ನಿರ್ದೇಶಕ ಮಂಸೋರೆ ದಾಂಪತ್ಯದಲ್ಲಿ ಬಿರುಕು: ದೂರು-ಪ್ರತಿದೂರು

| Updated By: ಮಂಜುನಾಥ ಸಿ.

Updated on: Jan 27, 2024 | 9:59 PM

Mansore: ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ವಿರುದ್ಧ ಅವರ ಪತ್ನಿ ಅಖಿಲಾ, ವರದಕ್ಷಣೆ ಕಿರುಕುಳ, ಕೊಲೆ ಬೆದರಿಕೆ ದೂರು ದಾಖಲಿಸಿದ್ದಾರೆ. ಪ್ರತಿಯಾಗಿ ಮಂಸೋರೆ ಸಹ ದೂರು ದಾಖಲು ಮಾಡಿದ್ದಾರೆ.

ನಿರ್ದೇಶಕ ಮಂಸೋರೆ ದಾಂಪತ್ಯದಲ್ಲಿ ಬಿರುಕು: ದೂರು-ಪ್ರತಿದೂರು
Follow us on

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ದಾಂಪತ್ಯದಲ್ಲಿ ವಿರಸ ಮೂಡಿದೆ. ಮಂಸೋರೆ (ಮಂಜುನಾಥ) ವಿರುದ್ಧ ಪತ್ನಿ ಅಖಿಲಾ ಮಾನಸಿಕ, ದೈಹಿಕ ಹಿಂಸೆ ಹಾಗೂ ವರದಕ್ಷಿಣೆ ಬೇಡಿಕೆ ಹಾಗೂ ಕೊಲೆ ಬೆದರಿಕೆ ಹಾಕಿರುವುದಾಗಿ ದೂರು ಸಲ್ಲಿಸಿದ್ದಾರೆ. ಮಂಸೋರೆ ಸಹ ಪತ್ನಿಯ ದೂರಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಪತ್ರ ಬರೆದಿದ್ದು, ನನ್ನ ಪತ್ನಿ ಅಖಿಲಾಗೆ ಮಾನಸಿಕ ಅಸ್ವಸ್ಥತೆ ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ನೀಡಿರುವ ದೂರನ್ನು ಗಂಭೀರವಾಗಿ ತೆಗೆದುಕೊಳ್ಳದೆ, ಅವರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯತೆಯನ್ನು ಮನಗಾಣಬೇಕು? ಅವರಿಗೆ ಚಿಕಿತ್ಸೆಯ ಅಗತ್ಯವಿದೆ, ಅದಾದ ಬಳಿಕ ನಾವು ಒಟ್ಟಿಗೆ ಇರಬೇಕೆ ಬೇಡವೇ ಎಂಬುದನ್ನು ನಿಶ್ಚಯಿಸುತ್ತೇವೆ ಎಂದಿದ್ದಾರೆ.

ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿರುವ ಮಂಸೋರೆ ಪತ್ನಿ ಅಖಿಲಾ, ತಮ್ಮ ಪತಿ ಮಂಸೊರೆ (ಮಂಜುನಾಥ) ಕೋವಿಡ್ ಸಮಯದಲ್ಲಿ ಸಿನಿಮಾ ಮಾಡಲು ತಮ್ಮ ಮನೆಯವರಿಂದ 10 ಲಕ್ಷ ರೂಪಾಯಿ ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಮಂಸೋರೆ, ಅವರ ತಾಯಿ ವೆಂಕಟಲಕ್ಷ್ಮಮ್ಮ ಹಾಗೂ ಅವರ ಸಹೋದರಿ ಹೇಮಲತಾ, ತಮಗೆ 30 ಲಕ್ಷದ ಎಸ್​ಯುವಿ ಕಾರೊಂದನ್ನು ಕೊಡಿಸಿಕೊಡುವಂತೆ ಪೀಡಿಸಿದ್ದಾರೆ. ಈ ವಿಷಯವನ್ನು ಎಲ್ಲಾದರೂ ಹೇಳಿದರೆ ಕೊಂದು ಬಿಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಹಾಯಕ ಪೊಲೀಸ್ ಆಯುಕ್ತರಿಗೆ ಪತ್ರವೊಂದನ್ನು ಮಂಸೋರೆ ಬರೆದಿದ್ದು, ‘ನನ್ನ ಪತ್ನಿಗೆ ಮಾನಸಿಕ ಸಮಸ್ಯೆ ಇದ್ದು, ಚಿಕಿತ್ಸೆ ಸಹ ಪಡೆಯುತ್ತಿದ್ದರು. ಅಲ್ಲದೆ, ನನ್ನ ಪತ್ನಿ, ನನ್ನ ತಾಯಿಯನ್ನು ಮನೆಯಿಂದ ಹೊರಗೆ ಹಾಕುವಂತೆ ಹಠ ಹಿಡಿದಿದ್ದರು. ನನ್ನ ಹಾಗೂ ನನ್ನ ತಾಯಿಯ ಮೇಲೆ ದೈಹಿಕ ಹಲ್ಲೆಯನ್ನು ಸಹ ಮಾಡಿದ್ದಾರೆ. ನಾನು ನನ್ನ ಪತ್ನಿಯ ಮನೆಯಿಂದ ಯಾವುದೇ ಹಣವನ್ನಾಗಲಿ, ವಸ್ತುವನ್ನಾಗಲಿ ವರದಕ್ಷಿಣೆ ಅಥವಾ ಉಡುಗೊರೆ ರೂಪದಲ್ಲಿ ಪಡೆದಿದ್ದಲ್ಲ. ನನ್ನ ಬ್ಯಾಂಕ್ ಖಾತೆ ಅಥವಾ ವ್ಯವಹಾರಗಳ ಪರೀಕ್ಷೆಗೆ ಒಡ್ಡಬಹುದು. ದೂರು ನೀಡುವ ಮುಂಚೆ ನನ್ನ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದ ದೃಶ್ಯ, ನನ್ನ ಹಾಗೂ ನನ್ನ ತಾಯಿಯ ವಿರುದ್ಧ ನಿಂದನೆ ಮಾಡಿದ, ಹಲ್ಲೆ ಮಾಡಿದ ವಿಡಿಯೋ ಸಾಕ್ಷಿಗಳಿವೆ. ಅವುಗಳನ್ನು ಅರ್ಜಿಯೊಟ್ಟಿಗೆ ನೀಡಿದ್ದೇನೆ’ ಎಂದಿದ್ದಾರೆ.

ಇದನ್ನೂ ಓದಿ:‘777 ಚಾರ್ಲಿ’ ಸಿನಿಮಾಗೆ ಮಾತ್ರ ತೆರಿಗೆ ವಿನಾಯಿತಿ ಯಾಕೆ? ಬೊಮ್ಮಾಯಿ ಸರ್ಕಾರದ ಕಿವಿ ಹಿಂಡಿದ ಮಂಸೋರೆ

‘ನಾನು ಆಕೆಗೆ ಕೊಡಿಸಿದ ಚಿನ್ನಾಭರಣದ ಜೊತೆಗೆ ನನ್ನ ಸಿನಿಮಾಕ್ಕೆ ಬಂದಿರುವ ರಾಷ್ಟ್ರಪ್ರಶಸ್ತಿ ಹಾಗೂ ಇತರೆ ಪದಕಗಳನ್ನು ಸಹ ತೆಗೆದುಕೊಂಡು ಹೋಗಿದ್ದಾರೆ. ನನ್ನ ಪತ್ನಿಯ ವಿರುದ್ಧ ದೂರು ಸಲ್ಲಿಸುವ ಉದ್ದೇಶ ನನಗೆ ವೈಯಕ್ತಿಕವಾಗಿ ಇಲ್ಲ. ಆಕೆಯ ಮಾನಸಿಕ ಸಮಸ್ಯೆಗೆ ಚಿಕಿತ್ಸೆ ಸಿಗಬೇಕೆಂಬುದು ನನ್ನ ಕಾಳಜಿ. ಆದರೆ ನನ್ನ ಪತ್ನಿ ಸಲ್ಲಿಸಿರುವ ಸುಳ್ಳು ದೂರಗಳ ವಿರುದ್ಧ ನನಗೆ ರಕ್ಷಣೆ ಒದಗಿಸಿ’ ಎಂದು ಮನವಿ ಮಾಡಿದ್ದಾರೆ.

ಮಂಸೋರೆ ಹಾಗೂ ಅಖಿಲಾ ಕೆಲ ವರ್ಷಗಳ ಕಾಲ ಪ್ರೀತಿಸಿ 2021ರಲ್ಲಿ ಮದುವೆಯಾಗಿದ್ದರು. ಇದೀಗ ಇಬ್ಬರ ನಡುವೆ ಭಿನ್ನಾಭಿಪ್ರಾಯ ತಲೆ ದೂರಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