ತಮ್ಮದೇ ಸಿನಿಮಾದ ಹೀರೋಗೆ ಗೇಟ್​ಪಾಸ್ ನೀಡಿದ ವಿವೇಕ್ ಅಗ್ನಿಹೋತ್ರಿ; ಏನಿದು ಕಿರಿಕ್?

‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಅಚ್ಚರಿಯ ವಿಷಯ ತಿಳಿಸಿದ್ದಾರೆ. ತಮ್ಮ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಬೇಕಿದ್ದ ನಟನಿಗೆ ವಿವೇಕ್​ ಅಗ್ನಿಹೋತ್ರಿ ಗೇಟ್​ಪಾಸ್​ ನೀಡಿದ್ದಾರೆ. ಕೆಲವೇ ದಿನಗಳ ಹಿಂದೆ ಈ ಘಟನೆ ನಡೆದಿದೆ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ತಮ್ಮದೇ ಸಿನಿಮಾದ ಹೀರೋಗೆ ಗೇಟ್​ಪಾಸ್ ನೀಡಿದ ವಿವೇಕ್ ಅಗ್ನಿಹೋತ್ರಿ; ಏನಿದು ಕಿರಿಕ್?
ವಿವೇಕ್​ ಅಗ್ನಿಹೋತ್ರಿ

Updated on: Sep 27, 2024 | 5:19 PM

ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರು ನೇರ ನಡೆ-ನುಡಿಯಿಂದ ಆಗಾಗ ಸುದ್ದಿ ಆಗುತ್ತಾರೆ. ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾದ ಯಶಸ್ಸಿನ ಬಳಿಕ ಅವರಿಗೆ ಸಿಕ್ಕಾಪಟ್ಟೆ ಪ್ರಸಿದ್ಧಿ ಸಿಕ್ಕಿತು. ಈಗ ಅವರು ಹೊಸ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಒಂದು ಕಹಿ ಸುದ್ದಿ ಕೇಳಿಬಂದಿದೆ. ಕಳೆದ ವಾರ ತಮ್ಮದೇ ಸಿನಿಮಾದ ಹೀರೋಗೆ ವಿವೇಕ್​ ಅಗ್ನಿಹೋತ್ರಿ ಅವರು ಗೇಟ್​ಪಾಸ್​ ನೀಡಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ಆದರೆ ಆ ಹೀರೋ ಯಾರು ಎಂಬುದನ್ನು ಅವರು ಸದ್ಯಕ್ಕೆ ಬಹಿರಂಗಪಡಿಸಿಲ್ಲ.

ಸೋಶಿಯಲ್​ ಮೀಡಿಯಾದಲ್ಲಿ ವಿವೇಕ್​ ಅಗ್ನಿಹೋತ್ರಿ ಅವರು ಆ್ಯಕ್ಟೀವ್​ ಆಗಿದ್ದಾರೆ. ಕಾಸ್ಟಿಂಗ್​ ಡೈರೆಕ್ಟರ್​ ಮುಕೇಶ್​ ಛಾಬ್ರಾ ಮಾಡಿದ ಒಂದು ‘ಎಕ್ಸ್​’ ಪೋಸ್ಟ್​ಗೆ ವಿವೇಕ್​ ಅಗ್ನಿಹೋತ್ರಿ ಪ್ರತಿಕ್ರಿಯಿಸಿದ್ದಾರೆ. ‘ಚಿತ್ರರಂಗದ ಸದ್ಯದ ಪರಿಸ್ಥಿತಿ: ಒಬ್ಬ ನಟ, 200 ಕಾಸ್ಟಿಂಗ್​ ಡೈರೆಕ್ಟರ್​ ಮತ್ತು 15,680 ಮ್ಯಾನೇಜರ್​ಗಳು’ ಎಂದು ಮುಕೇಶ್​ ಛಾಬ್ರಾ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸುವಾಗ ವಿವೇಕ್​ ಅಗ್ನಿಹೋತ್ರಿ ಅವರು ತಮ್ಮ ಸಿನಿಮಾತಂಡದಲ್ಲಿ ಆದ ಇನ್​ಸೈಡ್​ ವಿಚಾರವನ್ನು ತಿಳಿಸಿದ್ದಾರೆ.

ಇದನ್ನೂ ಓದಿ: ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಡಾಕ್ಟರೇಟ್ ಗೌರವ

‘ನನ್ನ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸುವ ಒಬ್ಬ ನಟನನ್ನು ಕಳೆದ ವಾರ ನಾನು ಕಿತ್ತುಹಾಕಬೇಕಾಯಿತು. ಅದಕ್ಕೆ ಆತನ ಮ್ಯಾನೇಜರ್​ನ ದುರಹಂಕಾರವೇ ಕಾರಣ. ದೊಡ್ಡ ಸೆಲೆಬ್ರಿಟಿಯ ಮಕ್ಕಳ ಟ್ಯಾಲೆಟ್​ ಏಜೆನ್ಸಿಯ ನೌಕರ ಎಂಬ ಕಾರಣಕ್ಕೆ ತಾನು ಆ ರೀತಿ ನಡೆದುಕೊಳ್ಳಬಹುದು ಅಂದುಕೊಡ್ಡಿದ್ದ ಆತ. ಇಂಥ ಮಧ್ಯವರ್ತಿಗಳು ಅನೇಕರ ಜೀವನವನ್ನು ಹಾಳು ಮಾಡಿದ್ದಾರೆ. ಇಂಥ ಮಕ್ಕಳಿಗೆಲ್ಲ ಒಂದು ಕಾರ್ಯಗಾರ ಮಾಡಿ, ತರಬೇತಿ ನೀಡಿ’ ಎಂದು ವಿವೇಕ್​ ಅಗ್ನಿಹೋತ್ರಿ ಅವರು ಮುಕೇಶ್​ ಛಾಬ್ರಾಗೆ ಹೇಳಿದ್ದಾರೆ.

‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಗೆದ್ದ ನಂತರ ವಿವೇಕ್​ ಅಗ್ನಿಹೋತ್ರಿ ಅವರು ಸಾಕಷ್ಟು ವಿವಾದ ಮಾಡಿಕೊಂಡಿದ್ದರು. ಅದರಿಂದಾಗಿ ಅವರು ಹೆಚ್ಚು ಕಾಲ ಸಾರ್ವಜನಿಕ ಚರ್ಚೆಯಲ್ಲಿ ಭಾಗಿಯಾಗಬೇಕಾಯಿತು. ಆದರೆ ಈಗ ಅವರು ಮಾತನಾಡುವುದನ್ನು ಕಡಿಮೆ ಮಾಡಿದ್ದಾರೆ. ಅನಗತ್ಯವಾಗಿ ಚರ್ಚೆಯಲ್ಲಿ ಭಾಗವಹಿಸುವ ಬದಲು ಸಿನಿಮಾದ ಕೆಲಸಗಳ ಮೇಲೆ ಗಮನ ಹರಿಸುವುದು ಸೂಕ್ತ ಎಂದು ಅವರಿಗೆ ಅನಿಸಿದೆ. ವಿವೇಕ್​ ಅಗ್ನಿಹೋತ್ರಿ ನಿರ್ದೇಶಿಸಿದ್ದ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾ 2023ರಲ್ಲಿ ಬಿಡುಗಡೆಯಾಗಿ ಸೋಲು ಕಂಡಿತು. ಈಗ ಅವರು ಮತ್ತೊಂದು ನೈಜ ಘಟನೆಯನ್ನು ಇಟ್ಟುಕೊಂಡು ಹೊಸ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us