ರಸ್ತೆ ಅಪಘಾತದಲ್ಲಿ ಸುಶಾಂತ್​ ಕುಟುಂಬದ 6 ಮಂದಿ ನಿಧನ; ಇನ್ನೂ 4 ಜನರ ಸ್ಥಿತಿ ಗಂಭೀರ

| Updated By: ಮದನ್​ ಕುಮಾರ್​

Updated on: Nov 16, 2021 | 4:13 PM

Sushant Singh Rajput: ಸುಶಾಂತ್​ ಸಿಂಗ್​ ರಜಪೂತ್​ ಕುಟುಂಬದ ಸದಸ್ಯರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಒಳಗಾಗಿದೆ. ಸ್ಥಳದಲ್ಲೇ 6 ಮಂದಿ ಅಸುನೀಗಿದ್ದಾರೆ.

ರಸ್ತೆ ಅಪಘಾತದಲ್ಲಿ ಸುಶಾಂತ್​ ಕುಟುಂಬದ 6 ಮಂದಿ ನಿಧನ; ಇನ್ನೂ 4 ಜನರ ಸ್ಥಿತಿ ಗಂಭೀರ
ಸುಶಾಂತ್​ ಸಿಂಗ್​ ರಜಪೂತ್​
Follow us on

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ (Sushant Singh Rajput) ಅವರ ಕುಟುಂಬದ 6 ಮಂದಿ ರಸ್ತೆ ಅಪಘಾತದಲ್ಲಿ (Road Accident) ನಿಧನರಾಗಿದ್ದಾರೆ. ಮಂಗಳವಾರ (ನ.16) ಬೆಳಗ್ಗೆ ಈ ಭೀಕರ ಆ್ಯಕ್ಸಿಡೆಂಟ್​ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿರುವ 4 ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯಿಂದ ಸುಶಾಂತ್​ ಅಭಿಮಾನಿಗಳಿಗೆ ತೀವ್ರ ಆಘಾತ ಆಗಿದೆ. ಬಿಹಾರದ ಲಖಿಸರಾಯ್​ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 333ರಲ್ಲಿ ಈ ಅಪಘಾತ ಸಂಭವಿಸಿದೆ. ಸುಶಾಂತ್​ ಕುಟುಂಬದ ಸದಸ್ಯರು (Sushant Singh Rajput Family) ಸೇರಿ ಒಟ್ಟು 10 ಮಂದಿ ಪ್ರಯಾಣಿಸಿದ್ದ ಕಾರು ಮತ್ತು ಟ್ರಕ್​​ ನಡುವೆ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ 6 ಮಂದಿ ಮೃತಪಟ್ಟಿದ್ದಾರೆ.

ಅಂತ್ಯಸಂಸ್ಕಾರ ಮುಗಿಸಿ ಬರುತ್ತಿದ್ದರು!

ಸುಶಾಂತ್​ ಸಿಂಗ್​ ರಜಪೂತ್​ ಅವರ ಭಾವ ಒ.ಪಿ. ಸಿಂಗ್​ ಅವರ ಸಹೋದರಿ ನಿಧನರಾಗಿದ್ದರು. ಅವರ ಅಂತಿಮ ಸಂಸ್ಕಾರವನ್ನು ಮುಗಿಸಿದ ಬಳಿಕ ಕುಟುಂಬದವರೆಲ್ಲ ಪಾಟ್ನಾದಿಂದ ಹಿಂದಿರುಗುತ್ತಿದ್ದರು. ಈ ವೇಳೆ ರಸ್ತೆ ಅಪಘಾತ ಸಂಭವಿಸಿರುವುದು ವಿಷಾದನೀಯ. ‘ಟ್ರಕ್​ ಮತ್ತು ಕಾರಿನ ನಡುವೆ ಭೀಕರವಾಗಿ ಡಿಕ್ಕಿ ಆಗಿದೆ. ಗಾಯಾಳುಗಳ ಸ್ಥಿತಿ ಚಿಂತಾಜನಕ ಆಗಿದೆ’ ಎಂದು ಘಟನೆ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

