ರಾಜಮೌಳಿಯನ್ನೇ ಬ್ಯಾನ್ ಮಾಡಿತ್ತು ತೆಲುಗು ಚಿತ್ರರಂಗ, ಕಾರಣ ಏನು ಗೊತ್ತೆ?

SS Rajamouli: ತೆಲುಗು ಚಿತ್ರರಂಗ ಇಂದು ವಿಶ್ವವೇ ಬೆರಗು ಗಣ್ಣಿನಿಂದ ನೋಡುವ ಚಿತ್ರರಂಗವಾಗಿ ಬೆಳೆದು ನಿಂತಿದೆ. ಭಾರತದಲ್ಲೇ ಅತಿ ಹೆಚ್ಚು ಹಣ ಗಳಿಸುತ್ತಿರುವ ಚಿತ್ರರಂಗವೂ ಇದಾಗಿದೆ. ತೆಲುಗು ಚಿತ್ರರಂಗದ ಈ ಬೆಳವಣಿಗೆಗೆ ಎಸ್​ಎಸ್ ರಾಜಮೌಳಿಯ ಯೋಗದಾನ ದೊಡ್ಡದಿದೆ. ಆದರೆ ಇದೇ ತೆಲುಗು ಚಿತ್ರರಂಗ ಒಮ್ಮೆ ಎಸ್​ಎಸ್ ರಾಜಮೌಳಿಯನ್ನೇ ಚಿತ್ರರಂಗದಿಂದ ಬ್ಯಾನ್ ಮಾಡಿತ್ತು. ಕಾರಣ ಏನು ಗೊತ್ತೆ?

ರಾಜಮೌಳಿಯನ್ನೇ ಬ್ಯಾನ್ ಮಾಡಿತ್ತು ತೆಲುಗು ಚಿತ್ರರಂಗ, ಕಾರಣ ಏನು ಗೊತ್ತೆ?
Ssr

Updated on: Jan 13, 2025 | 5:24 PM

ರಾಜಮೌಳಿ, ಪ್ರಸ್ತುತ ಭಾರತ ನಂಬರ್ 1 ಸಿನಿಮಾ ನಿರ್ದೇಶಕ. ತೆಲುಗು ಚಿತ್ರರಂಗವನ್ನು ವಿಶ್ವವೇ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ. ‘ಆರ್​ಆರ್​ಆರ್’ ಸಿನಿಮಾ ಮೂಲಕ ಹಾಲಿವುಡ್​ ಅನ್ನೇ ಅಲ್ಲಾಡಿಸಿದ್ದಾರೆ. ಜೇಮ್ಸ್ ಕ್ಯಾಮರಾನ್, ಸ್ಟಿಫನ್ ಸ್ಪೀಲ್​ಬರ್ಗ್ ಅಂಥಹಾ ವಿಶ್ವ ಶ್ರೇಷ್ಠ ನಿರ್ದೇಶಕರು ರಾಜಮೌಳಿಯ ಸಿನಿಮಾ ಮೆಚ್ಚಿ ಭೇಷ್ ಅಂದಿರುವುದಲ್ಲದೆ ಹಾಲಿವುಡ್​ನಲ್ಲಿ ಸಿನಿಮಾ ಮಾಡಲು ಆಹ್ವಾನಿಸಿದ್ದಾರೆ. ತೆಲುಗು ಚಿತ್ರರಂಗಕ್ಕೆ ವಿಶ್ವದೆಲ್ಲೆಡೆ ಮಾರುಕಟ್ಟೆ ದೊರೆಯುವಂತೆ ಮಾಡಿದ ಶ್ರೇಯ ರಾಜಮೌಳಿಯವರಗೆ ಸಲ್ಲಬೇಕು. ಆದರೆ ಇಂಥಹಾ ನಿರ್ದೇಶಕನ ಮೇಲೆ ನಿಷೇಧ ಹೇರಿತ್ತು ತೆಲುಗು ಚಿತ್ರರಂಗ!

ಈ ವಿಷಯವನ್ನು ಸಂದರ್ಶನವೊಂದರಲ್ಲಿ ಸ್ವತಃ ರಾಜಮೌಳಿ ಹೇಳಿಕೊಂಡಿದ್ದಾರೆ. ರಾಜಮೌಳಿ ‘ಬಾಹುಬಲಿ’ ಸಿನಿಮಾದ ಮೊದಲ ಭಾಗ ನಿರ್ದೇಶನ ಮಾಡುತ್ತಿದ್ದ ಸಮಯವದು. ಸಿನಿಮಾಕ್ಕೆ ಭಾರಿ ಬಜೆಟ್ ಬೇಕಾಗಿದ್ದ ಕಾರಣ ಸ್ವತಃ ರಾಜಮೌಳಿ ಮತ್ತು ಅವರ ಕುಟುಂಬದವರು ತೀರ ಕಡಿಮೆ ದರ್ಜೆಯ ಹೋಟೆಲ್​ನಲ್ಲಿ ಉಳಿದುಕೊಂಡು ಹಣ ಉಳಿಸುತ್ತಿದ್ದರು. ಚಿತ್ರೀಕರಣವನ್ನು ಸಹ ಬಹಳ ಬೇಗ ಬೇಗನೆ ಮಾಡುತ್ತಿದ್ದರು. ಆಗ ಒಂದು ದಿನದ ಚಿತ್ರೀಕರಣಕ್ಕೆ 15 ರಿಂದ 20 ಲಕ್ಷ ಖರ್ಚಾಗುತ್ತಿಂತೆ.

