Saif Ali Khan: ‘ಆದಿಪುರುಷ್​’ ಚಿತ್ರದ ಪ್ರಚಾರದಿಂದ ದೂರ ಉಳಿದುಕೊಂಡ ಸೈಫ್​ ಅಲಿ ಖಾನ್​; ಈ ನಿರ್ಧಾರಕ್ಕೆ ಕಾರಣ ಏನು?

|

Updated on: Jun 11, 2023 | 10:14 AM

Adipurush Movie: ಎಲ್ಲರಿಗೂ ತಿಳಿದಿರುವಂತೆ ಇದು ರಾಮಾಯಣದ ಕಥೆ ಆಧಾರಿತ ಸಿನಿಮಾ. ಎಲ್ಲ ವೇದಿಕೆಯಲ್ಲೂ ‘ಜೈ ಶ್ರೀರಾಮ್​’ ಎಂದು ಪ್ರಚಾರ ಮಾಡಲಾಗುತ್ತಿದೆ.

Saif Ali Khan: ‘ಆದಿಪುರುಷ್​’ ಚಿತ್ರದ ಪ್ರಚಾರದಿಂದ ದೂರ ಉಳಿದುಕೊಂಡ ಸೈಫ್​ ಅಲಿ ಖಾನ್​; ಈ ನಿರ್ಧಾರಕ್ಕೆ ಕಾರಣ ಏನು?
ಸೈಫ್​ ಅಲಿ ಖಾನ್​
Follow us on

ನಟ ಸೈಫ್​ ಅಲಿ ಖಾನ್​ ಅವರು ಬಾಲಿವುಡ್​ನಲ್ಲಿ ಬಹುಬೇಡಿಕೆಯ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಅನೇಕ ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಈಗ ಬಿಡುಗಡೆಗೆ ಸಜ್ಜಾಗಿರುವ ‘ಆದಿಪುರುಷ್​’ (Adipurush) ಸಿನಿಮಾದಲ್ಲಿ ಅವರಿಗೆ ರಾವಣನ ಪಾತ್ರ ನೀಡಲಾಗಿದೆ. ರಾಮನಾಗಿ ಪ್ರಭಾಸ್​ (Prabhas) ಅಭಿನಯಿಸಿದ್ದಾರೆ. ಸೀತೆ ಪಾತ್ರದಲ್ಲಿ ಕೃತಿ ಸನೋನ್​, ಲಕ್ಷ್ಮಣನಾಗಿ ಸನ್ನಿ ಸಿಂಗ್​, ಆಂಜನೇಯನ ಪಾತ್ರದಲ್ಲಿ ದೇವದತ್ತ ನಾಗೆ ನಟಿಸಿದ್ದಾರೆ. ಎಲ್ಲರೂ ವಿವಿಧ ನಗರಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಸೈಫ್​ ಅಲಿ ಖಾನ್​ (Saif Ali Khan) ಮಾತ್ರ ಪ್ರಚಾರದಿಂದ ದೂರ ಉಳಿದುಕೊಂಡಿದ್ದಾರೆ. ಯಾಕೆ ಹೀಗೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಹಲವು ಬಗೆಯ ಚರ್ಚೆ ನಡೆಯುತ್ತಿದೆ.

ಸೈಫ್​ ಅಲಿ ಖಾನ್​ ಕುರಿತಂತೆ ಈಗಾಗಲೇ ಅನೇಕ ವಿವಾದಗಳು ಆಗಿವೆ. ಯಾವುದೇ ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ವಿವಾದ ಭುಗಿಲೆದ್ದರೆ ಚಿತ್ರದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮೇಲೆ ಪೆಟ್ಟು ಬೀಳುತ್ತದೆ. ಕೆಲವು ಸಂದರ್ಶನಗಳಲ್ಲಿ ಸೈಫ್​ ಅಲಿ ಖಾನ್​ ಅವರು ನೇರವಾಗಿ ಮಾತನಾಡಿದ್ದುಂಟು. ಅದನ್ನು ಎಲ್ಲರೂ ಮುಕ್ತವಾಗಿ ಸ್ವೀಕರಿಸುವುದಿಲ್ಲ. ‘ಆದಿಪುರುಷ್​’ ವಿಚಾರದಲ್ಲಿ ಆ ಕಿರಿಕ್​ ಬೇಡಬೇ ಬೇಡ ಎಂಬ ಕಾರಣಕ್ಕೆ ಅವರು ಚಿತ್ರದ ಪ್ರಚಾರ ಕಾರ್ಯದಿಂದ ದೂರ ಉಳಿದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Saif Ali Khan: ರಾವಣನ ಗೆಟಪ್​ನಲ್ಲಿ ಅಂದು ಟ್ರೋಲ್​ ಆಗಿದ್ದ ಸೈಫ್​ ಅಲಿ ಖಾನ್​ ಈಗ ಹೇಗೆ ಕಾಣ್ತಿದ್ದಾರೆ ನೋಡಿ..

