ಮದರ್ ಪ್ರಾಮಿಸ್ ವಿಮರ್ಶೆ: ನಗುವಿನ ಕೋಡಿ, ಎಮೋಷನ್ ಜೊತೆ ಥ್ರಿಲ್ಲರ್ ಮೋಡಿ

- Time - 165 Minutes
- Released - ಜುಲೈ 10, 2026
- Language - ಕನ್ನಡ
- Genre - ಕಾಮಿಡಿ ಥ್ರಿಲ್ಲರ್
ಎಲ್ಲಾ ಪ್ರಾಮಿಸ್ಗಳಿಗೆ ಕಿಂಗ್ ‘ಮದರ್ ಪ್ರಾಮಿಸ್’. ಈಗ ಇದೇ ಟೈಟಲ್ ಮೂಲಕ ಸಿನಿಮಾ ಬಂದಿದೆ. ಇಷ್ಟು ದಿನ ನಟನಾಗಿ ಗಮನ ಸೆಳೆದಿದ್ದ ಪೂರ್ಣಚಂದ್ರ ಮೈಸೂರು ಈಗ ಮೊದಲ ಬಾರಿಗೆ ನಿರ್ದೇಶಕನಾಗಿದ್ದಾರೆ. ಇವರಿಗೆ ನಿರ್ಮಾಪಕನಾಗಿ ಡಾಲಿ ಧನಂಜಯ್ ಸಾತ್ ಕೊಟ್ಟಿದ್ದಾರೆ. ಹಾಗಾದರೆ, ‘ಮದರ್ ಪ್ರಾಮಿಸ್’ ಸಿನಿಮಾ ಹೇಗಿದೆ? ಆ ಬಗ್ಗೆ ಇಲ್ಲಿದೆ ವಿವರ.
ಬೆಂಗಳೂರಲ್ಲಿ ರಾಸಿ (ಡಾಲಿ ಧನಂಜಯ್) ಹಾಗೂ ದೊನ್ನೆ ಬಿರಿಯಾನಿ (ಮಹದೇವ್ ಪ್ರಸಾದ್) ಎಂಬ ಎರಡು ಗ್ಯಾಂಗ್ ಇರುತ್ತದೆ. ರಾಸಿ ಬೆಟ್ಟಿಂಗ್ ಪಂಟರ್ ಆದರೆ, ದೊನ್ನೆ ಬಿರಿಯಾನಿ ಡ್ರಗ್ಸ್ ದಂಧೆ, ಅಕ್ರಮ ವಸ್ತುಗಳ ಸಾಗಾಟದಲ್ಲಿ ಕಿಂಗ್. ಇಬ್ಬರ ಮಧ್ಯೆ ತುಂಬಾನೇ ದ್ವೇಷ. ಈ ಗ್ಯಾಂಗ್ ಮಧ್ಯೆ ರ್ಯಾಂಡಿ (ಪೂರ್ಣಚಂದ್ರ ಮೈಸೂರು) ಸಿಕ್ಕಿಕೊಳ್ಳುತ್ತಾನೆ. ಅಲ್ಲಿಂದ ಪ್ರಯಾಣ ಶುರು. ದಾರಿಯುದ್ದಕ್ಕೂ ನಗುವಿನ ಕಚಗುಳಿ ಕೊಡುತ್ತಾ ಸಾಗುತ್ತಾರೆ ನಿರ್ದೇಶಕರು. ಇದು ಸಿನಿಮಾದ ಸ್ಟ್ರೆಂತ್ ಕೂಡ ಹೌದು. ಕೇವಲ ನಗು ಮಾತ್ರ ಇಲ್ಲ. ಗೆಳೆತನ, ಸಸ್ಪೆನ್ಸ್, ಥ್ರಿಲ್ಲರ್, ಮದರ್ ಸೆಂಟಿಮೆಂಟ್ನ ಹಿತವಾಗಿ ಬೆರೆಸಲಾಗಿದೆ. ‘ಮದರ್ ಪ್ರಾಮಿಸ್’ ಸಿನಿಮಾ ಸಾಗೋದು ಮಿಸ್ಅಂಡರ್ಸ್ಟ್ಯಾಂಡಿಂಗ್ ಮೇಲೆ. ಇದುವೇ ನಗುವಿಗೆ ದಾರಿ ಮಾಡಿಕೊಡುತ್ತದೆ. ಹಾಸ್ಯದ ಹೊಳೆ ಹರಿಯುತ್ತದೆ.
ಪೂರ್ಣಚಂದ್ರ ಮೈಸೂರು ಅವರದ್ದು ಚೊಚ್ಚಲ ನಿರ್ದೇಶನ. ಮೊದಲ ಪ್ರಯತ್ನದಲ್ಲೇ ಅವರು ಯಶಸ್ಸು ಕಂಡಿದ್ದಾರೆ. ಬೆಂಗಳೂರಲ್ಲಿ ಸಮುದ್ರ ತರೋ ಪ್ಲ್ಯಾನ್ ಮೊದಲಿಗೆ ‘ಏನಪ್ಪ’ ಇದು ಅನಿಸಿದರೂ ಆ ಬಳಿಕ ನಗು ತರಿಸುತ್ತದೆ. ಒನ್ಲೈನ್ ಪಂಚಿಂಗ್ಗಳು ಸಾಕಷ್ಟು ಕೆಲಸಮಾಡಿವೆ. ತೆರೆಯ ಹಿಂದೆ ಅವರು ಹಾಕಿದ ಶ್ರಮ ಎದ್ದು ಕಾಣುತ್ತದೆ.
