ಸಲ್ಲು ಮನೆಯೆ ಮೇಲೆ ಗುಂಡು ಹಾರಿಸಿ ಸಿನಿಮೀಯ ರೀತಿಯಲ್ಲಿ ಗುಜರಾತ್ ಸೇರಿದ್ದ ಶೂಟರ್​ಗಳು

ಸಲ್ಮಾನ್ ಖಾನ್ ಮನೆಯ ಮೇಲೆ ದಾಳಿ ಮಾಡಿದವರು ಸಿನಿಮಾ ರೀತಿಯಲ್ಲಿ ಪರಾರಿ ಆಗಿದ್ದರು. ಇದು ಅವರ ಹ್ಯಾಂಡ್ಲರ್​ಗಳ ಸೂಚನೆ ಇರಬಹುದು ಅಥವಾ ನಗರಕ್ಕೆ ಹೊಸಬರು ಅನ್ನೋ ಕಾರಣಕ್ಕೆ ಈ ರೀತಿ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅವರು ಗುಜರಾತ್ ಸೇರಿದ್ದು ಹೇಗೆ ಎನ್ನುವ ಬಗ್ಗೆ ಇಲ್ಲಿದೆ ವಿವರ.

ಸಲ್ಲು ಮನೆಯೆ ಮೇಲೆ ಗುಂಡು ಹಾರಿಸಿ ಸಿನಿಮೀಯ ರೀತಿಯಲ್ಲಿ ಗುಜರಾತ್ ಸೇರಿದ್ದ ಶೂಟರ್​ಗಳು
ಸಲ್ಮಾನ್ ಖಾನ್

Updated on: Apr 17, 2024 | 8:24 AM

ನಟ ಸಲ್ಮಾನ್ ಖಾನ್ (Salman Khan) ಮನೆಯ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಇಬ್ಬರ ಬಂಧನ ಆಗಿದೆ. ಮುಂಬೈ ಕ್ರೈಮ್ ಬ್ರ್ಯಾಂಚ್ ಅಧಿಕಾರಿಗಳು ಗುಜರಾತ್​ನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ. ಬಂಧಿತ ಇಬ್ಬರೂ ಮುಂಬೈನಿಂದ ಗುಜರಾತ್​ಗೆ ಸಿನಿಮೀಯ ಶೈಲಿಯಲ್ಲಿ ಪಾರಾಗಿದ್ದರು ಎಂದು ವರದಿ ಆಗಿದೆ. ಇವರು, ಆಟೋ, ಲೋಕಲ್ ಟ್ರೇನ್, ಟ್ರೇನ್, ಬಸ್ ಹೀಗೆ ಹಲವು ಸಾರಿಗೆ ವ್ಯವಸ್ಥೆ ಮೂಲಕ ಗುಜರಾತ್ ತಲುಪಿದ್ದರು.

ಸಿನಿಮಾಗಳಲ್ಲಿ ಕೊಲೆ ಅಥವಾ ಸುಲಿಗೆಯ ದೃಶ್ಯ ಇದ್ದರೆ ಇದನ್ನು ಮಾಡಿದವರು ತಪ್ಪಿಸಿಕೊಳ್ಳಲು ನಾನಾ ಮಾರ್ಗ ಅನುಸರಿಸೋದನ್ನು ತೋರಿಸಲಾಗುತ್ತದೆ. ಸಲ್ಲು ಮನೆ ಮೇಲೆ ದಾಳಿ ಮಾಡಿದವರು ಕೂಡ ಇದೇ ರೀತಿ ಮಾಡಿದ್ದರು. ಇದು ಅವರ ಹ್ಯಾಂಡ್ಲರ್​ಗಳ ಸೂಚನೆ ಇರಬಹುದು ಅಥವಾ ನಗರಕ್ಕೆ ಹೊಸಬರು ಅನ್ನೋ ಕಾರಣಕ್ಕೆ ಈ ರೀತಿ ಮಾಡಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