ಎಲ್ಲರಿಗೂ ತಿಳಿದಿರುವಂತೆ ಇದು ರಾಮಾಯಣದ ಕಥೆ ಆಧಾರಿತ ಸಿನಿಮಾ. ಎಲ್ಲ ವೇದಿಕೆಯಲ್ಲೂ ‘ಜೈ ಶ್ರೀರಾಮ್​’ ಎಂದು ಪ್ರಚಾರ ಮಾಡಲಾಗುತ್ತಿದೆ. ಇಡೀ ಚಿತ್ರತಂಡವೇ ರಾಮನಿಗೆ ಜೈಕಾರ ಹಾಕುವಾಗ ಸೈಫ್​ ಅಲಿ ಖಾನ್​ ಮಾತ್ರ ಸುಮ್ಮನಿದ್ದರೆ ಅದು ಖಂಡಿತಾ ಟ್ರೋಲ್​ ಆಗುತ್ತದೆ. ಇಂಥ ಮುಜುಗರದ ಸಂಗತಿಗಳನ್ನು ತಪ್ಪಿಸುವ ಸಲುವಾಗಿ ಸೈಫ್​ ಅಲಿ ಖಾನ್​ ಅವರು ಚಿತ್ರದ ಪ್ರೊಮೋಷನ್​ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದು ಕೂಡ ಊಹಿಸಲಾಗುತ್ತಿದೆ.

ಇದನ್ನೂ ಓದಿ: Ibrahim Ali Khan: ಸದ್ದಿಲ್ಲದೇ ಮೊದಲ ಚಿತ್ರದ ಶೂಟಿಂಗ್​ ಮುಗಿಸಿದ ಸೈಫ್​ ಅಲಿ ಖಾನ್​ ಮಗ; ಗುಟ್ಟು​ ಬಹಿರಂಗ ಮಾಡಿದ ಸಾರಾ

‘ಆದಿಪುರುಷ್​’ ಸಿನಿಮಾ ಜೂನ್​ 16ರಂದು ಬಿಡುಗಡೆ ಆಗಲಿದೆ. ಈ ಮೊದಲು ‘ಆದಿಪುರುಷ್​’ ಟೀಸರ್​ ಬಿಡುಗಡೆ ಆದಾಗ ರಾವಣನ ಪಾತ್ರ ಮಾಡಿದ ಸೈಫ್​ ಅಲಿ ಖಾನ್​ ಅವರ ಗೆಟಪ್​ ನೋಡಿ ನೆಟ್ಟಿಗರು ಟ್ರೋಲ್​ ಮಾಡಿದ್ದರು. ಹಾಗಾಗಿ ನಿರ್ದೇಶಕರು ಕೆಲವು ಬದಲಾವಣೆ ಮಾಡುವುದು ಅನಿವಾರ್ಯ ಆಯಿತು. ಇತ್ತೀಚೆಗೆ ಇದರ ಹೊಸ ಟ್ರೇಲರ್​ ಬಿಡುಗಡೆ ಮಾಡಲಾಯಿತು. ಇದರಲ್ಲಿ ಸೈಫ್​ ಅಲಿ ಖಾನ್​ ಅವರ ಗೆಟಪ್​ ಗಮನ ಸೆಳೆದಿದೆ. ಸೀತೆಯನ್ನು ರಾವಣ ಅಪಹರಿಸುವ ದೃಶ್ಯ ಈ ಟ್ರೇಲರ್​ನಲ್ಲಿ ಹೈಲೈಟ್​ ಆಗಿದೆ. ಆ ಮೂಲಕ ನಿರೀಕ್ಷೆ ಹೆಚ್ಚಿದೆ. ಬದಲಾದ ವೇಷದಲ್ಲಿ ಸೈಫ್​ ಅಲಿ ಖಾನ್​ ಅವರನ್ನು ನೋಡಿದ ಪ್ರೇಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಒಟ್ಟಾರೆಯಾಗಿ ರಾವಣನ ಪಾತ್ರ ಹೇಗೆ ಮೂಡಿಬಂದಿದೆ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು. ಅದಕ್ಕಾಗಿ ಫ್ಯಾನ್ಸ್​ ಕಾದಿದ್ದಾರೆ.

ಇದನ್ನೂ ಓದಿ: ‘ಹೃದಯಂ’ ರಿಮೇಕ್​ನಲ್ಲಿ ಸೈಫ್​ ಅಲಿ ಖಾನ್​ ಮಗ ಇಬ್ರಾಹಿಂ? ಲಾಂಚ್​ ಮಾಡ್ತಾರೆ ಕರಣ್​ ಜೋಹರ್​

ಜನರಿಗೆ ಮತ್ತು ಸೆಲೆಬ್ರಿಟಿಗಳಿಗೆ ಈ ಸಿನಿಮಾ ಮೇಲೆ ವಿಶೇಷವಾದ ಭಾವನೆ ಮೂಡಿದೆ. ಕೆಲವು ಸೆಲೆಬ್ರಿಟಿಗಳು ಸಾವಿರಾರು ಟಿಕೆಟ್​ಗಳನ್ನು ಖರೀದಿಸಿ, ಅವುಗಳನ್ನು ಬಡಮಕ್ಕಳಿಗೆ ಉಚಿತವಾಗಿ ಹಂಚಲು ಮುಂದಾಗಿದ್ದಾರೆ. ನಟ ರಣಬೀರ್​ ಕಪೂರ್​ ಅವರು ಬರೋಬ್ಬರಿ 10 ಸಾವಿರ ಟಿಕೆಟ್​ಗಳನ್ನು ಉಚಿತವಾಗಿ ನೀಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ‘ದಿ ಕಾಶ್ಮೀರ್ ಫೈಲ್ಸ್​’ ಚಿತ್ರದ ನಿರ್ಮಾಪಕ ಅಭಿಷೇಕ್ ಅಗರ್​ವಾಲ್ ಅವರು ‘ಆದಿಪುರುಷ್​’ ಚಿತ್ರದ 10 ಸಾವಿರ ಟಿಕೆಟ್​ಗಳನ್ನು ಉಚಿತವಾಗಿ ಹಂಚಲು ಮುಂದಾಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.