ನಟಿ ಖುಷ್ಬು ವಿರುದ್ಧ ವಿವಾದಾತ್ಮಕ ಹೇಳಿಕೆ: ಹಿರಿಯ ಶಾಸಕನ ಬಂಧನ

| Updated By: ನಯನಾ ರಾಜೀವ್

Updated on: Jun 19, 2023 | 9:22 AM

Khushboo Sundar: ನಟಿ, ರಾಜಕಾರಣಿ ಖುಷ್ಬು ಸುಂದರ್ ಬಗ್ಗೆ ಕೀಳು ಹೇಳಿಕೆ ನೀಡಿದ ಹಿರಿಯ ಶಾಸಕನನ್ನು ಪೊಲೀಸರು ಬಂಧಿಸಿದ್ದಾರೆ.

ನಟಿ ಖುಷ್ಬು ವಿರುದ್ಧ ವಿವಾದಾತ್ಮಕ ಹೇಳಿಕೆ: ಹಿರಿಯ ಶಾಸಕನ ಬಂಧನ
ಖುಷ್ಬು ಸುಂದರ್
Follow us on

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಜನಪ್ರಿಯ ನಟಿ, ಪ್ರಸ್ತುತ ತಮಿಳುನಾಡು ಬಿಜೆಪಿ ನಾಯಕಿ ಖುಷ್ಬು ಸುಂದರ್ (Khushboo Sundar) ಬಗ್ಗೆ ಕೀಳು ಹೇಳಿಕೆ ನೀಡಿದ ಆಡಳಿತರೂಢ ಡಿಎಂಕೆ ಪಕ್ಷದ ಹಿರಿಯ ಶಾಸಕ ಶಿವಾಜಿ ಕೃಷ್ಣಮೂರ್ತಿಯನ್ನು ತಮಿಳುನಾಡು (Tamil Nadu) ಪೊಲೀಸರು (Police) ಬಂಧಿಸಿದ್ದಾರೆ. ಖುಷ್ಬು ಸುಂದರ್ ಬಗ್ಗೆ ಮಾತ್ರವೇ ಅಲ್ಲದೆ ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ, ತಮಿಳುನಾಡು ರಾಜ್ಯಪಾಲ ರವಿ ಅವರ ಬಗ್ಗೆಯೂ ಕೀಳು ಹೇಳಿಕೆಗಳನ್ನು ಶಿವಾಜಿ ನೀಡಿದ್ದರು.

ಇತ್ತೀಚೆಗಿನ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಶಿವಾಜಿ, ”ನನ್ನ ಮಗಳ ಮದುವೆ ಸಮಯದಲ್ಲಿ ಫೋಟೊದವರು ನನ್ನ ಫೋಟೊ ಹೆಚ್ಚಿಗೆ ತೆಗೆಯುತ್ತಿದ್ದರು. ನೀವು ಚೆನ್ನಾಗಿದ್ದೀರಿ ಎಂದರು, ನಾನೇನು ನಟನಲ್ಲ, ಅದರಲ್ಲಿಯೂ ಖುಷ್ಬು ಅಂಥಹಾ ನಟನಲ್ಲ. ನಟರಾಗಿರುವುದು ಓಕೆ, ಆದರೆ ಖುಷ್ಬು ರೀತಿ ನಟರಾಗಿರುವುದು ಸರಿಯಲ್ಲ. ಖುಷ್ಬು ಹಳೆಯ ಹಂಡೆ ಇದ್ದಂತೆ. ಆದರೆ ಎಲ್ಲ ಖುಷ್ಬು ಬೇಕು, ಖುಷ್ಬು ಬೇಕು ಎನ್ನುತ್ತಾರೆ. ಅಯ್ಯೋ ಅವಳು ಹಳೆ ಹಂಡೆ ಅವಳನ್ನ ಯಾಕೆ ಕೇಳ್ತೀರಿ ಸುಮ್ಮನಿರ್ರಿ” ಎಂದು ನಾಲಗೆ ಹರಿಬಿಟ್ಟಿದ್ದರು ಶಿವಾಜಿ.

ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಬಗ್ಗೆಯೂ ಕೀಳಾಗಿ ಮಾತನಾಡಿದ್ದ ಶಿವಾಜಿ, ”ಅಣ್ಣಾಮಲೈ ಒಂದು ಕಡೆಯಿಂದ ನೋಡಿದರೆ ಹೆಣ್ಣಿನಂತೆ ಕಾಣುತ್ತಾನೆ, ಇನ್ನೊಂದು ಕಡೆಯಿಂದ ನೋಡಿದರೆ ಗಂಡಿನಂತೆ ಕಾಣುತ್ತಾನೆ ಮಧ್ಯದಿಂದ ನೋಡಿದರೆ ಗಂಡು-ಹೆಣ್ಣು ಎರಡೂ ರೀತಿ ಕಾಣುತ್ತಾನೆ. ರಫೆಲ್ ವಾಚು ಹಾಕಿಕೊಳ್ಳುವುದು ಅವನಿಗೆ ದೇಶಪ್ರೇಮವಂತೆ. ಮೂರು ಲಕ್ಷದ ವಾಚು ಹಾಕಿಕೊಳ್ಳುತ್ತಾನೆ, ಬಿಲ್ ತೋರಿಸು ಅಂದರೆ ಯಾವುದೋ ರಸೀದಿ ತೋರಿಸುತ್ತಾನೆ. ಇವನು ಐಪಿಎಸ್ ಬೇರೆ ಆಗಿದ್ದನಂತೆ. ಮೊದಲು ನಿಮ್ಮ ಅಮ್ಮ-ಅಪ್ಪನ ಕೇಳು, ನೀನು ಗಂಡೊ-ಹೆಣ್ಣೊ ಎಂದು” ಎಂದು ಅಗೌರವಕಾರಿಯಾಗಿ ಶಿವಾಜಿ ಮಾತನಾಡಿದ್ದರು.

ಇದನ್ನೂ ಓದಿ:MS Dhoni: ಖುಷ್ಬು ಸುಂದರ್ ಅವರ ಅತ್ತೆಯನ್ನು ಭೇಟಿಯಾದ ಧೋನಿ; ಮಾಹಿಗೆ ಪ್ರಣಾಮಗಳು ಎಂದ ಖುಷ್ಬು

ತಮಿಳುನಾಡು ರಾಜ್ಯಪಾಲ ಆರ್​.ಎನ್.ರವಿ ಬಗ್ಗೆ ಮಾತನಾಡಿರುವ ಶಿವಾಜಿ, ”ನಾವು ಸಚಿವ ಸ್ಥಾನವನ್ನು ಇಬ್ಬರು ಸಚಿವರಿಗೆ ನೀಡಿದ್ದೆವು. ಆದರೆ ನೀನು ಇದು ಸರಿಯಲ್ಲ ಎಂದೆ. ನೀನು ಒಬ್ಬ ತಾಯಿಗೆ ಹುಟ್ಟಿದ್ದರೆ ನಿನ್ನ ಮಾತಿನ ಮೇಲೆ ನಿಂತುಕೊಳ್ಳಬೇಕಿತ್ತು. ನಾವು ಡಿಎಂಕೆಯವರು ಮಾತು ಆಡುವುದಿಲ್ಲ, ಆಡಿದರೆ ನಮ್ಮ ಜೀವ ಹೋದರು ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತೇವೆ” ಎಂದಿದ್ದರು. ಕೆಲವು ತಿಂಗಳ ಹಿಂದೆಯಷ್ಟೆ ರಾಜ್ಯಪಾಲರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಶಿವಾಜಿಯನ್ನು ಡಿಎಂಕೆ ಪಕ್ಷದಿಂದ ಉಚ್ಛಾಟನೆ ಮಾಡಿತ್ತು, ಕ್ಷಮೆ ಕೇಳಿದ ಬಳಿಕ ಇತ್ತೀಚೆಗಷ್ಟೆ ಅವರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ಈಗ ಮತ್ತೆ ತಮ್ಮ ನಾಲಗೆ ಹರಿಬಿಟ್ಟು ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ.

ತಮ್ಮ ವಿರುದ್ಧ ಕೀಳು ಅಭಿರುಚಿಯ ಮಾತನಾಡಿದ ಶಿವಾಜಿ ವಿರುದ್ಧ ನಟಿ ಖುಷ್ಬು ಸುಂದರ್ ದೂರು ನೀಡಿದ್ದರು. ಅವರ ಮಾತಿನ ವಿಡಿಯೋವನ್ನು ತಮಿಳುನಾಡು ಸಿಎಂ ಸ್ಟಾಲಿನ್​ಗೆ ಟ್ಯಾಗ್​ ಮಾಡಿ ಇದೇನಾ ನಿಮ್ಮ ಸಂಸ್ಕಾರ ಎಂದು ಪ್ರಶ್ನಿಸಿದ್ದರು. ಶಿವಾಜಿ ಭಾಷಣದ ವಿಡಿಯೋ ವೈರಲ್ ಆದ ಬೆನ್ನಲ್ಲೆ ಡಿಎಂಕೆ ಪಕ್ಷವು ಶಿವಾಜಿಯನ್ನು ಪಕ್ಷದಿಂದ ಉಚ್ಛಾಟನೆ ಮಾಡಿದೆ. ಉಚ್ಛಾಟನೆಯಾದ ಬೆನ್ನಲ್ಲೆ ಪೊಲೀಸರು ಶಿವಾಜಿಯನ್ನು ಬಂಧಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:24 pm, Sun, 18 June 23