ಬಂಧಿತ ಇಬ್ಬರೂ ತನಿಖೆಯ ದಿಕ್ಕನ್ನು ತಪ್ಪಿಸುವ ಪ್ರಯತ್ನದಲ್ಲಿದ್ದರು. ಈ ಕಾರಣಕ್ಕೆ ಗುಜರಾತ್​ನ ಕಚ್​ಗೆ ಪರಾರಿ ಆಗಿದ್ದರು. ಸಲ್ಮಾನ್ ಖಾನ್ ಮನೆ ಮೇಲೆ ದಾಳಿ ಮಾಡಿದ ಬಳಿಕ ಇವರು ಚರ್ಚ್ ಒಂದರ ಬಳಿ ಬೈಕ್ ನಿಲ್ಲಿಸಿದರು. ಅಲ್ಲಿಂದ ರಿಕ್ಷಾ ಹಿಡಿದು ಬಾಂದ್ರಾ ರೈಲ್ವೆ ನಿಲ್ದಾಣಕ್ಕೆ ಬಂದರು. ನಂತರ ಅವರು ಲೋಕಲ್ ಟ್ರೇನ್ ಹಿಡಿದು ಸಂತಾಕ್ರೂಜ್ ರೈಲ್ವೆ ನಿಲ್ದಾಣಕ್ಕೆ ತೆರಳಿದರು.

ಇದನ್ನೂ ಓದಿ: ಸಲ್ಲು ಮನೆ ಮೇಲೆ ಗುಂಡು ಹಾರಿಸಿದವರು ಗುಜರಾತ್​ನಲ್ಲಿ ಅರೆಸ್ಟ್; ಎರಡು ತಿಂಗಳ ಹಿಂದೆ ನಡೆದಿತ್ತು ಪ್ಲ್ಯಾನ್

ಅಲ್ಲಿಂದ ಇಬ್ಬರೂ ವೆಸ್ಟರ್ನ್ ಎಕ್ರಸ್​ಪ್ರೆಸ್ ಹೈವೇ ಕಡೆ ನಡೆದೇ ಸಾಗಿದರು. ಅಲ್ಲಿ ಅವರು ಟಿ-ಶರ್ಟ್ ಬದಲಿಸಿಕೊಂಡರು. ಮತ್ತೆ ಆಟೋ ಹಿಡಿದ ಅವರು ದಾಹಿಸರ್ ಕಡೆ ಹೊರಟರು. ಆಟೋ ಇಳಿದ ಬಳಿಕ ಖಾಸಗಿ ಕಾರಿನಲ್ಲಿ ಸೂರತ್ ತೆರಳಿದರು. ಈ ವೇಳೆ ತಮ್ಮ ಬಳಿ ಇದ್ದ ಪಿಸ್ತೂಲ್​ನ ಅವರು ನೀರಿನಲ್ಲಿ ಎಸೆದಿದ್ದರು. ನಂತರ ಸೂರತ್ ರೈಲ್ವೆ ನಿಲ್ದಾಣಕ್ಕೆ ತೆರಳಿದರು. ಆದರೆ, ಗುಜರಾತ್​ನ ಬುಜ್​ಗೆ ಯಾವುದೇ ರೈಲು ಸಿಕ್ಕಿಲ್ಲ. ಹೀಗಾಗಿ ಸರ್ಕಾರಿ ಬಸ್​ನಲ್ಲಿ ಅಹ್ಮದಾಬಾದ್​ಗೆ ಹೋದರು. ನಂತರ ಅಲ್ಲಿಂದ ಮತ್ತೊಂದು ಬಸ್ ಏರಿ ಕಚ್ ಜಿಲ್ಲೆಗೆ ಹೋದರು. ಅಲ್ಲಿ ದೇವಸ್ಥಾನ ಒಂದರಲ್ಲಿ ಅಡಗಿ ಕುಳಿತಿದ್ದರು. ಅಲ್ಲಿ ಅವರ ಬಂಧನ ಮಾಡಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us