
ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ (Deepika Padukone) ಕೆಲಸದ ಸಮಯದ ವಿವಾದ ಈಗ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ದಿನಕ್ಕೆ ಎಂಟು ಗಂಟೆಗಳ ಕಾಲ ಮಾತ್ರ ಕೆಲಸ ಮಾಡಲು ದೀಪಿಕಾ ಪಟ್ಟು ಹಿಡಿದಿದ್ದರು. ಈ ಕಾರಣದಿಂದಾಗಿ ಅವರು ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸೀಕ್ವೆಲ್ ಮತ್ತು ಸಂದೀಪ್ ರೆಡ್ಡಿ ವಂಗಾ ಅವರ ‘ಸ್ಪಿರಿಟ್’ ಚಿತ್ರದಿಂದ ಹೊರನಡೆದಿದ್ದಾರೆ.
ದೀಪಿಕಾ ಪಡುಕೋಣೆ ಅವರ ಈ ನಿರ್ಧಾರದ ಬಗ್ಗೆ ಟಾಲಿವುಡ್ ನಿರ್ದೇಶಕ ವೆಂಕಿ ಅಟ್ಲೂರಿ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಪ್ರತಿ ಚಿತ್ರರಂಗಕ್ಕೂ ತನ್ನದೇ ಆದ ಕೆಲಸದ ಸಂಸ್ಕೃತಿ ಇರುತ್ತದೆ ಎಂದು ಅವರು ಹೇಳಿದ್ದಾರೆ. ’ತೆಲುಗು ಚಿತ್ರರಂಗದಲ್ಲಿ ಸಾಮಾನ್ಯವಾಗಿ ದಿನಕ್ಕೆ 11 ರಿಂದ 12 ಗಂಟೆಗಳ ಕಾಲ ಶೂಟಿಂಗ್ ನಡೆಯುತ್ತದೆ. ಬೇರೆ ಭಾಷೆಯ ಕಲಾವಿದರು ಇಲ್ಲಿಗೆ ಬಂದಾಗ ಆ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಅದಕ್ಕೆ ಗೌರವ ನೀಡಬೇಕು’ ಎಂದು ವೆಂಕಿ ತಿಳಿಸಿದ್ದಾರೆ.
ನಿರ್ದೇಶಕ ವೆಂಕಿ ಅಟ್ಲೂರಿ ಅವರು ತಾವು ನಿರ್ದೇಶಿಸುತ್ತಿರುವ ‘ವಿಶ್ವನಾಥ್ ಆ್ಯಂಡ್ ಸನ್ಸ್’ ಚಿತ್ರದ ಶೂಟಿಂಗ್ ನೆನಪೊಂದನ್ನು ಹಂಚಿಕೊಂಡಿದ್ದಾರೆ. ‘ಊಟಿಯ ಭಾರಿ ಚಳಿಯಲ್ಲಿ ನಟಿ ರವೀನಾ ಟಂಡನ್ ಮತ್ತು ನಟ ಸೂರ್ಯ ಜೊತೆ ಚಿತ್ರೀಕರಣ ನಡೆಯುತ್ತಿತ್ತು. ಅಂದು ಕೆಲಸ ಮುಗಿಸಲು ಸತತ 14 ಗಂಟೆಗಳ ಕಾಲ ಶೂಟಿಂಗ್ ಮಾಡಬೇಕಾದ ಅನಿವಾರ್ಯತೆ ಇತ್ತು. ರವೀನಾ ಟಂಡನ್ ಅವರ ಮ್ಯಾನೇಜರ್ ವಿರೋಧ ವ್ಯಕ್ತಪಡಿಸಿದರೂ ನಟಿ ಮಾತ್ರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಹಕರಿಸಿದ್ದರು’ ಎಂದು ಅವರು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹಕ್ಕೆ ದೀಪಿಕಾ ಪಡುಕೋಣೆ ಬೆಂಬಲ? ಅಸಲಿ ಕಥೆ ಇಲ್ಲಿದೆ
ದೀಪಿಕಾ ಪಡುಕೋಣೆ ಅವರು ಎಂಟು ಗಂಟೆಗಳ ಶಿಫ್ಟ್ ನಿಯಮಕ್ಕೆ ಪಟ್ಟು ಹಿಡಿದ ಕಾರಣ ಕಲ್ಕಿ ಚಿತ್ರತಂಡದಿಂದ ಹೊರಬೀಳಬೇಕಾಯಿತು. ಇತ್ತೀಚೆಗೆ ವೈಜಯಂತಿ ಮೂವೀಸ್ ಸಂಸ್ಥೆಯು ಈ ವಿಷಯವನ್ನು ಅಧಿಕೃತವಾಗಿ ಖಚಿತಪಡಿಸಿದೆ. ಮೊದಲ ಭಾಗದಲ್ಲಿ ಒಟ್ಟಿಗೆ ಪ್ರಯಾಣ ಮಾಡಿದ್ದರೂ ಸೀಕ್ವೆಲ್ ಸಮಯದಲ್ಲಿ ಇಬ್ಬರ ನಡುವೆ ಒಮ್ಮತ ಮೂಡದ ಕಾರಣ ದೀಪಿಕಾ ಸಿನಿಮಾದಿಂದ ದೂರವಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.