
‘ರಾಮಾಯಣ’ (Ramayana) ಸಿನಿಮಾ ಭಾರತದ ಅತಿ ದೊಡ್ಡ ಬಜೆಟ್ನ ಸಿನಿಮಾ ಎನಿಸಿಕೊಂಡಿದ್ದು. ವಿಶ್ವ ಚಿತ್ರರಂಗಕ್ಕಾಗಿ ಭಾರತದಿಂದ ನಿರ್ಮಾಣ ಆಗಿರುವ ಸಿನಿಮಾ ಇದಾಗಿದೆ. ಸಿನಿಮಾವನ್ನು ಭಾರತದಲ್ಲಿ ಮಾತ್ರವಲ್ಲದೆ ಹಾಲಿವುಡ್ನಲ್ಲೂ ಪ್ರಚಾರ ಮಾಡಲಾಗುತ್ತಿದೆ. ಇತ್ತೀಚೆಗಷ್ಟೆ ನಟ ಯಶ್ ಅವರು ‘ರಾಮಾಯಣ’ ಸಿನಿಮಾದ ಪ್ರಚಾರಕ್ಕಾಗಿ ನಿರ್ಮಾಪಕ ನಮಿತ್ ಮಲ್ಹೋತ್ರಾ ಜೊತೆಗೆ ಲಾಸ್ ಏಂಜಲ್ಸ್ನಲ್ಲಿ ನಡೆದ ಸಿನಿಮಾಕಾನ್ 2026 ನಲ್ಲಿ ಭಾಗಿ ಆಗಿದ್ದರು. ಅಲ್ಲಿ ಹಾಲಿವುಡ್ ಟಿವಿ ಒಂದಕ್ಕೆ ಸಂದರ್ಶನ ನೀಡಿರುವ ನಟ ಯಶ್ ಅವರು, ‘ರಾಮಾಯಣ’ ಸಿನಿಮಾನಲ್ಲಿ ರಣ್ಬೀರ್ ಕಪೂರ್ ಅವರೊಟ್ಟಿಗೆ ನಟಿಸಿದ ಅನುಭವದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದರು.
‘ಆಸಕ್ತಿಕರ ವಿಷಯವೆಂದರೆ ಈ ಸಿನಿಮಾನಲ್ಲಿ ನಾನು ಹಾಗೂ ರಣ್ಬೀರ್ ಕಪೂರ್ ತೆರೆಯ ಮೇಲೆ ಎದುರಾಗುವುದೇ ಇಲ್ಲ. ಎಲ್ಲರಿಗೂ ಗೊತ್ತಿರುವಂತೆ ಇದು ಎರಡು ಪಾರ್ಟ್ಗಳಲ್ಲಿ ಬರಲಿರುವ ಸಿನಿಮಾ. ಮೊದಲ ಭಾಗದಲ್ಲಿ ‘ರಾವಣ’ನಾನಿ ನನಗೆ ಪ್ರತ್ಯೇಕ ಸಾಮ್ರಾಜ್ಯ ಇರುತ್ತದೆ, ರಾಮನಿಗೆ ಪ್ರತ್ಯೇಕ ಸಾಮ್ರಾಜ್ಯ ಇರುತ್ತದೆ. ಆದರೆ ಕತೆ ಮುಂದುವರೆದಂತೆ ಪರಿಸ್ಥಿತಿಗಳು ನಮ್ಮಿಬ್ಬರನ್ನು ಎದುರು-ಬದುರು ಮಾಡುತ್ತವೆ’ ಎಂದಿದ್ದಾರೆ.
ಇದನ್ನೂ ಓದಿ:‘ರಾಮಾಯಣ’ ಸಿನಿಮಾ ಅವಧಿ 6 ಗಂಟೆ; ಚಿತ್ರತಂಡದ ಎದುರಿಗೆ ಇದೆ ದೊಡ್ಡ ಸವಾಲು
‘ರಣ್ಬೀರ್ ಕಪೂರ್ ಹಾಗೂ ನಾನು ಹಲವು ಭಾರಿ ಭೇಟಿ ಆಗಿದ್ದೇವೆ. ಅವರು ಅದ್ಭುತ ನಟ, ಇಬ್ಬರ ನಡುವೆ ಪರಸ್ಪರರ ಬಗ್ಗೆ ಇರುವ ಗೌರವ, ಪ್ರೀತಿ ನಮ್ಮ ಕೆಲಸವನ್ನು ಹೆಚ್ಚು ಸುಲಭ ಮಾಡಿದೆ. ನಾವು ‘ರಾಮಾಯಣ’ದಂಥಹಾ ಒಂದು ಅದ್ಭುತವನ್ನು ಸೃಷ್ಟಿ ಮಾಡುವಾಗ ಎಲ್ಲ ಗಮನ ಅದರ ಮೇಲೆ ಕೇಂದ್ರೀಕೃತವಾಗಿರುತ್ತದೆ. ಎಲ್ಲರಿಗೂ ಸಹ ಒಂದೇ ಗುರಿ ಇದ್ದಿದ್ದು, ನಾವು ಅದ್ಭುತವಾಗಿ ‘ರಾಮಾಯಣ’ ಮಾಡಬೇಕು ಎಂಬುದು. ನಮ್ಮ ಅತ್ಯುತ್ತಮವಾದುದನ್ನು ಈ ಸಿನಿಮಾಕ್ಕೆ ನೀಡಬೇಕು ಎಂಬುದು ನಮ್ಮ ಗುರಿ ಆಗಿತ್ತು. ನಮ್ಮ ಎಲ್ಲರ ದೃಷ್ಟಿಕೋನಗಳು ಒಟ್ಟಿಗೆ ಬೆರೆತು ಈಗ ‘ರಾಮಾಯಣ’ ಸಿನಿಮಾ ನಾವಂದುಕೊಂಡಂತೆ ಅದ್ಭುತವಾಗಿ ರೆಡಿಯಾಗಿದೆ. ಇಬ್ಬರ ನಡುವಿನ ಕೆಮಿಸ್ಟ್ರಿ ದೊಡ್ಡ ಪ್ರಶ್ನೆಯೇ ಆಗಲಿಲ್ಲ, ಏಕೆಂದರೆ ಸಿನಿಮಾ ನಿರ್ಮಾಣದ ಪ್ರತಿ ಹಂತವನ್ನೂ ನಾವು ಎಂಜಾಯ್ ಮಾಡಿದ್ದೇವೆ’ ಎಂದಿದ್ದಾರೆ ಯಶ್.
‘ರಾಮಾಯಣ’ ಸಿನಿಮಾನಲ್ಲಿ ಯಶ್ ಅವರು ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ, ರಾಮನ ಪಾತ್ರದಲ್ಲಿ ರಣ್ಬೀರ್ ಕಪೂರ್ ನಟಿಸಿದ್ದಾರೆ. ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ನಟಿಸಿದ್ದಾರೆ. ಸಿನಿಮಾಕ್ಕೆ ನಮಿತ್ ಮಲ್ಹೋತ್ರಾ ಬಂಡವಾಳ ಹೂಡಿದ್ದು, ಅವರ ಜೊತೆಗೆ ಯಶ್ ಅವರು ಸಹ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಆಸ್ಕರ್ ವಿಜೇತರಾದ ಎಆರ್ ರೆಹಮಾನ್ ಮತ್ತು ಹಾನ್ಸ್ ಜೀಮರ್ ಸಂಗೀತ ನೀಡಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ‘ದಂಗಲ್’ ಖ್ಯಾತಿಯ ನಿತೀಶ್ ತಿವಾರಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