ಗುಂಡಿನ ದಾಳಿ ಪ್ರಕರಣದಲ್ಲಿ ಸಲ್ಮಾನ್​ ಖಾನ್​ ಹೇಳಿಕೆ ದಾಖಲಿಸಿಕೊಂಡ ಪೊಲೀಸರು

ಸಲ್ಮಾನ್​ ಖಾನ್​ ಅವರು ಸಖತ್​ ಬ್ಯುಸಿ ನಟ. ಈಗ ಅವರು ‘ಸಿಕಂದರ್​’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಗುಂಡಿನ ದಾಳಿ ನಂತರ ಭದ್ರತೆ ಹೆಚ್ಚಿಸಿಕೊಂಡು ಅವರು ತಿರುಗಾಡುತ್ತಿದ್ದಾರೆ. ‘ಸಿಕಂದರ್​’ ಸಿನಿಮಾದ ಕೆಲಸಗಳ ಕಾರಣದಿಂದ ಅವರಿಗೆ ಈಗ ‘ಬಿಗ್​ ಬಾಸ್​ ಒಟಿಟಿ 3’ ಶೋ ನಡೆಸಿಕೊಡಲು ಸಾಧ್ಯವಾಗುತ್ತಿಲ್ಲ. ಅವರ ಬದಲಿಗೆ ಅನಿಲ್​ ಕಪೂರ್​ ಅವರು ನಿರೂಪಕರಾಗಿದ್ದಾರೆ.

ಗುಂಡಿನ ದಾಳಿ ಪ್ರಕರಣದಲ್ಲಿ ಸಲ್ಮಾನ್​ ಖಾನ್​ ಹೇಳಿಕೆ ದಾಖಲಿಸಿಕೊಂಡ ಪೊಲೀಸರು
ಸಲ್ಮಾನ್​ ಖಾನ್​

Updated on: Jun 12, 2024 | 10:14 PM

ಬಾಲಿವುಡ್​ ನಟ ಸಲ್ಮಾನ್​ ಖಾನ್​ (Salman Khan) ಅವರ ಬಾಂದ್ರಾ ನಿವಾಸದ ಮುಂದೆ ನಡೆದ ಗುಂಡಿನ ದಾಳಿ ಪ್ರಕರಣದ ತನಿಖೆ ನಡೆಯುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಮುಂಬೈ ಕ್ರೈಂ ಬ್ರ್ಯಾಂಚ್​​ (Mumbai Crime Branch) ಪೊಲೀಸರು ಸಲ್ಮಾನ್​ ಖಾನ್​ ಅವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಅಲ್ಲದೇ, ಸಲ್ಮಾನ್​ ಖಾನ್​ ಅವರ ಸಹೋದರ ಅರ್ಬಾಜ್​ ಖಾನ್​ ಹೇಳಿಕೆಯನ್ನೂ ಜೂನ್​ 4ರಂದು ದಾಖಲಿಸಿಕೊಳ್ಳಲಾಗಿದೆ. ಸಲ್ಮಾನ್​ ಖಾನ್​ ಕುಟುಂಬ (Salman Khan Family) ವಾಸವಾಗಿರುವ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್​ಮೆಂಟ್​ ಮೇಲೆ ಏಪ್ರಿಲ್​ 14ರಂದು ಕಿಡಿಗೇಡಿಗಳು ಗುಂಡು ಹಾರಿಸಿದ್ದರು.

ಸಲ್ಮಾನ್​ ಖಾನ್​ ಮನೆಯ ಮೇಲೆ ಶೂಟೌಟ್​ ಆಗಾದ ಅಭಿಮಾನಿಗಳಿಗೆ ಆತಂಕ ಆಗಿತ್ತು. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಗುಂಡಿನ ದಾಳಿಗೆ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯ್​ ನಂಟು ಇರುವುದು ಬೆಳಕಿಗೆ ಬಂತು. ಆ ಬಳಿಕ ಮುಂಬೈ ಪೊಲೀಸರು ತನಿಖೆ ಚುರುಕುಗೊಳಿಸಿದರು. ಈ ಗುಂಡಿನ ದಾಳಿ ನಡೆಸಿದ ಕಿಡಿಗೇಡಿಗಳು 3 ಲಕ್ಷ ರೂಪಾಯಿ ಪಡೆದಿದ್ದರು ಎನ್ನಲಾಗಿದೆ.