ಡಾಲಿ ಧನಂಜಯ್ ಅವರು ರಾಸಿ ಆಗಿ ಗಮನ ಸೆಳೆಯುತ್ತಾರೆ. ಅವರು ತಮ್ಮ ಸ್ಟ್ರೆಂತ್ಅನ್ನು ತೋರಿಸಿದ್ದಾರೆ. ಅವರ ಪಾತ್ರ ಹಾಸ್ಯ, ಆ್ಯಕ್ಷನ್ ಹಾಗೂ ಭಾವನಾತ್ಮಕ ವಿಷಯಗಳಮೇಲೆ ಸಾಗುತ್ತದೆ. ಎಲ್ಲವನ್ನೂ ಅವರು ಸಮರ್ಥವಾಗಿ ನಿರ್ವಹಿಸಿ ಭೇಷ್ ಎನಿಸಿಕೊಂಡಿದ್ದಾರೆ. ಅವರಿಗೆ ಇಲ್ಲಿ ಡೈಲಾಗ್ ಕಡಿಮೆ, ಮುಖದ ಭಾವನೆಗಳ ಮೂಲಕವೇ ಅವರು ರಾಸಿ ಪಾತ್ರ ನಿರ್ವಹಿಸಿದ್ದಾರೆ.
ಸಿನಿಮಾ ಉದ್ದಕ್ಕೂ ಇರೋ ಪೂರ್ಣಚಂದ್ರ ಮೈಸೂರು ಅವರು ಎಲ್ಲರನ್ನೂ ನಗಿಸುತ್ತಾರೆ. ಏನೇ ಬಂದರೂ ಜಾಲಿ ಆಗಿರಬೇಕು ಎಂಬ ತತ್ವದಲ್ಲಿ ಬದುಕೋ ಅವರು, ಸಂಪೂರ್ಣ ಶೋನ ಕದ್ದಿದ್ದಾರೆ. ಚಿತ್ರದಲ್ಲಿ ಗುರುದತ್, ಮಹದೇವ್ ಪ್ರಸಾದ್, ನರೇಶ್ ಡಿಂಗ್ರಿ, ಶ್ರೀವತ್ಸ ಶ್ಯಾಮ್, ಯಶ್ವಂತ್ ಎಂಕೆ ಸೇರಿದಂತೆ ಅನೇಕ ಪೋಷಕ ಪಾತ್ರಗಳಿವೆ. ಎಲ್ಲಾ ಪಾತ್ರಗಳಿಗೂ ನಗಿಸೋ ಜವಾಬ್ದಾರಿಯನ್ನು ಪೂರ್ಣಚಂದ್ರ ಕೊಟ್ಟಿದ್ದಾರೆ. ಅದನ್ನು ಎಲ್ಲಾ ಕಲಾವಿದರು ಸರಿಯಾಗಿ ನಿಭಾಯಿಸಿದ್ದಾರೆ.
View this post on Instagram
ನವನೀತ್ ಶ್ಯಾಮ್ ಸಂಗೀತ ಚಿತ್ರದ ಮೆರುಗು ಹೆಚ್ಚಿಸಿದೆ. ಸಿನಿಮಾದ ಹಾಡುಗಳು ಕಿವಿಯಲ್ಲಿ ಗುನುಗುತ್ತವೆ. ‘ರಗಸದಅ’ ಹಾಡು ಕಿಕ್ ಕೊಡುತ್ತದೆ. ರಾಹುಲ್ ರಾಯ್ ಜಾನ್ ಛಾಯಾಗ್ರಹಣ ಸಿನಿಮಾದ ಅಂದ ಹೆಚ್ಚಿಸಿದೆ. ಸಿನಿಮಾ ಟೇಕಾಫ್ ಸ್ವಲ್ಪ ನಿಧಾನ ಎನಿಸಿದರೂ ನಂತರ ವೇಗ ಪಡೆದುಕೊಳ್ಳುತ್ತದೆ. ಮೊದಲಾರ್ಧದಲ್ಲಿ ಸ್ವಲ್ಪ ಕತ್ತರಿ ಪ್ರಯೋಗ ಮಾಡಿದ್ದರೆ ಸಿನಿಮಾದ ಅಂದ ಹೆಚ್ಚುತ್ತಿತ್ತು. ಚಿತ್ರಮಂದಿರಗಳಲ್ಲಿ ಒಳ್ಳೆಯ ಸಿನಿಮಾಗಳೇ ಬರೋದಿಲ್ಲ ಎಂದು ಕೊರಗುವವರಿಗೆ ಇದು ಒಳ್ಳೆಯ ಆಯ್ಕೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:59 am, Fri, 10 July 26