ಅನವಶ್ಯಕ ಖರ್ಚುಗಳು ಆಗದಂತೆ ಎಲ್ಲ ಆದಷ್ಟು ವೇಗವಾಗಿ ಚಿತ್ರೀಕರಣ ಮಾಡುತ್ತಿರುವ ಸಂದರ್ಭದಲ್ಲಿಯೇ ತೆಲುಗು ಚಿತ್ರರಂಗದ ಫೆಡರೇಷನ್ ಒಂದು ಸ್ಟ್ರೈಕ್ ಮಾಡಲು ಆರಂಭ ಮಾಡಿತಂತೆ. ಕೂಡಲೇ ಎಲ್ಲ ಸಿನಿಮಾಗಳ ಚತ್ರೀಕರಣಗಳನ್ನು ಬಂದ್ ಮಾಡಬೇಕು ಎಂದು ಹೇಳಿದರಂತೆ. ಆದರೆ ಫೆಡರೇಷನ್ ನಿಯಮದ ಪ್ರಕಾರ ಸ್ಟ್ರೈಕ್ ಅಥವಾ ಪ್ರತಿಭಟನೆ ಮಾಡುವುದಿದ್ದರೆ ಕನಿಷ್ಟ 30 ದಿನಗಳಿಗೆ ಮುಂಚೆ ನೊಟೀಸ್ ನೀಡಬೇಕು. ಆದರೆ ಯಾವುದೇ ನೊಟೀಸ್ ನೀಡದೆ ಬಂದ್ ಘೋಷಣೆ ಮಾಡಿತ್ತಂತೆ ಫೆಡರೇಷನ್.

ಇದನ್ನೂ ಓದಿ:ಕೊನೆಗೂ ಶುರುವಾಯ್ತು ರಾಜಮೌಳಿ-ಮಹೇಶ್ ಬಾಬು ಸಿನಿಮಾ

ಇದರಿಂದಾಗಿ ‘ಬಾಹುಬಲಿ’ ಸಿನಿಮಾಕ್ಕೆ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳೆಲ್ಲ ಸ್ಟ್ರೈಕ್​ಗೆ ಹೋಗಿ ಚಿತ್ರೀಕರಣಕ್ಕೆ ಯಾರೂ ಇಲ್ಲದಾಯ್ತಂತೆ. ಬಜೆಟ್ ಕೈ ಮೀರಿ ಹೋಗುತ್ತಿದ್ದ ಕಾರಣ, ರಾಜಮೌಳಿ ಹಾಗೂ ಸಿನಿಮಾದ ನಿರ್ಮಾಪಕರು ನಿರ್ಧಾರ ಮಾಡಿ ಚಿತ್ರೀಕರಣ ಮುಂದುವರೆಸಿದರಂತೆ. ಇದನ್ನು ತೀವ್ರವಾಗಿ ವಿರೋಧಿಸಿದ ಫೆಡರೇಷನ್, ರಾಜಮೌಳಿ ಮೇಲೆ ಹಾಗೂ ಇನ್ನೂ ಕೆಲವರ ಮೇಲೆ ಬ್ಯಾನ್ ಹೇರಿದರಂತೆ.

ಆದರೆ ರಾಜಮೌಳಿ ಸಿನಿಮಾ ನಿರ್ದೇಶನ ಮುಂದುವರೆಸಿದ್ದಲ್ಲದೆ, ಸಿಬ್ಬಂದಿ ಇಲ್ಲದ ಕಾರಣ ಬೇರೆ ರಾಜ್ಯಗಳಿಂದ ಜನರನ್ನು ಕರೆಸಿಕೊಂಡರಂತೆ. ಒಂದು ದಿನವೂ ಸಿನಿಮಾಕ್ಕಾಗಿ ಕೆಲಸ ಮಾಡದವರನ್ನು ಸಹ ಕೆಲಸಕ್ಕೆ ತೆಗೆದುಕೊಂಡು ಚಿತ್ರೀಕರಣ ಮುಂದುವರೆಸಿದರಂತೆ. ಜನ ಕಡಿಮೆ ಇದ್ದರೂ ಸರಿ ಚಿತ್ರೀಕರಣ ನಿಲ್ಲಬಾರದು ಎಂಬುದು ರಾಜಮೌಳಿಯ ಯೋಚನೆ ಆಗಿತ್ತಂತೆ. ಆದರೆ ಇದರಿಂದ ಒಳ್ಳೆಯದೇ ಆಯ್ತಂತೆ. ಕಡಿಮೆ ಜನರಿದ್ದರೂ ಚಿತ್ರೀಕರಣಕ್ಕೆ ಯಾವುದೇ ಅಡೆ-ತಡೆ ಆಗಲಿಲ್ಲವಂತೆ, ಅಲ್ಲದೆ ಮೊದಲು ದಿನಕ್ಕೆ 15-20 ಲಕ್ಷ ಆಗುತ್ತಿದ್ದ ಖರ್ಚು, ಆ ನಂತರ 10 ರಿಂದ 12 ಲಕ್ಷಕ್ಕೆ ಇಳಿಯಿತಂತೆ. ಹೇಗೋ ಕಷ್ಟ ಪಟ್ಟು ‘ಬಾಹುಬಲಿ’ ಸಿನಿಮಾ ಮುಗಿಸಿ ಬಿಡುಗಡೆ ಮಾಡಿದರು ರಾಜಮೌಳಿ. ಆ ನಂತರ ನಡೆದಿದ್ದು ಇತಿಹಾಸ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us