ಬಿಗ್ ಬಾಸ್ ಮನೆಯ ಸದಸ್ಯರು ಕಿಚ್ಚ ಸುದೀಪ್ ಬಳಿ ಮತ್ತು ಬಿಗ್ ಬಾಸ್ ಬಳಿ ಹೊಸ ಬೇಡಿಕೆ ಇಡೋದು ಕಾಮನ್. ಇದು ತುಂಬಾ ಮೊದಲಿನಿಂದ ನಡೆದುಕೊಂಡು ಬಂದಿದೆ. ಅಚ್ಚರಿ ಎಂದರೆ, ಈಗ ಸುದೀಪ್ ಅವರೇ ಮಂಜು ಬಳಿ ಹೊಸ ಬೇಡಿಕೆ ಇಟ್ಟಿದ್ದಾರೆ. ವೀಕೆಂಡ್ನಲ್ಲಿ ಮನೆಯ ಸದಸ್ಯರ ಜತೆ ಮಾತನಾಡುವಾಗ ಈ ಬೇಡಿಕೆ ಬಗ್ಗೆ ಹೇಳಿದ್ದಾರೆ. ಅಷ್ಟಕ್ಕೂ ಸುದೀಪ್ ಹೇಳಿದ್ದು ಏನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಶಮಂತ್ ಬ್ರೋ ಗೌಡ ಬಿಗ್ ಬಾಸ್ ಸೀಸನ್ 8ರ ವೇದಿಕೆ ಏರಿದಾಗ ಅವರ ಕೂದಲನ್ನು ನೋಡಿ ಕಿಚ್ಚ ಸುದೀಪ್ ಅಚ್ಚರಿ ವ್ಯಕ್ತಪಡಿಸಿದ್ದರು. ಬಿಗ್ ಬಾಸ್ ಮನೆ ಸೇರಿದ ನಂತರವೂ ಶಮಂತ್ ತಮ್ಮ ಕೂದಲು ಹಾಗೂ ಗಡ್ಡದ ಮೂಲಕವೇ ಎಲ್ಲರ ಗಮನ ಸೆಳೆದಿದ್ದರು. ಇನ್ನು ಶಮಂತ್ಗೆ ಕೂಡ ಕೂದಲು ಎಂದರೆ ತುಂಬಾನೇ ಪ್ರೀತಿ ಎಂದಿದ್ದರು. ಅಷ್ಟೇ ಅಲ್ಲ, ನಾನು ಅಧಿಕವಾಗಿ ಪ್ರೀತಿಸೋ ಕೂದಲನ್ನು ನಿನಗೆ ಕೊಡ್ತಾ ಇದಿನೀ ಎಂದು ಮಂಜುಗೆ ಹೇಳಿದ್ದರು. ಅಂತೆಯೇ, ಮಂಜು ಅದ್ಭುತವಾಗಿ ಶಮಂತ್ ಕೂದಲನ್ನು ಕಟ್ ಮಾಡಿದ್ದರು.
ಈ ವಿಚಾರ ವಾರಾಂತ್ಯದಲ್ಲಿ ಚರ್ಚೆಗೆ ಬಂದಿದೆ. ಶಮಂತ್ ಬಳಿ ಸುದೀಪ್, ಕೂದಲು ಕಟ್ ಮಾಡಿದ್ದು ಹೇಗನ್ನಿಸಿತು ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಅವರು, ಅದ್ಭುತವಾಗಿತ್ತು. ನಿಜಕ್ಕೂ ಮಂಜು ಅದ್ಭುತವಾಗಿ ಕಟ್ ಮಾಡಿದ್ದಾರೆ ಎಂದು ಹೇಳಿದ್ದರು. ಆಗ ಮಂಜುಗೆ ಸುದೀಪ್ ಹೊಸ ಮನವಿ ಇಟ್ಟಿದ್ದಾರೆ.
ಮಂಜು ಈ ಬಾರಿ ಅದ್ಭುತವಾಗಿ ಕೂದಲು ಕತ್ತರಿಸಿದ್ದೀರಾ. ಇದರಿಂದ ಒಂದಷ್ಟು ಮಂದಿಗೆ ನಿಮ್ಮ ಮೇಲೆ ಭರವಸೆ ಬಂದಿದೆ ಎಂದು ಭಾವಿಸುತ್ತೇನೆ ಎಂದು ಶ್ಲಾಘಿಸಿದರು. ಜತೆಗೆ, ರಾಜೀವ್ ಕೂದಲಿಗೆ ಕತ್ತರಿ ಹಾಕಿ, ಅವರಿಗೆ ಬೇರೆಯದೇ ಲುಕ್ ಕೊಡಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಮಂಜು ಕೂಡ ಒಪ್ಪಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: BBK8 Elimination: 14 ಸ್ಪರ್ಧಿಗಳ ಪೈಕಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುವವರು ಇವರೇನಾ?
ಸ್ಪರ್ಧಿಗಳ ವಿರುದ್ಧ ಸಿಟ್ಟಿಗೆದ್ದ ಪ್ರಶಾಂತ್; ಬಿಗ್ ಬಾಸ್ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ!