ಮರಾಠಿಯಲ್ಲಿ ಮಾತನಾಡಿ ಎಂದು ಒತ್ತಾಯಿಸಿದ ಸಚಿವರಿಗೆ ಟಕ್ಕರ್ ಕೊಟ್ಟ ಸಂಜಯ್ ದತ್

ಮರಾಠಿಯಲ್ಲಿ ಮಾತನಾಡಲು ಸಂಜಯ್ ದತ್ ಅವರು ನಿರಾಕರಿಸಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ‘ಮುಂಬೈನಲ್ಲಿ 50 ವರ್ಷಗಳಿಗಿಂತಲೂ ಹೆಚ್ಚು ಕಾಲ ವಾಸವಾಗಿದ್ದರೂ ಮತ್ತು 6 ವರ್ಷ ಜೈಲಿನಲ್ಲಿದ್ದರೂ ಮರಾಠಿ ಕಲಿಯದಿರುವುದು ಹೆಮ್ಮೆಯ ವಿಷಯವಲ್ಲ’ ಎಂದು ಹಲವು ನೆಟ್ಟಿಗರು ಸಂಜಯ್ ದತ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮರಾಠಿಯಲ್ಲಿ ಮಾತನಾಡಿ ಎಂದು ಒತ್ತಾಯಿಸಿದ ಸಚಿವರಿಗೆ ಟಕ್ಕರ್ ಕೊಟ್ಟ ಸಂಜಯ್ ದತ್
Sanjay Dutt
Image Credit source: X/@AMIT_GUJJU

Updated on: Sep 07, 2026 | 9:50 PM

ನಟ ಸಂಜಯ್ ದತ್ ಅವರು ಈಗ ಮರಾಠಿ ಭಾಷೆಗೆ ಸಂಬಂಧಿಸಿದ ಹೊಸ ಕಾರಣದಿಂದ ಚರ್ಚೆಯಲ್ಲಿದ್ದಾರೆ. ಮುಂಬೈನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅವರು ಭಾಗವಹಿಸಿದ್ದಾರೆ. ಅವರ ಜೊತೆ ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಕೂಡ ವೇದಿಕೆ ಹಂಚಿಕೊಂಡಿದ್ದಾರೆ. ಈ ವೇಳೆ ‘ಮರಾಠಿಯಲ್ಲಿ ಮಾತನಾಡಿ’ ಎಂದು ಸಚಿವರು ಕೋರಿದಾಗ, ಸಂಜಯ್ ದತ್ ಅವರು ತಮ್ಮದೇ ಶೈಲಿಯಲ್ಲಿ ತಮಾಷೆ ಮಾಡುತ್ತಾ ವಿಷಯವನ್ನು ಬೇರೆಡೆಗೆ ತಿರುಗಿಸಿದ ಘಟನೆ ನಡೆದಿದೆ.

ಸಮಾರಂಭದಲ್ಲಿ ವೇದಿಕೆ ಮೇಲೆ ನಿಂತಿದ್ದ ಸಚಿವ ಪ್ರತಾಪ್ ಸರ್ನಾಯಕ್, ‘ನಾನು ಇತ್ತೀಚೆಗೆ ಎಲ್ಲರಿಗೂ ಮರಾಠಿ ಕಲಿಸುತ್ತಿದ್ದೇನೆ. ಸಂಜಯ್ ದತ್ ಅವರು ಹಿಂದಿಯಲ್ಲಿ ಮಾತನಾಡುತ್ತಾರೆ, ಆದರೆ ನಮಗೆಲ್ಲರಿಗೂ ಮರಾಠಿ ಅರ್ಥವಾಗುತ್ತದೆ. ಹಾಗಾಗಿ ಸಂಜಯ್ ದತ್ ಅವರು ಮರಾಠಿಯಲ್ಲಿ ಮಾತನಾಡಲಿ’ ಎಂದು ಮೈಕ್‌ನಲ್ಲಿ ಕೋರಿದರು. ಮುಂಬೈನ ಆಟೋ ಚಾಲಕರಿಗೆ ಮರಾಠಿ ಭಾಷೆಯ ಜ್ಞಾನ ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಹೊರಡಿಸಿದ್ದ ಆದೇಶದ ಹಿನ್ನೆಲೆಯಲ್ಲಿ ಸಚಿವರು ಈ ಮಾತುಗಳನ್ನು ಆಡಿದ್ದರು.

