Kangana Ranaut: ನಟನಿಗೆ ಮೋಸ ಮಾಡಿದ್ರಾ ಕಂಗನಾ ರಣಾವತ್? ರಿಲೀಸ್ಗೂ ಮೊದಲೇ ‘ತೇಜಸ್’ ಸಿನಿಮಾ ವಿವಾದ
ಈ ಚಿತ್ರದಲ್ಲಿ ನಟಿಸಿದ ಮಯಾಂಕ್ ಮಾಧುರ್ ಅವರು ಕಂಗನಾ ಅವರಿಂದ ಮೋಸ ಆಗಿದ ಎಂದು ಆರೋಪಿಸಿದ್ದಾರೆ. ಅವರು ಈ ಚಿತ್ರದ ನಿರ್ಮಾಪಕರನ್ನು ಬಂಧಿಸುವ ಎಚ್ಚರಿಕೆ ನೀಡಿದ್ದಾರೆ.

ನಟಿ ಕಂಗನಾ ರಣಾವತ್ (Kangana Ranaut) ಅವರು ವಿವಾದದ ಮೂಲಕ ಸದಾ ಸುದ್ದಿ ಆಗುತ್ತಲೇ ಇರುತ್ತಾರೆ. ಅವರು ಮಾಡಿಕೊಳ್ಳುವ ಕಾಂಟ್ರವರ್ಸಿಗಳು ಒಂದೆರಡಲ್ಲ. ಈಗ ಕಂಗನಾ ರಣಾವತ್ ಅವರು ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ‘ತೇಜಸ್’ ಸಿನಿಮಾದಲ್ಲಿ (Tajas Movie) ನಟಿ ಕಂಗನಾ ಅವರು ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಈ ಚಿತ್ರಕ್ಕೆ ಅವರು ನಿರ್ಮಾಪಕಿ ಅಲ್ಲ. ಆದಾಗ್ಯೂ ಈ ಚಿತ್ರದಲ್ಲಿ ನಟಿಸಿದ ಮಯಾಂಕ್ ಮಾಧುರ್ ಅವರು ಕಂಗನಾ ಅವರಿಂದಲ ಮೋಸ ಆಗಿದೆ ಎಂದು ಆರೋಪಿಸಿದ್ದಾರೆ. ಈ ಚಿತ್ರದ ನಿರ್ಮಾಪಕರಾದ ವಿಕ್ಕಿ ವಿಜಯ್ ಮೊದಲಾದವರ ವಿರುದ್ಧ ಕಿಡಿಕಾರಿದ್ದಾರೆ.
‘ತೇಜಸ್’ ಚಿತ್ರಕ್ಕೆ ಸರ್ವೇಶ್ ಮೇವರಾ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಕಂಗನಾ ರಣಾವತ್ ಅವರು ವಾಯುಸೇನೆಯ ಪೈಲೆಟ್ ಆಗಿ ಅಭಿನಯಿಸಿದ್ದಾರೆ. ಪೈಲಟ್ ತೇಜಸ್ ಗಿಲ್ ಅವರ ಜೀವನಾಧಾರಿತ ಸಿನಿಮಾ ಇದು ಎಂಬ ಕಾರಣಕ್ಕೂ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ವಾಯು ಸೇನೆಯ ಪೈಲೆಟ್ಗಳಿಗೆ ಈ ಚಿತ್ರದ ಮೂಲಕ ಗೌರವ ಸಲ್ಲಿಸುವ ಉದ್ದೇಶವನ್ನು ತಂಡ ಹೊಂದಿದೆ. ಈ ಮಧ್ಯೆ ಸಿನಿಮಾ ತಂಡ ಸಂಕಷ್ಟಕ್ಕೆ ಸಿಲುಕಿದೆ.
ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮಯಾಂಕ್, ‘ನನ್ನ ಪಾತ್ರದ ಅವಧಿ ಕಡಿಮೆಯಾಗುತ್ತಲೇ ಬಂತು. ಮೊದಲು ನನ್ನ ಪಾತ್ರ 15 ನಿಮಿಷ ಬರುತ್ತದೆ ಎಂದಿದ್ದರು. ಈಗ ಆ ಅವಧಿ 1 ಅಥವಾ 2 ನಿಮಿಷಕ್ಕೆ ಬಂದು ನಿಂತಿದೆ. ಹೀಗಾಗಿ ಈ ಸಿನಿಮಾದಲ್ಲಿ ಆಸಕ್ತಿ ಇಲ್ಲ ಎಂದು ನಾನು ಸ್ಪಷ್ಟವಾಗಿ ಹೇಳಿದ್ದೆ’ ಎಂದಿದ್ದಾರೆ.
‘ಟಿಕು ವೆಡ್ಸ್ ಶೇರು ಚಿತ್ರದಲ್ಲಿ ಕಂಗನಾ ಅವರು ನನಗೆ ಸಹ ನಿರ್ಮಾಪಕ ಎಂದು ಕರೆದರು. ಆದರೆ, ನನ್ನ ಹೆಸರು ಉಲ್ಲೇಖ ಆಗಿದ್ದು ‘ವಿಶೇಷ ಧನ್ಯವಾದಗಳು’ ಬಾಕ್ಸ್ನಲ್ಲಿ ಮಾತ್ರ. ತೇಜಸ್ ಚಿತ್ರ ರಿಲೀಸ್ಗೂ ಮೊದಲು ನನ್ನ ಸಂಭಾವನೆ ಸೆಟಲ್ ಮಾಡುವ ಭರವಸೆಯನ್ನು ಕಂಗನಾ ನೀಡಿದ್ದರು. ಆದರೆ, ಈಗ ಅವರು ನಿರ್ಮಾಪಕರತ್ತ ಬೆರಳು ಮಾಡುತ್ತಿದ್ದಾರೆ’ ಎಂದಿದ್ದಾರೆ ಮಯಾಂಕ್.
ಇದನ್ನೂ ಓದಿ: ‘ನಯನತಾರಾ ಮೊದಲಿನಂತಿಲ್ಲ’; ವಿಘ್ನೇಶ್ ಶಿವನ್ಗೆ ವಾರ್ನಿಂಗ್ ಕೊಟ್ಟ ಶಾರುಖ್ ಖಾನ್
‘ಈ ಎಲ್ಲಾ ಕಾರಣದಿಂದ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದೇನೆ. ನಾನು ಯಾವಾಗ ನ್ಯಾಯಾಲಯಕ್ಕೆ ಹೋಗುತ್ತೇನೆ ಮತ್ತು ಚಿತ್ರವನ್ನು ಹೇಗೆ ನಿಲ್ಲಿಸುತ್ತೇನೆ ಎಂಬುದನ್ನು ನಾನು ಈಗಲೇ ಬಹಿರಂಗಪಡಿಸುವುದಿಲ್ಲ. ನಿರ್ಮಾಪಕರನ್ನು ಹೇಗೆ ಬಂಧಿಸುತ್ತೇನೆ ಎಂಬುದನ್ನು ಕಾದು ನೋಡಿ. ಇದಕ್ಕೆ ನಾನು ನಿವೃತ್ತ ಮುಖ್ಯ ನ್ಯಾಯಾಧೀಶರಿಂದ ಮಾರ್ಗದರ್ಶನ ಪಡೆದಿದ್ದೇನೆ. ನಾನು ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಕಚೇರಿ, ಗೃಹ ಸಚಿವಾಲಯದವರ ಬಳಿ ಮಾತನಾಡಿದ್ದೇನೆ. ಕಾನೂನು ಪ್ರಕಾರವೇ ಎಲ್ಲವನ್ನೂ ಮಾಡಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:50 am, Thu, 13 July 23