ಧನುಷ್ ನಟನೆಯ ‘ಓಂ’ ಚಿತ್ರದಲ್ಲಿ ‘ಪುಷ್ಪ’ ಸಿನಿಮಾದ ಕಥೆ? ಸ್ಪಷ್ಟನೆ ನೀಡಿದ ನಿರ್ದೇಶಕ

ಧನುಷ್ ಅವರ ಹೊಸ ಸಿನಿಮಾಗೆ ‘ಓಂ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರದ ಟೀಸರ್ ನೋಡಿದವರಿಗೆ ‘ಪುಷ್ಪ’ ಸಿನಿಮಾ ನೆನಪಾಗಿದೆ. ಈ ಹೋಲಿಕೆಗಳ ಬಗ್ಗೆ ಚಿತ್ರದ ನಿರ್ದೇಶಕ ರಾಜ್​ಕುಮಾರ್ ಪೆರಿಯಸಾಮಿ ಪ್ರತಿಕ್ರಿಯಿಸಿದ್ದಾರೆ. ಅಕ್ಟೋಬರ್ 16ರಂದು ಅದ್ಧೂರಿಯಾಗಿ ‘ಓಂ’ ಸಿನಿಮಾ ಬಿಡುಗಡೆ ಆಗಲಿದೆ.

ಧನುಷ್ ನಟನೆಯ ‘ಓಂ’ ಚಿತ್ರದಲ್ಲಿ ‘ಪುಷ್ಪ’ ಸಿನಿಮಾದ ಕಥೆ? ಸ್ಪಷ್ಟನೆ ನೀಡಿದ ನಿರ್ದೇಶಕ
Dhanush, Allu Arjun

Updated on: Jun 19, 2026 | 11:02 PM

ಕಾಲಿವುಡ್ ಸ್ಟಾರ್ ನಟ ಧನುಷ್ (Dhanush) ಅಭಿನಯದ ಮುಂಬರುವ ಬಹುನಿರೀಕ್ಷಿತ ಚಿತ್ರ ‘D55’ ಸಿನಿಮಾಗೆ ಟೈಟಲ್ ಅನಾವರಣ ಆಗಿದೆ. ಈ ಚಿತ್ರದ ಗ್ಲಿಂಪ್ಸ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಚಿತ್ರಕ್ಕೆ ‘ಓಂ’ (OM) ಎಂದು ಹೆಸರಿಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೊದಲ ಝಲಕ್ ಭಾರಿ ಸದ್ದು ಮಾಡುತ್ತಿದೆ. ಆದರೆ, ಈ ಗ್ಲಿಂಪ್ಸ್ ನೋಡಿದ ನೆಟ್ಟಿಗರು ಹಾಗೂ ಸಿನಿಪ್ರಿಯರು, ಧನುಷ್ ಅವರ ಈ ಹೊಸ ಚಿತ್ರವನ್ನು ಅಲ್ಲು ಅರ್ಜುನ್ ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾ ‘ಪುಷ್ಪ’ (Pushpa) ಚಿತ್ರಕ್ಕೆ ಹೋಲಿಸಲು ಶುರು ಮಾಡಿದ್ದಾರೆ.

