ಒಂದೇ ದಿನ ಎರಡು ಒಟಿಟಿಯಲ್ಲಿ ಬಿಡುಗಡೆಯಾದ ‘ಆದಿಪುರುಷ್’

Adipurush: ಭಾರಿ ನಿರೀಕ್ಷೆ ಮುಡಿಸಿದ್ದ ಆದರೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಬಳಿಕ ತೀವ್ರ ಟೀಕೆ, ವಿವಾದಕ್ಕೆ ಗುರಿಯಾದ 'ಆದಿಪುರುಷ್' ಸಿನಿಮಾ ಇದೀಗ ಒಟ್ಟಿಗೆ ಎರಡು ಒಟಿಟಿಗಳಲ್ಲಿ ತೆರೆಗೆ ಬಂದಿದೆ.

ಒಂದೇ ದಿನ ಎರಡು ಒಟಿಟಿಯಲ್ಲಿ ಬಿಡುಗಡೆಯಾದ ಆದಿಪುರುಷ್
ಆದಿಪುರುಷ್

Updated on: Aug 11, 2023 | 7:14 PM

ಭಾರಿ ನಿರೀಕ್ಷೆ ಹುಟ್ಟಿಸಿ ಬಿಡುಗಡೆ ಆದ ಬಳಿಕ ತೀವ್ರ ಟೀಕೆ ಹಾಗೂ ವಿವಾದಕ್ಕೆ ಗುರಿ ಆದ ‘ಆದಿಪುರುಷ್‘ (Adipurush) ಸಿನಿಮಾ ಇದೀಗ ಒಟಿಟಿಗೆ ಬಿಡುಗಡೆ ಆಗಿದೆ. ಭಾರಿ ಟೀಕೆಗೆ ಗುರಿಯಾಗಿದ್ದರೂ ಸಹ ಬೇಡಿಕೆಯನ್ನು ಕಳೆದುಕೊಂಡಂತಿಲ್ಲ. ಇದೀಗ ‘ಆದಿಪುರುಷ್’ ಸಿನಿಮಾ ಒಂದೇ ಬಾರಿಗೆ ಎರಡು ಒಟಿಟಿಗಳಲ್ಲಿ ಬಿಡುಗಡೆ ಆಗಿದೆ. ಎರಡೂ ಒಟಿಟಿಗಳಲ್ಲಿಯೂ (OTT) ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನೇ ಪಡೆದುಕೊಳ್ಳುತ್ತಿದೆ.

‘ಆದಿಪುರುಷ್’ ಸಿನಿಮಾ ಸದ್ದಿಲ್ಲದೆ ಅಮೆಜಾನ್ ಪ್ರೈಂ ವಿಡಿಯೋ ಹಾಗೂ ನೆಟ್​ಫ್ಲಿಕ್ಸ್ ಒಟಿಟಿಗಳಲ್ಲಿ ತೆರೆಗೆ ಬಂದಿದೆ. ಆಗಸ್ಟ್ 10ರಂದೇ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಅಮೆಜಾನ್ ಪ್ರೈಂನಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ. ಇನ್ನು ನೆಟ್​ಫ್ಲಿಕ್ಸ್​ನಲ್ಲಿ ಹಿಂದಿ ಭಾಷೆಯಲ್ಲಿ ‘ಆದಿಪುರುಷ್’ ಸಿನಿಮಾ ನೋಡಬಹುದಾಗಿದೆ. ‘ಆರ್​ಆರ್​ಆರ್’ ಸಿನಿಮಾ ಈ ಟ್ರೆಂಡ್ ಅನ್ನು ಪ್ರಾರಂಭಿಸಿತ್ತು, ಜೀ5 ನಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಿ ಬಳಿಕ ಹಿಂದಿ ಆವೃತ್ತಿಯನ್ನು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಮಾಡಿ ವಿಶ್ವಮಟ್ಟದ ಪ್ರೇಕ್ಷಕರನ್ನು ತಲುಪಿತ್ತು. ಈಗ ‘ಆದಿಪುರುಷ್’ ಸಿನಿಮಾ ಸಹ ಇದೇ ಹಾದಿಯಲ್ಲಿದೆ.

