದ್ರಾದಲ್ಲಿ ಇರುವ ಅಪಾರ್ಟ್​ಮೆಂಟ್​ನಲ್ಲಿ ಸೈಫ್ ಅಲಿ ಖಾನ್ ಅವರ ಕುಟುಂಬ ವಾಸವಾಗಿದೆ. ಸೆಲೆಬ್ರಿಟಿಯ ಮನೆಗೆ ಕಳ್ಳರು ನುಗ್ಗಿ ಈ ರೀತಿ ಅಟ್ಯಾಕ್ ಮಾಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಘಟನೆ ನಡೆದ ಬಳಿಕ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದರು. ಆತ ಬಾಂಗ್ಲಾದೇಶ ಮೂಲದವನು ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಪೂರ್ತಿ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಹೊರಬೀಳಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us