ತೆಲುಗು ಚಿತ್ರರಂಗದ ಬಗ್ಗೆ ವ್ಯಂಗ್ಯ ಮಾಡಿದ ಬಾಲಿವುಡ್ ನಿರ್ದೇಶಕ

Telugu Movie Industry: ತೆಲುಗು ಚಿತ್ರರಂಗದ ಈ ಅದ್ಭುತ ಪ್ರಗತಿ ಕೆಲವು ಬಾಲಿವುಡ್ ನಿರ್ದೇಶಕರ ಕಣ್ಣು ಕುಕ್ಕಿದೆ. ಅದರಲ್ಲೂ ಹಿಂದಿ ಬಾಹುಳ್ಯವಿರು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಈಗ ತೆಲುಗು ಸಿನೆಮಾದ ಪ್ರಭಾವ ಹೆಚ್ಚಾಗುತ್ತಿರುವುದು ಅವರ ಅಸಹನೆಗೆ ಕಾರಣವಾಗಿದೆ. ಇದರಿಂದಾಗಿ ಕೆಲವು ನಿರ್ದೇಶಕರು ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಪರೋಕ್ಷವಾಗಿ ವ್ಯಂಗ್ಯವಾಡುತ್ತಿರುತ್ತಾರೆ.

ತೆಲುಗು ಚಿತ್ರರಂಗದ ಬಗ್ಗೆ ವ್ಯಂಗ್ಯ ಮಾಡಿದ ಬಾಲಿವುಡ್ ನಿರ್ದೇಶಕ
Sidharth Anand

Updated on: Aug 20, 2026 | 2:03 PM

ಮುಖ್ಯಾಂಶಗಳು

  • ತೆಲುಗು ಚಿತ್ರರಂಗ ಭಾರತದ ಲಾಭದಾಯಕ ಚಿತ್ರರಂಗ
  • ತೆಲುಗು ಚಿತ್ರರಂಗದ ಏಳ್ಗೆಯನ್ನು ಕೆಲ ಬಾಲಿವುಡ್ಡಿಗರು ಸಹಿಸುತ್ತಿಲ್ಲ
  • ನಿರ್ದೇಶಕನೊಬ್ಬ ತೆಲುಗು ಸಿನಿಮಾಗಳ ಬಗ್ಗೆ ಪರೋಕ್ಷ ವ್ಯಂಗ್ಯ ಮಾಡಿದ್ದಾರೆ.

ತೆಲುಗು ಚಿತ್ರರಂಗದ ಭಾರತದ ಅತ್ಯಂತ ಲಾಭದಾಯಕ ಚಿತ್ರರಂಗ. ಬಾಲಿವುಡ್ (Bollywood)​ ಅನ್ನೂ ಸಹ ಹಿಂದಿಕ್ಕಿ ಮುನ್ನುಗ್ಗುತ್ತಿದೆ. ‘ಬಾಹುಬಲಿ’, ‘ಪುಷ್ಪ’, ‘ಆರ್​​ಆರ್​​ಆರ್’ ಇನ್ನೂ ಕೆಲ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದ ಗೌರವವನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿದಿದೆ. ಆದರೆ ತೆಲುಗು ಚಿತ್ರರಂಗದ ಈ ಅದ್ಭುತ ಪ್ರಗತಿ ಕೆಲವು ಬಾಲಿವುಡ್ ನಿರ್ದೇಶಕರ ಕಣ್ಣು ಕುಕ್ಕಿದೆ. ಅದರಲ್ಲೂ ಹಿಂದಿ ಬಾಹುಳ್ಯವಿರು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಈಗ ತೆಲುಗು ಸಿನೆಮಾದ ಪ್ರಭಾವ ಹೆಚ್ಚಾಗುತ್ತಿರುವುದು ಅವರ ಅಸಹನೆಗೆ ಕಾರಣವಾಗಿದೆ. ಇದರಿಂದಾಗಿ ಕೆಲವು ನಿರ್ದೇಶಕರು ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಪರೋಕ್ಷವಾಗಿ ವ್ಯಂಗ್ಯವಾಡುತ್ತಿರುತ್ತಾರೆ.