ರಾಮಾಯಣದ ಕತೆಯನ್ನು ಆಧರಿಸಿ ‘ಆದಿಪುರುಷ್’ ಸಿನಿಮಾ ನಿರ್ಮಾಣ ಮಾಡಲಾಗಿದೆ. ಸಿನಿಮಾದಲ್ಲಿ ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದಾರೆ, ಸೀತಾ ಮಾತೆ ಪಾತ್ರದಲ್ಲಿ ಕೃತಿ ಸೆನನ್, ಲಕ್ಷ್ಮಣನ ಪಾತ್ರದಲ್ಲಿ ಸನ್ನಿ ಸಿಂಗ್, ಹನುಮಂತನ ಪಾತ್ರದಲ್ಲಿ ದೇವದತ್ತ ನಾಗರೆ ನಟಿಸಿದ್ದಾರೆ. ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟನೆ ಮಾಡಿದ್ದಾರೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾ ಜೂನ್ 16 ರಂದು ಬಿಡುಗಡೆ ಆಗಿತ್ತು. ಮೊದಲೆರಡು ಸಿನಿಮಾ ಉತ್ತಮ ಕಲೆಕ್ಷನ್ ಮಾಡಿತ್ತು, ಆದರೆ ಸಿನಿಮಾದ ಬಗ್ಗೆ ಸತತ ಋಣಾತ್ಮಕ ವಿಮರ್ಶೆಗಳು ಹರಿದುಬಂದ ಕಾರಣ ಸಿನಿಮಾದ ಕಲೆಕ್ಷನ್ ಧಾರುಣವಾಗಿ ಕುಸಿದಿತ್ತು.

ಇದನ್ನೂ ಓದಿ:SS Rajamouli: ‘ಆದಿಪುರುಷ್’ ಚಿತ್ರದಿಂದ ಪಾಠ ಕಲಿತ ರಾಜಮೌಳಿ? ಏನಿದು ಸಮಾಚಾರ?

ಮಾತ್ರವಲ್ಲದೆ, ಸಿನಿಮಾದ ವಿರುದ್ಧ ದೇಶದ ನಾನಾ ಕಡೆ ಹಿಂದೂಪರ ಸಂಘಟನೆಗಳು ಪ್ರಕರಣ ದಾಖಲಿಸಿದ್ದವು, ನ್ಯಾಯಾಲಯವು ಸಹ ‘ಆದಿಪುರುಷ್’ ಸಿನಿಮಾದ ನಿರ್ದೇಶಕರನ್ನು, ನಿರ್ಮಾಪಕರನ್ನು ತರಾಟೆಗೆ ತೆಗೆದುಕೊಂಡಿತ್ತು. ಸಿನಿಮಾದಲ್ಲಿ ರಾಮಾಯಣಕ್ಕೆ ಅಪಮಾನ ಎಸಗಲಾಗಿದೆ ಎಂಬ ಆರೋಪ ಗಟ್ಟಿಯಾಗಿ ಕೇಳಿ ಬಂದಿತ್ತು. ಅಲ್ಲದೆ ಸಿನಿಮಾದ ಕೆಲವು ಸಂಭಾಷಣೆಗಳಂತೂ ಠಪೋರಿ ಭಾಷೆಯಲ್ಲಿವೆ ಎಂಬ ಆರೋಪವನ್ನು ಕೆಲವರು ವ್ಯಕ್ತಪಡಿಸಿದ್ದರು. ಸಿನಿಮಾದ ನಿರ್ದೇಶಕ ಓಂ ರಾವತ್ ಹಾಗೂ ಸಂಭಾಷಣೆಕಾರರಿಗೆ ಕೊಲೆ ಬೆದರಿಕೆಯನ್ನು ಸಹ ಹಾಕಲಾಗಿತ್ತು. ಈ ಇಬ್ಬರಿಗೂ ಮುಂಬೈ ಪೊಲೀಸರು ಭದ್ರತೆ ಒದಗಿಸಿದ್ದರು.

ಆದಿಪುರುಷ್ ಸಿನಿಮಾವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಓಂ ರಾವತ್ ನಿರ್ದೇಶನ ಮಾಡಿದ್ದರು, ಟಿ-ಸೀರೀಸ್​ನ ಮಾಲೀಕ ಭೂಷಣ್ ಕುಮಾರ್ ನಿರ್ಮಾಣ ಮಾಡಿದ್ದರು. ಈ ಸಿನಿಮಾ ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us