ಕಂಗನಾ ಕಾರಣಕ್ಕೆ ಕುಸಿಯಿತು ನಟಿ ಗಿರಿಜಾ ಇನ್​​ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ

ನಟಿ ಗಿರಿಜಾ ಓಕ್ 'ಭಾರತ್ ಭಾಗ್ಯ ವಿಧಾತ' ಚಿತ್ರದಲ್ಲಿ ನಟಿಸಿದ್ದು, ಸಂಸದೆ ಕಂಗನಾ ರಣಾವತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಂಗನಾ ಅವರ ಪೋಸ್ಟ್ ಶೇರ್ ಮಾಡಿದಾಗ ತಮ್ಮ ಇನ್‌ಸ್ಟಾಗ್ರಾಮ್ ಫಾಲೋವರ್‌ಗಳು ಕಡಿಮೆಯಾದ ಘಟನೆಯನ್ನು ಗಿರಿಜಾ ಹಂಚಿಕೊಂಡಿದ್ದಾರೆ. ‘ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ; ನಿಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮುಂದುವರಿಸಿ’ ಎಂಬ ಸಂದೇಶ ನೀಡಿದ್ದಾರೆ, ಇದು ಸಾಮಾಜಿಕ ಮಾಧ್ಯಮದ ಸವಾಲುಗಳನ್ನು ಎತ್ತಿ ತೋರಿಸುತ್ತದೆ.

ಕಂಗನಾ ಕಾರಣಕ್ಕೆ ಕುಸಿಯಿತು ನಟಿ ಗಿರಿಜಾ ಇನ್​​ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ
ಕಂಗನಾ-ಗಿರಿಜಾ
Edited By:

Updated on: Jun 05, 2026 | 11:05 AM

ನಟಿ ಗಿರಿಜಾ ಓಕ್ ಶೀಘ್ರದಲ್ಲೇ ‘ಭಾರತ್ ಭಾಗ್ಯ ವಿಧಾತ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ನಟಿ ಮತ್ತು ಸಂಸದೆ ಕಂಗನಾ ರಣಾವತ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ವಿಶೇಷ ಸಂದರ್ಭದಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಗಿರಿಜಾ ತಮಗೆ ಎದುರಾದ ಒಂದು ವಿಚಿತ್ರ ಘಟನೆಯನ್ನು ಹಂಚಿಕೊಂಡಿದ್ದಾರೆ. ಕಂಗನಾ ರನೌತ್ ಅವರ ಪೋಸ್ಟ್‌ಗಳಲ್ಲಿ ಒಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ತಕ್ಷಣ, ತಮ್ಮ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ದಿಢೀರನೆ ಕಡಿಮೆಯಾಯಿತು ಎಂದು ಅವರು ಬಹಿರಂಗಪಡಿಸಿದ್ದಾರೆ. ‘ನಾವು ಎಂದಿಗೂ ಎಲ್ಲರನ್ನೂ ಸಂತೋಷವಾಗಿಡಲು ಸಾಧ್ಯವಿಲ್ಲ’ ಎಂಬ ಸ್ಪಷ್ಟ ನಿಲುವನ್ನು ಅವರು ವ್ಯಕ್ತಪಡಿಸಿದ್ದಾರೆ.

ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ ಗಿರಿಜಾ ಓಕ್, ‘ನನ್ನ ನಟನೆಯ ಭಾರತ್ ಭಾಗ್ಯ ವಿಧಾತ ಸಿನಿಮಾ ಜೂನ್ 12ರಂದು ತೆರೆಕಾಣುತ್ತಿದೆ. ಈ ಚಿತ್ರವು ನಮ್ಮ ದೈನಂದಿನ ಜೀವನದಲ್ಲಿ ಕೆಲಸ ಮಾಡುವ ಸಾಮಾನ್ಯ ಜನರನ್ನು, ಅಂದರೆ ನಮ್ಮ ಸಹೋದ್ಯೋಗಿಗಳು, ನೈರ್ಮಲ್ಯ ಕಾರ್ಮಿಕರು, ಪೊಲೀಸರು ಮತ್ತು ದಾದಿಯರ (ನರ್ಸ್) ಸೇವೆಯನ್ನು ಕೊಂಡಾಡುತ್ತದೆ. ಮುಖ್ಯವಾಗಿ ಇದು ಮುಂಬೈನ ಆಸ್ಪತ್ರೆಯ ದಾದಿಯರ ಕಥೆಯಾಗಿದ್ದು, 26/11 ಭಯೋತ್ಪಾದನಾ ದಾಳಿಯ ಸಮಯದಲ್ಲಿ ಆಸ್ಪತ್ರೆಯಲ್ಲಿ ಸೃಷ್ಟಿಯಾಗಿದ್ದ ಗಂಭೀರ ಪರಿಸ್ಥಿತಿಯನ್ನು ಈ ಸಿನಿಮಾ ಪ್ರತಿಬಿಂಬಿಸುತ್ತದೆ. ನಾನು ಈ ಚಿತ್ರದ ವಿವಿಧ ಪೋಸ್ಟರ್‌ಗಳು ಮತ್ತು ಮಾಹಿತಿಯನ್ನು ನನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ನಿರಂತರವಾಗಿ ಹಂಚಿಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದಾರೆ.