‘ಪಠಾಣ್’, ‘ಫೈಟರ್’, ‘ವಾರ್’ ಇನ್ನೂ ಕೆಲವು ಸಿದ್ಧ ಮಾದರಿ ಕಮರ್ಶಿಯಲ್ ಸಿನಿಮಾಗಳನ್ನು ನಿರ್ದೇಶಿಸಿ ಯಶಸ್ಸು ಕಂಡಿರುವ ಬಾಲಿವುಡ್ ನಿರ್ದೇಶಕ ಸಿದ್ಧಾರ್ಥ್ ಆನಂದ್ ಇದೀಗ ತೆಲುಗು ಚಿತ್ರರಂಗದ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ಈ ಹಿಂದೆ ಕೂಡ ಅವರು ತೆಲುಗು ಚಿತ್ರರಂಗವನ್ನು ಕೀಳಾಗಿ ಕಾಣುವಂತಹ ಹೇಳಿಕೆಗಳನ್ನು ನೀಡಿದ್ದರು, ಇದೀಗ ಮತ್ತೊಮ್ಮೆ ಅವರು ತೆಲುಗು ಚಿತ್ರರಂಗದ ಬಗ್ಗೆ ಕೀಳಾಗಿ ವ್ಯಂಗ್ಯ ಮಾಡಿದ್ದಾರೆ.

ಮೂರು ವರ್ಷಗಳ ಹಿಂದೆ ತೆಲುಗು ನಿರ್ಮಾಪಕರೊಬ್ಬರು ಮಾತನಾಡಿದ ವಿಡಿಯೋಕ್ಕೆ ಈಗ ಕಮೆಂಟ್ ಹಾಕಿರುವ ಸಿದ್ದಾರ್ಥ್ ಆನಂದ್, ತೆಲುಗು ಚಿತ್ರರಂಗದಿಂದ ಬಂದ ಕೆಲ ಪ್ಯಾನ್ ಇಂಡಿಯಾ ಸಿನಿಮಾಗಳ ಕಳಪೆ ಪ್ರದರ್ಶನವನ್ನು ಸಂಭ್ರಮಿಸಿದ್ದಾರೆ. ಹೈದರಾಬಾದ್‌ನಲ್ಲಿ ‘ಅನಿಮಲ್’ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮದ ವೇಳೆ ನಿರ್ಮಾಪಕ ಮಲ್ಲಾ ರೆಡ್ಡಿ ಮಾತನಾಡಿದ್ದ ಹಳೆಯ ವಿಡಿಯೋವನ್ನು ಒಬ್ಬ ಸಾಮಾಜಿಕ ಜಾಲತಾಣ ಬಳಕೆದಾರರು ಹಂಚಿಕೊಂಡಿದ್ದು. ಆ ವಿಡಿಯೋದಲ್ಲಿ ಮಲ್ಲಾ ರೆಡ್ಡಿ ಅವರು ಹೈದರಾಬಾದ್ ಭಾರತೀಯ ಸಿನೆಮಾದ ಕೇಂದ್ರವಾಗುತ್ತಿದೆ ಮತ್ತು ಭವಿಷ್ಯದಲ್ಲಿ ತೆಲುಗು ಚಿತ್ರರಂಗವೇ ಪ್ರಾಬಲ್ಯ ಮೆರೆಯಲಿದೆ ಎಂದು ಆತ್ಮವಿಶ್ವಾಸದಿಂದ ಮಾತನಾಡಿದ್ದರು. ಅಲ್ಲದೆ, ರಣಬೀರ್ ಕಪೂರ್ ಅವರನ್ನು ಹೈದರಾಬಾದ್‌ನಲ್ಲೇ ನೆಲೆಸುವಂತೆ ಸಲಹೆ ನೀಡಿದ್ದರು.