ಚಿತ್ರತಂಡ ಬಿಡುಗಡೆ ಮಾಡಿರುವ ‘ಓಂ’ ಟೈಟಲ್ ಗ್ಲಿಂಪ್ಸ್‌ನಲ್ಲಿ ಧನುಷ್ ಗಡ್ಡ ಬಿಟ್ಟು, ರಗಡ್ ಲುಕ್‌ನಲ್ಲಿ ಕಾಡಿನ ನಡುವೆ ಕಾಡುಕಳ್ಳನಂತೆ ಕಾಣಿಸಿಕೊಂಡಿದ್ದಾರೆ. ಜೊತೆಗೆ ಈ ವಿಡಿಯೋದಲ್ಲಿ ರಕ್ತಚಂದನದ ದೃಶ್ಯಗಳೂ ಇವೆ. ‘ಪುಷ್ಪ’ ಸಿನಿಮಾ ಸಂಪೂರ್ಣವಾಗಿ ರಕ್ತಚಂದನದ ಕಳ್ಳಸಾಗಣೆ ಹಿನ್ನೆಲೆಯನ್ನು ಹೊಂದಿದ್ದರಿಂದ, ಪ್ರೇಕ್ಷಕರು ತಕ್ಷಣವೇ ‘ಓಂ’ ಚಿತ್ರವನ್ನು ‘ಪುಷ್ಪ’ಗೆ ಹೋಲಿಸಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಪ್ರಶ್ನಿಸಿದಾಗ ಉತ್ತರಿಸಿದ ನಿರ್ದೇಶಕ ರಾಜ್​ಕುಮಾರ್ ಪೆರಿಯಸಾಮಿ, ‘ನಾವು ಚಿತ್ರದ ಕೇವಲ ಒಂದು ಸಣ್ಣ ದೃಶ್ಯವನ್ನು ಮಾತ್ರ ತೋರಿಸಿದ್ದೇವೆ. ‘ಓಂ’ ಸಿನಿಮಾದಲ್ಲಿ ಇನ್ನು ಸಾಕಷ್ಟು ವಿಭಿನ್ನ ಅಂಶಗಳಿವೆ. ಸಿನಿಮಾ ನೋಡಿದಾಗ ಮಾತ್ರ ಅದು ಸಂಪೂರ್ಣವಾಗಿ ತಿಳಿಯುತ್ತದೆ. ಟೈಟಲ್ ಟೀಸರ್ ನೋಡಿದಾಗ ಪ್ರತಿಯೊಬ್ಬರಿಗೂ ಅವರದ್ದೇ ಆದ ವಿಭಿನ್ನ ದೃಷ್ಟಿಕೋನ ಮೂಡುತ್ತದೆ. ನಾವು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಲು ಮತ್ತು ಚರ್ಚೆ ಹುಟ್ಟುಹಾಕಲು ಮಾತ್ರ ಇದನ್ನು ಬಿಡುಗಡೆ ಮಾಡಿದ್ದೇವೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

‘ಪುಷ್ಪ’ ಸಿನಿಮಾ ರೀತಿಯೇ ‘ಓಂ’ ಚಿತ್ರ ಕೂಡ ಭರ್ಜರಿ ಆ್ಯಕ್ಷನ್ ದೃಶ್ಯಗಳನ್ನು ಹೊಂದಿರಲಿದ್ದು, ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಮೊದಲ ಭಾಗಕ್ಕೆ ‘ಓಂ ಚಾಪ್ಟರ್ 1: ಉಧಿರಂ – ದಿ ಬ್ಲಡ್ ವುಡ್’ ಎಂದು ಹೆಸರಿಡಲಾಗಿದೆ. ಚಿತ್ರವು ಅಕ್ಟೋಬರ್ 16ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಟೀಸರ್ ಮತ್ತು ಶೀರ್ಷಿಕೆಯಿಂದ ಕೌತುಕ ಮೂಡಿದೆ.

ಇದನ್ನೂ ಓದಿ: ಅಂದು ಶಿವಣ್ಣ, ಇಂದು ಧನುಷ್; ‘ಓಂ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಘೋಷಣೆ

‘ಓಂ’ ಚಿತ್ರದಲ್ಲಿ ಧನುಷ್ ಜೊತೆಗೆ ಮಲಯಾಳಂ ಸ್ಟಾರ್ ನಟ ಮಮ್ಮುಟ್ಟಿ ಅವರು ಪ್ರಮುಖ ಪಾತ್ರದಲ್ಲಿದ್ದರೆ, ಸಾಯಿ ಪಲ್ಲವಿ ಹಾಗೂ ಶ್ರೀಲೀಲಾ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಯಿ ಅಭ್ಯಂಕರ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ‘ಅಮರನ್’ ಖ್ಯಾತಿಯ ರಾಜ್​ಕುಮಾರ್ ಪೆರಿಯಸಾಮಿ ಅವರು ನಿರ್ದೇಶನ ಮಾಡಿರುವುದರಿಂದ ಹೈಪ್ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us