ಶೂಟರ್​ಗಳಿಗೆ ಪ್ರೇರಣೆ ನೀಡುವಲ್ಲಿ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯ್​ನ ಸಹೋದರ ಅನ್ಮೋಲ್​ ಬಿಷ್ಣೋಯ್​ ಮುಖ್ಯ ಪಾತ್ರ ವಹಿಸಿದ್ದಾನೆ ಎಂದು ಈ ಮೊದಲು ಪೊಲೀಸರು ಹೇಳಿದ್ದರು. ಮಾರ್ಚ್​ 15ರಂದು ಪನ್ವೇಲ್​ನಲ್ಲಿ ಮಾರಕಾಸ್ತ್ರಗಳನ್ನು ಪಡೆದ ನಂತರ ಆತ ಈ ಶೂಟರ್​ಗಳಿಗೆ ದಾಳಿಯ ಆದೇಶ ನೀಡಿದ್ದ ಎನ್ನಲಾಗಿದೆ. ಶೂಟೌಟ್​ ಘಟನೆ ಬಳಿಕ ಸಲ್ಮಾನ್​ ಖಾನ್​ ಕುಟುಂಬದವರು ಹೇಳಿಕೆ ಬಿಡುಗಡೆ ಮಾಡಿದ್ದರು.

ಇದನ್ನೂ ಓದಿ: ‘ನನ್ನ ಮದುವೆ ಆಗ್ತೀಯಾ’: ಈ ನಟಿಗೆ ಪ್ರಪೋಸ್​ ಮಾಡಿದ್ದರು ಸಲ್ಮಾನ್​ ಖಾನ್​

‘ಬೈಕ್​ನಲ್ಲಿ ಬಂದ ಇಬ್ಬರು ಅಪರಿಚಿತರು ಸಲೀಂ ಖಾನ್​ ಕುಟುಂಬದ ಮನೆಯಾದ ಗ್ಯಾಲಕ್ಸಿ ಅಪಾರ್ಟ್​ಮೆಂಟ್​ ಮೇಲೆ ಗುಂಡಿನ ದಾಳಿ ನಡೆಸಿದ್ದು ಆಘಾತಕಾರಿ ಸಂಗತಿ. ಈ ಘಟನೆಯಿಂದ ನಮ್ಮ ಫ್ಯಾಮಿಲಿಗೆ ಆತಂಕವಾಗಿದೆ. ದುರದೃಷ್ಟಕರ ವಿಷಯ ಏನೆಂದರೆ, ಕೆಲವರು ನಮ್ಮ ಕುಟುಂಬದ ಆಪ್ತರೆಂದು ಹೇಳಿಕೊಂಡು ಮಾಧ್ಯಮಗಳಲ್ಲಿ ಲಘುವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಘಟನೆ ಒಂದು ಪ್ರಚಾರದ ಗಿಮಿಕ್​ ಹಾಗೂ ಇದರಿಂದ ಸಲ್ಮಾನ್​ ಖಾನ್​ ಕುಟುಂಬದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಅಂತೆಲ್ಲ ಹೇಳಿದ್ದಾರೆ. ಆದರೆ ಅದು ನಿಜವಲ್ಲ. ಅಂಥವರ ಮಾತನ್ನು ಗಂಭೀರವಾಗಿ ಪರಿಗಣಿಸಬಾರದು’ ಎಂದು ಸಲ್ಮಾನ್​ ಖಾನ್​ ಅವರ ಕುಟುಂಬದವರು ಹೇಳಿಕೆ ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us