‘ಈ ಚಿತ್ರವನ್ನು ಕಂಗನಾ ಅವರೇ ನಿರ್ಮಿಸಿದ್ದು, ಅದರಲ್ಲಿ ಒಂದು ಅತ್ಯುತ್ತಮ ಪಾತ್ರವನ್ನೂ ಮಾಡಿದ್ದಾರೆ. ಸಿನಿಮಾ ಪ್ರಚಾರದ ಭಾಗವಾಗಿ ನಾನು ಇತ್ತೀಚೆಗೆ ಕಂಗನಾ ಅವರ ಒಂದು ಪೋಸ್ಟ್ ಅನ್ನು ನನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದೆ. ಆದರೆ ನಾನು ಅವರ ಫೋಟೋ ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ, ನನ್ನ ಇನ್‌ಸ್ಟಾಗ್ರಾಮ್ ಅನುಯಾಯಿಗಳ ಸಂಖ್ಯೆ ಸಾವಿರಾರು ಪ್ರಮಾಣದಲ್ಲಿ ಕುಸಿತ ಕಂಡಿತು’ ಎಂದು ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: 26/11 ಮುಂಬೈ ಉಗ್ರರ ದಾಳಿ ನಡೆದಾಗ ಪಾರ್ಟಿ ಮಾಡುತ್ತಿದ್ದ ನಟಿ ಕಂಗನಾ ರಣಾವತ್

ಈ ಇಡೀ ಘಟನೆಯ ಬಗ್ಗೆ ಗಿರಿಜಾ ಅವರು ತಮ್ಮದೇ ಆದ ಪಕ್ವವಾದ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ‘ಇದಾಗಿ ಸ್ವಲ್ಪ ಸಮಯದ ನಂತರ ನಾನು ಮತ್ತೊಂದು ಪೋಸ್ಟ್ ಹಂಚಿಕೊಂಡಾಗ, ನನ್ನ ಫಾಲೋವರ್ಸ್ ಸಂಖ್ಯೆ ಮತ್ತೆ ಎಂದಿನಂತೆ ಹೆಚ್ಚಾಯಿತು. ಇದರಿಂದ ತಿಳಿಯುವ ವಿಷಯವೇನೆಂದರೆ, ನೀವು ಈ ಪ್ರಪಂಚದಲ್ಲಿ ಎಲ್ಲರನ್ನೂ ಒಪ್ಪಿಸಲು ಅಥವಾ ಮೆಚ್ಚಿಸಲು ಸಾಧ್ಯವಿಲ್ಲ. ನಿಮ್ಮ ಪೋಸ್ಟ್ ಅನ್ನು ಎಷ್ಟು ಜನರು ನೋಡಿದ್ದಾರೆ ಅಥವಾ ಫಾಲೋವರ್ಸ್ ಸಂಖ್ಯೆ ಹೆಚ್ಚಿದೆಯೋ ಇಲ್ಲವೋ ಎಂಬುದು ಕೊನೆಯಲ್ಲಿ ಮುಖ್ಯವಾಗುವುದಿಲ್ಲ. ದಿನದ ಕೊನೆಯಲ್ಲಿ ನೀವು ಸರಿ ಎಂದು ಭಾವಿಸುವ ನಿರ್ಧಾರವನ್ನು ತೆಗೆದುಕೊಳ್ಳಬೇಕು ಮತ್ತು ನಿಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಸಾಗಬೇಕು’ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us