ಇದನ್ನೂ ಓದಿ:ನಿದ್ರೆಯಲ್ಲೇ ಕೊನೆಯುಸಿರೆಳೆದ ಬಾಲಿವುಡ್ ನಟಿ ಅನನ್ಯಾ; ಸಾವಿನ ತಿಂಗಳ ಬಳಿಕ ವಿಷಯ ರಿವೀಲ್

ಆ ವಿಡಿಯೋ ಅನ್ನು ಹಂಚಿಕೊಂಡಿದ್ದ ನೆಟ್ಟಿಗನೋರ್ವ, ಈ ಘಟನೆಯ ಬಳಿಕ ಬಂದ ‘ದಿ ರಾಜ ಸಾಬ್’, ‘ಓಜಿ’ ಮತ್ತು ‘ದೇವರ’ ಮುಂತಾದ ತೆಲುಗು ಪ್ಯಾನ್ ಇಂಡಿಯಾ ಸಿನಿಮಾಗಳ ಉಲ್ಲೇಖಿಸಿ, ಅವುಗಳ ಬಾಕ್ಸ್ ಆಫೀಸ್ ಫಲಿತಾಂಶಗಳ ಆಧಾರದ ಮೇಲೆ ತೆಲುಗು ಸಿನೆಮಾದ ಪ್ರಾಬಲ್ಯದ ಹೇಳಿಕೆಯನ್ನು ಪ್ರಶ್ನಿಸಿದರು. ಆ ಪೋಸ್ಟ್​​ಗೆ ಪ್ರತಿಕ್ರಿಯೆ ನೀಡಿರುವ ಸಿದ್ಧಾರ್ಥ್ ಆನಂದ್, ‘Oops’ (ಊಪ್ಸ್) ಎಂದು ಪ್ರತಿಕ್ರಿಯಿಸಿದ್ದಾರೆ. ಆ ಮೂಲಕ ಆ ಸಿನಿಮಾಗಳ ಸೋಲಿನ ಬಗ್ಗೆ ಪರೋಕ್ಷ ಕುಹುಕ ಆಡಿರುವ ಜೊತೆಗೆ ತೆಲುಗು ಚಿತ್ರರಂಗದ ಸೋಲನ್ನು ಸಂಭ್ರಮಿಸಿದಂತಿದೆ ಸಿದ್ಧಾರ್ಥ್ ಆನಂದ್.

ಸಿದ್ಧಾರ್ಥ್ ಆನಂದ್​​ ಕಮೆಂಟ್​​ಗೆ ಪ್ರತಿಕ್ರಿಯೆ ನೀಡಿರುವ ತೆಲುಗು ಸಿನಿಮಾ ಪ್ರೇಮಿಗಳು, ‘ನೀವು ಹೀಗೆ ಟ್ರೋಲುಗಳ ಪೋಸ್ಟ್​​ಗಳಿಗೆ ಕಮೆಂಟ್ ಮಾಡುವುದು ಬಿಟ್ಟು ನಿಜವಾಗಿಯೂ ಸಿನಿಮಾದ ಮೇಲೆ ಗಮನ ಹರಿಸಿದ್ದರೆ, ನಿಮ್ಮ ಸಿನಿಮಾ ಸೋಲುಗಳಿಗೆ ಪ್ರೇಕ್ಷಕರನ್ನು ಹೊಣೆ ಮಾಡುವುದರಿಂದ ತಪ್ಪಿಸಿಕೊಳ್ಳಬಹುದಿತ್ತು’ ಎಂದಿದ್ದಾರೆ. ಹಲವಾರು ಮಂದಿ ನಾನಾ ರೀತಿಯ ಕಮೆಂಟುಗಳನ್ನು ಸಿದ್ಧಾರ್ಥ್ ಆನಂದ್ ಅವರಿಗೆ ಮಾಡಿದ್ದಾರೆ. ಸಿದ್ಧಾರ್ಥ್ ಆನಂದ್ ಪ್ರಸ್ತುತ ಶಾರುಖ್ ಖಾನ್ ನಟನೆಯ ‘ಕಿಂಗ್’ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us