6 ಮಂದಿಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಲಖಿಸರಾಯ್​ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಬಾಲಮುಕುಂದ್​ ಸಿಂಗ್​ ಮತ್ತು ದಿಲ್​ ಖುಷ್​ ಸಿಂಗ್​ ಅವರನ್ನು ಪಾಟ್ನಾಗೆ ಕಳಿಸಿ ಹೆಚ್ಚುವರಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನಿಬ್ಬರಿಗೆ ಲಖಿಸರಾಯ್​ ಜಿಲ್ಲಾ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ. ಮೃತರನ್ನು ಬಾಬಿ ದೇವಿ, ಅನಿತಾ ದೇವಿ, ಲಾಲ್​ಜಿತ್​ ಸಿಂಗ್​, ಅಮಿತ್​ ಶೇಖರ್​, ರಾಮಚಂದ್ರ ಸಿಂಗ್​ ಹಾಗೂ ಚಾಲಕ ಪ್ರೀತಂ ಎಂದು ಗುರುತಿಸಲಾಗಿದೆ.

ನಿಗೂಢವಾಗಿ ಸಾವನ್ನಪ್ಪಿದ್ದ ಸುಶಾಂತ್​:

ಸುಶಾಂತ್​ ಸಿಂಗ್​ ರಜಪೂತ್​ ಅವರು ಬಾಲಿವುಡ್​ನಲ್ಲಿ ಮಿಂಚುತ್ತಿರುವಾಗಲೇ ಇಹಲೋಕ ತ್ಯಜಿಸಿದ್ದು ನೋವಿನ ಸಂಗತಿ. 2020ರ ಜೂ.14ರಂದು ಮುಂಬೈನ ಅಪಾರ್ಟ್​ಮೆಂಟ್​ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆ ಆಗಿತ್ತು. ಅವರ ನಿಧನದ ಬಗ್ಗೆ ಈಗಲೂ ಅನುಮಾನ ಇದೆ. ಅವರದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಪ್ರಶ್ನೆಗೆ ಇನ್ನೂ ಸರಿಯಾದ ಉತ್ತರ ಸಿಕ್ಕಿಲ್ಲ. ಸುಶಾಂತ್​ ಸಾವಿಗೆ ನ್ಯಾಯ ಸಿಗಬೇಕು ಎಂದು ಅಭಿಮಾನಿಗಳು ಇಂದಿಗೂ ಸೋಶಿಯಲ್​ ಮೀಡಿಯಾದಲ್ಲಿ ಅಭಿಯಾನ ನಡೆಸುತ್ತಿದ್ದಾರೆ. ಸುಶಾಂತ್​ ನಿಧನದ ನೋವು ಇನ್ನೂ ಹಸಿಯಾಗಿ ಇರುವಾಗಲೇ ಅವರ ಕುಟುಂಬದ 6 ಮಂದಿ ಭೀಕರ ರಸ್ತೆ ಅಪಘಾತದಲ್ಲಿ ಮೃತರಾಗಿರುವುದು ಅಭಿಮಾನಿಗಳಿಗೆ ತೀವ್ರ ಆಘಾತ ಮಾಡಿದೆ.

ಇದನ್ನೂ ಓದಿ:

ಸುಶಾಂತ್​ ಮತ್ತು ಸಿದ್ದಾರ್ಥ್​ ಶುಕ್ಲಾ ಸಾವಿನ ನಡುವೆ ಹಲವು ಹೋಲಿಕೆ; ಧ್ವನಿ ಎತ್ತಿದ ನೆಟ್ಟಿಗರು

ಸುಶಾಂತ್​ ಸಿಂಗ್ ಸಾವಿನ​ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ? ಆರ್​ಟಿಐ ಅಡಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಬಿಐ

Published On - 3:34 pm, Tue, 16 November 21