
ಬಾಲಿವುಡ್ ನಟ ಮನೋಜ್ ಬಾಜಪೇಯಿ ಅಭಿನಯದ ‘ಘೂಸ್ಖೋರ್ ಪಂಡತ್’ (Ghooskhor Pandat) ಸಿನಿಮಾ ಬಿಡುಗಡೆಗೂ ಮುನ್ನವೇ ವಿವಾದ ಸೃಷ್ಟಿ ಮಾಡಿದೆ. ತೀವ್ರ ವಿರೋಧ ಹಾಗೂ ಕಾನೂನು ಸಂಘರ್ಷದ ಬೆನ್ನಲ್ಲೇ ಇಂಟರ್ನೆಟ್ನಿಂದ ಈ ಸಿನಿಮಾದ ಟೀಸರ್ ಹಾಗೂ ಎಲ್ಲ ಪ್ರಚಾರದ ಕಂಟೆಂಟ್ಗಳನ್ನು ತೆಗೆದು ಹಾಕಲು ನೆಟ್ಫ್ಲಿಕ್ಸ್ ಹಾಗೂ ಚಿತ್ರತಂಡ ನಿರ್ಧರಿಸಿದೆ. ಕೇಂದ್ರ ಸರ್ಕಾರವು ನೆಟ್ಫ್ಲಿಕ್ಸ್ (Netflix) ಸಂಸ್ಥೆಗೆ ಚಿತ್ರದ ಟೀಸರ್ ತೆಗೆದುಹಾಕುವಂತೆ ಸೂಚನೆ ನೀಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಧಾರ್ಮಿಕ ಮತ್ತು ಜಾತಿ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ‘ಘೂಸ್ಖೋರ್ ಪಂಡತ್’ ಚಿತ್ರದ ಶೀರ್ಷಿಕೆ ಮತ್ತು ಕಥಾವಸ್ತು ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಕ್ಕೂ ಮುನ್ನ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚಿತ್ರತಂಡದ ವಿರುದ್ಧ ಎಫ್ಐಆರ್ ದಾಖಲಿಸಲು ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿದ್ದರು. ಅಲ್ಲದೆ, ಚಿತ್ರದ ಬಿಡುಗಡೆಗೆ ತಡೆ ಕೋರಿ ದೆಹಲಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿಯನ್ನೂ ಸಲ್ಲಿಸಲಾಗಿತ್ತು.
ನಿರ್ದೇಶಕ ನೀರಜ್ ಪಾಂಡೆ ಸ್ಪಷ್ಟನೆ: ಹೆಚ್ಚುತ್ತಿರುವ ಆಕ್ರೋಶವನ್ನು ಗಮನಿಸಿ ಇನ್ಸ್ಟಾಗ್ರಾಮ್ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ನಿರ್ದೇಶಕ ನೀರಜ್ ಪಾಂಡೆ, ‘ನಮ್ಮ ಚಿತ್ರವು ಒಂದು ಕಾಲ್ಪನಿಕ ಪೊಲೀಸ್ ಡ್ರಾಮಾ ಆಗಿದೆ. ‘ಪಂಡತ್’ ಎಂಬ ಪದವನ್ನು ಕೇವಲ ಒಂದು ಕಾಲ್ಪನಿಕ ಪಾತ್ರದ ಆಡುಭಾಷೆಯ ಹೆಸರಾಗಿ ಬಳಸಲಾಗಿದೆ. ಆದರೆ, ಈ ಶೀರ್ಷಿಕೆಯಿಂದ ಕೆಲವು ವೀಕ್ಷಕರ ಭಾವನೆಗಳಿಗೆ ನೋವಾಗಿದೆ ಎಂಬುದು ನಮಗೆ ಅರ್ಥವಾಗಿದೆ’ ಎಂದು ತಿಳಿಸಿದ್ದಾರೆ.
ಮನೋಜ್ ಬಾಜಪೇಯಿ ಪ್ರತಿಕ್ರಿಯೆ: ಈ ಸಿನಿಮಾದಲ್ಲಿ ‘ಪಂಡತ್’ ಎಂಬ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿರುವ ನಟ ಮನೋಜ್ ಬಾಜಪೇಯಿ, ‘ಯಾವುದೇ ಸಮುದಾಯಕ್ಕೆ ನೋವುಂಟು ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ಇದೊಂದು ದೋಷಪೂರಿತ ವ್ಯಕ್ತಿಯ ಆತ್ಮಸಾಕ್ಷಿಯ ಪಯಣದ ಕಥೆಯಾಗಿದೆ. ಜನರ ಭಾವನೆಗಳು ಮತ್ತು ಕಳಕಳಿಗಳನ್ನು ನಾನು ಗೌರವಿಸುತ್ತೇನೆ’ ಎಂದು ಎಕ್ಸ್ (ಟ್ವಿಟರ್) ಖಾತೆಯ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಬ್ರಾಹ್ಮಣ ಸಮುದಾಯಕ್ಕೆ ಅವಮಾನ? ಮನೋಜ್ ಸಿನಿಮಾ ವಿರುದ್ಧ ಆಕ್ರೋಶ
ಚಿತ್ರದ ಶೀರ್ಷಿಕೆಯಲ್ಲಿ ಪಂಡತ್ (ಪಂಡಿತ್) ಎಂಬ ಹೆಸರು ಬಳಕೆ ಆಗಿರುವುದರಿಂದ ಬ್ರಾಹ್ಮಣ ಸಮುದಾಯಕ್ಕೆ ನೋವುಂಟಾಗಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಕಾರಣದಿಂದಲೇ ಇಷ್ಟೆಲ್ಲ ವಿವಾದ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.