ಯರವಾಡ ಜೈಲಿನ ಪ್ರಸಂಗ ನೆನಪಿಸಿಕೊಂಡ ಸಂಜಯ್ ದತ್:

ಸಚಿವರ ಕೋರಿಕೆಗೆ ತಕ್ಷಣವೇ ಮೈಕ್ ಕೈಗೆತ್ತಿಕೊಂಡ ಸಂಜಯ್ ದತ್, ‘ಪ್ರತಾಪ್ ಭಾಯ್, ನಾನು ಯರವಾಡ ಜೈಲಿನಲ್ಲಿ 6 ವರ್ಷಗಳ ಕಾಲ ಇದ್ದೆ. ಅಲ್ಲಿಯೂ ನನಗೆ ಮರಾಠಿ ಕಲಿಯಲು ಸಾಧ್ಯವಾಗಲಿಲ್ಲ, ಸ್ವಲ್ಪ ಮಾತ್ರ ಕಲಿತಿದ್ದೆ’ ಎಂದು ತಮಾಷೆಯಾಗಿ ಉತ್ತರಿಸಿದರು. ಅವರು ಆ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಯಾರೂ ಕೂಡ ನಿರೀಕ್ಷೆ ಮಾಡಿರಲಿಲ್ಲ.

ವೈರಲ್ ವಿಡಿಯೋ:

ಬಳಿಕ ಸಚಿವರ ಹೆಗಲ ಮೇಲೆ ಕೈಹಾಕಿದ ಸಂಜಯ್ ದತ್, ‘ನಮ್ಮಿಬ್ಬರದ್ದು 25 ವರ್ಷಗಳ ಹಳೆಯ ಸ್ನೇಹ. ನನ್ನನ್ನು ಇಲ್ಲಿಗೆ ಆಹ್ವಾನಿಸಿದ್ದಕ್ಕೆ ಪ್ರತಾಪ್ ಭಾಯ್‌ಗೆ ಧನ್ಯವಾದಗಳು’ ಎಂದು ಹೇಳಿ ಭಾಷೆಯ ವಿಷಯದಿಂದ ಜಾರಿಕೊಂಡರು. ಅಲ್ಲದೇ ‘ಎಲ್ಲರಿಗೂ ನಮಸ್ಕಾರ’ ಎಂಬುದನ್ನು ಮಾತ್ರ ಅವರು ಮರಾಠಿಯಲ್ಲಿ ಹೇಳಿದರು. ಈ ಸಂದರ್ಭದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಸಂಜಯ್ ದತ್ ಹೊಸ ಸಿನಿಮಾ; ‘ಖಳನಾಯಕ್ ರಿಟರ್ನ್ಸ್’ ಫಸ್ಟ್ ಲುಕ್ ಟೀಸರ್ ಬಿಡುಗಡೆ

ಸಂಜಯ್ ದತ್ ವಿಡಿಯೋಗೆ ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ:

ಸಂಜಯ್ ದತ್ ಅವರ ಈ ಚಾಣಾಕ್ಷ ಉತ್ತರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ‘ಸಚಿವರ ಸಮ್ಮುಖದಲ್ಲೇ ಈ ರೀತಿ ಸಮಯಪ್ರಜ್ಞೆಯಿಂದ ವಿಷಯವನ್ನು ಬದಲಾಯಿಸಲು ಸಂಜಯ್ ದತ್‌ ಅವರಿಂದ ಮಾತ್ರ ಸಾಧ್ಯ’ ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು, ‘ಆಟೋ ಚಾಲಕರಿಗೆ ನಿಯಮ ಕಡ್ಡಾಯ ಮಾಡುವ ಸರ್ಕಾರ, ಗಣ್ಯ ವ್ಯಕ್ತಿಗಳಿಗೆ ವಿನಾಯಿತಿ ನೀಡುತ್ತದೆಯೇ?’ ಎಂದು ಪ್ರಶ್ನಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us